ಕುವೆಂಪುಗೆ ಕಾಂಗ್ರೆಸ್‌ ಸರ್ಕಾರ ಅವಮಾನ ಮಾಡಿದೆ: ಪ್ರಲ್ಹಾದ್‌ ಜೋಶಿ

First Published Feb 20, 2024, 1:30 AM IST

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿರುವ ಅವರು, ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಪ್ರತಿಬಿಂಬಿಸುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ಹುಬ್ಬಳ್ಳಿ (ಫೆ.20): ಶಾಲೆ, ಹಾಸ್ಟೆಲ್ ಗಳಲ್ಲಿ ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸಿ ಎಂಬುದನ್ನು ಬರೆಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಮುಠ್ಠಾಳತನ ತೋರಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕುವೆಂಪು ಅವರ ಘೋಷವಾಕ್ಯ ಇತ್ತು. ಅದನ್ನು ತಿದ್ದುಪಡಿ ಮಾಡಿರುವುದು ಕಾಂಗ್ರೆಸ್ ನ ತುಷ್ಟೀಕರಣದ ಪರಮಾವಧಿ.  ಜತೆಗೆ ಕುವೆಂಪು ಅವರನ್ನು ಅವಮಾನ ಮಾಡಿದೆ ಎಂದು ಕಿಡಿಕಾರಿದರು. ಕುವೆಂಪು ಅವರ ಘೋಷ ವಾಕ್ಯವನ್ನೇ ಬದಲಾಯಿಸಿದೆ. ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ದೃಷ್ಟಿಯಲ್ಲಿ ಕುವೆಂಪು ಜಾತ್ಯತೀತರಲ್ಲವೇ? ಎಂದು ಪ್ರಶ್ನಿಸಿದರು. 

ಹಿಂದೂ ವಿರೋಧಿ ನಡೆ: ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂದಿರುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿರುವ ಅವರು, ಇದು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನಡೆ ಪ್ರತಿಬಿಂಬಿಸುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಎಷ್ಟರ ಮಟ್ಟಿಗೆ ಹಿಂದೂ ವಿರೋಧಿ ನಡೆ ಅನುಸರಿಸುತ್ತಿದೆ ಮತ್ತು ಯಾವ ಹಂತಕ್ಕೆ ತುಷ್ಟೀಕರಣ ಮಾಡುತ್ತಿದ್ದಾರೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದರು. 

ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬನ್ನಿ ಎಂಬುದನ್ನು ಅಳಿಸಿರುವುದನ್ನು ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಚರ್ಚೆ ನಡೆಸಲಿದೆ ಎಂದರು. ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನು ಕಾಂಗ್ರೆಸ್ ಮತ್ತು ಸರ್ಕಾರ ಅಮಾಯಕರು ಎಂದಿದೆ. ಇದನ್ನು ತೀರ್ಮಾನಿಸಲು ನೀವ್ಯಾರು? ಎಂದು ಪ್ರಶ್ನಿಸಿದ ಅವರು, ಗಲಭೆ ಪ್ರಕರಣದಲ್ಲಿ ನೂರಾರು ಆರೋಪಿಗಳ ಬಿಡುಗಡೆಗೆ ಕಾಂಗ್ರೆಸ್ ನವರು ಪತ್ರ ಬರೆಯುತ್ತಲೇ ಇದ್ದರು. 

ಕೋರ್ಟನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ಕಾಂಗ್ರೆಸ್ ಸರ್ಕಾರ ಸರಿಯಾದ ವಾದ ಮಂಡಿಸಲಿಲ್ಲ. ಪರೋಕ್ಷವಾಗಿ ಆರೋಪಿಗಳ ಬಿಡುಗಡೆಗೆ ಸಹಕರಿಸಿದೆ ಎಂದು ಸಚಿವ ಜೋಶಿ ಆರೋಪಿಸಿದರು. ಗಲಭೆ ವೇಳೆ ಪೊಲೀಸ್ ಕಮಿಷನರ್ ಮೇಲೆಯೇ ಹಲ್ಲೆ ನಡೆಯಿತು.ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಯಿತು. ಪೊಲೀಸ್ ವಾಹನಗಳು ಜಖಂ ಗೊಂಡವು. ಇಷ್ಟೆಲ್ಲ ಆಗಿದ್ದರೂ ಏಕೆ ಸಮರ್ಪಕ ವಾದ ಮಂಡಿಸಲಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

click me!