ಜಗದೀಶ ಶೆಟ್ಟರ್ ಸೋತಿದ್ರೆ ಸಾಧು ಆಗಿ ನಾನು ಹಿಮಾಲಯ ಸೇರುತ್ತಿದ್ದೆ: ರಮೇಶ ಜಾರಕಿಹೊಳಿ ಅಚ್ಛರಿ ಮಾತು!

First Published Jun 21, 2024, 12:48 PM IST

ವಿಧಾನಸಭೆ ಚುನಾವಣೆಯಲ್ಲಿ ನಮಗೆ ತೀವ್ರ ಹಿನ್ನಡೆಯಾಗಿತ್ತು. ಪದೇಪದೆ ಸೋತರೆ ನಮಗೆ ಲೀಡರ್ಸ್ ಅನ್ನಲ್ಲ. ಈ ಕಾರಣಕ್ಕೆ ಲೋಕಸಭೆ ಚುನಾವಣೆಯಲ್ಲಿ ಜಗದೀಶ ಶೆಟ್ಟರ್ ಸೋತಿದ್ರೆ ನಾನು ಸಾಧು ಆಗಿ ಹಿಮಾಲಯ ಸೇರಲು ನಿರ್ಧಾರ ಮಾಡಿದ್ದೆ. ಅದಕ್ಕಾಗಿ ಹಿಮಾಲಯದಲ್ಲಿ ಜಾಗವನ್ನೂ ನೋಡಿಕೊಂಡು ಬಂದಿದ್ದೇ'. ಹೀಗೆಂದವರೂ ಬೇರೆ ಯಾರೂ ಅಲ್ಲ, ಮಾಜಿ ಸಚಿವ, ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ.

ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಗೆಲುವು ದಾಖಲಿಸಿದ ಜಗದೀಶ ಶೆಟ್ಟರ್(Jagadish shettar) ಹಾಗೂ ರಮೇಶ ಜಾರಕಿಹೊಳಿಗೆ (Ramesh jarkiholi) ಗೋಕಾಕ ಬಿಜೆಪಿ ಘಟಕ(Gokak bjp)ದಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ರಾಜಕೀಯ ಬದ್ಧ ವೈರಿಗಳಾದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್(DK Shivakumar) ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್(Lakshmi hebbalkar) ವಿರುದ್ಧ ಗುಡುಗಿದರು.
 

ವಿಧಾನಸಭೆ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿದ್ದು ನಿಜ. ಆದರೆ ಲೋಕಸಭೆ ಚುನಾವಣೆ(Lok sabha election 2024)ಯಲ್ಲಿ ನಾವು ಗೆಲ್ಲಲೇಬೇಕಿತ್ತು. ನಮ್ಮ ಕಾರ್ಯಕರ್ತರು ದುಡ್ಡು ನೋಡಲಿಲ್ಲ. ಒಂದು ಕಪ್ ಚಹಾವನ್ನೂ ನಿರೀಕ್ಷೆ ಮಾಡಲಿಲ್ಲ. ತಮ್ಮ ಕೈಯಿಂದಲೇ ಪೆಟ್ರೊಲ್ ಹಾಕಿಸಿಕೊಂಡು ಊರೂರು ಸುತ್ತಿ ಬಿಜೆಪಿ ಅಭ್ಯರ್ಥಿ ಜಗದೀಶ ಶೆಟ್ಟರ್ ಪರ ಪ್ರಚಾರ ಮಾಡಿದರು. ಹಠಕ್ಕೆ ಬಿದ್ದು ನಾವು ಪ್ರಚಾರ ಮಾಡಿದಕ್ಕೆ ಬಿಜೆಪಿಗೆ ಇಷ್ಟೊಂದು ದೊಡ್ಡ ಗೆಲುವು ಸಿಗಲು ಕಾರಣವಾಯಿತು ಎಂದರು.
 

Latest Videos


ದುಡ್ಡು ತೂರಾದಿಡ್ಡ ಹೆಬ್ಬಾಳ್ಕರ್:

ಲೋಕಸಭೆ ಚುನಾವಣೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹೆಬ್ಬಾಳ್ಕರ್(Mrinal hebbalkar) ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಆಗಿದ್ದರು. ಪುತ್ರನನ್ನು ಗೆಲ್ಲಿಸಲು ಸಚಿವೆ ಹೆಬ್ಬಾಳ್ಕರ್ ಮನಬಂದಂತೆ ದುಡ್ಡು ತೂರಾಡಿದರು. ಯಾವುದೇ ಕ್ಷೇತ್ರಕ್ಕೆ ಹೋಗಲಿ ಮೆರವಣಿಗೆ ಮಾಡಲು ಜೀಪ್‍ಗೆ ಹಾಗೂ ಹಾರ ತುರಾಯಿ ಹಾಕಿಸಿಕೊಳ್ಳಲು ಹೆಬ್ಬಾಳ್ಕರ್ ದುಡ್ಡು ಕೊಡುತ್ತಿದ್ದರು. ತಮ್ಮದೇ ದುಡ್ಡಿನಿಂದ ಖರೀದಿಸಿದ ಹಾರವನ್ನು ತಾವೇ ಪ್ರಚಾರ ಸಭೆಗಳಲ್ಲಿ ಹಾಕಿಕೊಳ್ಳುತ್ತಿದ್ದರು. ವಿಧಾನಸಭೆ ಚುನಾವಣೆ ಬಳಿಕ ಮಹಾನಾಯಕ ಹಾಗೂ ವಿಷಕನ್ಯೆಯ ಸೊಕ್ಕಿನ ರಾಜಕಾರಣದ ದರ್ಪ ಜೋರಾಗಿತ್ತು. ದುಡ್ಡಿನಿಂದ ಎಲ್ಲವನ್ನೂ ಗೆಲ್ಲಬಹುದು ಎಂದು ಕೊಂಡವರಿಗೆ ಈ ಚುನಾವಣೆಯಲ್ಲಿ ಉತ್ತರ ಸಿಕ್ಕಿದೆ ಎಂದು ಕಿಡಿ ಕಾರಿದರು.

ಡಿಕೆಶಿ ವಿರುದ್ಧ ಸಾಹುಕಾರ್ ಗಂಭೀರ ಆರೋಪ:

ಗೋಕಾಕ ಕ್ಷೇತ್ರದ ಮಹತ್ವಾಕಾಂಕ್ಷೆಯ ಗಟ್ಟಿ ಬಸವಣ್ಣ ಏತನೀರಾವರಿ ಯೋಜನೆಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿತ್ತು. ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಆಗಿದ್ದ ಬಸವರಾಜ್ ಬೊಮ್ಮಾಯಿ(Basavaraj bommai) ಗೋಕಾಕ ನಗರಕ್ಕೆ ಆಗಮಿಸಿ ಯೋಜನೆಗೆ ಶಂಕು ಸ್ಥಾಪನೆ ನೆರವೇರಿಸಿದ್ದರು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈಗಿನ ಜಲಸಂಪನ್ಮೂಲ ಸಚಿವರು ಈ ಯೋಜನೆಯನ್ನು ತಡೆ ಹಿಡಿದಿದ್ದಾರೆ. ನನ್ನ ಕ್ಷೇತ್ರದ ನೀರಾವರಿ ಯೋಜನೆಗೆ ಅಡ್ಡಗಾಲು ಹಾಕಲಾಗುತ್ತಿದೆ ಎಂದು ರಮೇಶ ಆರೋಪಿಸಿದರು. 

ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದರೆ ನಾನು ಡಿಕೆಶಿ ವಿರುದ್ಧ ಹೋರಾಟಕ್ಕೆ ನಿರ್ಧರಿಸಿದ್ದೆ. ಆದರೆ ತಡೆಹಿಡಿದಿರುವುದು ಗೊತ್ತಾಗಿದೆ. ಈ ಯೋಜನೆ ಜಾರಿಯಾದ್ರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಇಲ್ಲವಾದರೆ ದೇವರ ಆಶೀರ್ವಾದದಿಂದ ಇನ್ನೆನೋ ಆಗಲಿದೆ. ಸಿದ್ದರಾಮಯ್ಯ ಸಿಎಂ ಆಗಿದಕ್ಕೆ ನಮ್ಮ ಕೆಲಸ ಸ್ಲೋ ಆಗಿದೆ ಎಂದು ಸರ್ಕಾರ ಪತನದ ಕಾರ್ಯಚಟುವಟಿಕೆಗಳ ಬಗ್ಗೆ ಬಹಿರಂಗ ಸಮಾವೇಶದಲ್ಲಿ ರಮೇಶ ಜಾರಕಿಹೊಳಿ ರಿವಿಲ್ ಮಾಡಿದರು.

click me!