ಯಾದಗಿರಿಯಲ್ಲಿ ನಡೆದ ಖಾಸಗಿ ಬಸ್ ಮತ್ತು ಕಾರ್ ನಡುವಿನ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿದ್ದಾರೆ. ಇದೇ ಬಸ್ನಲ್ಲಿದ್ದ ಪ್ರಯಾಣಿಕ ಉಮೇಶ ಬಿರಾದಾರ್, ತಮ್ಮ ಪ್ರಾಣ ಪಣಕ್ಕಿಟ್ಟು ಬಸ್ನಲ್ಲಿದ್ದ 20 ಜನರನ್ನು ಹಾಗೂ ಕಾರಿನಲ್ಲಿದ್ದ ಏಕೈಕ ಬಾಲಕನನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ.
ಯಾದಗಿರಿ: ಖಾಸಗಿ ಸ್ಲೀಪರ್ ಬಸ್ ಹಾಗೂ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನೊಳಗಿದ್ದ 10 ಜನರ ಪೈಕಿ, ಒಂದೇ ಕುಟುಂಬದ 9 ಜನರು ದುರ್ಮರಣಕ್ಕೀಡಾಗಿದ್ದಾರೆ. ಈ ವೇಳೆ, ಇಡೀ ದುರಂತದಲ್ಲಿ ಉಳಿದ ಏಕೈಕ ಬಾಲಕ ಸೇರಿದಂತೆ ಬಸ್ನೊಳಗಿದ್ದ 20 ಜನರನ್ನು ರಕ್ಷಿಸುವ ಮೂಲಕ ಸಹ ಪ್ರಯಾಣಿಕ ಉಮೇಶ ಬಿರಾದಾರ್ ಅವರು ಆಪದ್ಬಾಂಧವರಂತೆ ಕಾರ್ಯ ನಿರ್ವಹಿಸಿದ್ದಾರೆ.
25
ಉಮೇಶ ಬಿರಾದಾರ್
ಉಮೇಶ ಬಿರಾದಾರ್ ಬೆಂಗಳೂರಿನಿಂದ ಕಲಬುರಗಿಗೆ ತೆರಳುತ್ತಿದ್ದ ಬಸ್ನ ಒಳಗಿದ್ದರು. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಕೃತಿ ವಿಕೋಪ ನಿರ್ವಹಣೆ ವಿಭಾಗದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಕುಡಿಯುವ ನೀರು ಪೂರೈಕೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿದ್ದ ವಿಶೇಷ ಸಭೆಯಲ್ಲಿ ತಮ್ಮ ಮೇಲಧಿಕಾರಿಗಳ ಜೊತೆ ಪಾಲ್ಗೊಂಡು, ಗುರುವಾರ ಸಂಜೆ ಖಾಸಗಿ ಬಸ್ ಮೂಲಕ ಕಲಬುರಗಿಗೆ ಅವರು ಬರುತ್ತಿದ್ದರು.
35
ಜೀವ ರಕ್ಷಿಸಿದ ಆಪತ್ಬಾಂಧವ
ಯಾದಗಿರಿಯ ಈ ಭೀಕರ ಅಪಘಾತದಲ್ಲಿ ಪ್ರತ್ಯಕ್ಷದರ್ಶಿಯಷ್ಟೇ ಅಲ್ಲ, ತಮ್ಮದೇ ಜೀವ ಪಣಕ್ಕಿಟ್ಟು ಉಳಿದವರ ಜೀವ ರಕ್ಷಿಸಿದ ಆಪತ್ಬಾಂಧವ. ಅಂದಿನ ಕರಾಳ ಘಟನೆಯ ಬಗ್ಗೆ ತಮ್ಮನ್ನು ಸಂಪರ್ಕಿಸಿದ "ಕನ್ನಡಪ್ರಭ"ದೊಂದಿಗೆ ಅವರು ಮಾತನಾಡಿದ್ದಾರೆ.
ಅಪಘಾತದ ತೀವ್ರತೆಗೆ ನುಜ್ಜುಗುಜ್ಜಾಗಿದ್ದ ಕಾರಿನೊಳಗೆ ಸಿಲುಕಿದವರ ಉಸಿರು ನಿಂತಿರುವ ಲಕ್ಷಣಗಳು ಗೋಚರಿಸಿದ್ದ ಬೆನ್ನಲ್ಲೇ, ಮಗು ಅಳುತ್ತಿರುವ (10 ವರ್ಷದ ವಿರಾಟ್ ಅಪಘಾತದಲ್ಲಿ ಬದುಕುಳಿದ ಏಕೈಕ ಬಾಲಕ) ಶಬ್ದ ಕೇಳಿ, ಹರಸಾಹಸ ಪಟ್ಟು ಸ್ಥಳೀಯರ ನೆರವಿನೊಂದಿಗೆ ಹೊರಗೆ ತೆಗೆದರು. ಅಷ್ಟರಲ್ಲಾಗಲೇ, ಬೆಂಕಿಯ ಕೆನ್ನಾಲಿಗೆಗಳು ಎಲ್ಲೆಡೆ ಆವರಿಸಿಕೊಳ್ಳತೊಡಗಿದಾಗ, ಅಪಾಯ ಲೆಕ್ಕಿಸದೆ ಮಗುವನ್ನು ಎತ್ತಿಕೊಂಡು ಬಂದ ಉಮೇಶ, ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸುವವರೆಗೆ ಜವಾಬ್ದಾರಿ ಹಾಗೂ ಮಾನವೀಯತೆ ಮೆರೆದಿದ್ದಾರೆ.
ರಾಯಚೂರು ಜಿಲ್ಲೆ ಪಕ್ಕದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಿಣಿ ಸಮೀಪದ ಶಾಂತಪುರ ಕ್ರಾಸ್ ಬಳಿ ಸಂಭವಿಸಿದ ಕಾರು - ಖಾಸಗಿ ಬಸ್ ನಡುವಿನ ಅಪಘಾತದಲ್ಲಿ ಉಂಟಾದ ಬೆಂಕಿಯಿಂದ ಮೃತಪಟ್ಟ ಒಂದೇ ಕುಟುಂಬದ 9 ಜನರ ಅಂತ್ಯಕ್ರಿಯೆಯನ್ನು ಪೂರ್ಣಗೊಳಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಭಾವುಕರಾಗಿದ್ದರು. ಕಳೆದ ಮೂರು ದಶಕಗಳಿಂದ ಕೃಷ್ಣ ನಾಯಕ ಅವರ ಒಟನಾಡವಿದ್ದು, ಇಡೀ ಕುಟುಂಬವೇ ಅಪಘಾತದಲ್ಲಿ ಮೃತಪಟ್ಟಿರುವುದು ತೀವ್ರ ನೋವುಂಟು ಮಾಡಿದೆ. ಮೃತರಿಗೆ ಭಗವಂತ ಶಾಂತಿ ಕರುಣಿಸಲಿ, ದುಃಖ ಭರಿಸುವ ಶಕ್ತಿ ಕುಟುಂಬಕ್ಕೆ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.