ಹುಬ್ಬಳ್ಳಿ -ಹೈದರಾಬಾದ್‌ ನಡುವಿನ ವಿಮಾನಯಾನಕ್ಕೆ ಚಾಲನೆ

First Published Apr 1, 2021, 8:30 AM IST

ಹುಬ್ಬಳ್ಳಿ(ಏ.01): ಹುಬ್ಬಳ್ಳಿ-ಹೈದರಾಬಾದ್‌ ನಡುವೆ ವಿಮಾನಯಾನಕ್ಕೆ ಬುಧವಾರ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚಾಲನೆ ನೀಡಿದ್ದಾರೆ. 

ನಗರದ ವಿಮಾನ ನಿಲ್ದಾಣದಲ್ಲಿ ಬೆಳಗ್ಗೆ 8.25ಕ್ಕೆ ಇಲ್ಲಿಂದ ಹೈದರಾಬಾದ್‌ ವಿಮಾನಯಾನಕ್ಕೆ ಹಸಿರು ನಿಶಾನೆ ತೋರಿಸಿದರು. ಅಲಯನ್ಸ್‌ ಏರ್‌ವೇಸ್‌ನ ಈ ವಿಮಾನವು ಸೋಮವಾರ, ಬುಧವಾರ, ಶುಕ್ರವಾರ ಹಾರಾಟ ನಡೆಸಲಿದೆ. ಹೈದರಾಬಾದ್‌ನಿಂದ ಬೆಳಗ್ಗೆ 6.25ಕ್ಕೆ ಹೊರಡುವ ವಿಮಾನ, ಹುಬ್ಬಳ್ಳಿಗೆ 8 ಗಂಟೆಗೆ ಆಗಮಿಸಲಿದೆ. ಹುಬ್ಬಳ್ಳಿಯಿಂದ 8.25ಕ್ಕೆ ಹೊರಡುವ ವಿಮಾನ ಹೈದರಾಬಾದ್‌ಗೆ 9.55ಕ್ಕೆ ತಲುಪಲಿದೆ. ಸದ್ಯ 1,890 ಚಾಜ್‌ರ್‍ ಆಗಲಿದೆ. ಟಿಕೆಟ್‌ ದರದಲ್ಲಿ ಏರುಪೇರಾಗುವ ಸಾಧ್ಯತೆ ಇರಲಿದೆ ಎಂದು ಮೂಲಗಳು ತಿಳಿಸಿವೆ.
undefined
ವಿಮಾನಯಾನಕ್ಕೆ ಚಾಲನೆ ನೀಡಿದ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಸರ್ಕಾರ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಸುಸಜ್ಜಿತ ನಿಲ್ದಾಣವನ್ನಾಗಿ ಮಾರ್ಪಡಿಸಿದೆ. ಹುಬ್ಬಳ್ಳಿಯಿಂದ ಹೈದರಾಬಾದ್‌ ನಗರಕ್ಕೆ ವಿಮಾನಯಾನ ಸೇವೆ ಅವಶ್ಯಕತೆ ಇತ್ತು. ಬಹುದಿನದ ಬೇಡಿಕೆಗೆ ಈಗ ಚಾಲನೆ ನೀಡಲಾಗುತ್ತಿದೆ ಎಂದರು.
undefined
ವಾರದಲ್ಲಿ ಮೂರು ದಿನ ಹೈದರಾಬಾದ್‌ ನಗರಕ್ಕೆ ವಿಮಾನ ಸಂಚರಿಸಲಿದೆ. ಪ್ರಯಾಣಿಕರ ಸಂಖ್ಯೆ ಆಧಾರಿಸಿ ಮುಂದಿನ ದಿನಗಳಲ್ಲಿ ವಾರದ ಏಳು ದಿನವೂ ಸೇವೆ ವಿಸ್ತರಿಸಲಾಗುವುದು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರದೀಪ್‌ ಸಿಂಗ್‌ ಪುರಿ ಅವರ ವಿಶೇಷ ಪ್ರಯತ್ನದಿಂದ ಹೈದರಾಬಾದ್‌ ನಗರಕ್ಕೆ ವಿಮಾನ ಯಾನ ಸೇವೆ ಆರಂಭವಾಗಿದೆ. ಅವರಿಗೆ ವಿಶೇಷ ಧನ್ಯವಾದಗಳು. ಹುಬ್ಬಳ್ಳಿ ಮಂಗಳೂರಿಗೆ ನಡುವೆ ವಿಮಾನ ಸಂಪರ್ಕ ಕಲ್ಪಿಸಲು ಬೇಡಿಕೆ ಇದೆ. ಇದನ್ನು ಸಹ ಶೀಘ್ರವಾಗಿ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.
undefined
ಹುಬ್ಬಳ್ಳಿಯಲ್ಲಿ ರಾತ್ರಿ ಸಹ ವಿಮಾನ ಇಳಿಯಲು ಅವಕಾಶವಿದೆ. ಸ್ವಯಂ ಚಾಲಿತ ಲ್ಯಾಂಡಿಂಗ್‌ಗೆ ವ್ಯವಸ್ಥೆಯಿದೆ. ಈಗಿನ ರನ್‌ ವೇ ಟ್ರಾಕ್‌ ವಿಸ್ತರಣೆ ಮಾಡಲಾಗುವುದು. ಮಧ್ಯ ಪ್ರಾಚ್ಯ ರಾಷ್ಟ್ರಗಳಿಗೆ ನೇರವಾಗಿ ವಿಮಾನ ಸೌಲಭ್ಯ ಕಲ್ಪಿಸುವ ಪ್ರಸ್ತಾವವನ್ನು ಸರ್ಕಾರಕ್ಕೆ ಕಳುಹಿಸಲು ವಿಮಾನ ನಿಲ್ದಾಣ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ರನ್‌ ವೇ ವಿಸ್ತರಿಸಿದ ನಂತರ ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಆರಂಭವಾಗಲಿವೆ. ಈಗಾಗಲೇ ಮುಂಬೈ, ಅಹಮದಾಬಾದ್‌, ಕೊಚ್ಚಿ, ಕಣ್ಣೂರ್‌, ಗೋವಾಗಳಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ. ಕೊರೋನಾ ನಂತರದ ಸ್ಥಿತಿಗತಿ ನೋಡಿಕೊಂಡು ಇತರೆ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸಲಾಗುವುದು. ಟ್ರೂ ಜೆಟ್‌ ಮಾಲೀಕರೊಂದಿಗೆ ಹೆಚ್ಚಿನ ವಿಮಾನ ಸಂಪರ್ಕ ಕಲ್ಪಿಸುವಂತೆ ಮಾತುಕತೆ ನಡೆಸಲಾಗಿದೆ ಎಂದರು.
undefined
ಅಲಯನ್ಸ್‌ ಏರವೇಸ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಪ್ರೀರ್‍ತ್‌ ಎ.ಡಿ. ಸಿಂಗ್‌ ಮಾತನಾಡಿ, ಏರ್‌ ಇಂಡಿಯಾ ಭಾರತೀಯರ ಹೃದಯವನ್ನು ಬೆಸೆಯುವ ಕಾರ್ಯ ಮಾಡುತ್ತಿದೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮನವಿ ಮೇರೆಗೆ ಹೈದರಾಬಾದ್‌ ನಗರಕ್ಕೆ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಕರ್ನಾಟಕ ಹಾಗೂ ತೆಲಂಗಾಣದ ಮಧ್ಯದ ಬಾಂಧವ್ಯ ವೃದ್ಧಿಯಾಗಲಿದೆ. ಅಲಯನ್ಸ್‌ ಏರ್‌ವೇಸ್‌ ಗೋರಖ್‌ಪುರದಿಂದ ಲಕ್ನೋ, ಬರೇಲಿಯಿಂದ ದೆಹಲಿ, ಬಿಲಾಸಪುರ್‌ ಜಬಲ್‌ಪುರ್‌ ಹೀಗೆ ಹಲವು ನಗರಗಳಲ್ಲಿ ವಿಮಾನಯಾನ ಸೌಲಭ್ಯ ವಿಸ್ತರಿಸಿದೆ. ದಕ್ಷಿಣ ಭಾರತದಲ್ಲಿ ಮೈಸೂರುನಿಂದ ಮಂಗಳೂರು, ಕ್ಯಾಲಿಕಟ್‌, ಕಲಬುರಗಿಯಿಂದ ಮುಂಬೈ ಹೀಗೆ ನಾನಾ ನಗರಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಎಚ್‌ಎಎಲ್‌ನೊಂದಿಗೆ ನಾಗರಿಕ ಪ್ರಯಾಣಿಕ ವಿಮಾನಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಈಶಾನ್ಯ ರಾಜ್ಯಗಳಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ ಎಂದರು.
undefined
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ, ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಕುಮಾರ್‌ ಠಾಕ್ರೆ, ವಿಮಾನ ನಿಲ್ದಾಣ ಭದ್ರತಾಧಿಕಾರಿ ಜಗದೀಶ್‌ ಹಂಚಿನಾಳ, ಏರ್‌ಇಂಡಿಯಾ ಸಿಬ್ಬಂದಿ ನಾಗೇಂದ್ರ ಉಪಸ್ಥಿತರಿದ್ದರು.
undefined
click me!