ಮಂಡ್ಯದಲ್ಲಿ ಜಮೀನು ಪೋಡಿ ಮಾಡಿಕೊಡಲು ಲಂಚ ವಸೂಲಿ; ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಆರ್‌ಐ ಮಧುಸೂದನ್!

Published : Jun 12, 2026, 10:40 PM IST

ಮಂಡ್ಯ ಜಿಲ್ಲೆಯಲ್ಲಿ, ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಹಲಗೂರು ಕಂದಾಯ ನಿರೀಕ್ಷಕ ಮಧುಸೂದನ್ ಅವರನ್ನು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ₹2 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಅಧಿಕಾರಿ, ₹10,000 ಮುಂಗಡ ಪಡೆಯುವಾಗ ಬಲೆಗೆ ಬಿದ್ದಿದ್ದಾರೆ.

PREV
14
ಲೋಕಾಯುಕ್ತ ಬಲೆಗೆ ಕಂದಾಯ ನಿರೀಕ್ಷಕ

ಮಂಡ್ಯ ಜಿಲ್ಲೆಯಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ತಮ್ಮ ಶಿಕಾರಿಯನ್ನು ಮುಂದುವರಿಸಿದ್ದಾರೆ. ಜಮೀನು ಪೋಡಿ ಮಾಡಿಕೊಡಲು ರೈತರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಮಳವಳ್ಳಿ ತಾಲೂಕಿನ ಹಲಗೂರು ಕಂದಾಯ ನಿರೀಕ್ಷಕ (RI) ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಇಂದು ನಡೆದಿದೆ.

ಘಟನೆಯ ವಿವರ:

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಹೋಬಳಿಯ ಕಂದಾಯ ನಿರೀಕ್ಷಕರಾಗಿ (Revenue Inspector) ಕಾರ್ಯನಿರ್ವಹಿಸುತ್ತಿದ್ದ ಮಧುಸೂದನ್ ಲೋಕಾಯುಕ್ತ ಜಾಲಕ್ಕೆ ಬಿದ್ದ ಭ್ರಷ್ಟ ಅಧಿಕಾರಿಯಾಗಿದ್ದಾರೆ. ಹಲಗೂರು ವ್ಯಾಪ್ತಿಯ ರೈತರಾದ ನಂಜುಂಡಸ್ವಾಮಿ ಎಂಬುವವರು ತಮ್ಮ ಜಮೀನಿನ ದುರಸ್ತಿ ಹಾಗೂ ಪೋಡಿ ಕಾರ್ಯಕ್ಕಾಗಿ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಕೆಲಸವನ್ನು ಮಾಡಿಕೊಡಲು ಆರ್‌ಐ ಮಧುಸೂದನ್ ಅವರು ರೈತನಿಗೆ ಅಲೆದಾಡಿಸುತ್ತಿದ್ದರು ಎನ್ನಲಾಗಿದೆ.

24
2 ಲಕ್ಷ ರೂಪಾಯಿಗೆ ಬೇಡಿಕೆ:

ನಂಜುಂಡಸ್ವಾಮಿ ಅವರ ಪೋಡಿ ಕಾರ್ಯವನ್ನು ಪೂರೈಸಿಕೊಡಲು ಆರ್‌ಐ ಮಧುಸೂದನ್ ಬರೋಬ್ಬರಿ 2 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ‘ಹಣ ನೀಡದಿದ್ದರೆ ನಿಮ್ಮ ಕೆಲಸ ಆಗುವುದಿಲ್ಲ’ ಎಂದು ರೈತನಿಗೆ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಬಡ ರೈತ ಅಷ್ಟು ದೊಡ್ಡ ಮೊತ್ತವನ್ನು ನೀಡಲು ಅಸಹಾಯಕತೆ ವ್ಯಕ್ತಪಡಿಸಿದಾಗ, ಕನಿಷ್ಠ ಪಕ್ಷ ಮುಂಗಡವಾಗಿಯಾದರೂ ಹಣ ನೀಡುವಂತೆ ಪೀಡಿಸಿದ್ದರು.

34
10 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಆರ್‌ಐ:

ಭ್ರಷ್ಟ ಅಧಿಕಾರಿಯ ಕಿರುಕುಳದಿಂದ ಬೇಸತ್ತ ರೈತ ನಂಜುಂಡಸ್ವಾಮಿ ಅವರು ಮಂಡ್ಯ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ, ಇಂದು ರೈತ ನಂಜುಂಡಸ್ವಾಮಿ ಅವರು ಮುಂಗಡ ಹಣವಾಗಿ 10 ಸಾವಿರ ರೂಪಾಯಿಗಳನ್ನು ಆರ್‌ಐ ಮಧುಸೂದನ್ ಅವರಿಗೆ ನೀಡುತ್ತಿದ್ದರು. ಈ ವೇಳೆ ಹೊಂಚು ಹಾಕಿ ಕುಳಿತಿದ್ದ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಲಂಚದ ಹಣದ ಸಮೇತ ಮಧುಸೂದನ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

44
ಲೋಕಾಯುಕ್ತ ವಶದಲ್ಲಿ ಭ್ರಷ್ಟ ಅಧಿಕಾರಿ:

ಪಡೆದ ಹಣದ ಸಮೇತ ಸಿಕ್ಕಿಬಿದ್ದ ಮಧುಸೂದನ್ ಅವರನ್ನು ಮಂಡ್ಯ ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಕಚೇರಿಯ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ಹಿಂದೆ ಇವರು ಎಷ್ಟು ಜನರಿಗೆ ಇಂತಹ ಕಿರುಕುಳ ನೀಡಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ದಾಳಿಯಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್ ನೇತೃತ್ವದ ತಂಡ ಭಾಗವಹಿಸಿತ್ತು.

Read more Photos on
click me!

Recommended Stories