ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಕುಮಟಾದಿಂದಲೇ ಸಿಗಲಿದೆ ನೇರ ರೈಲು: ಜೂನ್ 20 ರಂದು ಕಾಚಿಗುಡ ಎಕ್ಸ್‌ಪ್ರೆಸ್‌ಗೆ ಅದ್ಧೂರಿ ಚಾಲನೆ!

Published : Jun 19, 2026, 11:29 AM IST

ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ ಜೂ. 20 ರಂದು ಉದ್ಘಾಟನೆಗೊಳ್ಳಲಿದೆ. ಈ ಹೊಸ ರೈಲು ವಾರದಲ್ಲಿ ಎರಡು ದಿನ ಸಂಚರಿಸಲಿದ್ದು, ಕುಮಟಾ ರೈಲು ನಿಲ್ದಾಣದ 2ನೇ ಪ್ಲಾಟ್‌ಫಾರ್ಮ್‌ ಹಾಗೂ ಇತರ ಪ್ರಯಾಣಿಕ ಸೌಲಭ್ಯಗಳೂ ಲೋಕಾರ್ಪಣೆಗೊಳ್ಳಲಿವೆ. 

PREV
17

ಕುಮಟಾದಿಂದ ತಿರುಪತಿ ಸಂಪರ್ಕಿಸುವ ಕಾಚಿಗುಡ ರೈಲು ಸೇವೆ, ಕುಮಟಾದಲ್ಲಿ 2ನೇ ಪ್ಲಾಟ್‌ಫಾರ್ಮ್‌ ಹಾಗೂ ಗೋಕರ್ಣ, ಭಟ್ಕಳ ಹಾಗೂ ಮುರ್ಡೇಶ್ವರ ನಿಲ್ದಾಣಗಳಲ್ಲಿ ನಿರ್ಮಿಸಿದ ಪ್ರಯಾಣಿಕ ಸೌಲಭ್ಯಗಳ ಉದ್ಘಾಟನೆ ಕಾರ್ಯಕ್ರಮ ಜೂ. 20ರಂದು ಮಧ್ಯಾಹ್ನ 2.30ಕ್ಕೆ ಕುಮಟಾ ಕೊಂಕಣ ರೈಲು ನಿಲ್ದಾಣದಲ್ಲಿ ನಡೆಯಲಿದೆ.

27

ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಸಿಎಂಡಿ ಸಂತೋಷಕುಮಾರ ಝಾ ಹಾಗೂ ಇತರ ಅಧಿಕಾರಿಗಳ ಉಪಸ್ಥಿತರಿರುವರು.ಈ ಕಾರ್ಯಕ್ರಮ ಜನತೆಯ ಪಾಲಿಗೆ ಸಂತಸದ ಹಾಗೂ ಐತಿಹಾಸಿಕ ಕ್ಷಣ ಎಂದು ಉತ್ತರ ಕನ್ನಡ ಜಿಲ್ಲಾ ರೈಲ್ವೆ ಸೇವಾ ಸಮಿತಿ ಬಣ್ಣಿಸಿದೆ.

37

ಕುಮಟಾದಿಂದ ತಿರುಪತಿಗೆ ನೇರ ರೈಲು ಸಂಪರ್ಕ ಆಗಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಪ್ರಯಾಣಿಕರಿಗೆ, ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ, ವ್ಯಾಪಾರಸ್ಥರಿಗೆ ಹಾಗೂ ಪ್ರವಾಸಿಗರಿಗೆ ಹೆಚ್ಚಿನ ಅನುಕೂಲವಾಗಲಿದೆ. ಪ್ರತಿ ಬುಧವಾರ ಮತ್ತು ಶನಿವಾರ ಕುಮಟಾದಿಂದ ಈ ರೈಲು ಸಂಚರಿಸಲಿದ್ದು, ತಿರುಪತಿ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸಲಿದೆ.

47

ಈ ಮಹತ್ವದ ಯೋಜನೆಗೆ ಕಾರಣಕರ್ತರಾದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಕೊಂಕಣ ರೈಲ್ವೆ ಸಲಹಾ ಸಮಿತಿಯ ಸದಸ್ಯ ಹಾಗೂ ಶಾಸಕ ದಿನಕರ ಶೆಟ್ಟಿ, ಕೊಂಕಣ ರೈಲ್ವೆ ಪ್ರಾದೇಶಿಕ ರೈಲ್ವೆ ವ್ಯವಸ್ಥಾಪಕಿ ಆಶಾ ಶೆಟ್ಟಿ ಹಾಗೂ ಅಧಿಕಾರಿಗಳು ಅಭಿನಂದನೀಯರು. ಕುಮಟಾ ರೈಲು ನಿಲ್ದಾಣದ ಎರಡನೇ ಪ್ಲಾಟ್‌ಫಾರ್ಮ್ ಉದ್ಘಾಟನೆಯಿಂದ ಕುಮಟಾ ನಿಲ್ದಾಣವು ಟರ್ಮಿನಲ್ ಸೌಲಭ್ಯ ಹೊಂದಿದ ಪ್ರಮುಖ ರೈಲು ನಿಲ್ದಾಣವಾಗಿ ಹೊರಹೊಮ್ಮಲಿದ್ದು, ಜಿಲ್ಲೆಯ ರೈಲು ಸಂಪರ್ಕಕ್ಕೆ ಹೊಸ ಆಯಾಮ ದೊರೆಯಲಿದೆ.

57

ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕಾಚಿಗುಡ ರೈಲು ಹೊಸ ಮೈಲಿಗಲ್ಲಾಗಲಿದೆ ಎಂದು ರೈಲ್ವೆ ಸೇವಾ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಗಾಂವ್ಕರ್ ಹೇಳಿದರು. ಕಾಚಿಗುಡ-ತಿರುಪತಿ-ಮಂಗಳೂರು ರೈಲನ್ನು ಮುರ್ಡೇಶ್ವರದ ವರೆಗೆ ವಿಸ್ತರಿಸುವಲ್ಲಿ ಮುಖ್ಯ ಪಾತ್ರ ನಿರ್ವಹಿಸಿದ ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸಹಯೋಗ ಸ್ಮರಣೀಯ. ಅದಾದ ಬಳಿಕ ಮುರ್ಡೇಶ್ವರ-ತಿರುಪತಿ-ಕಾಚಿಗುಡ ರೈಲನ್ನು ಕುಮಟಾಕ್ಕೆ ವಿಸ್ತರಿಸುವ ಕನಸನ್ನು ಹೊತ್ತು, ಶಾಸಕ ದಿನಕರ ಶೆಟ್ಟಿ ಅವರು ಕೊಂಕಣ ರೈಲ್ವೆ ಅಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಿ, ಅದನ್ನು ಕೇಂದ್ರ ರೈಲ್ವೆ ಇಲಾಖೆಗೆ ರವಾನಿಸಿದ್ದರು.

67

ಈ ಪ್ರಯತ್ನಗಳಿಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಸಹಕಾರವೂ ದೊರೆತಿದ್ದರ ಫಲವಾಗಿ ಮುರ್ಡೇಶ್ವರ -ತಿರುಪತಿ ರೈಲು ಕುಮಟಾ ವರೆಗೂ ವಿಸ್ತರಣೆಯಾಗಿ ಉದ್ಘಾಟನೆಗೊಳ್ಳುತ್ತಿದೆ. ಈ ರೈಲು ಹೊನ್ನಾವರ ನಿಲ್ದಾಣದಲ್ಲಿಯೂ ನಿಲುಗಡೆ ಹೊಂದಲು ಶಾಸಕ ದಿನಕರ ಶೆಟ್ಟಿ ಬೇಡಿಕೆ ಇಟ್ಟಿದ್ದಾರೆ. ಪ್ರತಿ ಮಂಗಳವಾರ ಮತ್ತು ಶುಕ್ರವಾರ ತಿರುಪತಿಯಿಂದ ಹೊರಡುವ ಈ ರೈಲು, ಬುಧವಾರ ಮತ್ತು ಶನಿವಾರ ಕುಮಟಾದಿಂದ ತಿರುಪತಿಗೆ ಪ್ರಯಾಣ ಬೆಳೆಸಲಿದೆ. ಕರಾವಳಿ ಕರ್ನಾಟಕದ ರೈಲು ಸಂಪರ್ಕವನ್ನು ಇನ್ನಷ್ಟು ಬಲಪಡಿಸುವ ಈ ಯೋಜನೆ ಭವಿಷ್ಯದಲ್ಲಿ ಇನ್ನಷ್ಟು ರೈಲು ಸೇವೆಗಳ ವಿಸ್ತರಣೆಗೆ ದಾರಿ ಮಾಡಿಕೊಡಲಿದೆ ಎಂದು ಹೇಳಿದರು.

77

ರೈಲು ಸಂಖ್ಯೆ 12789/12790 ಕಾಚಿಗುಡ–ಮುರ್ಡೇಶ್ವರ–ಕಾಚಿಗುಡ Bi-Weekly ಎಕ್ಸ್‌ಪ್ರೆಸ್ ರೈಲು ಸೇವೆ ಕುಮಟಾವರೆಗೆ ವಿಸ್ತರಿಸಲಾಗಿದೆ. ಈ ವಿಸ್ತರಿತ ಸೇವೆ ಜೂನ್ 19 ರಿಂದ ಕಾಚಿಗುಡದಿಂದ ಹಾಗೂ ಜೂನ್ 20 ರಿಂದ ಕುಮಟಾದಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.

ರೈಲು ಸಂಚಾರದ ಸಂಪೂರ್ಣ ವೇಳಾಪಟ್ಟಿ ಇಂತಿವೆ: ಕಾಚಿಗುಡದಿಂದ ಕುಮಟಾಕ್ಕೆ (ರೈಲು ಸಂಖ್ಯೆ: 12789) ಪ್ರತಿ ಮಂಗಳವಾರ ಮತ್ತು ಶುಕ್ರವಾರ ಹೊರಡಲಿದೆ. ಬೆಳಗ್ಗೆ 6:05ಕ್ಕೆ ರೈಲು ಕಾಚಿಗುಡದಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 2:40 ಕ್ಕೆ ಕುಮಟಾ ನಿಲ್ದಾಣವನ್ನು ತಲುಪಲಿದೆ. ಈ ರೈಲು ಮುರ್ಡೇಶ್ವರ ನಿಲ್ದಾಣದಿಂದ ಮಧ್ಯಾಹ್ನ 1:48 ಕ್ಕೆ ಹೊರಟು ಕುಮಟಾ ಕಡೆಗೆ ಪ್ರಯಾಣ ಬೆಳೆಸಲಿದೆ.

ಕುಮಟಾದಿಂದ ಕಾಚಿಗುಡಕ್ಕೆ (ತಿರುಗಿ ಬರುವ ರೈಲು ಸಂಖ್ಯೆ: 12790) ಪ್ರತಿ ಬುಧವಾರ ಮತ್ತು ಶನಿವಾರ ಸಂಚರಿಸಲಿದೆ. ಮಧ್ಯಾಹ್ನ 3:25 ಕ್ಕೆ ಕುಮಟಾದಿಂದ ಈ ರೈಲು ಹೊರಡಲಿದೆ. ಮಾರ್ಗದಲ್ಲಿ ಮುರ್ಡೇಶ್ವರ (ಸಂಜೆ 4:04), ಭಟ್ಕಳ (ಸಂಜೆ 4:20), ಮೂಕಾಂಬಿಕಾ ರೋಡ್ ಬೈಂದೂರು (ಸಂಜೆ 4:37), ಕುಂದಾಪುರ (ಸಂಜೆ 5:04), ಬಾರ್ಕೂರು (ಸಂಜೆ 5:20), ಉಡುಪಿ (ಸಂಜೆ 5:37), ಮಂಗಳೂರು ಸೆಂಟ್ರಲ್ (ರಾತ್ರಿ 8:00) ನಿಲ್ದಾಣದಲ್ಲಿ ನಿಲ್ಲಲಿದ್ದು, ಮರುದಿನ ರಾತ್ರಿ 11:40 ಕ್ಕೆ ಕಾಚಿಗುಡ ನಿಲ್ದಾಣವನ್ನು ತಲುಪಲಿದೆ.

Read more Photos on
click me!

Recommended Stories