73ನೇ ವಯಸ್ಸಿನಲ್ಲಿಯೂ ಕೆಲಸ; ದಿನಕ್ಕೆ 25 ಸಾವಿರ ಸಂಪಾದನೆ; ಇದು ಅಜ್ಜಿ ಖಾನಾವಳಿ!

Published : Sep 08, 2026, 12:45 PM IST

73 ವರ್ಷದ ಶಿವಗಂಗಮ್ಮ ಅಜ್ಜಿ, ಖಾನಾವಳಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ವಯಸ್ಸನ್ನು ಮೀರಿ ದುಡಿಯುವ ಇವರ ಹೋಟೆಲ್, ರುಚಿಕರವಾದ ಜೋಳದ ರೊಟ್ಟಿಗೆ ಪ್ರಸಿದ್ಧವಾಗಿದ್ದು, ಕಾಯಕವೇ ಕೈಲಾಸವೆಂದು ನಂಬಿ ತಮ್ಮ ಕೊನೆಯುಸಿರಿನವರೆಗೂ ದುಡಿಯಬೇಕೆಂಬ ಹಂಬಲ ಹೊಂದಿದ್ದಾರೆ.

PREV
16
ಅಜ್ಜಿ ಖಾನಾವಳಿ

ದುಡಿಬೇಕು ಅನ್ನೋ ಛಲ ಇದ್ರೆ ವಯಸ್ಸು ಅಡ್ಡಿ ಬರಲ್ಲ ಎಂಬುದಕ್ಕೆ ಈ ಅಜ್ಜಿ ಸಾಕ್ಷಿಯಾಗಿದ್ದಾರೆ. ವಯಸ್ಸು 73 ಆದರೂ 23ರ ಹರೆಯದವರಂತೆ ಕೆಲಸ ಮಾಡುತ್ತಾರೆ. ಬೆಳಗ್ಗೆ 9ಕ್ಕೆ ಶುರುವಾದ್ರೆ ಕೆಲಸ ರಾತ್ರಿ 11 ಗಂಟೆಗೆ ಮುಗಿಯುತ್ತದೆ. ಕೊಪ್ಪಳಕ್ಕೆ ಬರೋ ಜನರು ಈ ಅಜ್ಜಿಯ ಹೋಟೆಲ್ ಹುಡುಕಿಕೊಂಡು ಬರುತ್ತಾರೆ. ಬಂಗಾರ ಗಳಿಕೆ ಮಾಡಬಾರದು, ಬಂಗಾರದಂತಹ ಗುಣ ಸಂಪಾದನೆ ಮಾಡಬೇಕು ಅನ್ನೋದು ಅಜ್ಜಿಯವರ ಮಾತು. ಬೇಕು ಅನ್ನೋನು ಬೇಕೂಫ್, ಸಾಕು ಅನ್ನೋನೇ ಸಿದ್ದಪ್ಪ ಅನ್ನೋ ಅಜ್ಜಿ, ಪ್ರತಿಕ್ಷಣವೂ ಸಿದ್ದಾರೂಢ (ದೇವರು) ಅವರನ್ನು ನೆನಪಿಸಿಕೊಳ್ಳುತ್ತಾರೆ.

26
25 ವರ್ಷದಿಂದ ಖಾನಾವಳಿ

ಈ ಅಜ್ಜಿಯ ಹೆಸರು ಶಿವಗಂಗಮ್ಮ, ಶ್ರೀ ಸಿದ್ದಾರೂಢ ಹೆಸರಿನಲ್ಲಿ ಕಳೆದ 25 ವರ್ಷದಿಂದ ಖಾನಾವಳಿ ನಡೆಸಿಕೊಂಡು ಬರುತ್ತಿದ್ದಾರೆ. ಈ ಅಜ್ಜಿಗೆ ನಾಲ್ಕು ಮಕ್ಕಳು. ಇಲ್ಲಿ ನೀಡಲಾಗುವ ಜೋಳದ ರೊಟ್ಟಿ ಕೊಪ್ಪಳದಲ್ಲಿ ಫೇಮಸ್. ನನಗೆ ಅಕ್ಷರಜ್ಞಾನ ಇಲ್ಲ ಸರ್. ಲೋಕಜ್ಞಾನ ಇದೆ. ಲೆಕ್ಕ ಮಾಡಲು ಯಾವುದೇ ಕ್ಯಾಲ್ಕುಲೇಟರ್ ಬಳಸಲ್ಲ.

ಲಾಕ್‌ಡೌನ್ ಸಂದರ್ಭದಲ್ಲಿಯೂ ಹೋಟೆಲ್ ಮುಚ್ಚದೇ ಕೆಲಸ ಮಾಡಿದ್ದೇನೆ. ಆ ವೇಳೆ ಪೊಲೀಸರು, ಪುರಸಭೆ ಸಿಬ್ಬಂದಿಯೂ ಇಲ್ಲಿಗೆ ಬಂದು ಊಟ ಮಾಡುತ್ತಿದ್ದರು. ಎಲ್ಲವೂ ಸಿದ್ದಾರೂಢ ಸ್ವಾಮೀಜಿಗಳ ಆಶೀರ್ವಾದದಿಂದ ಕೆಲಸ ನಡೆಯುತ್ತಿದೆ ಎಂದು ಅಜ್ಜಿ ಹೇಳುತ್ತಾರೆ.

36
ಕೊಪ್ಪಳದ ಶಿವಗಂಗಮ್ಮ ಅಜ್ಜಿ

ಶಿವಗಂಗಮ್ಮ ಅವರ ಮೂಲತಃ ಹುನ್ನಾಳದ ನಿವಾಸಿ. ಕುಷ್ಟಗಿ ತಾಲೂಕಿನ ಮುನ್ನಾಳ ಗ್ರಾಮದ ಚಂದಲಿಂಗಪ್ಪ ಎಂಬವರ ಜೊತೆ ಮದುವೆಯಾಗುತ್ತದೆ. ಬಾಲ್ಯವಿವಾಹ ಆಗಿದ್ದರಿಂದ ಶಿವಲಿಂಗಮ್ಮಾ ಅವರಿಗೆ ಮದುವೆಯಾಗಿದ್ದು ಸಹ ಅಷ್ಟು ನೆನಪಿಲ್ಲ. ಗಂಡನೂ ಹೆಚ್ಚು ಕೆಲಸ ಮಾಡದ ಹಿನ್ನೆಲೆ ಉದ್ಯೋಗ ಅರಿಸಿಕೊಂಡು ಕೊಪ್ಪಳ ಪಟ್ಟಣಕ್ಕೆ ಬರುತ್ತಾರೆ.

46
ಹೋಟೆಲ್ ವ್ಯಾಪಾರ ಆರಂಭ ಆಗಿದ್ದು ಹೇಗೆ ?

ತವರುಮನೆಯಲ್ಲಿ ಹೋಟೆಲ್ ವ್ಯಾಪಾರ ಮಾಡಿದ್ದರಿಂದ ಕೆಲಸದ ಅನುಭವ ಇತ್ತು. ಗಂಡನ ಮನೆಯಲ್ಲಿ ಸಣ್ಣದಾಗಿ ಹೋಟೆಲ್ ವ್ಯಾಪಾರ ಮಾಡಿದೆ. ಅಲ್ಲಿ ಹೆಚ್ಚು ವ್ಯಾಪಾರ ಇಲ್ಲದ ಕಾರಣ ಕೊಪ್ಪಳಕ್ಕೆ ಬಂದೆ. ಆರಂಭದಲ್ಲಿ ರಸ್ತೆಬದಿ ಹೋಟೆಲ್ ಇತ್ತು. ಈಗ ಇಲ್ಲಿಯವರಗೆ ಬಂದಿದ್ದೇನೆ.

ಕೊಪ್ಪಳದಲ್ಲಿ ಮಗ ಪ್ರತ್ಯೇಕ ಹೋಟೆಲ್ ಮಾಡ್ಕೊಂಡಿದ್ದಾನೆ. ಅಳಿಯನೂ ಸರ್ಕಲ್‌ನಲ್ಲಿ ಹೋಟೆಲ್ ಹಾಕಿಕೊಂಡಿದ್ದಾನೆ. ಇಲ್ಲಿ ನಾನೊಬ್ಬಳೇ ಹೋಟೆಲ್ ನಡೆಸುತ್ತಿದ್ದೇನೆ. ಅಡುಗೆ ಮಾತ್ರ ನಾನೇ ಮಾಡುವೆ. ಅಡುಗೆ ಮಾಡಿಯೇ ಗಲ್ಲಾಪೆಟ್ಟಿಗೆಗೆ ಬಂದು ಕುಳಿತುಕೊಳ್ಳುತ್ತೇನೆ ಎಂದು ಶಿವಗಂಗಮ್ಮಾ ಅಜ್ಜಿ ಹೇಳುತ್ತಾರೆ.

56
ಕೊನೆಯವರೆಗೂ ದುಡಿಬೇಕು, ಚೆನ್ನಾಗಿರುವಾಗಲೇ ಶಿವನ ಪಾದ ಸೇರಬೇಕು

ಕೊಪ್ಪಳಕ್ಕೆ ಬಂದು 25 ವರ್ಷ ಆಯ್ತು. ಕೈ-ಕಾಲು ಗಟ್ಟಿಯಾಗಿರುವಾಗಲೇ ಜೀವ ಹೋಗಬೇಕೆಂದು ಆ ಸಿದ್ದಾರೂಢನಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಯಾರ ಹಂಗಿನಲ್ಲಿಯೂ ಇರಬಾರದು. ನಮ್ಮ ಖಾನಾವಳಿಗೆ ಬರುವ ಗ್ರಾಹಕರಲ್ಲಿ ಸಿದ್ದಾರೂಢರನ್ನು ಕಾಣುತ್ತೇನೆ. ಗ್ರಾಹಕರು ಸಹ ನನ್ನನ್ನು ತಾಯಿ ಸ್ವರೂಪದಲ್ಲಿ ನೋಡುತ್ತಾರೆ. ನನ್ನ ಜೀವನಕ್ಕಿಷ್ಟು ಸಾಕು. ಕೊನೆಯವರೆಗೂ ದುಡಿಯಬೇಕು, ಚೆನ್ನಾಗಿಯೇ ಇರೋವಾಗಲೇ ಶಿವನ ಪಾದ ಸೇರಿಕೊಳ್ಳಬೇಕು ಎಂದು ಅಜ್ಜಿ ಹೇಳುತ್ತಾರೆ.

66
ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ

ತಿಂಗಳಿಗೆ ಒಂದು ಬಾರಿ ದಿನಸಿ ಖರೀದಿ ಮಾಡುತ್ತೇವೆ. ಪಾಟೀಲರ ಅಂಗಡಿಯಲ್ಲಿ ತಿಂಗಳಿಗೊಮ್ಮೆ 2 ಲಕ್ಷ ರೂಪಾಯಿಯಷ್ಟು ದಿನಸಿ ಖರೀದಿ ಮಾಡುತ್ತೇನೆ. ಇಲ್ಲಿ 10 ಜನರು ಕೆಲಸ ಮಾಡುತ್ತಾರೆ. ದಿನಕ್ಕೆ 25 ಸಾವಿರ ರೂಪಾಯಿಗಷ್ಟು ಕಲೆಕ್ಷನ್ ಆಗುತ್ತದೆ. ಉಳಿತಾಯ ಕಡಿಮೆಯಾಗುತ್ತದೆ. ಒಂದು ಊಟಕ್ಕೆ 2 ರೊಟ್ಟಿ ಕೊಡುತ್ತೇನೆ. ಅನ್ನಕ್ಕೆ ಯಾವುದೇ ಲಿಮಿಟ್ ಇಲ್ಲ. ಇದುವರೆಗೂ ಇಷ್ಟೇ ಅಂತ ಸೀಮಿತ ಮಾಡಿಲ್ಲ. ಈ ಹಿಂದೆ ಸಗಣಿಯನ್ನು ಸಂಗ್ರಹಿಸಿದ್ರೆ ತಿಂಗಳಿಗೆ 5 ರೂಪಾಯಿ ಸಿಗುತ್ತಿತ್ತು ಎಂದು ಹಳೆ ದಿನಗಳನ್ನು ನೆನಪು ಮಾಡಿಕೊಂಡರು.

Read more Photos on
click me!

Recommended Stories