ಕಾಣಿಯೂರು-ಸುಳ್ಯ-ಕೊಡಗು ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಇಲ್ಲ! ಯಾಕಿಷ್ಟು ಗೊಂದಲವಾಯ್ತು?

Published : Jun 03, 2026, 08:37 PM IST

ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಅವರು, ಕೊಡಗು ಜಿಲ್ಲೆಯ ಮೂಲಕ ಯಾವುದೇ ಹೊಸ ರೈಲು ಮಾರ್ಗದ ಪ್ರಸ್ತಾವನೆ ಸದ್ಯಕ್ಕೆ ರೈಲ್ವೆ ಸಚಿವಾಲಯದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವರೊಂದಿಗಿನ ಭೇಟಿಯ ನಂತರ, ಈ ಹಿಂದೆ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆದಿದ್ದಾರೆ.

PREV
18
ಕೊಡಗು ಮೂಲಕ ರೈಲು ಮಾರ್ಗ ಪ್ರಸ್ತಾವನೆ ಇಲ್ಲ: ಸಂಸದ ಯದುವೀರ್

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ಯಾವುದೇ ಹೊಸ ರೈಲು ಯೋಜನೆ ಅಥವಾ ರೈಲು ಮಾರ್ಗಕ್ಕೆ ಸಂಬಂಧಿಸಿದಂತೆ ಪ್ರಸ್ತುತ ರೈಲ್ವೆ ಸಚಿವಾಲಯದ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ. ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಅವರು ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಈ ಭೇಟಿಯ ಸಂದರ್ಭದಲ್ಲಿ ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸಂಪರ್ಕ ವ್ಯವಸ್ಥೆಗಳ ಕುರಿತು ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಲಾಯಿತು.

28
ಸಾರ್ವಜನಿಕ ವಲಯದ ಆತಂಕಕ್ಕೆ ತೆರೆ

ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯ ಪರಿಸರ ಸೂಕ್ಷ್ಮ ಪ್ರದೇಶಗಳ ಮೂಲಕ ರೈಲು ಮಾರ್ಗ ಹಾದುಹೋಗುವ ಸಾಧ್ಯತೆ ಇದೆ ಎಂಬ ವರದಿಗಳು ಸಾಮಾಜಿಕ ಜಾಲತಾಣ ಸೇರಿದಂತೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದವು. ಇದು ಕೊಡಗಿನ ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯ ಜನರಲ್ಲಿ ಭಾರಿ ಆತಂಕ ಮೂಡಿಸಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಂಸದ ಯದುವೀರ್ ಒಡೆಯರ್, ಕೇಂದ್ರ ರೈಲ್ವೆ ಸಚಿವರ ಗಮನಕ್ಕೆ ತಂದರು. ಸಚಿವರೊಂದಿಗೆ ನಡೆದ ಸಮಾಲೋಚನೆಯಲ್ಲಿ, ಕೊಡಗಿಗೆ ಸಂಬಂಧಿಸಿದಂತೆ ಇಂತಹ ಯಾವುದೇ ರೈಲು ಯೋಜನೆಯ ಪ್ರಸ್ತಾವನೆ ಸದ್ಯಕ್ಕೆ ಸರ್ಕಾರದ ಪರಿಗಣನೆಯಲ್ಲಿಲ್ಲ ಎಂಬುದು ದೃಢಪಟ್ಟಿದೆ ಎಂದು ಅವರು ತಿಳಿಸಿದ್ದಾರೆ.

38
ಭವಿಷ್ಯದ ಯೋಜನೆಗಳಿಗೆ ಮುನ್ನ ಸಮಾಲೋಚನೆ

ಕೊಡಗಿನ ಪ್ರಾಕೃತಿಕ ಸೌಂದರ್ಯ ಮತ್ತು ಪರಿಸರ ಸಮತೋಲನವನ್ನು ಕಾಯ್ದುಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಯಾವುದೇ ರೀತಿಯ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಕೈಗೊಳ್ಳುವ ಮುನ್ನ ಸ್ಥಳೀಯರು, ಪರಿಸರವಾದಿಗಳು ಹಾಗೂ ಎಲ್ಲಾ ಹಿತಾಸಕ್ತಿ ಹೊಂದಿರುವ ಪಾಲುದಾರರೊಂದಿಗೆ ಕಡ್ಡಾಯವಾಗಿ ಸಮಾಲೋಚನೆ ನಡೆಸಲಾಗುವುದು. ಜನರ ಅಭಿಪ್ರಾಯವನ್ನು ಪಡೆದೇ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಸದರು ಭರವಸೆ ನೀಡಿದ್ದಾರೆ. ಈ ಮೂಲಕ ಕೊಡಗಿನ ಮೂಲಕ ರೈಲು ಹಳಿ ನಿರ್ಮಾಣವಾಗಲಿದೆ ಎಂಬ ವದಂತಿ ಹಾಗೂ ಗೊಂದಲಗಳಿಗೆ ಪೂರ್ಣವಿರಾಮ ಬಿದ್ದಂತಾಗಿದೆ.

48
ಗೊಂದಲಕ್ಕೆ ಕಾರಣವೇನು?

ಕಾಣಿಯೂರು-ಸುಳ್ಯ-ನಾಪೋಕ್ಲು- ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆ ಬಗ್ಗೆ ಚರ್ಚಿಸಲು ಸಭೆ ನಡೆಸುವಂತೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಕಳೆದ ತಿಂಗಳು ಮಂಗಳೂರು ಭೇಟಿ ವೇಳೆ ಮನವಿ ಸಲ್ಲಿಸಿದ್ದ ಬಗ್ಗೆ ಸುದ್ದಿಯಾಗಿತ್ತು. ಸಂಸದ ಬ್ರಿಜೇಶ್ ಚೌಟ ಮುಂದಾಳತ್ವದಲ್ಲಿ ಈ ಮನವಿ ಸಲ್ಲಿಕೆಯಾಗಿತ್ತು. ಅದಾದ ಈ ಯೋಜನೆ ವ್ಯಾಪಕ ಟೀಕೆಗೂ ಕಾರಣವಾಗಿತ್ತು. ಏಕೆಂದರೆ ಲಕ್ಷಾಂತರ ಜನ ತಮ್ಮ ಕೃಷಿ ಭೂಮಿ ಕಳೆದುಕೊಳ್ಳುವ ಭೀತಿ ವ್ಯಕ್ತ ಪಡಿಸಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತಪಡಿಸಿ ಮೊದಲಿಗೆ ರಸ್ತೆ, ಆಸ್ಪತ್ರೆಗಳ ಅಭಿವೃದ್ಧಿ ಕಡೆಗೆ ಗಮನ ಕೊಡಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

58
ಸ್ಪಂದಿಸದ ರೈಲ್ವೆ ಇಲಾಖೆ ತಾಂತ್ರಿಕ ತಂಡ

ಕಾಣಿಯೂರು-ಸುಳ್ಯ-ನಾಪೋಕ್ಲು- ಮಾರ್ಗವಾಗಿ ಮೈಸೂರಿಗೆ ಹೊಸ ರೈಲು ಮಾರ್ಗ ಪ್ರಸ್ತಾವನೆಯನ್ನು ಹಾಗೂ ಕಾಣಿಯೂರು ರೈಲು ನಿಲ್ದಾಣವನ್ನು ಅಭಿವೃದ್ಧಿಪಡಿಸಲು ಮತ್ತು ಏಲಡ್ಕಕ್ಕೆ ಸ್ಥಳಾಂತರಿಸಲು ಮನವಿ ಸಲ್ಲಿಸಲಾಗಿತ್ತು, ಆ ಪ್ರಸ್ತಾವನೆ ಬಗ್ಗೆ ರೈಲ್ವೆ ಇಲಾಖೆ ತಾಂತ್ರಿಕ ತಂಡ ಪೂರಕವಾಗಿ ಸ್ಪಂದಿಸದೇ ಇರುವುದಾಗಿ ತಿಳಿದುಬಂದಿದೆ. ಆದ್ದರಿಂದ ಆ ವಿಚಾರಗಳ ಬಗ್ಗೆ ತಮ್ಮ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಸಂಸದರು, ಕೊಡಗು ಸಂಸದರು ಮತ್ತು ರೈಲ್ವೆ ಇಲಾಖೆಯ ತಾಂತ್ರಿಕ ತಂಡದವರೊಂದಿಗೆ ಸಭೆಯನ್ನು ನಿಗದಿ ಮಾಡಿ ಈ ಕುರಿತು ಚರ್ಚಿಸಲು ಅವಕಾಶ ನೀಡುವಂತೆ ಶಾಸಕಿ ಮರುಳ್ಯ ಮನವಿ ಮಾಡಿದ್ದರು. ಸಂಸದ ಕ್ಯಾ.ಬ್ರಿಜೇಶ್‌ ಚೌಟ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ, ಶಾಸಕರಾದ ರಾಜೇಶ್‌ ನಾಯಕ್‌ ಉಳಿಪಾಡಿಗುತ್ತು, ಡಾ.ಭರತ್‌ ಶೆಟ್ಟಿ ಮತ್ತಿತರರು ಮಂಗಳೂರಿನಲ್ಲಿ ಮನವಿ ಕೊಡುವ ವೇಳೆ ಉಪಸ್ಥಿತರಿದ್ದರು.

68
ಶಾಸಕರ ಮನವಿ ಏನಾಗಿತ್ತು?

ರಾಜ್ಯದ ಗ್ರಾಮೀಣ ಭಾಗಗಳಿಗೆ ಉತ್ತಮ ಸಾರಿಗೆ ಸಂಪರ್ಕ ದೃಷ್ಟಿಯಿಂದ ಈ ಭಾಗದ ಜನರ ಬಹುಕಾಲದ ಬೇಡಿಕೆಯಾದ ಕಾಣಿಯೂರು-ಸುಳ್ಯ-ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣ ಆಗಬೇಕು. ಈ ನೂತನ ರೈಲ್ವೆ ಮಾರ್ಗವು ಈ ಭಾಗದ ಆರ್ಥಿಕತೆಗೆ ದೊಡ್ಡ ಮಟ್ಟದ ಉತ್ತೇಜನ ನೀಡಲಿದೆ. ಸುಳ್ಯ ಮತ್ತು ಕೊಡಗು ಭಾಗದಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಸಾಂಬಾರ ಪದಾರ್ಥಗಳು, ರಬ್ಬರ್, ಅಡಿಕೆ ಪ್ರಮುಖ ಬೆಳೆ ಆಗಿರುವುದರಿಂದ ಆರ್ಥಿಕತೆಗೆ ಉತ್ತೇಜನ ನೀಡಲಿದೆ. ಈಗ ಇರುವ ಕಾಣಿಯೂರು ರೈಲ್ವೆ ಸ್ಟೇಷನ್‌ ಮೂಲಕ ಸುಳ್ಯ- ನಾಪೋಕ್ಲು ಮಾರ್ಗವಾಗಿ ಮೈಸೂರಿಗೆ ನೂತನ ರೈಲು ಮಾರ್ಗ ನಿರ್ಮಾಣದ ಕುರಿತು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಸಂಸದ ಕ್ಯಾ। ಬ್ರಿಜೇಶ್ ಚೌಟರವರ ನೇತೃತ್ವದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮನವಿ ಮಾಡಿದ್ದರು. ಈ ಪ್ರಸ್ತಾಪಿತ ರೈಲು ಮಾರ್ಗವು ಮಂಗಳೂರು-ಹಾಸನ ರೈಲು ಮಾರ್ಗದಲ್ಲಿರುವ 'ಕಾಣಿಯೂರು' ನಿಲ್ದಾಣದಿಂದ (ಇದು ಹಿಂದೆ ಪ್ರಸ್ತಾಪಿಸಲಾದ ಕಾಣಿಯೂರು-ಕಾಞಂಗಾಡ್ ಮಾರ್ಗದ ಜಂಕ್ಷನ್ ಕೂಡ ಆಗಿತ್ತು) ಪ್ರಾರಂಭಿಸಲು ಮನವಿ ಸಲ್ಲಿಸಲಾಗಿತ್ತು. ಈ ಮಾರ್ಗ ಆದರೆ ಸುಳ್ಯ ಮತ್ತು ನಾಪೋಕ್ಲು ಮೂಲಕ ಹಾದುಹೋಗಿ, ಪ್ರಸ್ತಾಪಿತ ಕುಶಾಲನಗರ -ಮೈಸೂರು ರೈಲು ಮಾರ್ಗವನ್ನು ಕುಶಾಲನಗರದಲ್ಲಿ ಸಂಪರ್ಕಿಸಲಿದೆ. ತನ್ಮೂಲಕ ಮೈಸೂರು ಮತ್ತು ಮುಂದಿನ ಊರುಗಳಿಗೆ ನೇರ ಸಂಪರ್ಕ ಕಲ್ಪಿಸುವ ಗುರಿಯನ್ನು ಹೊಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಆಗಿದ್ದರೂ, ಸುಳ್ಯ ತಾಲೂಕಿನಲ್ಲಿ ಪ್ರಸ್ತುತ ಯಾವುದೇ ರೈಲು ಹಳಿ ಅಥವಾ ರೈಲು ನಿಲ್ದಾಣವಿಲ್ಲ. ಆದ್ದರಿಂದ ಈ ಮನವಿಯನ್ನು ಪುರಸ್ಕರಿಸಿ ಈ ಯೋಜನೆ ನೀಡಬೇಕಾಗಿ ಮನವಿಯಲ್ಲಿ ಆಗ್ರಹಿಸಲಾಗಿತ್ತು.

78
ಪ್ರಸ್ತುತ ಮಂಗಳೂರು-ಹಾಸನ ರೈಲು ಮಾರ್ಗವೇ ಓಡಾಟಕ್ಕೆ ಸೂಕ್ತ

ಮಂಗಳೂರು-ಹಾಸನ ರೈಲು ಮಾರ್ಗದಲ್ಲಿ ಬರುವ ಸುಬ್ರಹ್ಮಣ್ಯ-ಸಕಲೇಶಪುರ ಘಾಟ್ ಮಾರ್ಗ ಈಗಾಗಲೇ ತನ್ನ ಪೂರ್ಣ ಸಾಮರ್ಥ್ಯವನ್ನು ತಲುಪಿರುವ ಹಿನ್ನೆಲೆಯಲ್ಲಿ ಈ ಪ್ರಸ್ತಾಪವು ಅತ್ಯಂತ ನಿರ್ಣಾಯಕವಾಗಿದೆ. ಕಾರ್ಯಾಚರಣೆಯ ಅಡೆತಡೆಗಳಿಂದಾಗಿ ಈ ವಿಭಾಗದಲ್ಲಿ ಹೊಸ

ರೈಲುಗಳನ್ನು ಪರಿಚಯಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಪ್ರಸ್ತುತ ಪ್ರತಿದಿನ ಸುಮಾರು 12 ಪ್ಯಾಸೆಂಜರ್ ಮತ್ತು 4 ಗೂಡ್ಸ್ ರೈಲುಗಳು ಈ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಇದು ಗರಿಷ್ಠ ಒತ್ತಡದಲ್ಲಿದೆ. ಪ್ರಸ್ತಾಪಿತ ಕಾಣಿಯೂರು - ಸುಳ್ಯ - ನಾಪೋಕ್ಲು - ಕುಶಾಲನಗರ ಮಾರ್ಗವು ಅಸ್ತಿತ್ವದಲ್ಲಿರುವ ಮಾರ್ಗದ ದಟ್ಟಣೆಯನ್ನು ಕಡಿಮೆ ಮಾಡಲು, ಹೆಚ್ಚುವರಿ ರೈಲು ಓಡಾಟದ ಸಾಮರ್ಥ್ಯವನ್ನು ಸೃಷ್ಟಿಸಲು ಮತ್ತು ಹೊಸ ಪ್ರಯಾಣಿಕ ಹಾಗೂ ಸರಕು ಸೇವೆಗಳನ್ನು ಆರಂಭಿಸಲು ಸಹಕಾರಿಯಾಗಲಿದೆ. ಅಲ್ಲದೆ, ಈ ಹೊಸಮಾರ್ಗವು ಕರಾವಳಿ ಕರ್ನಾಟಕ ಮತ್ತು ಒಳನಾಡು ಪ್ರದೇಶಗಳನ್ನು ಮೈಸೂರು, ಬೆಂಗಳೂರು, ಉತ್ತರ ಕರ್ನಾಟಕ, ಮಹಾರಾಷ್ಟ್ರ ಮತ್ತು ಉತ್ತರ ಭಾರತದೊಂದಿಗೆ ಸಂಪರ್ಕಿಸಲು ನೇರ ರೈಲುಗಳನ್ನು ಓಡಿಸಲು ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಕಾಣಿಯೂರು-ಸುಳ್ಯ-ನಾಪೋಕ್ಲು-ಕುಶಾಲನಗರ-ಮೈಸೂರು ರೈಲುಮಾರ್ಗದ ಸರ್ವೇ ನಡೆಸಲು ರೈಲ್ವೇ ಮಂಡಳಿ ಮತ್ತು ಸಂಬಂಧಿತ ವಿಭಾಗಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಮತ್ತು ಮುಂಬರುವ ರೈಲ್ವೇ ಮೂಲಸೌಕರ್ಯ ಯೋಜನೆಗಳು ಹಾಗೂ ಬಜೆಟ್ ಅವಕಾಶಗಳಲ್ಲಿ ಈ ನೂತನ ಮಾರ್ಗದ ನಿರ್ಮಾಣದ ಪ್ರಸ್ತಾವನೆಯನ್ನು ಸೇರಿಸಬೇಕೆಂದು ಎಂದು ಮನವಿಯಲ್ಲಿ ತಿಳಿಸಲಾಗಿತ್ತು.

88
ಮೇಲ್ಸೇತುವೆ ನಿರ್ಮಾಣಕ್ಕೆ ತ್ವರಿತ ಕ್ರಮಕ್ಕೆ ಸಂಸದ, ಶಾಸಕರಿಗೆ ಮನವಿ

ದ.ಕ.ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದ ಎಡಮಂಗಲ ಪೇಟೆಯಲ್ಲಿ ಬರುವ ಎರಡು ಕಡೆಗಳಲ್ಲಿನ ರೈಲ್ವೆ ಕ್ರಾಸಿಂಗ್‌ ಗೇಟ್‌ಗಳ ಬದಲಾಗಿ ಓವರ್‌ಬ್ರಿಡ್ಜ್‌ ನಿರ್ಮಾಣಕ್ಕೆ ತ್ವರಿತ ಕ್ರಮಕೈಗೊಳ್ಳುವಂತೆ ಸಂಸದ ಕ್ಯಾ.ಬ್ರಿಜೇಶ್‌ ಚೌಟ ಮತ್ತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಕಾರ್ಯಕರ್ತ ಎಡಮಂಗಲದ ವಿನಯಚಂದ್ರ ಅವರು ಮನವಿ ಸಲ್ಲಿಸಿದ್ದಾರೆ.

ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಬರುವ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಪ್ರಮುಖ ರಸ್ತೆಗಳಿಗೆ ಅಡ್ಡವಾಗಿ ಎಲ್‌ಸಿ 69 ಮತ್ತು ಎಲ್‌ಸಿ 70 ಎಂಬ ಎರಡು ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ಗಳಿವೆ. ಈ ರಸ್ತೆ ಗ್ರಾಮಸ್ಥರಿಗೆ ಪ್ರಮುಖ ಮಾರ್ಗವಾಗಿದ್ದು, ದಿನನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರೈಲ್ವೆ ಇಲಾಖೆ ಈ ಗೇಟ್‌ಗಳನ್ನು ತೆಗೆದು ಅಡರ್‌ಪಾಸ್‌ ಅಥವಾ ಓವರ್‌ಬ್ರಿಡ್ಜ್‌ ನಿರ್ಮಿಸಲು ಈಗಾಗಲೇ ನಕ್ಷೆ ಸಿದ್ದ್ದಪಡಿಸಿದೆ ಎಂಬ ಮಾಹಿತಿ ಇದೆ. ಈ ಯೋಜನೆಯ ಅನುಷ್ಠಾನಕ್ಕೆ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಪರಿಣಾಮ ರೈಲು ಸಂಚಾರದ ವೇಳೆ ಗೇಟ್‌ ಅಳವಡಿಸುವ ಸಂದರ್ಭದಲ್ಲಿ ದಿನನಿತ್ಯ ಗಂಟೆ ಗಟ್ಟಲೆ ಎರಡೂ ಕಡೆಗಳಲ್ಲಿ ವಾಹನ ಸವಾರರು ನಿಲ್ಲುವ ಪರಿಸ್ಥಿತಿ ಎದುರಾಗುತ್ತಿದೆ. ತಾವುಗಳು ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಪತ್ರ ಬರೆದು ಈ ಕಾಮಗಾರಿಯನ್ನು ತ್ವರಿತವಾಗಿ ಆರಂಭಿಸಲು ಅಗತ್ಯ ಒತ್ತಡ ತರಬೇಕೆಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

Read more Photos on
click me!

Recommended Stories