ಕೊಪ್ಪಳದ ಅಂಜನಾದ್ರಿ ಹನುಮನಿಗೆ 2.5 ಕೋಟಿ ರೂ ಮೌಲ್ಯದ ಚಿನ್ನದ ಆಭರಣ ದೇಣಿಗೆ ನೀಡಿದ ಹೈದರಾಬಾದ್ ಉದ್ಯಮಿ!

Published : May 08, 2026, 03:11 PM IST

ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿಗೆ, ಹೈದರಾಬಾದ್ ಮೂಲದ ಉದ್ಯಮಿ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಸಮರ್ಪಿಸಿದ್ದಾರೆ. ಈ ಐತಿಹಾಸಿಕ ದೇಣಿಗೆಯ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಸೇರಿ ಗಣ್ಯರು ಉಪಸ್ಥಿತರಿದ್ದರು.

PREV
16
ಹೈದರಾಬಾದ್ ಉದ್ಯಮಿಯಿಂದ ಸಮರ್ಪಣೆ

ಕೊಪ್ಪಳ: ತಾಲೂಕಿನ ಐತಿಹಾಸ ಪ್ರಸಿದ್ಧ ಆಂಜನೇಯಸ್ವಾಮಿ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿರುವ ಆಂಜನೇಯಸ್ವಾಮಿಗೆ ಚಿನ್ನದ ಕಿರೀಟ, ಗದೆ ಮತ್ತು ಪ್ರಭಾವಳಿಯನ್ನು ಮೇ 8 ರಂದು ಸಮರ್ಪಣೆ ಮಾಡಲಾಗಿದೆ. ಆಂಜನೇಯ ದೇಗುಲಕ್ಕೆ ಇದೇ ಮೊದಲ ಬಾರಿಗೆ ಭಾರೀ ಮೊತ್ತದ ಬಂಗಾರದ ಆಭರಣ ದೇಣಿಗೆ ನೀಡಲಾಗಿದೆ. ಹೈದರಾಬಾದ್ ನೆಲ್ಲೂರು ಮೂಲದ ಉದ್ಯಮಿ ಹಾಗೂ ಎಎಂಆರ್ ಸಮೂಹ ಸಂಸ್ಥೆಯ ಮಾಲಿಕ ಮಹೇಶ್ ರೆಡ್ಡಿ ಅವರು ಸುಮಾರು 2.5 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಆಭರಣಗಳನ್ನು ಹನುಮಂತನಿಗೆ ಸಮರ್ಪಣೆ ಮಾಡಿದ್ದಾರೆ.

26
1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯ

ಭಾರತದ ಖ್ಯಾತ ಕನ್ಸ್ಟ್ರಕ್ಷನ್ ಸಂಸ್ಥೆ ಎ.ಎಂ.ಆರ್ ಗ್ರುಪ್‌ನ ಅಧ್ಯಕ್ಷ ಡಾ. ಎ.ಮಹೇಶ್ ರೆಡ್ಡಿ ಹಾಗೂ ಕುಟುಂಬದಿಂದ ಆಂಜನೇಯ ಸ್ವಾಮಿಗೆ ಚಿನ್ನದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಭಕ್ತಿಪೂರ್ವಕವಾಗಿ ಅರ್ಪಿಸಲಾಗಿದೆ.1.50 ಕೆಜಿ ಅಂದಾಜು ₹ 2.50 ಕೋಟಿ ಮೌಲ್ಯದ ಆಭರಣ ಹೈದ್ರಾಬಾದನಲ್ಲಿ ತಯಾರಿಸಲಾಗಿದ್ದು, ತಯಾರಕರೇ ಆಗಮಿಸಿ ಆಂಜನೇಯಸ್ವಾಮಿಗೆ ಅಲಂಕರಿಸಲಿದ್ದಾರೆ. ಈ ಹಿನ್ನೆಲೆ ಬೆಳಗ್ಗೆ 5 ಗಂಟೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಆಂಧ್ರ, ಕರ್ನಾಟಕದಿಂದ ಪಂಡಿತರು ಆಗಮಿಸಿದ್ದು ಹೋಮ ಹವನಗಳು ಸೇರಿದಂತೆ ವಿವಿಧ ಕಾರ್ಯಕ್ರಮ ನೆರವೇರಿಸಿದರು.

36
ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ ಸಮರ್ಪಣೆ

ಉದ್ಯಮಿ ಮಹೇಶ್ ರೆಡ್ಡಿ ಅವರು ತಮ್ಮ ಪತ್ನಿಯೊಂದಿಗೆ ದೇಗುಲಕ್ಕೆ ಆಗಮಿಸಿ, ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಳಿಸಲಾದ ಬಂಗಾರದ ಪ್ರಭಾವಳಿ, ಚತ್ರಿ, ಕಿರೀಟ ಹಾಗೂ ಗದೆಯನ್ನು ಶ್ರೀ ಆಂಜನೇಯ ಸ್ವಾಮಿಗೆ ಅರ್ಪಿಸುವ ಮೂಲಕ ತಮ್ಮ ಸೇವೆ ಸಲ್ಲಿಸಿದರು. ಈ ವೇಳೆ ದೇವಾಲಯದ ಅರ್ಚಕರು ವೇದಮಂತ್ರಗಳೊಂದಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿ, ಸಮರ್ಪಿತ ಆಭರಣಗಳಿಗೆ ಪೂಜೆ ಸಲ್ಲಿಸಿದರು. ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದ ಬಳಿಕ ಆಭರಣಗಳನ್ನು ಹಸ್ತಾಂತರ ಮಾಡಿದರು. ಆಂಜನೇಯ ಸ್ವಾಮಿಗೆ ವಿಶೇಷ ಸಂಕಲ್ಪ ಪೂಜೆ, ಸುಪ್ರಭಾತ ಸೇವೆ ಸಲ್ಲಿಸಿ, ಭಕ್ತಿ ಭಾವದಿಂದ ಬಂಗಾರದ ಪ್ರಭಾವಳಿ, ಚಕ್ರ, ಕಿರೀಟ ಹಾಗೂ ಗದೆ ಸೇರಿದಂತೆ ವಿವಿಧ ಆಭರಣಗಳನ್ನು ಒಪ್ಪಿಸಿದರು.

46
ಗಾಲಿ ಜನಾರ್ದನ ರೆಡ್ಡಿ ಆಪ್ತ

ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಹಾಗೂ ಅವರ ಪತ್ನಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶಾಸಕ ಜನಾರ್ದನ ರೆಡ್ಡಿ ಅವರ ಆಪ್ತ ಸ್ನೇಹಿತರಾಗಿರುವ ಮಹೇಶ್ ರೆಡ್ಡಿ, ಧಾರ್ಮಿಕ ಕಾರ್ಯಗಳಲ್ಲಿ ಸದಾ ಮುಂದಿರುವ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಹಲವು ದೇವಾಲಯಗಳಿಗೆ ದೇಣಿಗೆ ನೀಡಿದ್ದಾರೆ.

ದೇವಾಲಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಪ್ರಮಾಣದ ಮೊತ್ತದಲ್ಲಿ ಬಂಗಾರದ ಆಭರಣ ದೇಣಿಗೆಯಾಗಿ ಬಂದಿರುವುದು ವಿಶೇಷವಾಗಿದೆ. ದೇಣಿಗೆಯಾಗಿ ನೀಡಲಾದ ಆಭರಣಗಳನ್ನು ಗಂಗಾವತಿ ತಾಲೂಕು ಆಡಳಿತಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಗಿದ್ದು, ಅವುಗಳನ್ನು ದೇವಾಲಯದ ನಿಯಮಾನುಸಾರ ಮುಂದಿನ ಕ್ರಮಗಳಲ್ಲಿ ಬಳಸಲಾಗುತ್ತದೆ.

56
ಈ ಹಿಂದೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ದೇಣಿಗೆ

ಹೈದರಾಬಾದ್‌ನ ನೆಲ್ಲೂರು ಮೂಲದ ಮಹೇಶ್ ರೆಡ್ಡಿ ಅವರು ಎಎಂಆರ್ ಕನ್ಸ್ಟ್ರಕ್ಷನ್ ಕಂಪನಿಯ ಮಾಲಿಕರಾಗಿದ್ದು, ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಶಿರಡಿ ಸಾಯಿ ಬಾಬಾ ದೇವಸ್ಥಾನಕ್ಕೂ ಸುಮಾರು 140 ಕೆ.ಜಿ. ಬಂಗಾರ ದೇಣಿಗೆ ನೀಡಿದ್ದರು. ಇದೀಗ ಅಂಜನಾದ್ರಿ ದೇವಸ್ಥಾನಕ್ಕೂ ದೇಣಿಗೆ ನೀಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ. ಈ ದೇಣಿಗೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನೆರವೇರಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ದರ್ಶನ ಪಡೆದರು. ಈ ಬೆಳವಣಿಗೆ ಅಂಜನಾದ್ರಿ ದೇವಸ್ಥಾನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ.

66
ಯಾರೆಲ್ಲ ಇದ್ದರು?

ಈ ಸಂದರ್ಭದಲ್ಲಿ ಗಂಗಾವತಿ ತಹಸಿಲ್ದಾರರಾದ ವಸಂತ ಕುಮಾರಿ, ಕನಕಗಿರಿ ತಹಸಿಲ್ದಾರರಾದ ವಿಶ್ವನಾಥ್, ಗ್ರೇಡ್ 2 ತಹಶೀಲ್ದಾರರಾದ ಮಹಾಂತಗೌಡ ಪಾಟೀಲ್, ಮಾಜಿ ಸಂಸದರಾದ ಶಿವರಾಮಗೌಡ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರಾದ ವಿರುಪಾಕ್ಷಪ್ಪ ಸಿಂಗನಾಳ್, ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರು ಹಿರೂರು, ಮುಖಂಡರಾದ ಮನೋಹರ ಗೌಡ ಹೇರೂರು, ಯಮನೂರು ಚೌಡ್ಕಿ, ವೀರೇಶ್ ಬಲಕುಂದಿ, ಮಲ್ಲಿಕಾರ್ಜುನ ಸ್ವಾಮಿ, ಬಾಬು ರೆಡ್ಡಿ, ಗಂಗಾಧರ ಸ್ವಾಮಿ, ಸಂಗಮೇಶ್ ಬಾದವಾಡಿಗಿ, ವೆಂಕಟೇಶ್ ಜಬ್ಬಲಗುಡ್ಡ, ರಮೇಶ್ ಹೊಸಮಲಿ, ಮಂಜುನಾಥ ಗೊಂದಿ, ಮಂಜುನಾಥ ಕಲಾಲ್, ಅರ್ಜುನ್ ರಾಯ್ಕರ್, ವೀರೇಶ್ ಅಂಜನಾದ್ರಿ ಹಾಗೂ ತಾಲೂಕು ಆಡಳಿತ ಸಿಬ್ಬಂದಿ ವರ್ಗದವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Read more Photos on
click me!

Recommended Stories