Gadag Railway Station: ಬೆಟಗೇರಿಯ ತಿಪ್ಪಮ್ಮ ಅಜ್ಜಿ ಕಳೆದ 30 ವರ್ಷಗಳಿಂದ ಗದಗ ರೈಲು ನಿಲ್ದಾಣದಲ್ಲಿ ಶೇಂಗಾ, ಹುರಿಗಡಲೆ ಮಾರಾಟ ಮಾಡುತ್ತಿದ್ದಾರೆ. ಪತಿಯ ನಿಧನದ ನಂತರ ಕುಟುಂಬದ ಜವಾಬ್ದಾರಿ ಹೊತ್ತು, ಇಂದಿಗೂ ಸ್ವಾಭಿಮಾನದಿಂದ ಕೆಲಸ ಮಾಡುತ್ತಾರೆ.
ಶೇಂಗಾ, ಹುರಿಗಡಲೆ, ಬಟಾಣಿ, ಸೂರ್ಯಕಾಂತಿ ಮಾರಾಟ ಮಾಡುವ ಅಜ್ಜಿ ಕಥೆ
ಗದಗ ಮಾರ್ಗವಾಗಿ ಅಥವಾ ಈ ರೈಲು ನಿಲ್ದಾಣದಿಂದ ನೀವು ಪ್ರಯಾಣ ಮಾಡುತ್ತಿದ್ದರೆ ನೀವು ಖಂಡಿತ ಈ ಅಜ್ಜಿಯನ್ನು ನೋಡಿರುತ್ತೀರಿ. ಪ್ಲಾಟ್ಫಾರಂ ಮೂರರ ಮೆಟ್ಟಿಲ ಬಳಿ ಕುಳಿತುಕೊಳ್ಳುವ ಈ ಅಜ್ಜಿ, ಶೇಂಗಾ, ಹುರಿಗಡಲೆ, ಬಟಾಣಿ, ಸೂರ್ಯಕಾಂತಿ ಮಾರಾಟ ಮಾಡುತ್ತಾರೆ. ಸದ್ಯ ಈ ಅಜ್ಜಿಯ ಸಂದರ್ಶನವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಅಜ್ಜಿ ಯಾರು? ಎಲ್ಲಿಯವರು? ಇವರ ದಿನದ ಆದಾಯ ಎಷ್ಟು ಎಂಬುದನ್ನು ನೋಡೋಣ ಬನ್ನಿ.
25
ಬೆಟಗೇರಿಯ ತಿಪ್ಪಮ್ಮಾ ಅಜ್ಜಿ
ಈ ಅಜ್ಜಿಯ ಹೆಸರು ತಿಪ್ಪಮ್ಮ, ಬೆಟಗೇರಿಯ ನಿವಾಸಿ. ಕಳೆದ ಮೂವತ್ತು ವರ್ಷಗಳಿಂದ ಗದಗ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿ ವ್ಯಾಪಾರ ಮಾಡಿಕೊಂಡಿದ್ದಾರೆ. ಗಂಡನ ನಿಧನದ ಬಳಿಕ ಕುಟುಂಬದ ಜವಾಬ್ದಾರಿಯೆಲ್ಲಾ ತಿಪ್ಪಮ್ಮ ಅವರ ಮೇಲೆ ಬಿತ್ತು. ಅಂದು ಊರಿನಲ್ಲಿಯೇ ಕೂಲಿ ಕೆಲಸ ಮಾಡಿದ್ರೆ ದಿನಕ್ಕೆ 25 ರಿಂದ 50 ಪೈಸೆ ಸಿಗುತ್ತಿತ್ತು. ಇಷ್ಟು ಹಣದಿಂದ ಮಕ್ಕಳ ಹೊಟ್ಟೆ ತುಂಬಿಸಲು ಆಗಲ್ಲ ಎಂದು ತಿಳಿದ ತಿಪ್ಪಮ್ಮಜ್ಜಿ ತಮ್ಮೂರಿನ ಮಹಿಳೆಯ ಸಹಾಯದಿಂದ ವ್ಯಾಪಾರಕ್ಕಾಗಿ ಗದಗ ನಗರಕ್ಕೆ ಬರುತ್ತಾರೆ.
35
ವ್ಯಾಪಾರಕ್ಕೆ ಪ್ರೋತ್ಸಾಹ
ವ್ಯಾಪಾರ ಆರಂಭಿಸಿದಾಗ ಊರಿನವರು ಏನಾದ್ರೆ ಅಂದ್ರೆ ಹೇಗೆ ಎಂಬ ಭಯವಿತ್ತು. ಒಂದು ದಿನ ನಮ್ಮೂರಿನ ಹಿರಿಯ ವ್ಯಕ್ತಿ ಇಲ್ಲಿಯೇ ಬಂದ್ರು. ಭಯದಿಂದ ಚೀಲ, ಪುಟ್ಟಿಯನ್ನು ಎತ್ಕೊಂಡು ಒಂದ್ಕೆಡೆ ಕುಳಿತೆ. ಆಗ ನನ್ನ ಬಳಿಗೆ ಬಂದ ಅವರು, ಯಾಕೆ ಹೆದರುತ್ತೀಯಾ? ನ್ಯಾಯವಾಗಿ ವ್ಯಾಪಾರ ಮಾಡುತ್ತಿದ್ದೀಯಾ. ವ್ಯಾಪಾರ ಮುಂದುವರಿಸುವಂತೆ ಪ್ರೋತ್ಸಾಹಿಸಿದರು. ಅಂದಿನಿಂದ ಧೈರ್ಯವಾಗಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ತಿಪ್ಪಮ್ಮಾ ಅಜ್ಜಿ ಹೇಳುತ್ತಾರೆ.
ಸುಮಾರು 75 ರಿಂದ 80 ವಯಸ್ಸಿನ ತಿಪ್ಪಮ್ಮಾ ಅಜ್ಜಿ, ಈ ವ್ಯಾಪಾರ ಮಾಡಿಕೊಂಡು ಬಂದಿದ್ದಾರೆ. ಇಂದು ತಿಪ್ಪಮ್ಮಾ ಅಜ್ಜಿ ದಿನಕ್ಕೆ 200 ರಿಂದ 300 ರೂಪಾಯಿ ಸಂಪಾದನೆ ಮಾಡುತ್ತಾರೆ. ಪ್ರತಿದಿನ ಮೊಮ್ಮಗ ನಿಲ್ದಾಣಕ್ಕೆ ಕರೆದುಕೊಂಡು ಬರುತ್ತಾನೆ. ಸಂಜೆ ಬಂದು ಕರೆದುಕೊಂಡು ಹೋಗುತ್ತಾರೆ. ಮೊಮ್ಮಕ್ಕಳು, ಸೊಸೆ ಎಲ್ಲರೂ ಒಳ್ಳೆಯವರು. ಮನೆಯಲ್ಲಿ ಸುಮ್ಮನೆ ಕುಳಿತುಕೊಳ್ಳೋದಕ್ಕಿಂತ ಇಲ್ಲಿಗೆ ಬಂದು ವ್ಯಾಪಾರ ಮಾಡುತ್ತೇನೆ ಎಂದು ಅಜ್ಜಿ ಹೇಳುತ್ತಾರೆ.
55
ಮಲಗಿದಾಗಲೇ ಸಾವು ಬರಲಿ
ಇನ್ನು ರೈಲು ನಿಲ್ದಾಣದಲ್ಲಿ ಅನುಮತಿ ಇಲ್ಲದೇ ವ್ಯಾಪಾರ ಮಾಡುವಂತಿಲ್ಲ. ಆದ್ರೂ ಈ ತಿಪ್ಪಮ್ಮಾ ಅಜ್ಜಿಗೆ ಗದಗ ರೈಲು ನಿಲ್ದಾಣದ ಪೊಲೀಸರು ಯಾವುದೇ ರೀತಿಯಲ್ಲಿ ಅಡ್ಡಿಯನ್ನುಂಟು ಮಾಡಿಲ್ಲ. ಈ ವ್ಯಾಪಾರದಿಂದ ಯಾವುದೇ ಆಸ್ತಿಯನ್ನು ಮಾಡಿಕೊಂಡಿಲ್ಲಪ್ಪ. ಮಕ್ಕಳು-ಮೊಮ್ಮಕ್ಕಳನ್ನು ಓದಿಸಿದ್ದೇನೆ. ಮೊಮ್ಮಗನೇ ಮಾರುಕಟ್ಟೆಗೆ ಹೋಗಿ ಈ ವಸ್ತುಗಳನ್ನು ತೆಗೆದುಕೊಂಡು ಬರುತ್ತಾನೆ.
ಸೊಸೆ ಬೆಳಗ್ಗೆ ಬುತ್ತಿ ಮಾಡಿ ಕಳಿಸುತ್ತಾಳೆ. ಇರೋ ಒಬ್ಬನು ಮಗ ಸತ್ತ. ಮಲಗಿದ್ದಲ್ಲಿಯೇ ಸಾವು ಬರಬೇಕು ಅನ್ನೋದು ನನ್ನ ಕೊನೆಯ ಆಸೆ ಎಂದು ತಿಪ್ಪಮ್ಮಾ ಅಜ್ಜಿ ಹೇಳುತ್ತಾರೆ.