ಬ್ರಿಟೀಷರ ಕಾಲದಲ್ಲಿ ಬೆಂಗಳೂರಿಗೆ ಕುಡಿಯುವ ನೀರು ಪೂರೈಸಿದ್ದ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಶ್ಚೇತನ

First Published Apr 14, 2024, 3:54 PM IST

ಬೆಂಗಳೂರು (ಏ.14): ದೇಶದ ಪ್ರಮುಖ ನಗರಗಳಲ್ಲಿ ಒಂದಾಗಿರುವ ಬೆಂಗಳೂರಿಗೆ 1896ರಲ್ಲಿ ಬ್ರಿಟೀಷರ ಕಾಲಾವಧಿಯಲ್ಲಿ ಅರ್ಕಾವತಿ ನದಿಯ ನೀರನ್ನ ಹರಿಸಿದ್ದ ಐತಿಹಾಸಿಕ ಸೋಲದೇವನಹಳ್ಳಿ ಪಂಪ್‌ ಸ್ಟೇಷನ್‌ ಪುನಃಶ್ಚೇತನಗೊಳಿಸುವ ಐತಿಹಾಸಿಕ ನಿರ್ಧಾರವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ಕೈಗೊಂಡಿದೆ. 
 

ದೇಶದಲ್ಲೇ ಮೊದಲ ಬಾರಿಗೆ ವ್ಯವಸ್ಥಿತವಾದ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದ ಎರಡನೇ ನಗರ ಬೆಂಗಳೂರು. 1873 ರಲ್ಲಿ ಮೊದಲ ಬಾರಿಗೆ ಮಿಲ್ಲರ್ಸ್‌ ಟ್ಯಾಂಕ್ಸ್‌ ಎಂದು ಹೆಸರು ಪಡೆದಂತಹ ಹಲವಾರು ಕೆರೆಗಳ ಜಾಲದ ಮೂಲಕ ಬೆಂಗಳೂರು ನಗರಕ್ಕೆ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು. 1875-77 ರ ಧಾತು ಈಶ್ವರ ಕ್ಷಾಮ (Great Famine of 1875-77) ದಿಂದ ಎರಡೂವರೆ ವರ್ಷಗಳ ಕಾಲ ಮಳೆ ಇಲ್ಲದೆ ಎಲ್ಲಾ ಜಲಮೂಲಗಳೂ ಬತ್ತಿ ಹೋಗಿದ್ದವು. 
 

ಬೆಳೆಯುತ್ತಿರುವ ನಗರದ ನೀರಿನ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಅಂದಿನ ಮೈಸೂರು ರಾಜರ ದಿವಾನರಾಗಿದ್ದ ಕೆ. ಶೇಷಾದ್ರಿ ಅಯ್ಯರ್‌ ಅವರು, ಹೆಸರುಘಟ್ಟ ಕೆರೆಯ ಮೂಲಕ ಅರ್ಕಾವತಿ ನದಿಯ ನೀರನ್ನ ಬೆಂಗಳೂರಿಗೆ ಹರಿಸುವ ಚಿಂತನೆ ನಡೆಸಿದರು. ಚಾಮರಾಜೇಂದ್ರ ವಾಟರ್‌ ವರ್ಕ್ಸ್‌ ಎಂದು ಇದಕ್ಕೆ ಹೆಸರಿಡಲಾಗಿತ್ತು. ಐತಿಹಾಸಿಕ ಕ್ಷಾಮದಿಂದ ಬಳಲಿದ್ದ ನಗರಕ್ಕೆ ನೀರು ಹರಿಸಲು ಸೋಲದೇವನಹಳ್ಳಿಯಲ್ಲಿ 1896 ರಲ್ಲಿ ಸ್ಥಾಪಿತವಾದ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಇಂದಿಗೂ ಇದಕ್ಕೆ ಸಾಕ್ಷಿಭೂತವಾಗಿ ನಿಂತಿದೆ. 

ಏಪ್ರಿಲ್‌ 20ರ ಒಳಗಾಗಿ ಸಿದ್ದತೆ ಪೂರ್ಣಗೊಳಿಸಲು ಸೂಚನೆ:
ಇತ್ತೀಚಿಗೆ ಹೆಸರಘಟ್ಟ ಕೆರೆಗೆ ಹಾಗೂ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಗೆ ಭೇಟಿ ನೀಡಿದ್ದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಡಾ ವಿ ರಾಮ್‌ ಪ್ರಸಾತ್‌ ಮನೋಹರ್‌, 125 ವರ್ಷಗಳ ಹಿಂದಿನ ತಾಂತ್ರಿಕತೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. ಈ ಪಂಪಿಂಗ್‌ ಸ್ಟೇಷನ್‌ ನಲ್ಲಿರುವಂತಹ ಅನುಕೂಲತೆಗಳ ಬಗ್ಗೆ ಹಾಗೂ ನೀರು ಸರಬರಾಜಿಗೆ ಇಲ್ಲಿರುವ ಮೂಲಭೂತ ಸೌಕರ್ಯಗಳ ಬಗ್ಗೆ ಮಾಹಿತಿ ಪಡೆದ ಅವರು, ಏಪ್ರಿಲ್‌ 20ರ ಒಳಗಾಗಿ ಅಗತ್ಯ ತಯಾರಿಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಪುನಃಶ್ಚೇತನ:
ಭೀಕರ ಕ್ಷಾಮದಿಂದ ಬಳಲಿದ್ದ ಬೆಂಗಳೂರು ನಗರಕ್ಕೆ ನೀರು ಹರಿಸಿದ್ದ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ನಿಂದ 1896 ರಲ್ಲಿ ನೀರು ಹರಿಸಿದಂತೆ ಹೆಸರಘಟ್ಟ ಕೆರೆಯಿಂದ ಮತ್ತೆ ನಗರಕ್ಕೆ ನೀರು ಹರಿಸಲು ಜಲಮಂಡಳಿ ಚಿಂತನೆ ನಡೆಸುತ್ತಿದೆ. ಸದ್ಯ ಹೆಸರಘಟ್ಟ ಕೆರೆಯಲ್ಲಿ ಸುಮಾರು 0.3 ಟಿಎಂಸಿ ಯಷ್ಟು ನೀರು ಲಭ್ಯವಿದೆ. ಇದಕ್ಕೆ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ನಲ್ಲಿ ಅಗತ್ಯ ಟ್ರೀಟ್‌ಮೆಂಟ್‌ ನೀಡಿ, ಎಂ.ಇ.ಐ ಲೇಔಟ್‌ನಲ್ಲಿರುವ ಜಲಸಂಗ್ರಾಹಾರಕ್ಕೆ ಪಂಪ್‌ ಮಾಡಲಾಗುವುದು. ಇಲ್ಲಿನಿಂದ ಅಗತ್ಯವಿರುವಂತಹ ಪ್ರದೇಶಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡುವುದು ಇದರ ಉದ್ದೇಶವಾಗಿದೆ

128 ವರ್ಷಗಳ ಹಿಂದಿನ ಭೀಕರ ಬರಗಾಲದ ಸಮಯದಲ್ಲಿ ನಗರದ ಭವಿಷ್ಯಕ್ಕಾಗಿ ಅಂದಿನ ಮಹನೀಯರುಗಳು ಕೈಗೊಂಡ ಮಹತ್ವದ ನಿರ್ಧಾರಗಳಿಂದ ಇಂದು ಬೆಂಗಳೂರು ನಗರ ಸಮರ್ಪಕ ನೀರು ಸರಬರಾಜನ್ನು ಕಾಣುತ್ತಿದೆ. ಮೇ ತಿಂಗಳಲ್ಲಿ ಮಳೆ ಬೀಳದೇ ನೀರಿನ ಕೊರತೆ ಹೆಚ್ಚಾದಲ್ಲಿ ಅದನ್ನ ಎದುರಿಸಲು ಜಲಮಂಡಳಿ ಸಿದ್ದವಾಗುತ್ತಿದೆ. ಗತಕಾಲದ ವೈಭವ ಮತ್ತು ತಂತ್ರಜ್ಞಾನವನ್ನು ಸಾರವಂತಹ ಸೋಲದೇವನಹಳ್ಳಿ ಪಂಪಿಂಗ್‌ ಸ್ಟೇಷನ್‌ ಪುನಃಶ್ಚೇತಗೊಳಿಸುವಂತೆ ಸೂಚನೆ ನೀಡಲಾಗಿದೆ. ಈ ಮೂಲಕ ಇತಿಹಾಸದ ಮೈಲುಗಲ್ಲನ್ನ ಇಂದಿಗೂ ಪ್ರಸ್ತುತಗೊಳಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದರು.

ಹೆಸರಘಟ್ಟ ಕೆರೆಯೆ ಅಥವಾ ಜಲಾಶಯದ ಇತಿಹಾಸ:
ಹೆಸರಘಟ್ಟ ಕೆರೆ ಕರ್ನಾಟಕ ರಾಜ್ಯದ ಬೆಂಗಳೂರಿನ ವಾಯುವ್ಯಕ್ಕೆ 18ಕಿ.ಮೀ. ದೂರದಲ್ಲಿರುವ ಮಾನವ ನಿರ್ಮಿತ ಜಲಾಶಯವಾಗಿದೆ. ಇದು ನಗರದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಅರ್ಕಾವತಿ ನದಿಗೆ ಅಡ್ಡಲಾಗಿ 1894 ರಲ್ಲಿ ರಚಿಸಲಾದ ಶುದ್ಧ ನೀರಿನ ಸರೋವರವಾಗಿದೆ. ಮೈಸೂರು ರಾಜ್ಯದ ದಿವಾನರಾಗಿದ್ದ ಸರ್ ಕೆ.ಶೇಷಾದ್ರಿ ಅಯ್ಯರ್ ಮತ್ತು ಮೈಸೂರಿನ ಆಗಿನ ಮುಖ್ಯ ಇಂಜಿನಿಯರ್ ಎಂ.ಸಿ.ಹಚಿನ್ಸ್ ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು 'ಚಾಮರಾಜೇಂದ್ರ ವಾಟರ್ ವರ್ಕ್ಸ್' ಎಂಬ ಯೋಜನೆಯನ್ನು ನಿರ್ಮಿಸಲು ಯೋಜಿಸಿದ್ದರು

click me!