ಧರ್ಮಸ್ಥಳ ಮಂಜುನಾಥ ದೇವಸ್ಥಾನದ ಆನೆ ಲತಾಗೆ ಹೃದಯಾಘಾತ, ಶಿವರಾತ್ರಿ ದಿನವೇ ನಿಧನ!

First Published Mar 8, 2024, 9:53 PM IST

ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಹೃದಯಾಘಾತದಿಂದ ಶಿವೈಕ್ಯವಾಗಿದೆ. ಮಹಾಶಿವಾರಾತ್ರಿ ದಿನವೇ ಆನೆ ಮೃತಪಟ್ಟಿರುವುದು ಭಕ್ತರನ್ನು ಮತ್ತಷ್ಟು ಶೋಕಸಾಗರದಲ್ಲಿ ಮುಳುಗಿಸಿದೆ. 
 

ಧರ್ಮಸ್ಥಳ ಶ್ರೀ ಮಂಜುನಾಥನಿಗೆ ಸೇವೆ ಸಲ್ಲಿಸುತ್ತಾ ಭಕ್ತರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯ ಪ್ರೀತಿಗೆ ಪಾತ್ರವಾಗಿದ್ದ ಆನೆ ಲತಾ ಹೃದಯಾಘಾತದಿಂದ ಮೃತಪಟ್ಟಿದೆ. 
 

ಮಹಾ ಶಿವರಾತ್ರಿ ದಿನವೇ ಆನೆ ಲತಾಗೆ ಹೃದಯಾಘಾತವಾಗಿ ಮೃತಪಟ್ಟಿದೆ. 60 ವಯಸ್ಸಿನ ಲತಾ ಅಂತ್ಯಸಂಸ್ಕಾರವನ್ನು ಇಂದು ಸಂಜೆ ಧರ್ಮಸ್ಥಳದಲ್ಲಿ ನೆರವೇರಿಸಲಾಗಿದೆ.  
 

ಕಳೆದ 50 ವರ್ಷಗಳಿಂದ ಆನೆ ಲತಾ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನ ಸೇವೆ ಸಲ್ಲಿಸುತ್ತಾ ಬಂದಿದೆ. ಮಂಜುನಾಥನ ವಿಶೇಷ ಪೂಜೆ, ಉತ್ಸವ, ಲಕ್ಷದಿಪೋತ್ಸೋವ, ಶಿವರಾತ್ರಿ ಸೇರಿದಂತೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆನೆ ಲತಾ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. 
 

ಕಳೆದ 50 ವರ್ಷದಲ್ಲಿ ಆನೆ ಲತಾ ಒಂದೇ ಒಂದು ಬಾರಿ ಸಿಟ್ಟಿಗೆದ್ದಿಲ್ಲ, ಯಾರನ್ನೂ ನೋಯಿಸಿಲ್ಲ.ದೇವಸ್ಥಾನದ ಕಾರ್ಯಗಳ ಬಳಿಕ ಆಗಮಿಸಿದ ಭಕ್ತಾದಿಗಳಿಗೆ ಆಶೀರ್ವಾದ ನೀಡುತ್ತಿದ್ದ ಲತಾ ಭಕ್ತರಿಗೂ ಅಚ್ಚು ಮೆಚ್ಚು. 

ಡಾ.ಡಿ ವಿರೇಂದ್ರ ಹೆಗ್ಗಡೆಯವರಿಗೂ ಲತಾ ಅತ್ಯಂತ ಪ್ರೀತಿಯ ಆನೆಯಾಗಿತ್ತು. ಇದೀಗ ಆನೆ ಲತಾ ಅಗಲಿಕೆ ಭಕ್ತರಿಗೆ ತೀವ್ರ ನೋವುಂಟು ಮಾಡಿದೆ. ಇಂದು ಸಂಜೆ ಧರ್ಮಸ್ಥಳದಲ್ಲಿ ಲತಾ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. 
 

ಶಿವರಾತ್ರಿ ದಿನವೇ ಲತಾ ನಿಧನ ಹೆಗ್ಗಡೆ ಕುಟುಂಬಕ್ಕೆ ತೀವ್ರ ನೋವುಂಟು ಮಾಡಿದೆ. ಸದ್ಯ ಧರ್ಮಸ್ಥಳಲ್ಲಿ ಲಕ್ಷ್ಮಿ ಹಾಗೂ ಶಿವಾನಿ ಎರಡು ಆನೆಗಳಿವೆ. 
 

ಕರ್ನಾಟಕ ಪ್ರಮುಖ ಶಿವ ಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳದಲ್ಲಿ ಶಿವರಾತ್ರಿ ಅತ್ಯಂತ ಮಹತ್ವದ ಹಬ್ಬವಾಗಿದೆ. ಮಹಾ ಶಿವರಾತ್ರಿ ದಿನ ಧರ್ಮಸ್ಥಳದಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.  ಈಗಾಲೇ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಪಾದಯಾತ್ರೆ ಮೂಲಕ ಧರ್ಮಸ್ಥಳಕ್ಕೆ ತೆರಳಿ ಶಿವರಾತ್ರಿಯಲ್ಲಿ ಪಾಲ್ಗೊಂಡಿದ್ದಾರೆ. ಶಿವರಾತ್ರಿ ಪ್ರಯುಕ್ತ ರಾತ್ರಿಯಿಡಿ ಭಜನೆಗಳು ನಡೆಯಲಿದೆ.  
 

click me!