ಬೆಂಗಳೂರು: ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ ಮರುದಿನವೇ ರೋಗಿಯ ಚಿನ್ನಾಭರಣ ಕದ್ದ ಖತರ್ನಾಕ್ ಮಹಿಳೆ ಅರೆಸ್ಟ್!

Published : May 08, 2026, 04:40 PM IST

ಬೆಂಗಳೂರಿನ ಹೆಣ್ಣೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ, ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳಾ ರೋಗಿಯ ಚಿನ್ನಾಭರಣಗಳನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಕಳವು ಮಾಡಿದ್ದಾಳೆ. ಕೆಲಸಕ್ಕೆ ಸೇರಿದ ಮರುದಿನವೇ ಈ ಕೃತ್ಯ ಎಸಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

PREV
14
ಮೊದಲ ದಿನವೇ ಪಂಗನಾಮ

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮಹಿಳೆಯೊಬ್ಬಳು ಮೊದಲ ದಿನವೇ ಪಂಗನಾಮ ಹಾಕಿದ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದ ಮಹಿಳಾ ರೋಗಿಯ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಬಂಧಿಸಿದ್ದಾರೆ.

24
ಘಟನೆಯ ವಿವರ:

ಹೆಣ್ಣೂರು ಮೂಲದ ಸ್ವಪ್ನ ಎಂಬ ಮಹಿಳೆ ಕಳೆದ 1ನೇ ತಾರೀಖಿನಂದು ಶಸ್ತ್ರಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಪರೇಷನ್ ಥಿಯೇಟರ್‌ಗೆ ಕರೆದೊಯ್ಯುವ ಮುನ್ನ ವೈದ್ಯಕೀಯ ನಿಯಮದಂತೆ ಆಸ್ಪತ್ರೆಯ ಸಿಬ್ಬಂದಿ ಅವರ ಮೈಮೇಲಿದ್ದ ಆಭರಣಗಳನ್ನು ತೆಗೆಯುವಂತೆ ಸೂಚಿಸಿದ್ದರು. ಅದರಂತೆ ಸ್ವಪ್ನ ಅವರು ತಮ್ಮ ಮಾಂಗಲ್ಯ ಸರ, ಕಿವಿಯೋಲೆ ಹಾಗೂ ಕಾಲುಂಗುರಗಳನ್ನು ತೆಗೆದು ಪಕ್ಕದ ರೂಮಿನಲ್ಲಿಟ್ಟಿದ್ದರು. ಇದೇ ಸಂದರ್ಭವನ್ನು ಹೊಂಚು ಹಾಕುತ್ತಿದ್ದ ಆಸ್ಪತ್ರೆಯ ಹೌಸ್ ಕೀಪಿಂಗ್ ಕೆಲಸದವಳು ತನ್ನ ಕೈಚಳಕ ತೋರಿಸಿದ್ದಾಳೆ.

34
ಕೆಲಸಕ್ಕೆ ಸೇರಿದ ಮರುದಿನವೇ ಕಳ್ಳತನ!

ಬಂಧಿತ ಆರೋಪಿಯನ್ನು ವನಜಾಕ್ಷಿ ಎಂದು ಗುರುತಿಸಲಾಗಿದೆ. ಈಕೆ ಈ ಆಸ್ಪತ್ರೆಗೆ ಹೌಸ್ ಕೀಪಿಂಗ್ ಕೆಲಸಕ್ಕೆ ಸೇರಿ ಕೇವಲ ಒಂದು ದಿನವಷ್ಟೇ ಆಗಿತ್ತು. ಕೆಲಸ ಸಿಕ್ಕ ಮರುದಿನವೇ ಈಕೆ ತನ್ನ ನೈಜ ಗುಣವನ್ನು ಪ್ರದರ್ಶಿಸಿದ್ದಾಳೆ. ರೋಗಿ ಶಸ್ತ್ರಚಿಕಿತ್ಸೆಗೆ ಹೋದ ಸಮಯ ನೋಡಿ, ನೆಲ ವರೆಸುವ ನೆಪದಲ್ಲಿ ರೂಮ್ ಒಳಗೆ ನುಗ್ಗಿದ ವನಜಾಕ್ಷಿ, ಕ್ಷಣಾರ್ಧದಲ್ಲಿ ಬೆಲೆಬಾಳುವ ಚಿನ್ನಾಭರಣಗಳನ್ನು ಗುಳುಂ ಮಾಡಿದ್ದಾಳೆ.

ಸಿಸಿಟಿವಿಯಲ್ಲಿ ಬಯಲಾದ ಖತರ್ನಾಕ್ ಕಳ್ಳಾಟ:

ಶಸ್ತ್ರಚಿಕಿತ್ಸೆ ಮುಗಿಸಿ ಬಂದ ಸ್ವಪ್ನ ಅವರಿಗೆ ತಮ್ಮ ಒಡವೆಗಳು ಕಾಣದಿದ್ದಾಗ ಆತಂಕಕ್ಕೊಳಗಾಗಿ ಆಸ್ಪತ್ರೆ ಆಡಳಿತ ಮಂಡಳಿಗೆ ತಿಳಿಸಿದ್ದಾರೆ. ಕೂಡಲೇ ಹೆಣ್ಣೂರು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ವನಜಾಕ್ಷಿ ನೆಲ ವರೆಸುತ್ತಾ ರೂಮ್ ಒಳಗೆ ಹೋಗಿ, ಯಾರಿಗೂ ಅನುಮಾನ ಬರದಂತೆ ಒಡವೆಗಳನ್ನು ಕದ್ದು ತನ್ನ ಜೇಬಿಗೆ ಹಾಕಿಕೊಳ್ಳುವುದು ಸ್ಪಷ್ಟವಾಗಿ ಸೆರೆಯಾಗಿದೆ.

44
ತುಮಕೂರಿನಲ್ಲಿತ್ತು ಒಡವೆ:

ಕಳ್ಳತನ ಮಾಡಿದ ಬಳಿಕ ಕೆಲಸಕ್ಕೆ ಬಾರದೆ ತಲೆಮರೆಸಿಕೊಂಡಿದ್ದ ವನಜಾಕ್ಷಿಯನ್ನು ಪೊಲೀಸರು ತಾಂತ್ರಿಕ ಕಾರ್ಯಾಚರಣೆಯ ಮೂಲಕ ಪತ್ತೆ ಹಚ್ಚಿದ್ದಾರೆ. ತನಿಖೆಯ ವೇಳೆ ಈಕೆ ಕದ್ದ ಚಿನ್ನಾಭರಣಗಳನ್ನು ತುಮಕೂರಿನ ಹಣಕಾಸು ಸಂಸ್ಥೆಯೊಂದರಲ್ಲಿ ಅಡವಿಟ್ಟಿರುವುದು ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು, ಆಕೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಆಸ್ಪತ್ರೆಗಳು ಕೆಲಸಕ್ಕೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆಯನ್ನು ಸರಿಯಾಗಿ ಪರಿಶೀಲಿಸಬೇಕು ಎಂಬುದಕ್ಕೆ ಈ ಘಟನೆ ಮತ್ತೊಂದು ಸಾಕ್ಷಿಯಾಗಿದೆ. ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Read more Photos on
click me!

Recommended Stories