ಮಣ್ಣಿನ ಗಡಿಗೆಯಲ್ಲಿ ಸಿಕ್ಕಿತ್ತು 14 ಬಂಗಾರದ ನಾಣ್ಯಗಳು!
ಕಳೆದ ಆಗಸ್ಟ್ 29 ರಂದು ಇಂಚಲ ಗ್ರಾಮದ ಗೋಮಾಳ ಜಮೀನಿನಲ್ಲಿ ವಿಬಿಜಿ ರಾಮ್ ಜೀ (ಗ್ರಾಮೀಣ ಕಾಮಗಾರಿ) ಯೋಜನೆಯಡಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಯಲ್ಲಪ್ಪ ಕರಿಗಾರ ಸೇರಿದಂತೆ ನಾಲ್ವರು ಕೂಲಿಕಾರ್ಮಿಕರು ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಜಮೀನು ಅಗೆಯುವ ಸಂದರ್ಭದಲ್ಲಿ ಹಳೆಯ ಕಾಲದ ಮಣ್ಣಿನ ಪುಟ್ಟ ಗಡಿಗೆಯೊಂದು ಪತ್ತೆಯಾಗಿತ್ತು. ಕುತೂಹಲದಿಂದ ಅದನ್ನು ಪರಿಶೀಲಿಸಿದಾಗ ಅದರಲ್ಲಿ ಪುರಾತನ ಕಾಲದ 14 ಚಿನ್ನದ ನಾಣ್ಯಗಳಿರುವುದು ಕಂಡುಬಂದಿತ್ತು. ಈ ನಾಣ್ಯಗಳ ಅಂದಾಜು ಮೌಲ್ಯ ಬರೋಬ್ಬರಿ 8.27 ಲಕ್ಷ ರೂಪಾಯಿ ಎನ್ನಲಾಗಿದೆ.
ಮನೆಗೆ ತಂದಿದ್ದ ಯಲ್ಲಪ್ಪ; ಮನಸ್ಸು ಬದಲಾಗಿದ್ದು ಹೇಗೆ?
ನಿಧಿ ಸಿಕ್ಕ ತಕ್ಷಣ ಏನು ಮಾಡಬೇಕೆಂದು ದಿಕ್ಕು ತೋಚದೆ ಯಲ್ಲಪ್ಪ ಆ ಮಣ್ಣಿನ ಗಡಿಗೆಯನ್ನು ಮನೆಗೆ ಕೊಂಡೊಯ್ದು ಇಟ್ಟುಕೊಂಡಿದ್ದರು. ಆದರೆ, ಇತ್ತೀಚೆಗೆ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಸಿಕ್ಕ ನಿಧಿಯ ವಿಚಾರ ರಾಜ್ಯಾದ್ಯಂತ ಭಾರಿ ಸುದ್ದಿಯಾಗಿತ್ತು. ಈ ವೇಳೆ ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಗಮನಿಸಿದ್ದ ಯಲ್ಲಪ್ಪ ಅವರಿಗೆ, ‘ಭೂಮಿಯಲ್ಲಿ ಸಿಗುವ ಯಾವುದೇ ಪ್ರಾಚೀನ ನಿಧಿ ಅಥವಾ ಸಂಪತ್ತು ಸರ್ಕಾರದ ಸ್ವತ್ತು’ ಎಂಬ ಅರಿವು ಉಂಟಾಗಿದೆ.
ದುರಾಸೆಗೆ ಬೀಳದೆ ಸತ್ಯದ ಹಾದಿ ಹಿಡಿದ ಯಲ್ಲಪ್ಪ, ಕೂಡಲೇ ಇಂಚಲ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (PDO) ಅವರನ್ನು ಭೇಟಿ ಮಾಡಿ, ತನಗೆ ಸಿಕ್ಕಿದ್ದ ಎಲ್ಲಾ 14 ಚಿನ್ನದ ನಾಣ್ಯಗಳಿದ್ದ ಗಡಿಗೆಯನ್ನು ಯಥಾವತ್ತಾಗಿ ಹಸ್ತಾಂತರಿಸಿದ್ದಾರೆ.