
ಜ್ಯೋತಿಷ್ಯದಲ್ಲಿ ಶನಿಯನ್ನು ಕರ್ಮಕ್ಕೆ ಫಲ ನೀಡುವವನು ಎಂದು ನಂಬಲಾಗಿದೆ. ಶನಿಯು ವ್ಯಕ್ತಿಯ ಕ್ರಿಯೆಗಳ ಆಧಾರದ ಮೇಲೆ ಫಲ ನೀಡುತ್ತಾನೆ. ಇದು ಒಳ್ಳೆಯ ಕೆಲ್ಸಕ್ಕಾಗಿರಲಿ ಇಲ್ಲ ಕೆಟ್ಟ ಕೆಲಸಕ್ಕೆ ಶಿಕ್ಷೆಯಾಗಿರಲಿ ಎರಡನ್ನೂ ಶನಿ ನಿರ್ಧರಿಸುತ್ತಾನೆ. ಇದೇ ಕಾರಣಕ್ಕೆ ಶನಿ ಅಂದ್ರೆ ಹೆದರುವವರು ಹೆಚ್ಚು.
ಶನಿಯ ಆಶೀರ್ವಾದ ಪಡೆಯಲು ಜಪ, ತಪಸ್ಸು ಮತ್ತು ದಾನಗಳನ್ನು ಜನರು ಮಾಡ್ತಾರೆ. ಇದು ಶನಿಯ ಬಾಧೆಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಆದ್ರೆ ಎಲ್ಲರೂ ಶನಿ ಹೆಸರಿನಲ್ಲಿ ದಾನ ಮಾಡುವುದು ಸೂಕ್ತವಲ್ಲ. ಜ್ಯೋತಿಷ್ಯದಲ್ಲಿ ಯಾರು ದಾನ ನೀಡ್ಬೇಕು ಎಂದು ಸೂಚಿಸಲಾಗಿದೆಯೋ ಅವರು ಮಾತ್ರ ದಾನ ನೀಡ್ಬೇಕು. ಕೆಲವರು ಶನಿ ಹೆಸರಿನಲ್ಲಿ ದಾನ ನೀಡಿದ್ರೆ ಫಲ ಸಿಗುವುದಿಲ್ಲ.
ಶನಿ ದೋಷ ನಿಮಗಿದೆ, ದಾನ ನೀಡಬೇಕು ಎಂದಾಗ ಯಾರಿಗೆ ದಾನ ನೀಡಬೇಕು ಎನ್ನುವ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ ಶನಿ ದಾನವನ್ನು ಸಮಾಜದ ದುರ್ಬಲರು, ಬಡವರಿಗೆ ನೀಡಬೇಕು. ಇದಲ್ಲದೆ, ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ದುರ್ಬಲವಾಗಿರುವ ವ್ಯಕ್ತಿಗೂ ನೀಡಬಹುದು. ಕಷ್ಟದಿಂದ ಬಳಲುತ್ತಿರುವವರಿಗೆ ಸಹಾಯ ಮಾಡಿ ಬೆಳಕು ತೋರಿಸಬಹುದು.
ಶನಿಯ ದಾನವನ್ನು ಎಲ್ಲರಿಗೂ ನೀವು ನೀಡುವಂತಿಲ್ಲ. ಜಾತಕದಲ್ಲಿ ಶನಿ ಶುಭ ಸ್ಥಾನದಲ್ಲಿದ್ದರೆ, ಅಂತವರಿಗೆ ಎಂದೂ ಶನಿ ದಾನ ನೀಡಬೇಡಿ. ಶನಿಯೊಂದಿಗೆ ಸಂಬಂಧ ಹೊಂದಿರುವ ಕೆಲಸದಲ್ಲಿರುವವರಿಗೆ ಅಂದ್ರೆ ಕಬ್ಬಿಣ, ಕಲ್ಲಿದ್ದಲು, ಪೆಟ್ರೋಲ್ ಅಥವಾ ಕಪ್ಪು ಬಣ್ಣಕ್ಕೆ ಸಂಬಂಧಿಸಿದ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಶನಿ ದಾನವನ್ನು ನೀಡಬೇಡಿ. ವೃಷಭ, ಕನ್ಯಾ, ತುಲಾ, ಮಕರ ಮತ್ತು ಕುಂಭ ರಾಶಿಯಲ್ಲಿ ಜನಿಸಿದವರಿಗೂ ಶನಿ ದಾನವನ್ನು ನಿಷೇಧಿಸಲಾಗಿದೆ. ಒತ್ತಡದಲ್ಲಿ ಅಥವಾ ಇಷ್ಟವಿಲ್ಲದೆ ಶನಿಗೆ ಮಾಡಿದ ದಾನಗಳು ಸಹ ಫಲಪ್ರದವಾಗುವುದಿಲ್ಲ.
ಆರೋಗ್ಯ ಸಮಸ್ಯೆಗಳಿದ್ದರೆ ಛಾಯಾ ದಾನ ಮಾಡುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆರ್ಥಿಕ ತೊಂದರೆಗಳು ಅಥವಾ ಆರ್ಥಿಕ ಸಮಸ್ಯೆಗಳ ಪರಿಹಾರಕ್ಕಾಗಿ ಶನಿವಾರದಂದು ಕಪ್ಪು ಬಟ್ಟೆಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ. ಅಪಘಾತಗಳಿಂದ ರಕ್ಷಣೆ ಪಡೆಯಲು ಶನಿವಾರದಂದು ಕರಿಬೇವು ಅಥವಾ ಕಪ್ಪು ಉದ್ದಿನ ಬೇಳೆಯನ್ನು ದಾನ ಮಾಡುವುದು ಪ್ರಯೋಜನಕಾರಿಯಾಗಿದೆ. ಅಪಖ್ಯಾತಿಯನ್ನು ತಪ್ಪಿಸಲು ಬೆಳಕನ್ನು ದಾನ ಮಾಡಬೇಕು. ಉದ್ಯೋಗ ಮತ್ತು ಕೆಲಸಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಸಿಗಬೇಕೆಂದ್ರೆ ಕಬ್ಬಿಣದ ವಸ್ತುಗಳನ್ನು ದಾನ ಮಾಡುವುದು ಶುಭವೆಂದು ಪರಿಗಣಿಸಲಾಗುತ್ತದೆ.
ಶನಿವಾರದಂದು ಉಪ್ಪನ್ನು ದಾನ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಶನಿವಾರದಂದು ಚೂಪಾದ ಮತ್ತು ಮೊನಚಾದ ವಸ್ತುಗಳನ್ನು ದಾನ ಮಾಡುವುದನ್ನು ಸಹ ತಪ್ಪಿಸಬೇಕು. ಈ ವಸ್ತುಗಳನ್ನು ದಾನ ಮಾಡುವುದರಿಂದ ಶನಿ ದೇವರ ಕೋಪಕ್ಕೆ ನೀವು ಗುರಿಯಾಗಬಹುದು. ಇದ್ರಿಂದ ಆರ್ಥಿಕ ಹಾಗೂ ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡುತ್ತದೆ.
ಶನಿಗೆ ದಾನ ನೀಡುವಾಗ ಬಹಳ ಆಲೋಚಿಸಿ, ಸರಿಯಾದ ವ್ಯಕ್ತಿಗೆ ನೀಡಬೇಕು. ತಪ್ಪು ರೀತಿಯಲ್ಲಿ ಅಥವಾ ತಪ್ಪು ವ್ಯಕ್ತಿಗೆ ನೀಡಿದ ದಾನವು ಯಾವುದೇ ಪ್ರಯೋಜನಗಳನ್ನು ನೀಡುವುದಿಲ್ಲ. ನಂಬಿಕೆ, ಭಕ್ತಿ ಮತ್ತು ಸರಿಯಾದ ನಿಯಮಗಳೊಂದಿಗೆ ದಾನಗಳನ್ನು ಮಾಡಿದರೆ, ಶನಿ ದೇವರ ಆಶೀರ್ವಾದ ಪಡೆಯಬಹುದು. ಜೀವನದ ತೊಂದರೆಗಳು ಕ್ರಮೇಣ ಕಡಿಮೆಯಾಗುತ್ತವೆ.