ಕಿಗ್ಗಾ: ರಾಮನ ತಂಗಿ ಶಾಂತಾ-ಋಷ್ಯಶೃಂಗರ ಜಾತ್ರೆ ಹೇಗಿತ್ತು ನೋಡಿ!

First Published Mar 29, 2023, 5:26 PM IST

ರಾಮಾಯಣದ ಬಗ್ಗೆ ನೀವು ಹಲವಾರು ಕಥೆಗಳನ್ನು ಕೇಳಿರಬಹುದು. ಹೆಚ್ಚಾಗಿ ನೀವು ದಶರಥನ ಪುತ್ರರಾದ ರಾಮ, ಲಕ್ಷ್ಮಣ, ಭರತ, ಶತ್ರುಘ್ನನ ಬಗ್ಗೆ ಮಾತ್ರ ಕೇಳಿರಬಹುದು. ಆದ್ರೆ ರಾಮನ ಸಹೋದರಿ ಶಾಂತಾ, ಆಕೆ ಮದುವೆಯಾದ ಋಷಿಗಳಾದ ಋಷ್ಯ ಶೃಂಗರ ಬಗ್ಗೆ ಗೊತ್ತಾ? ಕರ್ನಾಟಕದ ಶೃಂಗೇರಿಯಲ್ಲಿನ ಋಷ್ಯ ಶೃಂಗರ ದೇಗುಲದ ಬಗ್ಗೆಯೂ, ದಶರಥನ ಪುತ್ರಿ ಶಾಂತಳ ದೇವಸ್ಥಾನವಿರುವ ಕಿಗ್ಗಾದಲ್ಲಿ ಜಾತ್ರೆ ಸಂಭ್ರಮ. ನೋಡಿ ಫೋಟೋಸ್. 

ಮೊದಲಿಗೆ ರಾಮನವಮಿಯ ಹಿಂದಿನ ದಿನ ರಥೋತ್ಸವ ಆಚರಿಸಿಕೊಳ್ಳುತ್ತಿರುವ ಋಷ್ಯಶೃಂಗ (Kigga Rishyashringa Temple) ದೇಗುಲದ ಮತ್ತು ಋಷಿಗಳ ಬಗ್ಗೆ ತಿಳಿಯೋಣ. ಋಷ್ಯಶೃಂಗ ಮಹರ್ಷಿಗಳ ಹಿನ್ನೆಲೆ ಬಹಳ ವಿಶೇಷವಾದುದು. ಇವರು ಶ್ರೀರಾಮನ ಸಹೋದರ ಶಾಂತಳ ಪತಿಯೂ ಹೌದು. ಋಷ್ಯಶೃಂಗ ಮಹರ್ಷಿಗಳಿಗೆ ಎಷ್ಟು ಶಕ್ತಿ ಇತ್ತು ಎಂದರೆ, ಇವರು ಕಾಲಿಟ್ಟರೆ ಬರಗಾಲದ ಊರಲ್ಲೂ ಮಳೆ ಬರುತ್ತೆ ಎನ್ನುವ ನಂಬಿಕೆ ಇತ್ತು. ಇಂದಿಗೂ ಶೃಂಗೇರಿಯ ಕಿಗ್ಗಾದಲ್ಲಿರುವ ಋಷ್ಯಶೃಂಗ ದೇಗುಲದಲ್ಲಿ ಭಕ್ತರು ಅದನ್ನೇ ನಂಬಿದ್ದಾರೆ.
 

ಸಕಾಲಕ್ಕೆ ಮಳೆ ಬೆಳೆ ಆಗುವಂತೆ ಹಲವಾರು ರೈತರು ಭಕ್ತಾದಿಗಳು ಇಲ್ಲಿಗೆ ಬಂದು ಭಕ್ತಿಯಿಂದ ಬೇಡಿಕೊಳ್ಳುತ್ತಾರೆ. ಪುರಾಣದಲ್ಲಿ ಈ ಮಹರ್ಷಿಗಳಿಗೆ ಮೋಡಗಳನ್ನು ಆಕರ್ಷಿಸಿ ಮಳೆ ತರಿಸುವ ವಿಶಿಷ್ಟ ಶಕ್ತಿ ಇದ್ದ ಕಾರಣಕ್ಕೆ ಮಹರ್ಷಿ ಋಷ್ಯ ಶೃಂಗರ ಹಿನ್ನೆಲೆಯುಳ್ಳ ಕಿಗ್ಗದ ಶ್ರೀ ಋಷ್ಯ ಶೃಂಗೇಶ್ವರ ದೇವಸ್ಥಾನ ಜನಪ್ರಿಯತೆ ಪಡೆಯಿತು. ಪ್ರತಿ ವರ್ಷದಂತೆ ಕಿಗ್ಗಾದಲ್ಲಿ ಚೈತ್ರ ಶುದ್ಧ ಆರ್ದ್ರಾ ನಕ್ಷತ್ರದಂದು ಮಹಾ ರಥೋತ್ಸವ ನಡೆಯುತ್ತದೆ.  ಕಿಗ್ಗ ತೇರು ವಿಶೇಷತೆಯ ಬಗ್ಗೆ ತಿಳಿಯೋಣ. 

Latest Videos


ನೂರಾರು ವರ್ಷಗಳ ಇತಿಹಾಸವಿರುವ ಕಿಗ್ಗಾದ ತೇರು ಬಹಳ ವಿಶೇಷತೆಯಿಂದ ಕೂಡಿದೆ. 
1) ಸುಮಾರು 72 ಅಡಿ ಎತ್ತರದ ತೇರು ಇದಾಗಿದೆ. 
2) ಈ ರಥವನ್ನು ಗೆಡ್ಡೆ ರಥ ಎಂದು ಕರೆಯುವುದು ಉಂಟು. 
3) ಬೃಹದಾಕಾರದಲ್ಲಿರುವ ಇಂಥ ರಥ ಬೇರೆ ಎಲ್ಲಿಯೂ ಕಾಣ ಸಿಗುವುದಿಲ್ಲ. 
4) ಇನ್ನೊಂದು ವಿಶೇಷತೆ ಎಂದರೆ ಈ ರಥ ನಿರ್ಮಿಸಲು ಕಬ್ಬಿಣವನ್ನು  ಎಲ್ಲಿಯೂ ಬಳಸುವುದಿಲ್ಲ. 
ನೂರಾರು ವರ್ಷಗಳಿಂದ ನಡೆದುಬರುತ್ತಿರುವ ಈ ರಥೋತ್ಸವಕ್ಕೆ ಅಲ್ಲೇ ಸುತ್ತಮುತ್ತ ನೆಲೆಸಿರುವ ಗಿರಿಜನರು ಹಾಗೂ ಅಚಾರರು ಸೇರಿ  ರಥ ಅಲಂಕಾರ ಮಾಡುತ್ತಾರೆ.  

ಋಷ್ಯ ಶೃಂಗ ದೇಗುಲದ ಬಗ್ಗೆ ತಿಳಿದಾಯ್ತು, ಇನ್ನು ಈ ಮಹರ್ಷಿಗಳಿಗೂ ರಾಮಾಯಣಕ್ಕೂ ಅಂದರೆ ದಶರಥ, ರಾಮನಿಗೂ ಇರುವ ಸಂಬಂಧ ಏನು ಅನ್ನೋದನ್ನು ತಿಳಿಯೋಣ. ಬಾಲ್ಯದಿಂದಲೂ ರಾಮಾಯಣದ ಹತ್ತು, ಹಲವು ಕಥೆಗಳನ್ನು ಕೇಳಿರಬಹುದು.  ಅಷ್ಟೇ ಅಲ್ಲ ಈ ಬಗ್ಗೆ ಚಲನಚಿತ್ರ, ಧಾರಾವಾಹಿಗಳಲ್ಲಿ ಸಹ ಬೇರೆ ಬೇರೆ ರೀತಿಯ ಕತೆಗಳನ್ನು ಕಂಡಿರಬಹುದು. ಪ್ರತಿ ಬಾರಿ ಒಂದೊಂದು ಕಥೆ ಕೇಳಿದಾಗ, ಹೀಗೂ ಇದೆಯೇ? ಇಂಥ ಕತೆ ಕೇಳಿಲ್ಲವಲ್ಲ ಎಂದು ಅನಿಸೋದು ಇದೆ. ಅದರಲ್ಲಿ ಒಂದು ರಾಮನ ಸಹೋದರಿಯ ಕತೆ. 

ಏನು ರಾಮನಿಗೆ ಸಹೋದರಿ (Rama's sister Shanta) ಇದ್ದಾಳೆಯೇ? ರಾಮನಿಗೆ ಲಕ್ಷ್ಮಣ, ಭರತ, ಶತ್ರುಘ್ನರೆಂಬ ಸಹೋದರರು ಮಾತ್ರವಲ್ಲ, ಒಬ್ಬ ಸಹೋದರಿಯೂ ಇದ್ದಾಳೆ. ರಾಮನ ಅಕ್ಕನ ಕತೆಯೂ ಹಾಗೆ, ಬಹುತೇಕರಿಗೆ ತಿಳಿದಿಲ್ಲದ ವಿಷಯ ಇದು. ಹೌದು, ಶ್ರೀರಾಮನ ತಂದೆತಾಯಿ ದಶರಥ ಮತ್ತು ಕೌಸಲ್ಯಾದೇವಿಯ ಮೊದಲ ಮಗಳು ಶಾಂತ. 

ರಾಮನ ಹುಟ್ಟು, ಸಾಧನೆ ರಾಮಾರಾಜ್ಯದ್ದೇ ಸುದ್ದಿ ಜನರಿಗೆ ಹತ್ತಿರವಾಗುತ್ತಾ ಹೋದಂತೆ, ಉಳಿದ ಪಾತ್ರಗಳು ಮರೆಯಾಗುತ್ತಾ ಹೋಗುತ್ತವೆ. ಹಾಗೆ ಮುಚ್ಚಿ ಹೋದ ಕಥೆಗಳಲ್ಲಿ ಶಾಂತಾ ಕಥೆಯೂ ಒಂದು. ರಾಮಾ ಹಾಗೂ ಆತನ ಸಹೋದರರಿಗೆ ಅವರ ಅಕ್ಕ ಶಾಂತಾಳ ಬಗ್ಗೆ ಹೇಳದೆ ಮುಚ್ಚಿಟ್ಟಿದ್ದರ ಹಿಂದೊಂದು ಕಾರಣವಿದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
 

ದಶರಥನ ಕಥೆ (Story of Dasharatha)
ದಶರಥನ ಜೀವನವೇ ಒಂಥರಾ ಘೋರವಾಗಿದೆ. ಇನ್ನೂ 8 ತಿಂಗಳು ಇರುವಾಗಲೇ ದಶರಥ ತಂದೆ, ತಾಯಿಯರನ್ನು ಕಳೆದುಕೊಂಡಿದ್ದರು. ಹಾಗಾಗಿ, ದಶರಥ ಮಹರ್ಷಿ ಮರುಧನ್ವ ಅವರೊಂದಿಗೆ ಬೆಳೆಯುತ್ತಾರೆ. ಅವರ ಬಳಿಯೇ ಬಿಲ್ವಿದ್ಯೆಯಿಂದ ಹಿಡಿದು ಸರ್ವ ವಿದ್ಯಾ ಪಾರಂಗತರಾಗುತ್ತಾರೆ. ನಂತರದಲ್ಲಿ ದಕ್ಷಿಣ ಕೋಸಲ ದೇಶದ ರಾಜನಾಗಿ ದಶರಥ ಬೆಳೆಯುತ್ತಾರೆ. 

ದಶರಥ -ಕೌಸಲ್ಯಾ ಮದುವೆ (Marriage of Dasharatha and Kausalya)
ಉತ್ತರ ಕೋಸಲ ದೇಶದ ರಾಜ ಸುಕೌಶಲನಿಗೆ ಬಹಳ ಸುಂದರವಾದ ಮಗಳಿರುತ್ತಾಳೆ. ಆಕೆಯೇ ಕೌಸಲ್ಯ. ಅವಳನ್ನು ನೋಡಿ ಇಷ್ಟಪಟ್ಟ ದಶರಥ ಆಕೆಯ ತಂದೆ ಬಳಿ ವಿವಾಹ ಮಾಡಿಕೊಡುವಂತೆ ಕೋರುತ್ತಾನೆ. ಹೆಸರಾಂತ ರಾಜನಾಗಿದ್ದ ದಶರಥನಿಗೆ ಖುಷಿಯಿಂದಲೇ ವಿವಾಹ ಮಾಡಿಕೊಡುತ್ತಾನೆ ಉತ್ತರ ಕೋಸಲ ದೇಶದ ರಾಜ. 

ಶಾಂತಾಳ ಜನನ (Birth of Devi Shanta)
ದಶರಥ ಹಾಗೂ ಕೌಸಲ್ಯರ ಮೊದಲ ಮಗು ಶ್ರೀರಾಮ ಅಲ್ಲ. ಬದಲಾಗಿ ಅವರಿಗೆ ಹುಟ್ಟಿದ ಮೊದಲ ಮಗುವೇ ಶಾಂತಾ. ಆಕೆ ಬಹಳ ಸುಂದರ ರಾಜಕುಮಾರಿಯಾಗಿರುವ ಜೊತೆಗೆ ಕ್ಷತ್ರಿಯ ಧರ್ಮಕ್ಕೆ ಸರಿಯಾಗಿ ಬಹಳ ಧೈರ್ಯದಿಂದ ಹೋರಾಡುವ ರಾಜಕುಮಾರಿಯಾಗಿದ್ದಳು. ಆದರೆ  ಅಂಗದೇಶದ ರಾಜ ರೋಂಪದ ಹಾಗೂ ಪತ್ನಿ ವರ್ಷಿಣಿಗೆ ಮಕ್ಕಳಿಲ್ಲವೆಂಬ ಕಾರಣಕ್ಕೆ ದತ್ತು ನೀಡುತ್ತಾರೆ. ಆದರೆ, ರಾಜಾ ದಶರಥನಿಗೆ ಆ ನಂತರ ಮಕ್ಕಳಾಗುವುದಿಲ್ಲ. ತನ್ನ ನಂತರ ಉತ್ತರಾಧಿಕಾರಿಯಾಗಿ ರಾಜ್ಯ ನಡೆಸಲು ಮಗ ಬೇಕೆಂಬ ಆಸೆಯಿಂದ ನಂತರದಲ್ಲಿ ಸುಮಿತ್ರಾ, ಕೈಕೇಯಿಯರನ್ನು ಮದುವೆಯಾಗುತ್ತಾನೆ. ಆದರೆ ವರ್ಷಗಳಾದರೂ ಅವನಿಗೆ ಮಕ್ಕಳೇ ಆಗೋದಿಲ್ಲ

ಸಮಸ್ಯೆಗೆ ಪರಿಹಾರ ನೀಡುವಂತೆ ದಶರಥ ಮಹರ್ಷಿ ವಶಿಷ್ಠರ ಮೊರೆ ಹೋಗುತ್ತಾನೆ. ವಶಿಷ್ಠರು ಈ ಸಂದರ್ಭದಲ್ಲಿ ದಶರಥನಿಗೆ ಮಹರ್ಷಿ ವಿಭಾಂಡಕರ ಕತೆ ಹೇಳುತ್ತಾರೆ. ಹೆಚ್ಚು ಶಕ್ತಿಗಳನ್ನು ಪಡೆಯಲು ವಿಭಾಂಡಕರು ಕಠಿಣ ತಪಸ್ಸು ಮಾಡೊದನ್ನು ನೋಡಿ, ಬೆದರಿದ ಇಂದ್ರ ಅವರ ತಪೋಭಂಗ ಮಾಡಲು ಊರ್ವಶಿಯನ್ನು ಕಳುಹಿಸಿರುತ್ತಾನೆ. ವಿಭಾಂಡಕರ ತಪೋಭಂಗವಾಗಿ ಇಬ್ಬರ ಮಿಲನದಿಂದ ಋಷ್ಯಶೃಂಗರ ಜನನವಾಗುತ್ತದೆ. 

ಆದರೆ, ತನ್ನ ಕೆಲಸ ಮುಗಿಯಿತೆಂದು ಊರ್ವಶಿ ಋಷಿ ಹಾಗೂ ಮಗನನ್ನು ಬಿಟ್ಟು ಹೋಗುತ್ತಾಳೆ. ಇದರಿಂದ ಮಹಿಳೆಯರ ಮೇಲೆ ದ್ವೇಷ ಬೆಳೆಸಿಕೊಂಡ ವಿಭಾಂಡಕರು ತಮ್ಮ ಈ ಮಗನನ್ನು ಮಹಿಳೆಯೇ ಇಲ್ಲದ ಸ್ಥಳದಲ್ಲಿ ಏಕಾಂಗಿಯಾಗಿ ಬೆಳೆಸುವ ಪ್ರತಿಜ್ಞೆ ಮಾಡುತ್ತಾರೆ. ಋಷ್ಯಶೃಂಗರು ಅಪ್ಪನ ಹೊರತಾಗಿ ಬೇರೊಬ್ಬ ಮನುಷ್ಯನ ಸಂಪರ್ಕವೇ ಇಲ್ಲದೆ ಬೆಳೆಯುತ್ತಾರೆ. ಋಷ್ಯ ಶೃಂಗರಿಗೆ (RIshyashringa) ಮಹಾನ್ ಶಕ್ತಿ ಇರುತ್ತೆ. 

ಇಂಥ ಋಶ್ಯಶೃಂಗರ ಬದುಕಿನಲ್ಲಿ ಮಹಿಳೆಯನ್ನು ತಂದು ಅವರನ್ನು ಕೌಟುಂಬಿಕ ಜಗತ್ತಿಗೆ ಎಳೆದು ಅವರಿಂದ ಪುತ್ರಕಾಮೇಷ್ಠಿ ಯಾಗ ಮಾಡಿಸಿದರೆ ದಶರಥನಿಗೆ ಪುತ್ರ ಜನನವಾಗುತ್ತದೆ ಎಂದು ಮಹರ್ಷಿ ವಶಿಷ್ಠರು ಹೇಳುತ್ತಾರೆ. ಹಾಗಾಗಿ, ದಶರಥ ತನ್ನ ಮಗಳಿಗೆ ಋಷ್ಯಶೃಂಗರ ಬಳಿಗೆ ಹೋಗಿ ಅವರನ್ನು ಸಾಂಸಾರಿಕ ಜೀವನಕ್ಕೆಳೆಯುವಂತೆ ಬೇಡಿಕೊಳ್ಳುತ್ತಾನೆ. 

ಪುತ್ರಕಾಮೇಷ್ಠಿ ಯಾಗ (Putrakameshti Yaga)
ಋಷ್ಯಶೃಂಗರನ್ನು ವಿವಾಹವಾಗುವುದೆಂದರೆ ರಾಜವೈಭೋಗವನ್ನೆಲ್ಲ ಬಿಟ್ಟು ಕಾಡಿಗೆ ಹೋಗಬೇಕು. ಹಾಗಾಗಿ, ದಶರಥನ ಬೇಡಿಕೆಗೆ ಒಪ್ಪದಂತೆ ಕೌಸಲ್ಯಾ ಮಗಳಲ್ಲಿ ಬೇಡಿಕೊಳ್ಳುತ್ತಾಳೆ. ಆದರೆ ಶಾಂತ ಅಪ್ಪನ ಮಾತಿನಂತೆ ಕಾಡಿಗೆ ಹೋಗುತ್ತಾಳೆ. ಎಂದೂ ಮಹಿಳೆಯನ್ನೇ ನೋಡಿರದ ಋಷ್ಯಶೃಂಗರು ಶಾಂತಾಳ ರೂಪ ಹಾಗೂ ಬುದ್ಧಿವಂತಿಗೆ ಮನಸೋತು ವಿವಾಹವಾಗುತ್ತಾರೆ. ನಂತರ ಋಷ್ಯಶೃಂಗರು ನಡೆಸಿದ ಯಾಗದಿಂದಾಗಿ ಕೌಸಲ್ಯೆಗೆ ರಾಮ, ಸುಮಿತ್ರಾಗೆ ಲಕ್ಷ್ಮಣ ಹಾಗೂ ಶತೃಘ್ನ, ಕೈಕೇಯಿಗೆ ಭರತ ಹುಟ್ಟುತ್ತಾರೆ. ಒಟ್ಟಿನಲ್ಲಿ ಶಾಂತಾಳ ತ್ಯಾಗದಿಂದ ದಶರಥನಿಗೆ ಗಂಡುಮಕ್ಕಳ ಜನನವಾಗುತ್ತದೆ

click me!