Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

First Published Nov 2, 2021, 2:21 PM IST

ನವದೆಹಲಿ: ಭಾರತ ಕ್ರಿಕೆಟ್ ತಂಡ (Indian Cricket Team) ತಾರಾ ಆಲ್ರೌಂಡರ್‌, ವಿಶ್ವಕಪ್ ಹೀರೋ ಯುವರಾಜ್ ಸಿಂಗ್ (Yuvraj Singh) ಇದೀಗ ತನ್ನ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ನಿವೃತ್ತಿ (Retirement) ವಾಪಾಸ್ ಪಡೆದು, ಮೈದಾನಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ (Yuvraj Singh) ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂ(Instagram)ನಲ್ಲಿ ಹೊಸ ಘೋಷಣೆಯೊಂದನ್ನು ಮಾಡಿದ್ದು, ನಿವೃತ್ತಿ ವಾಪಾಸ್ ಪಡೆದು ಕ್ರಿಕೆಟ್‌ ಮೈದಾನಕ್ಕಿಳಿಯುವುದಾಗಿ ತಿಳಿಸಿದ್ದಾರೆ. 
 

ಇದು ಯುವಿ ಅಭಿಮಾನಿಗಳಿಗೆ ಸಾಕಷ್ಟು ಹುರುಪನ್ನುಂಟು ಮಾಡಿದೆ. ಬಹುಜನರ ಅಪೇಕ್ಷೆಯ ಮೇರೆಗೆ 2022ರ ಫೆಬ್ರವರಿ ವೇಳೆಗೆ ಕ್ರಿಕೆಟ್‌ ಆಡಲು ಮೈದಾನಕ್ಕಿಳಿಯುವುದಾಗಿ ಸಿಕ್ಸರ್ ಕಿಂಗ್ ಯುವರಾಜ್ ಸಿಂಗ್ ಘೋಷಿಸಿದ್ದಾರೆ.

ದೇವರು ನಿಮ್ಮ ಹಣೆಬರಹವನ್ನು ನಿರ್ಧರಿಸುತ್ತಾನೆ. ಸಾರ್ವಜನಿಕರ ಒತ್ತಾಯದ ಮೇರೆಗೆ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಹುತೇಕ ಮೈದಾನಕ್ಕಿಳಿಯುತ್ತೇನೆ. ಇದಕ್ಕಿಂತ ಖುಷಿ ಮತ್ತೊಂದಿಲ್ಲ ಎಂದು ಯುವಿ ಹೇಳಿದ್ದಾರೆ.

ಮುಂದುವರೆದು, ನಿಮ್ಮ ಪ್ರೀತಿ ಹಾಗೂ ಬೆಂಬಲಕ್ಕೆ ನಾನು ಚಿರಋಣಿ. ಯಾವಾಗಲೂ ಭಾರತ ತಂಡವನ್ನು ಬೆಂಬಲಿಸುತ್ತಾ ಇರಿ. ಇದು ನಮ್ಮ ತಂಡ. ನಿಜವಾದ ಭಾರತ ತಂಡದ ಅಭಿಮಾನಿಗಳು (Indian Cricket Team Fan) ಕಷ್ಟದ ಸಂದರ್ಭದಲ್ಲೂ ಬೆಂಬಲಕ್ಕೆ ನಿಲ್ಲುತ್ತಾರೆ ಎಂದು ಇನ್‌ಸ್ಟಾಗ್ರಾಂನಲ್ಲಿ ಯುವಿ ಬರೆದುಕೊಂಡಿದ್ದಾರೆ.

2011ರ ಏಕದಿನ ವಿಶ್ವಕಪ್ (World Cup 2011) ಗೆಲುವಿನಲ್ಲಿ ಯುವರಾಜ್ ಸಿಂಗ್ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಯುವಿ ಬ್ಯಾಟಿಂಗ್‌ನಲ್ಲಿ 362 ರನ್ ಹಾಗೂ ಬೌಲಿಂಗ್‌ನಲ್ಲಿ 15 ವಿಕೆಟ್ ಕಬಳಿಸುವ ಮೂಲಕ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾಗಿದ್ದರು.
 

ಏಕದಿನ ವಿಶ್ವಕಪ್ ಬಳಿಕ ಯುವಿಗೆ ಕ್ಯಾನ್ಸರ್‌ ತಗುಲಿದ್ದು ದೃಢಪಟ್ಟಿತ್ತು. ಇದಾದ ಬಳಿಕ ಕ್ಯಾನ್ಸರ್ ವಿರುದ್ದ ಹೋರಾಡಿ ಸಾವನ್ನೇ ಗೆದ್ದು ಟೀಂ ಇಂಡಿಯಾಗೆ ಮತ್ತೊಮ್ಮೆ ಕಮ್‌ಬ್ಯಾಕ್‌ ಮಾಡುವಲ್ಲಿ ಯುವಿ ಯಶಸ್ವಿಯಾಗಿದ್ದರು.

ವಿದೇಶಿ ಟಿ20 ಫ್ರಾಂಚೈಸಿ ಲೀಗ್‌ನಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಟೀಂ ಇಂಡಿಯಾ (Team India) ಆಲ್ರೌಂಡರ್ ಯುವರಾಜ್ ಸಿಂಗ್ 2019ರಲ್ಲಿ ಭಾರತದ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 

ಇದಾದ ಬಳಿಕ ಯುವಿ ಟಿ10 ಲೀಗ್, GT20 ಲೀಗ್ ಹಾಗೂ 2021ರ ಮಾರ್ಚ್‌ನಲ್ಲಿ ನಡೆದ ರಸ್ತೆ ಸುರಕ್ಷತಾ ಸರಣಿಯಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನ ತೋರುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು.
 

click me!