ಕಳೆದೊಂದ ದಶಕಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಆಧುನಿಕ ಕ್ರಿಕೆಟ್ನ ಸೂಪರ್ ಸ್ಟಾರ್ ಬ್ಯಾಟರ್ ಎಬಿ ಡಿ ವಿಲಿಯರ್ಸ್, ಇದೀಗ ಟಿ20 ಕ್ರಿಕೆಟ್ನ ಅತಿದೊಡ್ಡ ಮ್ಯಾಚ್ ವಿನ್ನರ್ ಯಾರೆಂದು ಹೆಸರಿಸಿದ್ದಾರೆ.
ಟಿ20 ಕ್ರಿಕೆಟ್ನಲ್ಲಿ ಕ್ರಿಸ್ ಗೇಲ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ಲಸಿತ್ ಮಾಲಿಂಗ, ಜೋಸ್ ಬಟ್ಲರ್ ಅವರಂತಹ ಆಟಗಾರರು ಏಕಾಂಗಿಯಾಗಿ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ. ಹೀಗಿದ್ದೂ ಈ ಎಲ್ಲಾ ಆಟಗಾರರನ್ನು ಬಿಟ್ಟು ಹೊಸ ಆಟಗಾರನೊಬ್ಬನ್ನು ಎಬಿಡಿ ಹೆಸರಿಸಿದ್ದಾರೆ.
ಹೌದು, ಆಫ್ಘಾನಿಸ್ತಾನದ ತಾರಾ ಆಲ್ರೌಂಡರ್ ರಶೀದ್ ಖಾನ್, ಟಿ20 ಕ್ರಿಕೆಟ್ ಇತಿಹಾಸದ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.
ಆರ್ಸಿಬಿ ತಂಡದಲ್ಲಿ ಸಹ ಆಟಗಾರರಾಗಿದ್ದ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹಾಗೂ ರನ್ ಮಷೀನ್ ವಿರಾಟ್ ಕೊಹ್ಲಿಯನ್ನು ಬಿಟ್ಟು, ರಶೀದ್ ಖಾನ್ ಅವರ ಹೆಸರು ಸೂಚಿಸಿರುವುದು ನಿಜಕ್ಕೂ ಎಬಿಡಿ ಅಭಿಮಾನಿಗಳಲ್ಲಿ ಅಚ್ಚರಿಗೀಡಾಗುವಂತೆ ಮಾಡಿದೆ.
ನನ್ನ ಪ್ರಕಾರ ಟಿ20 ಕ್ರಿಕೆಟ್ನ ಅತ್ಯಂತ ಯಶಸ್ವಿ ಕ್ರಿಕೆಟಿಗನೆಂದರೆ ಅದು ಬೇರೆ ಯಾರೂ ಅಲ್ಲ, ಅವರೇ ರಶೀದ್ ಖಾನ್. ಅವರು ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅತಿ ಅಮೂಲ್ಯ ಕೊಡುಗೆ ನೀಡುತ್ತಾ ಬಂದಿದ್ದಾರೆ.
ಅವರು ಯಾವಾಗಲೂ ತಂಡವನ್ನು ಗೆಲ್ಲಿಸಲು ಹೋರಾಡುತ್ತಾರೆ. ಅವರೊಬ್ಬ ಸ್ಪರ್ಧಾತ್ಮಕ ಕ್ರಿಕೆಟಿಗನಾಗಿದ್ದು, ಆತ ನನ್ನ ಪ್ರಕಾರ ಟಿ20 ಕ್ರಿಕೆಟ್ನ ಅತಿದೊಡ್ಡ ಮ್ಯಾಚ್ ವಿನ್ನರ್ ಎಂದು ಸೂಪರ್ಸ್ಪೋರ್ಟ್ಗೆ ನೀಡಿದ ಸಂದರ್ಶನದಲ್ಲಿ ಎಬಿಡಿ ತಿಳಿಸಿದ್ದಾರೆ.
2017ರಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಸೇರಿದ್ದ ರಶೀದ್ ಖಾನ್, ತಾನಾಡಿದ ಚೊಚ್ಚಲ ಆವೃತ್ತಿಯಲ್ಲೇ 14 ಪಂದ್ಯಗಳನ್ನಾಡಿ 17 ವಿಕೆಟ್ ಕಬಳಿಸುವ ಮೂಲಕ ಗಮನ ಸೆಳೆದಿದ್ದರು.
ಸನ್ರೈಸರ್ಸ್ ಹೈದರಾಬಾದ್ ಪರ ಲೆಗ್ ಸ್ಪಿನ್ನರ್ ರಶೀದ್ ಖಾನ್ 2017ರಿಂದ 2021ರ ಅವಧಿಯಲ್ಲಿ 93 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಪಾಲಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು.
ಇದಾದ ಬಳಿಕ 2022ರ ಐಪಿಎಲ್ ಟೂರ್ನಿಗೂ ಮುನ್ನ ನೂತನ ತಂಡವಾದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಮೂರು ಡ್ರಾಫ್ಟ್ ಆಯ್ಕೆಯ ಪೈಕಿ ಓರ್ವ ಆಯ್ಕೆಯಾಗಿ ರಶೀದ್ ಖಾನ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ರಶೀದ್ ಖಾನ್, ಗುಜರಾತ್ ಟೈಟಾನ್ಸ್ ತಂಡದ ಪರ 19 ವಿಕೆಟ್ ಕಬಳಿಸುವ ಮೂಲಕ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.