Bengaluru Rains: ಸಿಎಂ ಸಿಟಿ ರೌಂಟ್ಸ್ ವೇಳೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ

First Published Sep 1, 2022, 9:55 PM IST

ಬೆಂಗಳೂರಿನಲ್ಲಿ ಮಳೆಯಿಂದ ಸಾಕಷ್ಟು ಅವಾಂತರಗಳು ಉಂಟಾಗಿದ್ದು, ಇದು ದೇಶದೆಲ್ಲೆಡೆ ಸುದ್ದಿಯಾಗಿದೆ. ಉದ್ಯಮಿ ಮೋಹನ್‌ದಾಸ್‌ ಪೈ ಸೇರಿದಂತೆ ಅನೇಕರು ಪ್ರಧಾನಿಗೆ ಟ್ವೀಟ್‌ ಮಾಡಿ ಬೆಂಗಳೂರು ಅಭಿವೃದ್ಧಿ ಬಗ್ಗೆ ಹಾಗೂ ಮಳೆಯಿಂದ ಉಂಟಾಗುವ ಅವಾಂತರಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಬೆಂಗಳೂರು ಸಿಟಿ ರೌಂಡ್ಸ್‌ ಮಾಡಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡಿದ್ದಾರೆ.

ಅಧಿಕಾರಿಗಳಿಗೆ ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡ ಸಿಎಂ

ರಾಜಕಾಲುವೆ ಒತ್ತುವರಿ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಅಲ್ಲದೆ, ಎಂಜಿನಿಯರ್‌ಗಳು ತಮ್ಮ ಕಾರ್ಯಪ್ರವೃತಿಯನ್ನ ಬದಲಾವಣೆ ಮಾಡಿಕೊಳ್ಳಬೇಕು ಎಂದೂ ಸೂಚನೆ ನೀಡಿದ್ದಾರೆ. ಅಲ್ಲದೆ, ರಾಜಕಾಲುವೆಯನ್ನು ಒತ್ತುವರಿ ಯಾಕೆ ಮಾಡಿಲ್ಲ..?, ರಾಜಕಾಲುವೆ ಮೇಲೆ ರಸ್ತೆ ಮಾಡಿದ್ದಾರೆ, ಬಿಲ್ಡಿಂಗ್ ಕಟ್ಟಿದ್ದಾರೆ. ದುಡ್ಡಿನ ವ್ಯವಹಾರ ಮಾಡಿಕೊಂಡು ಸುಮ್ಮನೆ ಆಗಿದೀರಾ ಎಂದು ಸಿಎಂ ಗರಂ ಆಗಿದ್ದಾರೆ. ಅಲ್ಲದೆ, ರಾಜಕಾಲುವೆ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಬೇಕು. ಒತ್ತುವರಿ ತೆರವು ಕೂಡಲೇ ಮಾಡಲೇಬೇಕು. ನಮ್ಮ ಸರ್ಕಾರ ಒತ್ತುವರಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಅಧಿಕಾರಿಗಳ ವಿರುದ್ಧ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ. 

ಬೆಂಗಳೂರು ಜಲಮಂಡಳಿ ಅಧಿಕಾರಿಗಳಿಗೆ ಸಿಎಂ ಕ್ಲಾಸ್

ತ್ಯಾಜ್ಯ ನಿರ್ವಹಣೆ ಘಟಕಗಳ ವಿಚಾರದಲ್ಲಿ ಜಲಮಂಡಳಿ ನಿರ್ಲಕ್ಷ್ಯ ತೋರುತ್ತಿದೆ. ತ್ಯಾಜ್ಯ ನೀರು ಎಲ್ಲಿಯೂ ಹೊರಗಡೆ ಬಾರದಂತೆ ನೋಡಿಕೊಳ್ಳಬೇಕು ಎಂದು ಜಲಮಂಡಳಿ ಅಧಿಕಾರಿಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚನೆ ಕೊಟ್ಟಿದ್ದಾರೆ. 

ಇನ್ನು, ರಾಜಕಾಲುವೆಗಳ ದುರಸ್ತಿಗೆ 1500 ಕೋಟಿ ನೀಡಿದ್ದೇವೆ. ಮಳೆ ನಿಂತ ನಂತರ ಕೆಲಸ ಆರಂಭ ಮಾಡುತ್ತೇವೆ. ಕಳೆದ ಸಿಟಿ ರೌಂಡ್ಸ್ ಪ್ರದೇಶಗಳಲ್ಲಿ ಹೇಳಿದ ಕೆಲಸ ಪ್ರಾರಂಭ ಮಾಡಿದೀವಿ. ಹಾಗೆ, ಯಾರೇ ಪ್ರಭಾವಿ ಇದ್ದರೂ ಒತ್ತುವರಿ‌ ತೆರವು ಮಾಡುತ್ತೇವೆ. ಈ ಮಧ್ಯೆ, ಬೆಂಗಳೂರಿನ ಕೆ.ಆರ್.ಪುರ, ಮಹಾಲಕ್ಷ್ಮೀ ಲೇಔಟ್, ಸಾಯಿಲೇಔಟ್‌ಗಳಲ್ಲಿ ಸಮಸ್ಯೆ ಮುಂದುವರೆದಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನಿಡಿದ ಸಿಎಂ ಬಸವರಾಜ ಬೊಮ್ಮಾಯಿ, ಅಲ್ಲೆಲ್ಲ ರೈಲ್ವೆ ಲೈನ್ ಇದೆ. ಹೀಗಾಗಿ ಅಲ್ಲಿ ಸಮಸ್ಯೆ ಬಗೆಹರಿದಿಲ್ಲ ಎಂದು ಸಿಟಿ ರೌಂಡ್ಸ್‌ ವೇಳೆ ಹೇಳಿದ್ದಾರೆ. 

ಹಲವು ಮಳೆ ಹಾನಿ ಪ್ರದೇಶಗಳಿಗೆ ಸಿಎಂ ಭೇಟಿ

ಮಳೆ ಹಾನಿ ಪ್ರದೇಶಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಭೇಟಿಯಾಗಿದ್ದು, ಈ ವೇಳೆ ವರ್ತೂರು ಕೆರೆ ಕೋಡಿ ಬಳಿ ತೆರಳಿದ್ದರು. ಸಿಎಂಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಶಾಸಕ ಅರವಿಂದ್ ಲಿಂಬಾವಳಿ, ಸಚಿವರಾದ ಭೈರತಿ ಬಸವರಾಜ್, ಅಶ್ವಥ್ ನಾರಾಯಣ್ ಸಾಥ್ ನೀಡಿದ್ದರು. ಹಾಗೂ, ಮಾರತ್ತಹಳ್ಳಿ ಮುನ್ನಕೊಳಲುಗೆ ಸಿಎಂ ಭೇಟಿ ನೀಡಿದ್ದು, ಶಾಂತಿನಿಕೇತನ ಲೇಔಟ್ ಮಳೆ ಅನಾಹುತ ಪ್ರದೇಶ ವೀಕ್ಷಣೆಯನ್ನೂ ಮಾಡಿದ್ದಾರೆ. ಜತೆಗೆ, ಇಕೋಸ್ಪೇಸ್ ಬಳಿ ಮಳೆಹಾನಿ ಪ್ರದೇಶ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ, ಕರಿಯಮ್ಮನ ಅಗ್ರಹಾರಕ್ಕೆ ಸಹ ಸಿಎಂ ಭೇಟಿ ನೀಡಿದ್ದರು. ಔಟರ್ ರಿಂಗ್ ರೋಡ್ ಮತ್ತು HALಗೆ ಸಂಪರ್ಕ ಕಲ್ಪಿಸುವ ರಸ್ತೆ ಕರಿಯಮ್ಮನ ಅಗ್ರಹಾರ ಆಗಿದ್ದು, ಬೆಳ್ಳಂದೂರು ಕೆರೆಯ ರಾಜಕಾಲುವೆ ಮತ್ತು ಯಮಲೂರು ರಾಜಕಾಲುವೆಗಳು ಒತ್ತುವರಿಯಿಂದಾಗಿ ಕರಿಯಮ್ಮನ ಅಗ್ರಹಾರ ರಸ್ತೆ ಸಂಪೂರ್ಣ ಜಲಾವೃತ ಆಗಿದೆ. ಸಾಕ್ರ ಆಸ್ಪತ್ರೆ, ಮಂತ್ರಿ ಅಪಾರ್ಟ್ಮೆಂಟ್ ಮತ್ತು ಪ್ರೆಸ್ಟಿಜ್ ಅಪಾರ್ಟ್ಮೆಂಟ್‌ಗಳಿರುವ ಪ್ರದೇಶ ಇದಾಗಿದೆ. 

ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತಿ ಹೆಚ್ಚು ಹಾನಿ

ಮಳೆ ಹಾನಿ ಪ್ರದೇಶಗಳ ವೀಕ್ಷಣೆ ಬಳಿಕ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಳೆದೊಂದು ವಾರದಿಂದ ಮಳೆ ಬರ್ತಿದೆ. ಮಹದೇವಪುರ, ಬೊಮ್ಮನಹಳ್ಳಿ ಭಾಗಗಳಲ್ಲಿ ಅತಿ ಹೆಚ್ಚು ಹಾನಿ, ಸಮಸ್ಯೆ ಆಗಿದೆ. ಈ ಭಾಗಗಳಲ್ಲಿ ಹೆಚ್ಚು ಕೆರೆಗಳಿರೋದಿಕ್ಕೆ ಹಾನಿಯಾಗಿದೆ. ನಿರಂತರ ಮಳೆಯಿಂದ ಕೆರೆಗಳು ತುಂಬಿ, ರಾಜಕಾಲುವೆಗಳಿಗೆ ಹರಿದಿದೆ. ಕೆರೆ ನೀರು, ಮಳೆ ನೀರು ಸೇರಿ‌ರಾಜಾಕಾಲುವೆ ಸಾಮರ್ಥ್ಯ ಮೀರಿ ಹರಿದು ಸಮಸ್ಯೆ ಆಗಿದೆ. ರಾಜಕಾಲುವೆ ಒತ್ತುವರಿಯಿಂದಲೂ ಸಮಸ್ಯೆ ಹೆಚ್ಚಾಗಿದೆ ಎಂದಿದ್ದಾರೆ. 

ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಕೊರತೆ

 ಇನ್ನೊಂದೆಡೆ, ಸರ್ಕಾರಿ ಇಲಾಖೆಗಳ ನಡುವೆ ಸಮನ್ವಯ ಕೊರತೆ ವಿಚಾರದ ಬಗ್ಗೆಯೂ ಸಿಟಿ ರೌಂಡ್ಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಇಲಾಖೆಗಳ ನಡುವೆ ಸಮನ್ವಯ ಕೊರತೆ ಇದೆ, ಹೀಗಾಗಿ ಬೆಂಗಳೂರಿನಲ್ಲಿ ಸಮಸ್ಯೆ ಆಗ್ತಿದೆ ಎಂದು ಸಮನ್ವಯ ಕಾಪಾಡಾದ ಅಧಿಕಾರಿಗಳ ವಿರುದ್ಧ ಬೊಮ್ಮಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

click me!