ಅರ್ಧ ಕೆಜಿ ಲಕ್ಕುಂಡಿ ನಿಧಿ, ಆದ್ರೆ ಇದೆಂಥಾ ವಿಧಿ? ಸರ್ಕಾರಕ್ಕೆ ನಿಧಿ ಕೊಟ್ಟು ಬೀದಿಗೆ ಬಿತ್ತಾ ಕುಟುಂಬ?

Published : Jan 14, 2026, 04:31 PM IST
Gadag Lakkundi Gold Treasure

ಸಾರಾಂಶ

ಲಕ್ಕುಂಡಿಯಲ್ಲಿ ಮನೆ ಅಡಿಪಾಯ ತೋಡುವಾಗ ಗಂಗವ್ವ, ಪ್ರಜ್ವಲ್ ಎಂಬ ತಾಯಿ-ಮಗನಿಗೆ ಚಿನ್ನಾಭರಣಗಳಿದ್ದ ಮಡಿಕೆಯೊಂದು ಸಿಕ್ಕಿದೆ. ಕೆಜಿಎಫ್ ಕಥೆಯಂತೆ ಆಸೆಪಡದೆ, ಪ್ರಾಮಾಣಿಕವಾಗಿ ಅದನ್ನು ಸರ್ಕಾರಕ್ಕೆ ಒಪ್ಪಿಸಿದ ಈ ಘಟನೆಯು, ಸಿಕ್ಕಿದ್ದು ನಿಧಿಯೋ ಅಥವಾ ಪೂರ್ವಜರ ಆಸ್ತಿಯೋ ಎಂಬ ಚರ್ಚೆಯನ್ನು ಹುಟ್ಟುಹಾಕಿದೆ.

ಬಾವಿ ತೋಡುವಾಗ ಸಿಕ್ಕ ಬಂಗಾರದ ವಿಷಯವನ್ನ ಗೌಪ್ಯವಾಗಿಟ್ಟು, ಅಲ್ಲಿ ಚಿನ್ನದ ಸಾಮ್ರಾಜ್ಯವನ್ನೇ ಸೂರ್ಯವರ್ದನ್ ಕಟ್ಟಿದ್ದ. ಈ ಮಧ್ಯೆ ತನ್ನ ತಾಯಿಗೆ ಕೊಟ್ಟಿದ್ದ ಮಾತೊಂದನ್ನ ಈಡೇರಿಸಕೊಳ್ಳೋಕೆ ಪಣ ತೊಟ್ಟಿದ್ದ ರಾಕಿ ಬಾಯಿ, ತನ್ನ ಸಾವಿನ ಜೊತೆಯಲ್ಲಿಯೂ ಚಿನ್ನವನ್ನ ತನ್ನೊಟ್ಟಿಗೆ ಇಟ್ಟುಕೊಂಡಿದ್ದ.

ಅಂದು ರಾಕಿಬಾಯಿ ತನ್ನ ತಾಯಿಗೆ ಕೊಟ್ಟಿದ್ದ ಮಾತು ಉಳಿಸಿಕೊಳ್ಳೋಕೆ ಚಿನ್ನದ ಸಾಮ್ರಾಜ್ಯವನ್ನೇ ಕಟ್ಟಿದ್ದ. ಆದ್ರೆ ಚಿನ್ನದ ಹಿಂದೆ ಹೋದವನ ಜೀವನ ಧಾರುಣವಾಗಿ ಅಂತ್ಯಕೊಂಡಿತ್ತು. ವೀಕ್ಷಕರೇ ಇದು ಕೆಜಿಎಫ್ ಸಿನಿಮಾ ಸ್ಟೋರಿ. ನಾವೀಗ ನಿಮಗೆ ತೋರಿಸೋಕೆ ಹೋಗ್ತಿರೊದು ಲಕ್ಕುಂಡಿ ರಹಸ್ಯದ ಕಥೆ. ಇಲ್ಲಿಯೂ ತಾಯಿ ಇದ್ದಾಳೆ. ಮಗ ಇದ್ದಾನೆ. ಚಿನ್ನವೂ ಇದೆ. ಆದ್ರೆ ಆ ಚಿನ್ನದ ಮೇಲೆ ಆಸೆ ಮಾತ್ರ ಇಲ್ಲ. ಸಿಕ್ಕ ಚಿನ್ನವನ್ನ ಸರ್ಕಾರಕ್ಕೆ ಕೊಟ್ಟವರ ಕಥೆಯಿದು. ಆದ್ರೆ ಆ ಚಿನ್ನ ನಿಧಿಯೋ? ಇವರ ಪೂರ್ವಜರ ಆಸ್ತಿಯೋ ಎನ್ನುವ ಗೊಂದಲ ಗೂಡಾಗಿರೋ ಸ್ಟೋರಿಯಿದು.

ಇದು ಆರಂಭವಾಗಿದ್ದು ಲಕ್ಕುಂಡಿಯಲ್ಲಿ. ಇದೊಂದು ಸಾಮಾನ್ಯ ಗ್ರಾಮವಲ್ಲ. ಐತಿಹಾಸಿಕ ಹಿನ್ನಲೆ ಹೊಂದಿರೋ ಊರು ಇದು. ದೇವಾಲಯಗಳ ಸ್ವರ್ಗ, ಶಿಲ್ಪ ಕಲೆಯ ತೊಟ್ಟಿಲು, ವಾಸ್ತು ಶಿಲ್ಪಕಲೆಗಳಿಗೆ ಹೆಸರುವಾಸಿಯಾಗಿರೋ ಪ್ರದೇಶವಿದು. 101 ದೇವಸ್ಥಾನ, 101 ಬಾವಿಗಳ ಐತಿಹಾಸಿಕ ಪ್ರತೀತಿ ಇರೋದು ಗ್ರಾಮವಿದು. ಕಲ್ಯಾಣಿ ಚಾಲುಕ್ಯರು, ರಾಷ್ಟ್ರಕೂಟರು, ಹೋಯ್ಸಳರು, ದಾನಚಿಂತಾಮಣಿ ಅತ್ತಿಮಬ್ಬೆಯ ಕರ್ಮಭೂಮಿಯಿದು. ಈ ಊರೂ ತನ್ನ ಐತಿಹಾಸಿಕ ಹಿನ್ನಲೆಯ ಕಾರಣಕ್ಕೇನೆ ಆಗಾಗ ಸದ್ದು, ಸುದ್ದಿಯಲ್ಲಿರುತ್ತೆ. ಮೊನ್ನೆ ಮೊನ್ನೆಯಷ್ಟೇ, ಅಂದ್ರೆ ಜನವರಿ 10ರಂದು ಕರುನಾಡಿನ ಕಣ್ಣು ಮತ್ತೆ ಲಕ್ಕುಂಡಿ ಗ್ರಾಮದ ಮೇಲೆ ಬಿದ್ದಿತ್ತು. ಅದೊಂದು ಮನೆಯ ಅಡಿಪಾಯ, ಅಲ್ಲಿ ಸಿಕ್ಕಿದ್ದ ಚಿನ್ನದ ನಿಧಿಯ ಮೇಲೆ ರಾಜ್ಯದ ಚಿತ್ತ ನೆಟ್ಟಿತ್ತು.

ಮಣ್ಣಿನಡಿಯಲ್ಲಿ ಸಿಕ್ಕಿತ್ತು ಮಡಿಕೆ ತುಂಬಾ ಬಂಗಾರ..!

ವೀಕ್ಷಕರೇ ಈಕೆ ಹೆಸರು ಗಂಗವ್ವ ರಿತ್ತಿ. ಈಕೆಯ ಮಗನೇ ಪ್ರಜ್ವಲ್. ತಾಯಿಗೆ ಮಗ, ಮಗನಿಗೆ ತಾಯಿ ಅಂತಿರೋ ಪುಟ್ಟ ಕುಟುಂಬವದು. ಹೊಸ ಮನೆಯೊಂದನ್ನ ಕಟ್ಬೇಕು ಅನ್ನೋದು ಇವರ ಆಸೆ. ಅದಕ್ಕಾಗಿಯೇ ಹೊಸ ನಿವಾಸ ಕಟ್ಟೋಕೆ ಅಂತ ಅಡಿಪಾಯ ತೆಗೆಯೋಕೆ ಆರಂಭಿಸಿದ್ರು. ಪುಟ್ಟ ಮನೆ, ಅದಕ್ಕೊಂದು ಅಡಿಪಾಯ ಅಂದ್ರೆ ಸುಮಾರು ನಾಲ್ಕೈದು ಅಡಿ ಅಡಿಪಾಯ ತೆಗೆಬೇಕು. ಆ ಕಾರ್ಯದಲ್ಲಿಯೇ ಪ್ರಜ್ವಲ್ ಹಾಗೂ ಗಂಗವ್ವ ರಿತ್ತಿ ನಿರತರಾಗಿದ್ದ ಹೊತ್ತಲ್ಲಿಯೇ ಪ್ರಜ್ವಲ್‌ಗೆ ಒಂದು ಮಡಿಕೆ ಸಿಕ್ಕಿತ್ತು.

ನಾಲ್ಕೈದು ಅಡಿ ಆಳದಲ್ಲಿ ಸಿಕ್ಕ ಮಡಿಕೆಯನ್ನ ಕಂಡು ಅಮ್ಮ-ಮಗ ಇಬ್ಬರೂ ಆಶ್ಚರ್ಯಗೊಂಡರು. ಏನಿದು ಮಡಿಕೆ? ಇದು ಇಲ್ಯಾಕೆ ಇತ್ತು? ಇದ್ರಲ್ಲಿ ಏನಿದೆ? ಹೀಗೆ ನೂರಾರು ಪ್ರಶ್ನೆಗಳು ಅವರನ್ನ ಕಾಡೋದಿಕ್ಕೆ ಶುರು ಮಾಡಿದ್ವು. ಕುತೂಹಲವನ್ನ ತಡೆಯೋಕೆ ಸಾಧ್ಯವಾಗಲಿಲ್ಲ. ಜಾಗರೂಕತೆಯಿಂದ ಪ್ರಜ್ವಲ್ ಆ ಮಣ್ಣಿನ ಮಡಿಕೆಯನ್ನ ಹೊರತೆಗೆದಿದ್ದ. ಅಷ್ಟೇ. ತಾಯಿ-ಮಗ ಇಬ್ಬರಿಗೂ ಖುಷಿ, ಸಂತೋಷ, ಆತಂಕ, ಗಾಬರಿ, ಭಯ ಎಲ್ಲಾ ಭಾವನೆಗಳು ಒಂದೇ ಬಾರಿ ಮನದಲ್ಲಿ ಮೂಡಿದ್ವು. ಯಾಕೆಂದ್ರೆ ಮಣ್ಣಿನಾಳದಲ್ಲಿ ಸಿಕ್ಕಿದ್ದ ಆ ಮಡಿಕೆಯ ತುಂಬಾ ಇದ್ದದ್ದ ಬೆಲೆಕಟ್ಟಲಾಗದ ಬಂಗಾರದ ವಸ್ತುಗಳು.

ಚಿನ್ನದ ಬೆಲೆ ಗಗನಕ್ಕೇ ಏರ್ತಾಯಿದೆ. ಜನಸಾಮಾನ್ಯರು ಚಿನ್ನ ಕೊಂಡುಕೊಳ್ಳೋಕೆ ಸಾಧ್ಯವೇ ಇಲ್ಲ ಎನ್ನುವಂತಹ ಪರಿಸ್ಥಿತಿ ಸದ್ಯಕ್ಕಿದೆ. ದಿನ ದಿನಕ್ಕೂ ಬಡವರಿಂದ ದೂರ ದೂರ ಹೋಗ್ತಲೇ ಇದೆ ಬಂಗಾರ. ಇಂಥಹ ಹೊತ್ತಲ್ಲಿ ಒಂದು ಸಾಮಾನ್ಯ ಕುಟುಂಬಕ್ಕೆ ಒಂದು ಮಡಿಕೆ ತುಂಬಾ ಚಿನ್ನ ಸಿಕ್ಕಿತ್ತು. ಇದೇ ರೀತಿಯ ಬೇರೆ ಯಾರಿಗಾದ್ರೂ ಬಂಗಾರ ಸಿಕ್ಕಿದ್ರೆ, ಬಹುತೇಕರು ಆ ವಿಷಯವನ್ನ ತಮ್ಮಲ್ಲಿಯೇ ಗೌಪ್ಯವಾಗಿಡ್ಕೊಂಡು, ಅದನ್ನ ಮಾರಿ ಲಾಭ ಮಾಡಿಕೊಳ್ತಿದ್ರು. ಆದ್ರೆ, ಗಂಗವ್ವ ಹಾಗೂ ಆಕೆಯ ಮಗ ಪ್ರಜ್ವಲ್ ಈ ಹಾಗೆ ಮಾಡಲಿಲ್ಲ. ಇದು ನಿಧಿಯ ರೀತಿ ಕಾಣಿಸ್ತಿದೆ. ಈ ವಿಚಾರವನ್ನ ಬಹಿರಂಗಗೊಳಿಸದೇ ಹೋದ್ರೆ ತಪ್ಪಾಗುತ್ತೆ ಅಂತ್ಹೇಳಿ ಈ ವಿಚಾರವನ್ನ ಗ್ರಾಮಪಂಚಾಯಿತಿ ಸದಸ್ಯರೊಬ್ಬರಿಗೆ ಮುಟ್ಟಿಸ್ತಾರೆ.

ಸರ್ಕಾರ ಅಲರ್ಟ್ ಸ್ಥಳಕ್ಕೆ ದೌಡಾಯಿಸಿದ್ದರು ಅಧಿಕಾರಿಗಳು..!

ಗಂಗವ್ವ ಅವರ ಮನೆಯಲ್ಲಿ ಚಿನ್ನ ಸಿಕ್ಕಿರೊ ವಿಚಾರವನ್ನ ಗ್ರಾಮ ಪಂಚಾಯಿತಿ ಸದಸ್ಯರು, ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಪಾಟೀಲ್ ಅವರಿಗೆ ಫೋನ್ ಮಾಡಿ ವಿಷಯ ಮುಟ್ಟಿಸ್ತಾರೆ. ಅವರ ತಡ ಮಾಡದೇ ನಿಧಿ ಸಿಕ್ಕಿರೋ ಸಂಗತಿಯನ್ನ ಹೆಚ್.ಕೆ.ಪಾಟೀಲ್ ಅವರ ಗಮನಕ್ಕೆ ತರ್ತಾರೆ. ಅವರು ಕೂಡ ಕೂಡಲೇ ಅಲರ್ಟ್ ಆಗಿ, ಈ ವಿಚಾರವನ್ನ ಸ್ಥಳೀಯ ಎಸ್ಪಿ ಹಾಗೂ ಡಿಸಿ ಗಮನಕ್ಕೆ ತಂದು, ಕಾನೂನು ಪ್ರಕಾರ ಮುಂದೆ ಯಾವೆಲ್ಲಾ ಪ್ರಕ್ರಿಯೆಗಳನ್ನ ಮಾಡ್ಬೇಕೋ ಅದನ್ನ ಆರಂಭಿಸಿ ಅನ್ನೋ ಸೂಚನೆ ಕೊಡ್ತಾರೆ. ಇಷ್ಟೊತ್ತಿಗಾಗಲೇ ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿದೆ ಅನ್ನೋ ವಿಚಾರ ಕಾಡ್ಗಿಚ್ಚಿನಂತೆ ಕರುನಾಡನ್ನ ವ್ಯಾಪಿಸಿಯಾಗಿತ್ತು.

ಲಕ್ಕುಂಡಿಯಲ್ಲಿ ನಿಧಿ ಸಿಕ್ಕಿರೋ ಸಂಗತಿ ಸರ್ಕಾರವನ್ನ ಮುಟ್ಟುತ್ತಾ ಇದ್ಹಾಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಅಲರ್ಟ್ ಆಗಿದ್ರು. ತಕ್ಷಣವೇ ಅಲಿನ ಎಸ್ಪಿ ರೋಹನ್ ಜಗದೀಶ್ ಸೇರಿದಂತೆ ಹತ್ತಾರು ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ, ಪ್ರೊಸೀಜರ್ ಪ್ರಕಾರ ಆ ಸ್ಥಳದಲ್ಲಿ ಮತ್ತೊಂದಿಷ್ಟು ಪರಿಶೀಲನೆಯನ್ನ ನಡೆಸಿ, ಪ್ರಜ್ವಲ್ ಹಾಗೂ ಗಂಗವ್ವ ಅವರಿಗೆ ಸಿಕ್ಕಿದ್ದ ನಿಧಿಯಿದ್ದ ಮಡಿಕೆಯನ್ನ ತಮ್ಮ ವಶಕ್ಕೆ ಪಡೆದುಕೊಳ್ತಾರೆ.

ಮಡಿಕೆಯಲ್ಲಿತ್ತು 470 ಗ್ರಾಂ ಚಿನ್ನದ ಆಭರಣಗಳು..!

ಲಕ್ಕುಂಡಿ ಗ್ರಾಮದ ಗಂಗವ್ವ ಮನೆಯ ಅಡಿಪಾಯದಲ್ಲಿ ಸಿಕ್ಕಿದ್ದು ಬರೋಬ್ಬರಿ 470 ಗ್ರಾಂ ತೂಕದ ಚಿನ್ನದ ಆಭರಣಗಳು. ಅಲ್ಲಿ ಕೈ ಖಡಗ ಇತ್ತು. ಹಾರ ಇತ್ತು,ಕುತ್ತಿಗೆ ಸರ, ಬಂಗಾರದ ಗುಂಡುಗಳು, ಕಿವಿ ಓಲೆ, ನಾಗಮುದ್ರೆಗಳು, ಸರಗಳು, ಬಳೆ, ಕಾಲ್ಗೆಜ್ಜೆ, ಬಿಲ್ಲೆಗಳು ಉಂಗುರ ಸೇರಿದಂತೆ ಒಟ್ಟು 22 ಬಗೆಯ ಆಭರಣಗಳು ಆ ಮಡಿಕೆಯಲ್ಲಿದ್ದವು.

ಲಕ್ಕುಂಡಿಯಲ್ಲಿ ಸಿಕ್ಕಿರೋದು ನಿಧಿಯಾ? ಅಥವಾ ಪೂರ್ವಜರ ಆಸ್ತಿಯಾ? ಯಾವುದನ್ನ ನಿಧಿ ಎನ್ನಲಾಗುತ್ತೆ? ಯಾವುದನ್ನ ಪೂರ್ವಜರ ಆಸ್ತಿಯೆಂದು ಪರಿಗಣಿಸಲಾಗುತ್ತೆ? ಈ ಪ್ರಶ್ನೆಗಳಿಗೆ ಸೂಕ್ತ ಉತ್ತರವಿಲ್ಲದೇ ಗೊಂದಲದ ಗೂಡಾಗಿತ್ತು ಲಕ್ಕುಂಡಿ. ಕಡೆಗೂ ಅಲ್ಲಿನ ಗೊಂದಲವನ್ನ ಬಗೆಹರಿಸಾಗಿದೆ. ನಿಧಿಯನ್ನ ಒಪ್ಪಿಸಿದ ಕುಟುಂಬಕ್ಕೆ ಸೂಕ್ತ ಪರಿಹಾರ ಭರವಸೆ ನೀಡಲಾಗಿದೆ.

ಲಕ್ಕುಂಡಿ ಗ್ರಾಮಸ್ಥರು ಇದೀಗ ಮತ್ತೊಂದು ಹೊಸ ಬೇಡಿಕೆಯನ್ನ ಸರ್ಕಾರದ ಮುಂದಿಡ್ತಾಯಿದ್ದಾರೆ. ಹಾಗಿದ್ರೆ ಅವರ ಬೇಡಿಕೆಯೇನು..? ಸರ್ಕಾರದಿಂದ ಆ ಜನರು ಬಯಸ್ತಾ ಇರೋದೇನು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ ನೋಡಿ.

PREV
Read more Articles on
click me!

Recommended Stories

ಒಣಬೇಸಾಯ ಜಾಗದಲ್ಲಿ ಡ್ರ್ಯಾಗನ್ ಫ್ರುಟ್ ಬೆಳೆದು ಯಶಸ್ವಿಯಾದ ಪದವೀಧರೆ; 10 ಟನ್‌ಗೂ ಅಧಿಕ ಇಳುವರಿ
ಗದಗ: ಅಪಾರ ಸಸ್ಯ ಸಂಪತ್ತು, ಚಿನ್ನದ ನಿಕ್ಷೇಪ ಇರುವ ಕಪ್ಪತ್ತಗುಡ್ಡದ ಸಂರಕ್ಷಣೆಯ ಕೂಗು