Astrology Tips: ಬೆಕ್ಕಿಗ್ಯಾಕಿಲ್ಲ ಪೂಜೆ… ಅದು ಯಾರ ವಾಹನ?

By Suvarna NewsFirst Published May 24, 2023, 2:31 PM IST
Highlights

ಬೆಕ್ಕು ದಾರಿ ದಾಟಿದ್ದು ಕಣ್ಣಿಗೆ ಬಿದ್ರೆ ಅಪಶಕುನವೆಂದು ಮನೆಗೆ ವಾಪಸ್ ಬರುವವರಿದ್ದಾರೆ. ಬೆಕ್ಕನ್ನು ಅಮಂಗಳವೆಂದೇ ನಂಬಲಾಗಿದೆ. ಅಷ್ಟಕ್ಕೂ ಈ ಬೆಕ್ಕಿಗೆ ಈ ಸ್ಥಿತಿ ಬರಲು ಕಾರಣವೇನು ಎಂಬ ವಿವರ ಇಲ್ಲಿದೆ.
 

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳನ್ನು ಮಾತ್ರವಲ್ಲ ಅವರ ವಾಹನಕ್ಕೂ ಪೂಜೆ ನಡೆಯುತ್ತದೆ. ಪ್ರತಿಯೊಬ್ಬ ದೇವರಿಗೂ ಒಂದೊಂದು ವಾಹನವಿದೆ. ಗಣೇಶ ಇಲಿಯ ಮೇಲೆ ಸವಾರಿ ಮಾಡಿದ್ರೆ ಈಶ್ವರ ನಂದಿಯನ್ನು ವಾಹನ ಮಾಡಿಕೊಂಡಿದ್ದಾನೆ. ಇದೇ ರೀತಿ ಎಲ್ಲ ದೇವಾನುದೇವತೆಗಳು ಪಕ್ಷಿ ಹಾಗೂ ಪ್ರಾಣಿಯನ್ನು ತಮ್ಮ ವಾಹನ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಸಾಕುವ ಬೆಕ್ಕಿಗೆ ಮಾತ್ರ ದೇವರ ವಾಹನವಾಗುವ ಭಾಗ್ಯವಿಲ್ಲ. ಬೆಕ್ಕು ಯಾವುದೇ ದೇವರ ವಾಹನವಾಗಿ ಪೂಜಿಸಲ್ಪಡುವುದಿಲ್ಲ. ಬೆಕ್ಕನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ನಾವಿಂದು ಬೆಕ್ಕು ಯಾರ ವಾಹನ, ಹಾಗೆ ಅದಕ್ಕೆ ಅಮಂಗಳ ಸ್ಥಾನ ಸಿಗಲು ಕಾರಣವೇನು ಎಂಬುದನ್ನು ಹೇಳ್ತೇವೆ.

ಕೆಲ ದೇಶಗಳಲ್ಲಿ, ಸಂಸ್ಕೃತಿ (Culture) ಯಲ್ಲಿ ಬೆಕ್ಕ (Cat) ನ್ನು ಶುಭವೆಂದು ನಂಬಲಾಗುತ್ತದೆ. ಮನೆಯಲ್ಲಿ ಶುಭ ಸಂಕೇತವಾಗಿ ಬೆಕ್ಕನ್ನು ಸಾಕುತ್ತಾರೆ. ಭಾರತೀಯ (Indian) ಸಂಸ್ಕೃತಿಯಲ್ಲಿ ಮಾತ್ರ ಬೆಕ್ಕನ್ನು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ.

ಮನೆಗೆ ಬೆಕ್ಕು ಬಂದು ಸೇರಿಕೊಂಡರೆ ಏನರ್ಥ? ಧರ್ಮಗ್ರಂಥಗಳು ಹೇಳುವುದೇನು?

ಬೆಕ್ಕು ಯಾರ ವಾಹನ (Vehicle) ? : ಮೊದಲೇ ಹೇಳಿದಂತೆ ಯಾವುದೇ ದೇವರು ಅಥವಾ ದೇವತೆಯ ವಾಹನ ಬೆಕ್ಕಲ್ಲ. ಅದು ಅಲಕ್ಷ್ಮಿಯ ವಾಹನ. ಪುರಾಣಗಳ ಪ್ರಕಾರ, ಸಾಗರ ಮಂಥನದ ಸಮಯದಲ್ಲಿ, ಲಕ್ಷ್ಮಿ ದೇವಿಯ ಮುಂದೆ, ಅವಳ ಅಕ್ಕ ಅಲಕ್ಷ್ಮಿ ಅಂದರೆ ದರಿದ್ರ ಲಕ್ಷ್ಮಿ ಅವತಾರವೆತ್ತಿದಳು. ಅವಳು, ಸಮುದ್ರದಿಂದ ದ್ರಾಕ್ಷಾರಸದೊಂದಿಗೆ ಹೊರಬಂದಿದ್ದರಿಂದ ಅವಳು ರಾಕ್ಷಸ ಶಕ್ತಿಗಳ ಆಶ್ರಯವನ್ನು ಕಂಡುಕೊಂಡಳು. ಆದರೆ ಲಕ್ಷ್ಮಿ ದೇವಿಯು ಭಗವಂತ ವಿಷ್ಣುವಿನ ಆಶ್ರಯವನ್ನು ಕೋರಿದಳು. ಹಾಗಾಗಿ ಅಲಕ್ಷ್ಮಿಯನ್ನು ಅನರ್ಹವೆಂದು ಪರಿಗಣಿಸಲಾಯಿತು. ಲಕ್ಷ್ಮಿಯನ್ನು ಸಂಪತ್ತಿನ ದೇವತೆಯಾಗಿ ಪೂಜಿಸಲಾಯಿತು. ಆ ಸಮಯದಲ್ಲಿ ಬೆಕ್ಕನ್ನು ಅಲಕ್ಷ್ಮಿಯ ವಾಹನವೆಂದು ಪರಿಗಣಿಸಲಾಯ್ತು. ಅದು ಯಾವುದೇ ದೇವತೆಯ ಸವಾರಿಯಾಗದಂತೆ ಶಾಪಗ್ರಸ್ತವಾಯ್ತು. ಅಲಕ್ಷ್ಮಿಯ ವಾಹನವಾಗಿರುವುದರಿಂದ ಮನೆಯಲ್ಲಿ ಬೆಕ್ಕಿನ ಆಗಮನವನ್ನು ಕೆಟ್ಟ ಶಕುನವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಬೆಕ್ಕನ್ನು ಸಾಕುವುದು ಕೂಡ ಅಶುಭವೆಂದು ಕೆಲವರು ನಂಬುತ್ತಾರೆ. 

ಸೃಷ್ಟಿಯನ್ನು ರಕ್ಷಿಸಲು ಭಗವಾನ್ ವಿಷ್ಣು ಮಾಡಿದ ತಂತ್ರಗಳೇನು?

ಬೆಕ್ಕು ರಾಹುವಿನ ವಾಹನ  : ಇನ್ನೊಂದು ಕಡೆ ಬೆಕ್ಕನ್ನು ರಾಹುವಿನ ವಾಹನ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದಲ್ಲಿ  ರಾಹುವನ್ನು ಅಶುಭ ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಯಾವಾಗಲೂ ಜೀವನದಲ್ಲಿ ಸಮಸ್ಯೆಗಳನ್ನು ತರುತ್ತಾನೆ.  ಅದಕ್ಕಾಗಿಯೇ ಬೆಕ್ಕನ್ನು ಸಹ ಅಶುಭವೆಂದು ಪರಿಗಣಿಸಲಾಗುತ್ತದೆ. ರಾಹು ಯಾವಾಗಲೂ ನೆರಳು ಗ್ರಹಗಳು ಮತ್ತು ಅಸುರ ಶಕ್ತಿಗಳೊಂದಿಗೆ ಸಂಬಂಧ ಹೊಂದಿದ್ದಾನೆ. ರಾಹು ಸಮುದ್ರ ಮಂಥನದಲ್ಲಿ ಅಮೃತಕ್ಕಾಗಿ ದೇವಾನುದೇವತೆಗಳು ಮತ್ತು ಅಸುರರ ನಡುವೆ ನಡೆದ ಹೋರಾಟದ ನಂತರ ಹುಟ್ಟಿಕೊಂಡ. ಆತನ ವಾಹನ ಬೆಕ್ಕಾಗಿರುವ ಕಾರಣ ಅದಕ್ಕೆ ಅಶುಭ ಹಣೆಪಟ್ಟಿ ಸಿಕ್ಕಿದೆ.

ಬೆಕ್ಕಿನ ಬಗೆಗಿರುವ ನಂಬಿಕೆ  : ರಾಹು, ದುರ್ಘಟನೆಗಳಿಗೆ ಕಾರಣವಾಗ್ತಾನೆ. ಹಾಗಾಗಿಯೇ ಬೆಕ್ಕು ರಸ್ತೆ ದಾಟಿದ್ರೆ ಅದು ಅಶುಭವೆಂದು ಜನರು ನಂಬುತ್ತಾರೆ. ಇದ್ರಿಂದ ದುರ್ಘಟನೆ ಸಂಭವಿಸಬಹುದೆಂದು ಜನರು ಭಯಗೊಳ್ತಾರೆ. ಕಪ್ಪು ಬಣ್ಣವನ್ನು ಶನಿಯೆಂದು ನಂಬಲಾಗಿದೆ. ಶನಿ, ಕರ್ಮಕ್ಕೆ ತಕ್ಕಂತೆ ಶಿಕ್ಷೆ ನೀಡುತ್ತಾನೆ. ಇದೇ ಕಾರಣಕ್ಕೆ ಕಪ್ಪು ಬೆಕ್ಕನ್ನು ಮತ್ತಷ್ಟು ಅಶುಭವೆಂದು ಪರಿಗಣಿಸಲಾಗುತ್ತದೆ.  ಇಷ್ಟೇ ಅಲ್ಲ ಬೆಕ್ಕು ಅಳುವುದು ಕೂಡ ಕೆಟ್ಟ ಶಕುನವೆಂದೇ ಪರಿಗಣಿಸಲಾಗಿದೆ. ಬೆಕ್ಕು ಎಲ್ಲೆಲ್ಲಿ ಅಳುತ್ತದೆಯೋ ಅಲ್ಲಿ ಯಾವುದೋ ಅಶುಭ ಘಟನೆ ನಡೆಯುತ್ತೆ ಎಂದು  ನಂಬಲಾಗಿದೆ. ಯಾವುದಾದರೂ ಶುಭ ಕಾರ್ಯಕ್ಕೆ ಹೊರಡುವಾಗ ಬೆಕ್ಕು ಕಣ್ಣಿಗೆ ಬಿದ್ರೆ ಕೆಲಸದಲ್ಲಿ ಯಶಸ್ಸು ಸಿಗೋದಿಲ್ಲ ಎನ್ನಲಾಗುತ್ತದೆ.

ಈ ಬಗ್ಗೆ ವಿಜ್ಞಾನ ಹೇಳೋದೇನು? : ಬೆಕ್ಕು ಅಶುಭ ಎನ್ನಲು ವಿಜ್ಞಾನದಲ್ಲಿ ಯಾವುದೇ ಕಾರಣವಿಲ್ಲ. ನೈರ್ಮಲ್ಯದ ವಿಷ್ಯದಲ್ಲಿ ಬೆಕ್ಕನ್ನು ದೂರವಿಡುವಂತೆ ಸಲಹೆ ನೀಡಲಾಗುತ್ತದೆ. ಬೆಕ್ಕು ಸಣ್ಣ ಪ್ರಾಣಿ ಮತ್ತು ಇಲಿಗಳನ್ನು ತಿನ್ನುತ್ತದೆ. ಅವುಗಳ ಮೂಲಕ ರೋಗಗಳು ಹರಡುವ ಅಪಾಯವಿದೆ. ಬೆಕ್ಕನ್ನು ಅನೈರ್ಮಲ್ಯವೆಂದು ಪರಿಗಣಿಸಲಾಗುತ್ತದೆ. 

click me!