ಗುಣಪಡಿಸಲಾಗದ ಕಾಯಿಲೆಗಳನ್ನೂ ಹೇಳಹೆಸರಿಲ್ಲದಂತೆ ಮಾಡುವ ಅಶ್ವಿನಿ ಕುಮಾರರು!

By Suvarna NewsFirst Published Dec 21, 2022, 1:24 PM IST
Highlights

ಹಿಂದೂ ಧರ್ಮದಲ್ಲಿ ದೇವಾನುದೇವತೆಗಳ ವೈದ್ಯರೆಂದು ಪರಿಗಣಿಸಲ್ಪಟ್ಟಿರುವ ಅಶ್ವಿನಿ ಕುಮಾರರು ಯಾರು, ಅವರ ಕತೆಯೇನು? ದೇವರಿಗೇ ವೈದ್ಯ ಮಾಡುವ ಅವರ ಶಕ್ತಿ ಎಂಥದ್ದು?

ಹಿಂದೂ ಧರ್ಮದಲ್ಲಿ 33 ಕೋಟಿ ದೇವತೆಗಳ ಉಲ್ಲೇಖವಿದೆ. ಈ ದೇವತೆಗಳಲ್ಲಿಬ್ಬರು ಅಶ್ವಿನಿ ಕುಮಾರರು. ಅವರು ದೇವಾನುದೇವತೆಗಳಿಗೇ ವೈದ್ಯರು. ಮಾನವರಿಗೆ ಮಾತ್ರವಲ್ಲದೆ ದೇವತೆಗಳಿಗೂ ಆರೋಗ್ಯವನ್ನು ನೀಡುವ ಮತ್ತು ಆಯುರ್ವೇದದಲ್ಲಿ ಎಲ್ಲಾ ರೋಗಗಳನ್ನು ಗುಣಪಡಿಸುವ ಶಕ್ತಿ ಅಶ್ವಿನಿ ಕುಮಾರರದ್ದು. ಅವರು ಸೂರ್ಯೋದಯ ಹಾಗು ಸೂರ್ಯಾಸ್ತದ ಹೊಳಪನ್ನು ಸಂಕೇತಿಸುತ್ತಾರೆ. ಈ ವೈದ್ಯ ದೇವತೆಗಳು ಯಾರು? ಅವರ ಕತೆಯೇನು? ಆರೋಗ್ಯವನ್ನು ಕರುಣಿಸುವ ಅವರ ಶಕ್ತಿ ಎಲ್ಲಿಂದ ಬಂದಿದೆ ಎಂದು ನಿಮಗೆ ತಿಳಿದಿದೆಯೇ? 

ಅಶ್ವಿನಿ ಕುಮಾರರು ಯಾರು?
ಸೂರ್ಯದೇವ ಹಾಗೂ ಪತ್ನಿ ಸರಣ್ಯುವಿನ (ಸಂಜ್ಞಾ) ಅವಳಿ ಜವಳಿ ಸಹೋದರರು ಅಶ್ವಿನಿ ಕುಮಾರರು. ವಾಸ್ತವವಾಗಿ ಅವರ ಹೆಸರುಗಳು ನಾಸತ್ಯ ಮತ್ತು ದಸ್ತ್ರ. 
ಪತಿಯಾದ ಸೂರ್ಯನ ಶಾಖವನ್ನು ಸಹಿಸಲಾರದ ಸರಣ್ಯು ಹಿಮಾಲಯದ ಪರ್ವತಗಳತ್ತ ತೆರಳಿ ಯಾರಿಗೂ ಗುರುತು ಸಿಗದ ಹಾಗೆ ಕುದುರೆಯ ರೂಪದಲ್ಲಿ ಓಡಾಡತೊಡಗುತ್ತಾಳೆ. ಕೆಲವು ದಿನಗಳಾದರೂ ಪತ್ನಿಯು ಕಾಣಿಸದಿರಲು, ಅವಳನ್ನು ಹುಡುಕಲು ಶುರು ಮಾಡಿದ ಸೂರ್ಯನಿಗೆ ಹಿಮಾಲಯದ ಕಾಡಿನಲ್ಲಿ ಕುದುರೆಯ ರೂಪದಲ್ಲಿದ್ದ ಪತ್ನಿ ಕಾಣಿಸುತ್ತಾಳೆ. ಆಗ ತಾನೂ ಕುದುರೆಯ ರೂಪ ಧರಿಸಿ ಅವಳ ಬಳಿ ಸೂರ್ಯ ತೆರಳುತ್ತಾನೆ. ಅವರಿಬ್ಬರ ಮಿಲನದ ಸಂಕೇತವಾಗಿ ಜನಿಸಿದವರೇ ಅಶ್ವಿನಿ ಕುಮಾರರು. ಈ ಅವಳಿ ಮಕ್ಕಳಲ್ಲಿ 'ನಸತ್ಯ' ಆಯುರ್ವೇದ ನಿಪುಣನಾದರೆ, 'ದರ್ಸ' ಔಷಧೀಯ ಪಂಡಿತ.

Lord Ganesha's head: ಕತ್ತರಿಸಿದ ಗಣೇಶನ ತಲೆ ಏನಾಯಿತು?

ಇವರು ಮಾನವ ದೇಹ ಹಾಗೂ ಕುದುರೆಯ ಮುಖ ಹೊಂದಿರುವ ಕಾರಣಕ್ಕೆ ಅವರಿಗೆ ಅಶ್ವ ಅಂದರೆ ಕುದುರೆ- ಎಂಬಾರ್ಥದಲ್ಲಿ ಅಶ್ವನಿ ಕುಮಾರರು ಎನ್ನಲಾಗುತ್ತದೆ. ಧಾರ್ಮಿಕ ಗ್ರಂಥಗಳಲ್ಲಿ, ಅವರನ್ನು ದೇವರುಗಳ ವೈದ್ಯ ಎಂದು ಪರಿಗಣಿಸಲಾಗಿದೆ. ಅಶ್ವನಿ ಕುಮಾರರು ಅವರು ವೇದ ಕಾಲದ ಆಯುರ್ವೇದದ ಶ್ರೇಷ್ಠ ವಿದ್ವಾಂಸರೆಂದೇ ಪ್ರಸಿದ್ಧರಾಗಿದ್ದಾರೆ. ಅಶ್ವಿನಿ ಕುಮಾರರಿಗೆ ಅತ್ಯಂತ ಭಯಾನಕ ಮತ್ತು ಗುಣಪಡಿಸಲಾಗದ ಕಾಯಿಲೆಗಳನ್ನು ಸಹ ಗುಣಪಡಿಸುವ ಸಾಮರ್ಥ್ಯವಿದೆ.

ಪುರಾಣಗಳ ಪ್ರಕಾರ, ದೇವತೆಗಳು ಯುದ್ಧದಲ್ಲಿ ಅಸುರರ ಆಯುಧಗಳಿಂದ ಭೀಕರವಾಗಿ ಗಾಯಗೊಂಡಾಗ, ಅಶ್ವಿನಿ ಕುಮಾರರ ಔಷಧವು ದೇವತೆಗಳ ಆರೋಗ್ಯವನ್ನು ಪುನಃಸ್ಥಾಪಿಸುವ ಏಕೈಕ ಪರಿಹಾರವೆಂದು ಪರಿಗಣಿಸಲಾಗಿದೆ. ಒಮ್ಮೆ ಋಷಿ ದಧೀಚಿಯ ತಲೆಯನ್ನು ಕತ್ತರಿಸಿದಾಗ, ಅಶ್ವಿನಿ ಕುಮಾರರು ತಮ್ಮ ಆಯುರ್ವೇದ ಜ್ಞಾನದಿಂದ ಅವರ ತಲೆಯನ್ನು ಅವರ ಮುಂಡಕ್ಕೆ ಮರು ಜೋಡಿಸಿದರು.
ಮಹಾಭಾರತದಲ್ಲಿ ಈ ಅಶ್ವನಿ ಕುಮಾರರಿಂದ ಕುಂತಿಗೆ ನಕುಲ ಹಾಗೂ ಸಹದೇವ ಜನಿಸುತ್ತಾರೆ. 

ಶಿಕ್ಷಣ ಮತ್ತು ಜ್ಞಾನವನ್ನು ಯಾರಿಂದ ಪಡೆದರು?
ದಂತಕಥೆಯ ಪ್ರಕಾರ, ಅಶ್ವಿನಿ ಕುಮಾರರು ದಕ್ಷ ಪ್ರಜಾಪತಿಯಿಂದ ಆಯುರ್ವೇದದ ಶಿಕ್ಷಣ ಮತ್ತು ಎಲ್ಲಾ ಜ್ಞಾನವನ್ನು ಪಡೆದರು. ವೈದ್ಯಶಾಸ್ತ್ರದ ಮೊದಲ ಜ್ಞಾನವನ್ನು ಅಶ್ವಿನಿ ಕುಮಾರರು ಮಾತ್ರ ಪಡೆದರು.
ನಂತರ ಔಷಧ ಮತ್ತು ಆಯುರ್ವೇದಕ್ಕೆ ಸಂಬಂಧಿಸಿದ ಪ್ರತಿಯೊಂದು ಮಾಹಿತಿಯನ್ನು ಧನ್ವಂತರಿ ಭಗವಾನ್ ಅಂದರೆ ಕುಬೇರನಿಗೆ ತಿಳಿಸಲಾಯಿತು.  ಅಷ್ಟೇ ಅಲ್ಲ, ಅಶ್ವಿನಿ ಕುಮಾರರು ಮಹರ್ಷಿ ದಧೀಚಿಯವರಿಂದ ಬ್ರಹ್ಮವಿದ್ಯೆಯ ಉಪದೇಶವನ್ನೂ ಪಡೆದಿದ್ದರು. ಅದರ ನಂತರ ಅವರು ಆಯುರ್ವೇದದಲ್ಲಿ ಮಂತ್ರಗಳಿಗೆ ಸ್ಥಾನ ನೀಡಿದರು.
ಈ ಕಾರಣಕ್ಕಾಗಿ ಇಂದಿಗೂ ಆಯುರ್ವೇದದಲ್ಲಿ ಮಂತ್ರಗಳ ಮೂಲಕ ರೋಗಗಳನ್ನು ಗುಣಪಡಿಸಲು ಸಾಧ್ಯವೆಂದು ಪರಿಗಣಿಸಲಾಗಿದೆ. ಅಶ್ವಿನ್ ಕುಮಾರ್ ಅವರು ಆಯುರ್ವೇದದ ಆಧಾರವೆಂದು ಪರಿಗಣಿಸಲಾದ 'ಅಶ್ವಿನಿಕುಮಾರ ಸಂಹಿತೆ' ರಚಿಸಿದ್ದರು.

ಹಿಂದೂ ಧರ್ಮದ ಐದು ಶಕ್ತಿಯುತ ಹಾವುಗಳು ಇವೇ ನೋಡಿ..

ಕುರುಡುತನ ನಿವಾರಣೆ
ಅಶ್ವಿನಿ ಕುಮಾರರನ್ನು ನೇತ್ರದಾತರು ಎಂದೂ ಕರೆಯುತ್ತಾರೆ, ಇದರ ಉದಾಹರಣೆಯೆಂದರೆ ರಾಜ ಶರ್ಯತಿಯ ಮಗಳು ಸುಕನ್ಯಾಳ ಕೋರಿಕೆಯ ಮೇರೆಗೆ ಅಶ್ವಿನಿ ಕುಮಾರರು ಮಹಾನ್ ಋಷಿ ಚ್ಯವನರನ್ನು ಕುರುಡುತನದಿಂದ ಮುಕ್ತಗೊಳಿಸಿದರು ಎಂಬ ದಂತಕಥೆ ಇದೆ.
ಯುದ್ಧದಲ್ಲಿ ಇಂದ್ರನ ತೋಳು ತುಂಡಾಗಿಹೋದಾಗ, ಅಶ್ವಿನಿ ಕುಮಾರರು ತಮ್ಮ ಚಿಕಿತ್ಸೆಯಿಂದ ಮೊದಲಿನಂತೆ ಆ ತೋಳನ್ನು ಸೇರಿಸಿದರು. ಅಶ್ವಿನಿ ಕುಮಾರರು ಮಾಡಿದ ಸಾಧನೆಗಳು ಲೆಕ್ಕವಿಲ್ಲ. ಅಶ್ವಿನಿ ಕುಮಾರರನ್ನು ಪೂಜಿಸಿದರೆ ಅಥವಾ ಧ್ಯಾನಿಸಿದರೆ ಯಾವುದೇ ರೀತಿಯ ಕಾಯಿಲೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

click me!