ಸ್ಪಟಿಕ ಧರಿಸುವುದರಿಂದ ಏನೆಲ್ಲ ಲಾಭಗಳಿವೆ ಗೊತ್ತಾ?

By Suvarna NewsFirst Published Aug 27, 2021, 10:44 AM IST
Highlights

ಸ್ಪಟಿಕ ಧಾರಣೆ ಅತ್ಯಂತ ಶುಭವೆಂದು ಹೇಳಲಾಗುತ್ತದೆ. ಸ್ಪಟಿಕ ಕೆಲವು ಗ್ರಹಗಳ ಬಲವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲದೇ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. ಶಿವ ಮತ್ತು ಲಕ್ಷ್ಮೀದೇವಿ ಕೃಪೆ ಪಡೆಯಲು ಸ್ಪಟಿಕ ಧಾರಣೆ ಉತ್ತಮವೆಂದು ಹೇಳಲಾಗುತ್ತದೆ. ಹಾಗಾಗಿ ಸ್ಪಟಿಕ ಧಾರಣೆ ಮತ್ತು ಸ್ಪಟಿಕದ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿಯೋಣ.

ವೈದಿಕ ಜ್ಯೋತಿಷ್ಯದ ಪ್ರಕಾರ ವ್ಯಕ್ತಿಯ ಜೀವನದ ಮೇಲೆ ಬೇರೆ ಬೇರೆ ಗ್ರಹಗಳ ಪ್ರಭಾವವಿರುತ್ತದೆ. ಇವೇ ಗ್ರಹಗಳ ಪ್ರಭಾವದಿಂದ ಶುಭಫಲಗಳು ಮತ್ತು ಕೆಲವೊಮ್ಮೆ ಅಶುಭ ಫಲಗಳು ಪ್ರಾಪ್ತವಾಗುತ್ತವೆ. ಅಷ್ಟೇ ಅಲ್ಲದೆ ಕೆಲವು ಗ್ರಹಗಳು ಅಸ್ತವಾಗುತ್ತವೆ. ಅಂಥಹ ಸಂದರ್ಭದಲ್ಲಿ ಆ ಗ್ರಹಗಳ ಪ್ರಭಾವ ಕ್ಷೀಣವಾಗುತ್ತದೆ. ಅಶುಭ ಫಲವನ್ನು ನೀಡುವ ಗ್ರಹಗಳ ಪ್ರಭಾವವನ್ನು ತಗ್ಗಿಸಲು ಮತ್ತು ಅಸ್ತವಾಗಿರುವ ಗ್ರಹಗಳು ಉತ್ತಮ ಪ್ರಭಾವವನ್ನು ನೀಡಲು ಸಮರ್ಥವಾಗುವಂತೆ ಮಾಡಲು ಜ್ಯೋತಿಷ್ಯದಲ್ಲಿ ಕೆಲವು ರತ್ನಗಳನ್ನು ಧರಿಸಲು ಸೂಚಿಸಲಾಗುತ್ತದೆ.

ಜ್ಯೋತಿಷ್ಯ ತಜ್ಞರ ಸಲಹೆ ಮೇರೆಗೆ ಗ್ರಹಗತಿಗಳು ಶುಭಕಾರಕವಾಗುವ ನಿಟ್ಟಿನಲ್ಲಿ ಆಯಾ ವ್ಯಕ್ತಿಗಳಿಗೆ ಸರಿಹೊಂದುವ ರತ್ನಗಳನ್ನು ಧರಿಸಬೇಕು. ಹೀಗೆ ಸರಿ ಹೊಂದುವ ರತ್ನಗಳನ್ನು ಧರಿಸಿದರೆ ಜೀವನದಲ್ಲಿ ಸುಖ-ಸಮೃದ್ಧಿ ಮತ್ತು ಯಶಸ್ಸನ್ನು ಕಾಣಬಹುದಾಗಿದೆ. ಹಾಗಾದರೆ, ಸ್ಪಟಿಕವನ್ನು ಧರಿಸುವುದರಿಂದ ಆಗುವ ಲಾಭಗಳ ಬಗ್ಗೆ ನೋಡೋಣ.

ಇದನ್ನು ಓದಿ: ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

ಸ್ಪಟಿಕದ ಸೃಷ್ಟಿ ಹೇಗೆ..?

ಹಿಮ ಪರ್ವತಗಳ ಕೆಳಗೆ ಸಣ್ಣ ಸಣ್ಣ ತುಂಡಗಳ ರೂಪದಲ್ಲಿ ಸ್ಪಟಿಕಗಳು ಸಿಗುತ್ತವೆ. ಆಕ್ಸಿಜನ್ ಮತ್ತು ಸಿಲಿಕಾನ್ ಅಣುಗಳ ಮಧ್ಯೆ ಸಮನಾದ ಅನುಪಾತ ಉಂಟಾದರೆ ಈ ಸ್ಪಟಿಕವು ಸೃಷ್ಟಿಯಾಗುತ್ತದೆ. ಈ ಸ್ಪಟಿಕವು ದೇವಿಗೆ ಹಾಗೂ ಶಿವನಿಗೆ ಬಹಳ ಪ್ರಿಯ ಎಂದು ಹೇಳಲಾಗುತ್ತದೆ. ಚಂದ್ರ ಮತ್ತು ಶುಕ್ರ ಗ್ರಹಕ್ಕೆ ಅತಿ ಪ್ರಿಯವಾಗಿದೆ ಎಂದೂ ಹೇಳಲಾಗುತ್ತದೆ. ಹಿಮದಷ್ಟೇ ಬಣ್ಣವನ್ನು ಹೊಂದಿರುವ ಇದು, ಜಪಮಾಲೆಗೂ ಬಳಸಲ್ಪಡುತ್ತದೆ.

ಸ್ಪಟಿಕ ಧಾರಣೆಯಿಂದ ಆಗುವ ಲಾಭಗಳು:

  • ಜಾತಕದಲ್ಲಿ ಶುಕ್ರ ಗ್ರಹವು ಅಶುಭ ಫಲವನ್ನು ನೀಡುತ್ತಿದ್ದರೆ, ಶುಕ್ರ ಗ್ರಹವು ಶುಭ ಸ್ಥಾನದ ಅಧಿಪತಿಯಾಗಿದ್ದು ಅಶುಭ ಮನೆಯಲ್ಲಿ ಸ್ಥಿತವಾಗಿದ್ದರೆ ಮತ್ತು ಶುಕ್ರ ಗ್ರಹದ ಬಲವು ಕ್ಷೀಣವಾದಾಗ ಅಂದರೆ ಗ್ರಹ ಅಸ್ತವಾದಾಗ ಸ್ಪಟಿಕವನ್ನು ಧಾರಣೆ ಮಾಡಿದರೆ ಶುಕ್ರ ಗ್ರಹಕ್ಕೆ ಬಲ ಬರುತ್ತದೆ. ಅಷ್ಟೇ ಅಲ್ಲದೆ ಉತ್ತಮ ಪ್ರಭಾವವನ್ನು ಬೀರುತ್ತದೆ.
  • ಸ್ಪಟಿಕವನ್ನು ಧರಿಸುವುದರಿಂದ ಹೆದರಿಕೆ ಮತ್ತು ಗಾಬರಿಗಳಂತಹ ಸ್ಥಿತಿ ನಿವಾರಣೆಯಾಗುತ್ತದೆ.
  • ಸ್ಪಟಿಕವನ್ನು ಧರಿಸುವುದರಿಂದ ಧನಸಂಪತ್ತು ಹೆಚ್ಚುವುದಲ್ಲದೆ ಬಲ ವೃದ್ಧಿಸುತ್ತದೆ.
  • ಸ್ಪಟಿಕದ ಮಾಲೆಯನ್ನು ಧರಿಸುವುದರಿಂದ ಸುಖ ಸಮೃದ್ಧಿ ನಲೆಸುವುದಲ್ಲದೆ ಧೈರ್ಯ ಹೆಚ್ಚುತ್ತದೆ.
  • ಸ್ಪಟಿಕ ಮಾಲೆಯಿಂದ ಮಂತ್ರಸಿದ್ಧಿಯನ್ನು ಸಹ ಮಾಡಿಕೊಳ್ಳಬಹುದಾಗಿದೆ.
  • ತಾಯಿಯ ಸ್ಪಟಿಕ ಧಾರಣೆಯು ಭೂತ ಪ್ರೇತ ಪಿಶಾಚಿ ದೆವ್ವಗಳ ಬಾಧೆಯಿಂದ ಮುಕ್ತಿಗೊಳಿಸುತ್ತದೆ.
  • ಸ್ಪಟಿಕವನ್ನು ಧರಿಸುವುದರಿಂದ ಬುದ್ಧಿ ಚುರುಕಾಗುವುದಲ್ಲದೆ, ವ್ಯಕ್ತಿತ್ವ ವಿಕಸನಗೊಳ್ಳುತ್ತದೆ.
  • ಸ್ಪಟಿಕದಿಂದ ತಯಾರಿಸಿದ ಭಸ್ಮವು ಜ್ವರ,  ಪಿತ್ತದ ತೊಂದರೆ, ನಿಶ್ಶಕ್ತಿ, ರಕ್ತ ಸಂಬಂಧಿ ಸಮಸ್ಯೆಗಳು ಮತ್ತು ಅನೇಕ ವ್ಯಾಧಿಗಳನ್ನು ಗುಣಪಡಿಸುವಲ್ಲಿ ಸಹಾಯಕವಾಗಿದೆ. 


ಇದನ್ನು ಓದಿ: ವೃತ್ತಿ ಕ್ಷೇತ್ರದ ಅನುಸಾರ ಅದೃಷ್ಟ ಬದಲಾಯಿಸುವ ರತ್ನಗಳಿವು...

ಸ್ಪಟಿಕ ಯಾವ ರಾಶಿಯವರಿಗೆ ಶುಭ: 

ರಾಶಿಯ ಅಧಿಪತಿ ಶುಕ್ರ ಗ್ರಹ ಆಗಿರುತ್ತದೆಯೋ ಅಂಥ ರಾಶಿಯವರಿಗೆ ಸ್ಪಟಿಕ ಧಾರಣೆ ಶುಭವನ್ನು ತರುತ್ತದೆ. ಅಂದರೆ ವೃಷಭ ಮತ್ತು ತುಲಾ ರಾಶಿಗೆ ಅಧಿಪತಿ ಶುಕ್ರ ಗ್ರಹವಾಗಿದೆ. ಹಾಗಾಗಿ ಈ ರಾಶಿಯವರು ಸ್ಪಟಿಕವನ್ನು ಧರಿಸಬಹುದಾಗಿದೆ.

ಚಂದ್ರ ಮತ್ತು ಬುಧ ಗ್ರಹಗಳು ಪ್ರಧಾನವಾಗಿರುವ ರಾಶಿಯ ವ್ಯಕ್ತಿಗಳು ಸ್ಪಟಿಕ ಧರಿಸುವುದರಿಂದ ಶುಭವಾಗುತ್ತದೆ. ಅಂದರೆ ಕರ್ಕಾಟಕ, ಕನ್ಯಾ ಮತ್ತು ಮಿಥುನ ರಾಶಿಯವರು ಸ್ಪಟಿಕ ಧಾರಣೆ ಮಾಡಬಹುದಾಗಿದೆ.

ಇದನ್ನು ಓದಿ: ಶನಿ ದೋಷದಿಂದ ಮುಕ್ತಿ ಪಡೆಯೋಕೆ ಇಲ್ಲಿದೆ ವಾಸ್ತು ಟಿಪ್ಸ್...!

ಸ್ಪಟಿಕವನ್ನು ಯಾವಾಗ ಧರಿಸಬೇಕು?

ಯಾವುದೇ ತಿಂಗಳಿನ ಶುಕ್ಲ ಪಕ್ಷದ ಮೊದಲ ಶುಕ್ರವಾರ ಹಾಲು ಮತ್ತು ನೀರಿನಿಂದ ಶುದ್ಧೀಕರಣ ಮಾಡಬೇಕು. ನಂತರ ಸ್ಪಟಿಕ ಮಾಲೆಯನ್ನು ಬಳಸಿ ಗಾಯತ್ರಿ ಮಂತ್ರವನ್ನು ಜಪಿಸಬೇಕು. ಸೂರ್ಯೋದಯಕ್ಕೆ 3 ತಾಸು ಮೊದಲು ಈ ಮಾಲೆಯನ್ನು ಧರಿಸಬೇಕು. ಲಕ್ಷ್ಮೀದೇವಿಯನ್ನು ಆರಾಧಿಸಲು ಸ್ಪಟಿಕ ಮಾಲೆಯು ಅತ್ಯಂತ ಶುಭವೆಂದು ಹೇಳಲಾಗುತ್ತದೆ. 

click me!