ಫೆ.27 ರಿಂದ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ

By Suvarna NewsFirst Published Jan 31, 2023, 1:31 PM IST
Highlights

ಉಪ್ಪುಂದದ ಸುಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ
ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ
25 ವರ್ಷಗಳ ನಂತರ ಅಮ್ಮನ ಭಕ್ತಾಧಿಗಳ ಪಾಲಿಗೆ ಬಂದಿದೆ ಸುವರ್ಣ ಘಳಿಗೆ

ಉಡುಪಿ: ಬೈಂದೂರಿನ ಉಪ್ಪುಂದದ ಸುಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವವು ಇದೇ ಫೆಬ್ರವರಿ 16 ಹಾಗೂ ಫೆಬ್ರವರಿ 27 ರಿಂದ ಮಾರ್ಚ್ 8ನೇ ತಾರೀಖಿನವರೆಗೂ ನಡೆಯಲಿದೆ.

ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವ ಸಮಿತಿಯ ಅಧ್ಯಕ್ಷತೆಯನ್ನು ಶ್ರೀ ಬಿ‌.ಎಸ್. ಸುರೇಶ್ ಶೆಟ್ಟಿ ವಹಿಸಿದ್ದು ಈಗಾಗಲೇ ಹಲವು ಸಮಿತಿಗಳ ರಚಿಸಿ ಪೂರ್ವಸಿದ್ಧತಾ ಕಾರ್ಯ ಆರಂಭಿಸಲಾಗಿದೆ.

ಈ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀಮನ್ಮಹಾ ರಥೋತ್ಸವದ ಶುಭಕಾರ್ಯಕ್ಕಾಗಿ ಉದ್ಯಮಿ ಶ್ರೀ ಯು.ಬಿ. ಶೆಟ್ಟಿಯವರು ಐದು ಲಕ್ಷದ ಐದು ರೂಪಾಯಿಗಳನ್ನು ಸೇವೆಯ ರೂಪದಲ್ಲಿ ದೇಗುಲಕ್ಕೆ ನೀಡಿದ್ದು, ಇನ್ನೂ ಹೆಚ್ಚಿನ ದಾನಿಗಳು ತನು ಮನ ಧನ ಸಹಿತ ದೇವಿಯ ಸೇವೆಗೆ ಮುಂದಾಗಿದ್ದಾರೆ.

ಉತ್ಸವಗಳ ವಿವರ
ಫೆಬ್ರವರಿ 16ರ ಬೆಳಗ್ಗೆ  ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ ಮೂಲಕ ಶುಭ ಕಾರ್ಯದ ಶುಭಾರಂಭ ಆಗಲಿದೆ. ನಂತರದ ಪುಣ್ಯಾಹ, 12 ಕಾಯಿ ಗಣಪತಿ ಹೋಮ, ದುರ್ಗಾ ಹವನ, ಪ್ರಾಯಶ್ಚಿತ್ತ ಕಲಾವೃದ್ಧಿ ಹೋಮ, ಕಲಶಾಭಿಷೇಕ, ವಿಶೇಷ ಪಂಚಾಮೃತ, ವಿಶೇಷ ಮಹಾನೈವೇದ್ಯ, ಮಹಾಜನರಿಂದ ಪ್ರಾಯಶ್ಚಿತ್ತ ಪ್ರಾರ್ಥನೆ, ಸಂತರ್ಪಣೆ ಕಾರ್ಯಗಳು ಮೊದಲ ದಿನ ನಡೆಯಲಿವೆ.

Bhishma Ekadashi 2023: ವಿಷ್ಣು ಸಹಸ್ರನಾಮಕ್ಕೆ ಓನಾಮ ಬರೆದ ಭೀಷ್ಮಾಚಾರ್ಯರು!

ನಂತರ ಫೆಬ್ರವರಿ‌ 27ರ ಬೆಳಗ್ಗೆ 9ರಿಂದ ಗಣಪತಿ ಪ್ರಾರ್ಥನೆ ಪೂರ್ವಕ ದೇವಿಗೆ ಫಲಕಾಣಿಕೆ ಸಮರ್ಪಣೆ, ಸಾಮೂಹಿಕ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ, ಮಾತೃಕಾ ಪೂಜೆ, ದೇವ ನಾಂದಿ, ಋತಿಧ್ವರ್ಣ, ಮಧುಪರ್ಕ, ಬ್ರಹ್ಮಕೂರ್ಚಹವನ, 6 ಕಾಯಿ ಗಣಹೋಮ, ಬಿಂಬ ಶುದ್ದಿ, ಕಲಶ ಸ್ಥಾಪನೆ, ಶ್ರೀದೇವಿಗೆ ಪ್ರಾಯಶ್ಚಿತ್ತಾಂಗ ಸಪ್ತಶುದ್ಧಿ ಪ್ರಕ್ರಿಯೆಗಳು ಸಂಜೆ 6 ಗಂಟೆಯಿಂದ ಗಣಪತಿ ಪೂಜೆ, ಪುಣ್ಯಾಹ, ಸ್ಥಾನ ಶುದ್ಧಿ ಪೂರ್ವಕ ಪ್ರಸಾದ, ಶುದ್ಧಿ, ರಾಕ್ಷೋಘ್ನ, ವಾಸ್ತು ಹವನ, ಬಲಿ, ರಕ್ಷೆ, ಯಾಗಶಾಲಾ ಪ್ರವೇಶ, ಕಲಶ ಸ್ಥಾಪನೆ, ಅಧಿವಾಸಾದಿ ಹವನಗಳು ನಡೆಯಲಿವೆ.

ಇನ್ನು ಫೆಬ್ರವರಿ 28ರಂದು ಬೆಳಿಗ್ಗೆ 9ರಿಂದ ಗಣಪತಿ ಪೂಜೆ, ಪುಣ್ಯಾಹ, ಬಿಂಬಗಳಿಗೆ ಹಾಗೂ ಪರಿವಾರ ದೇವರುಗಳಿಗೆ ನ್ಯಾಸಗಳು, ಜಲಾಧಿವಾಸ ಪ್ರಕ್ರಿಯೆ, ಬಿಂಬ ಶುದ್ಧಿ ಹವನ, ಸ್ಥಾನಶುದ್ಧಿ ಹವನ, ಅಧಿವಾಸ ಹವನ ಕಾರ್ಯಗಳು ನಡೆಯಲಿವೆ. ಅದೇ ದಿನ ಸಂಜೆ 6 ಗಂಟೆಯಿಂದ ಗಣಪತಿ ಪೂಜೆ ಪೂರ್ವಕ ಬಿಂಬ ಶುದ್ಧಿ ಕಲಶಾಭಿಷೇಕ, ಸಪ್ತಾಧಿವಾಸ ವಿಧಿಗಳು, ಮಂತ್ರನ್ಯಾಸಗಳು, ಅಧಿವಾಸ ಶಕ್ತಿ ಹವನಗಳು ನಡೆಯಲಿವೆ.

ಮಾರ್ಚ್ 1 ರಂದು ಬೆಳಿಗ್ಗೆ 7ರಿಂದ ಗಣಪತಿ ಪೂಜೆ, ಪುಣ್ಯಾಹ, ರತ್ನನ್ಯಾಸ ಹವನಗಳು, ಪ್ರತಿಷ್ಟಾ ಹವನ, ನವಗ್ರಹ ಹವನ, ಬಿಂಬ ಶುದ್ಧಿ, ಬಂಧ ಶುದ್ಧಿ ಕ್ರಿಯೆಗಳು, ಪೀಠ ಪ್ರತಿಷ್ಠಾಪನೆ, ರತ್ನನ್ಯಾಸ ವಿಧಿ, - ಬೆಳಿಗ್ಗೆ 9ಗಂಟೆ 02 ನಿಮಿಷಕ್ಕೆ ಸಲ್ಲುವ ಮೀನ ಲಗ್ನದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವರ ಪುನಃಪ್ರತಿಷ್ಠೆ, ಈಶ್ವರ ದೇವರ ಪುನಃಪ್ರತಿಷ್ಟೆ, ಅಷ್ಟಬಂಧ ಲೇಪನ, ಜೀವನ್ಯಾಸಗಳು, ಪ್ರಾಣ ಪ್ರತಿಷ್ಟಾಪನೆ, ತತ್ವಹವನ, ಪೂರ್ಣ ಕಲಾಹವನ, ನಿರೀಕ್ಷಾ ಪೂಜೆ, ಧ್ವಜಾರೋಹಣ ಪೂರ್ವಕ ಉತ್ಸವಕ್ರಮಾರಂಭ ನಡೆಯಲಿವೆ.

ಮಾರ್ಚ್ 2 ರಂದು ಗಜಾರೋಹಣೋತ್ಸವ, ಮಾರ್ಚ್ 3 ರಂದು ಅಶ್ವಾರೋಹಣೋತ್ಸವ, ಮಾರ್ಚ್ 4 ರಂದು ಮಯೂರವಾಹನೋತ್ಸವ, ಸಂಜೆ ಗಣಪತಿ ಪೂಜೆ, ಪುಣ್ಯಾಹ,  ಬ್ರಹ್ಮಕಲಶ ಸ್ಥಾಪನೆ, ಬಲಿ ಹಾಗೂ ದಿಶಾ ಹೋಮ ನಡೆಯಲಿವೆ. ಮಾರ್ಚ್ 5 ರಂದು ಉದಯಬಲಿ, ಬ್ರಹ್ಮಕಲಶಾಭಿಷೇಕ, ಪುಷ್ಪಕಸಿಂಹಾರೋಹಣೋತ್ಸವ ಮತ್ತು ರಾತ್ರಿ ರಂಗಪೂಜೆ ನಡೆಯಲಿವೆ. ಮಾರ್ಚ್ 6 ರಂದು ಮಧ್ಯಾಹ್ನ ಭೂತಬಲಿ, ರಥಾರೋಹಣ, ಶ್ರೀಮನ್ಮಹಾ ರಥೋತ್ಸವ ನಡೆಯಲಿವೆ.  ಮಾರ್ಚ್ 7 ರಂದು ಅವಶಿಷ್ಟ ಹವನಗಳು, ಚೂರ್ಣೋತ್ಸವ ‌ನಡೆಯಲಿವೆ. ಇನ್ನು ಮಾರ್ಚ್ 8 ರಂದು ಧ್ವಜಾವರೋಹಣ, ಪೂರ್ಣಾಹುತಿ, ಅಂಕುರೋಪಣ, ಪ್ರಸಾದ ವಿತರಣೆ ಹಾಗೂ ನಗರೋತ್ಸವ ನಡೆಯಲಿದೆ. 

February born Personality: ದುಡ್ಡಿಗೆ ಬರವಿಲ್ಲ, ನಿಷ್ಠೆಗೆ ಕೊನೆಯಿಲ್ಲ.. ಫೆಬ್ರವರಿ ಸಂಜಾತರ ಸಮ್ಮೋಹಕ ವ್ಯಕ್ತಿತ್ವ

ಸುಮಾರು 25 ವರ್ಷಗಳ ನಂತರ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯುತ್ತಿದ್ದು, ಸಮಕಾಲೀನ ಪೀಳಿಗೆಯ ಜೀವಮಾನದಲ್ಲಿ ಒದಗಿ ಬಂದಿರುವ‌ ಈ ಅಪೂರ್ವ ಸಂಧರ್ಭದಲ್ಲಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸೇವೆಯಲ್ಲಿ ತೊಡಗಿಕೊಂಡು ದೇವಿಯ ಕೃಪೆಗೆ ಪಾತ್ರವಾಗುವ‌ ಸದವಾಕಾಶ ಲಭಿಸಿದೆ. 

ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ಮನ್ಮಹಾ ರಥೋತ್ಸವದಲ್ಲಿ ಭಕ್ತಾಧಿಗಳು ಅಪಾರ ಸಂಖ್ಯೆಯಲ್ಲಿ ಭಾಗಿಯಾಗುವ ಮೂಲಕ ಈ ಶುಭ ಕಾರ್ಯವನ್ನು ಯಶಸ್ವಿಗೊಳಿಸುವ ಮೂಲಕ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆ ಪಾತ್ರರಾಗುವ ಸದವಕಾಶ ಲಭಿಸಿದೆ.

click me!