ರಾಮನಗರ: ಓಂಕಾರೇಶ್ವರ ದೇಗುಲದ ಜಾತ್ರೆಯಲ್ಲಿ ಅಗ್ನಿಕೊಂಡ ಹಾಯುವಾಗ ಕೆಂಡಯೊಳಗೆ ಬಿದ್ದ ಅರ್ಚಕ!

Published : Apr 08, 2026, 03:41 PM IST
Ramanagara Fire pit Fall

ಸಾರಾಂಶ

ಹಾರೋಹಳ್ಳಿ ತಾಲೂಕಿನ ತೇರುಬೀದಿ ಗ್ರಾಮದಲ್ಲಿ ನಡೆದ ಓಂಕಾರೇಶ್ವರ ಸ್ವಾಮಿ ಕೊಂಡೋತ್ಸವದಲ್ಲಿ, ಅರ್ಚಕರಾದ ಪುಟ್ಟಯ್ಯ ಅವರು ಕೊಂಡ ಹಾಯುವಾಗ ಆಯತಪ್ಪಿ ಕೆಂಡದ ಗುಂಡಿಗೆ ಬಿದ್ದಿದ್ದಾರೆ. ಗಂಭೀರವಾಗಿ ಸುಟ್ಟಗಾಯಗಳಾದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಮನಗರ (ಏ.08): ಧಾರ್ಮಿಕ ಉತ್ಸವವೊಂದರಲ್ಲಿ ಸಂಭ್ರಮದಿಂದ ಕೊಂಡ ಹಾಯುತ್ತಿದ್ದ ವೇಳೆ ಅರ್ಚಕರೊಬ್ಬರು ಆಯತಪ್ಪಿ ಕೆಂಡದ ಗುಂಡಿಗೆ ಬಿದ್ದಿರುವ ಭೀಕರ ಘಟನೆ ಹಾರೋಹಳ್ಳಿ ತಾಲೂಕಿನ ತೇರುಬೀದಿ ಗ್ರಾಮದಲ್ಲಿ ಸಂಭವಿಸಿದೆ. ಈ ಅಚಾತುರ್ಯದಿಂದಾಗಿ ಅರ್ಚಕರು ತೀವ್ರವಾಗಿ ಸುಟ್ಟಗಾಯಗಳಿಗೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಲು ಹೋರಾಡುತ್ತಿದ್ದಾರೆ.

ಘಟನೆಯ ವಿವರ:

ತೇರುಬೀದಿ ಗ್ರಾಮದಲ್ಲಿ ನೆಲೆಸಿರುವ ಓಂಕಾರೇಶ್ವರ ಸ್ವಾಮಿಯ ಕೊಂಡೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಅದ್ಧೂರಿಯಾಗಿ ಏರ್ಪಡಿಸಲಾಗಿತ್ತು. ಸಾವಿರಾರು ಭಕ್ತರು ಜಮಾಯಿಸಿದ್ದ ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಪುಟ್ಟಯ್ಯ (50) ಅವರು ಸಂಪ್ರದಾಯದಂತೆ ಅಗ್ನಿಕೊಂಡ ಹಾಯಲು ಸಜ್ಜಾಗಿದ್ದರು. ಕೆಂಡದ ಗುಂಡಿಯ ಮುಂದೆ ನಿಂತು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಭಕ್ತಿಯ ಉತ್ತುಂಗದಲ್ಲಿ ಕೆಂಡದ ಮೇಲೆ ಓಡಲು ಆರಂಭಿಸಿದರು.

ಮೂರ್ನಾಲ್ಕು ಹೆಜ್ಜೆಯಲ್ಲೇ ಎಡವಟ್ಟು:

ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ಕೊಂಡ ಹಾಯುವ ಮೂಲಕ ದೇವರ ಸೇವೆ ಮಾಡುತ್ತಿದ್ದ ಅನುಭವಿ ಅರ್ಚಕ ಪುಟ್ಟಯ್ಯ ಅವರಿಗೆ ಈ ಬಾರಿ ವಿಧಿ ಬೇರೆಯದೇ ಆಟವಾಡಿದೆ. ಕೆಂಡದ ಮೇಲೆ ಕೇವಲ ಮೂರ್ನಾಲ್ಕು ಹೆಜ್ಜೆಗಳನ್ನು ಇಟ್ಟ ಅರ್ಚಕರು, ಇದ್ದಕ್ಕಿದ್ದಂತೆ ಸಮತೋಲನ ಕಳೆದುಕೊಂಡು ಆಯತಪ್ಪಿ ಧಗಧಗಿಸುತ್ತಿದ್ದ ಬೆಂಕಿಯ ಕೊಂಡದ ನಡುವೆಯೇ ಬಿದ್ದರು. ಅರ್ಚಕರು ಕೊಂಡಕ್ಕೆ ಬೀಳುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಅಲ್ಲಿದ್ದ ಗ್ರಾಮಸ್ಥರು ಮತ್ತು ಯುವಕರು ತಕ್ಷಣವೇ ಮುನ್ನುಗ್ಗಿ ಅವರನ್ನು ಕೆಂಡದಿಂದ ಮೇಲೆಕ್ಕೆ ಎತ್ತಿದ್ದಾರೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಪುಟ್ಟಯ್ಯ ಅವರ ಮೈಮೇಲೆ ಗಂಭೀರ ಸುಟ್ಟಗಾಯಗಳಾಗಿವೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು.

ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು:

ಸುಟ್ಟಗಾಯಗಳ ತೀವ್ರತೆ ಹೆಚ್ಚಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅರ್ಚಕರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಪ್ರಸ್ತುತ ಅವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವೈದ್ಯರು ಅವರ ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ. ಕಳೆದ 10 ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಈ ಕಾರ್ಯವನ್ನು ಮಾಡುತ್ತಿದ್ದ ಅರ್ಚಕರಿಗೆ ಈ ರೀತಿ ಆಗಿದ್ದು ಗ್ರಾಮಸ್ಥರಲ್ಲಿ ತೀವ್ರ ಬೇಸರ ಮೂಡಿಸಿದೆ. ದೇವಸ್ಥಾನದ ಉತ್ಸವದ ವೇಳೆ ಇಂತಹ ಅಚಾತುರ್ಯಗಳು ನಡೆಯುತ್ತಿರುವುದು ಭಕ್ತರಲ್ಲಿ ಆತಂಕ ಮೂಡಿಸಿದ್ದು, ಕೊಂಡ ಹಾಯುವ ವೇಳೆ ಸುರಕ್ಷತಾ ಕ್ರಮಗಳ ಬಗ್ಗೆಯೂ ಚರ್ಚೆಗಳು ಆರಂಭವಾಗಿವೆ.

PREV
Read more Articles on
click me!

Recommended Stories

ಅಕ್ಷಯ ತೃತೀಯದಂದು ಲಕ್ಷ್ಮಿಯ ಕೃಪೆಯಿಂದ ಈ ರಾಶಿಗೆ ಹಣದ ಸುರಿಮಳೆ, ಶುಭ ರಾಜಯೋಗದಿಂದ ಶ್ರೀಮಂತಿಕೆ, ಸಂತೋಷ
ಸ್ನೇಹಿತ ಗ್ರಹಗಳ ಅಪರೂಪದ ಸಂಯೋಗ... ಮೇ ತಿಂಗಳಲ್ಲಿ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ