ಬ್ರಹ್ಮಕಲಶೋತ್ಸವಕ್ಕೆ ಅರ್ಚಕರ ವಿರೋಧವಿಲ್ಲ: ಚಂದ್ರಶೇಖರ ಶೆಟ್ಟಿ ಹೇಳಿಕೆ

By Sathish Kumar KHFirst Published Nov 30, 2022, 7:10 PM IST
Highlights

ಕೊಲ್ಲೂರು ದೇವಸ್ಥಾನದಲ್ಲಿ ಜ.14 ಮಕರ ಸಂಕ್ರಮಣ ನಂತರ ಬ್ರಹ್ಮಕಲಶೋತ್ಸವ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಫೆಬ್ರವರಿ 7 ರಿಂದ 17 ರವರೆಗೆ ಮೂಲ ನಕ್ಷತ್ರದಲ್ಲಿ ವಾರ್ಷಿಕೋತ್ಸವ ಮಾಡಬೇಕೆಂಬ ಸಂಪ್ರದಾಯ ಇದೆ. ಇದಕ್ಕೆ ಅರ್ಚಕರ ವಿರೋಧವಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಉಡುಪಿ (ನ.30): ಕೊಲ್ಲೂರು ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಪಟ್ಟಂತೆ 5 ಸಭೆಗಳು ನಡೆದಿದೆ. ಜನವರಿ 14 ಮಕರ ಸಂಕ್ರಮಣ ನಂತರ ಬ್ರಹ್ಮಕಲಶೋತ್ಸವ ಮಾಡಬೇಕು ಎಂದು ನಿರ್ಧಾರ ಮಾಡಿದ್ದೇವೆ. ಫೆಬ್ರವರಿ 7 ರಿಂದ 17 ರವರೆಗೆ ಮೂಲ ನಕ್ಷತ್ರದಲ್ಲಿ ವಾರ್ಷಿಕೋತ್ಸವ ಮಾಡಬೇಕೆಂಬ ಸಂಪ್ರದಾಯ ಇದೆ. ಸದ್ಯಕ್ಕೆ ಫೆಬ್ರವರಿಯಲ್ಲಿ ವಾರ್ಷಿಕೋತ್ಸವ ಮಾಡಲು ದಿನಾಂಕ ನಿಗದಿ ಮಾಡಿದ್ದೇವೆ ಇದಕ್ಕೆ ಅರ್ಚಕರ ವಿರೋಧವಿಲ್ಲ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ತಿಳಿಸಿದರು.

ಕೊಲ್ಲೂರು ದೇವಸ್ಥಾನ ಅಷ್ಟಬಂದ ಬ್ರಹ್ಮಕಲಶೋತ್ಸವ ಕುರಿತು ಆರಂಭವಾಗಿರುವ ವಿವಾದ ಹಲವು ಆಯಾಮ ಪಡೆಯುತ್ತಿದೆ. ಆಡಳಿತ ಮಂಡಳಿಯವರು ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ ಮಾಡಿದಾಗ ಅರ್ಚಕ ವರ್ಗ ವಿರೋಧ ವ್ಯಕ್ತಪಡಿಸಿತು. ಶೈವಾಗಮ ಪದ್ಧತಿಗೆ ವಿರುದ್ಧವಾಗಿ ಆಡಳಿತ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಬ್ರಹ್ಮಕಲಶೋತ್ಸವ ನಡೆದರೆ ಉತ್ಸವ ನಡೆಸಲು ಸಾಧ್ಯವಿಲ್ಲ. ಬ್ರಹ್ಮಕಲಶೋತ್ಸವ ಮುಂದೊಡಬಹುದು, ಆದರೆ ಉತ್ಸವ ನಡೆಯಲೇಬೇಕು ಎಂದು ವಾದ ಮಂಡಿಸಿದ್ದರು. ಈ ಬೆಳವಣಿಗೆಗಳಿಂದ ಆಡಳಿತ ಮಂಡಳಿ ಮತ್ತು ಅರ್ಚಕ ವರ್ಗದ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು. ಈಗ ಎಲ್ಲ ಬೆಳವಣಿಗೆಗಳ ಕುರಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಪ್ರತಿಕ್ರಿಯೆ ನೀಡಿದ್ದಾರೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಬ್ರಹ್ಮ ಕಲಶೋತ್ಸವಕ್ಕೆ ಅರ್ಚಕರ ವಿರೋಧ

ಅರ್ಚಕರು ವಿರೋಧ ವ್ಯಕ್ತಪಡಿಸಿಲ್ಲ: ಫೆಬ್ರವರಿಯಲ್ಲಿ ಬ್ರಹ್ಮಕಲಶೋತ್ಸವ ನಡೆಸಿ ಮಾರ್ಚ್ ನಲ್ಲಿ ವಾರ್ಷಿಕ ಉತ್ಸವ ಮಾಡಲು ಅರ್ಚಕರಿಂದ ವಿರೋಧ ಬಂದಿತ್ತು. ಈ ಗೊಂದಲದ ಬಗ್ಗೆ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿಕೆ ನೀಡಿದ್ದು, ವ್ಯವಸ್ಥಾಪನಾ ಧಾರ್ಮಿಕ ವಿಧಿ ಬಗ್ಗೆ ಯಾವುದೇ ಗೊಂದಲಗಳು ಇಲ್ಲ. ಆಡಳಿತ ಮಂಡಳಿ ಮತ್ತು ಅರ್ಚಕರ ನಡುವೆ ಚರ್ಚೆ ಮಾಡಲಾಗಿದ್ದು, ಬ್ರಹ್ಮಕಲಶೋತ್ಸವ ನಡೆದು 48 ದಿವಸದ ನಂತರ ಉತ್ಸವ ಆಗಬೇಕು ಎಂದು ಯಾರೊಬ್ಬರೂ ನಮ್ಮ ಗಮನಕ್ಕೆ ತಂದಿಲ್ಲ. ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಏನೇ ಕಾರ್ಯಕ್ರಮ ಮಾಡಿದರೂ ಅದು ಲೋಕದ ಉದ್ದಾರಕ್ಕಾಗಿ. ನಾವು ಯಾವುದೇ ಶಿಷ್ಟಾಚಾರದ ವಿರುದ್ಧವಾಗಿ ಬ್ರಹ್ಮಕಲಶೋತ್ಸವವನ್ನು ಮಾಡುವುದಿಲ್ಲ ಎಂದು ಹೇಳಿದರು.

ಬ್ರಹ್ಮಕಲಶೋತ್ಸವ ಮಾಡಲು ಉತ್ಸುಕ: ಅರ್ಚಕರು, ವ್ಯವಸ್ಥಾಪನಾ ಸಮಿತಿ ಮತ್ತು ಶೈವಾಗಮ ಪಂಡಿತರು ಸೇರಿ ಎಲ್ಲರೂ ಒಟ್ಟಾಗಿ ಚರ್ಚೆ ಮಾಡಿದ್ದೇವೆ. ಆಡಳಿತಾತ್ಮಕ ವಿಚಾರಗಳು ಮತ್ತು ಶಿಷ್ಟಾಚಾರಗಳ ಬಗ್ಗೆ ಚರ್ಚಿಸಲಾಗಿದೆ. ಬ್ರಹ್ಮಕಲಶ ನಂತರ ದೃಡ ಸಂಪ್ರೋಕ್ಷಣೆ ಎಂಬುದನ್ನು ಮಾಡುತ್ತೇವೆ. ಇನ್ನು ಚರ್ಚೆಯ ವೇಳೆ ಮುನ್ನೆಲೆಗೆ ಬಂದ ವಿಚಾರಗಳನ್ನು ಮುಜರಾಯಿ ಇಲಾಖೆಗೆ ಶೈವಾಗಮ ಪಂಡಿತರು ಸಲ್ಲಿಕೆ ಮಾಡುತ್ತಾರೆ. ಮುಜುರಾಯಿ ಇಲಾಖೆ ಸೂಚನೆ ಪ್ರಕಾರ ನಾವು ಅಷ್ಟಬಂಧ ಬ್ರಹ್ಮಕಲಶೋತ್ಸವ ಮಾಡುತ್ತೇವೆ. ಅಷ್ಟ ಬಂದ ಬ್ರಹ್ಮಕಲಕೋತ್ಸವ ಮಾಡಲು ಅರ್ಚಕರು ವ್ಯವಸ್ಥಾಪನ ಸಮಿತಿ ಊರಿನ ಗ್ರಾಮಸ್ಥರು, ಭಕ್ತರು ಉತ್ತುಕರಾಗಿದ್ದೇವೆ ಎಂದರು.

ಅಷ್ಟಬಂಧ 48 ದಿನ ಗಟ್ಟಿಯಾಗಬೇಕು ಎಂದಿಲ್ಲ: ಅರ್ಚಕರಿಗೂ ವ್ಯವಸ್ಥಾಪನ ಸಮಿತಿಗೂ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ದೇವಸ್ಥಾನದ ಗರ್ಭಗುಡಿಯಲ್ಲಿ ಅಷ್ಟಬಂಧ ಹಾಕಿದ ನಂತರ 48 ದಿವಸ ಅದು ಗಟ್ಟಿಯಾಗಲು ಬಿಡಬೇಕು ಎಂದು ಎಲ್ಲ ಲಿಖಿತ ರೂಪದಲ್ಲಿಲ್ಲ. ಅರ್ಧ ಮಂಡಲ ಅಥವಾ ಕಾಲು ಮಂಡಲ ಬಿಟ್ಟು ದಡ ಸಂಪ್ರೋಕ್ಷಣೆ ಮಾಡಬಹುದು ಎಂಬ ಅಭಿಪ್ರಾಯ ಇದೆ. ವ್ಯವಸ್ಥಾಪನ ಸಮಿತಿ ಅರ್ಚಕರು ಮುಜುರಾಯಿ ಇಲಾಖೆಯ ಆಡಳಿತಾಧಿಕಾರಿ ಮತ್ತು ಶೈವಾಗಮ ಪಂಡಿತರ ಸಮ್ಮುಖತದಲ್ಲಿಯೇ ಚರ್ಚೆ ಮಾಡಿದ್ದೇವೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಹೇಳಿದರು.

click me!