ಶ್ರೀರಾಮಲಲ್ಲಾನ ವಜ್ರಖಚಿತ ಕಿರೀಟದಲ್ಲಿದೆ ಸೂರ್ಯ, ನವಿಲು, ಮೀನು, ಪಚ್ಚೆ; ತಯಾರಕರೇನಂತಾರೆ?

By Suvarna NewsFirst Published Jan 23, 2024, 6:43 PM IST
Highlights

ಅಯೋಧ್ಯೆಯ ಶ್ರೀರಾಮಲಲ್ಲಾನ ಮುಕುಟ ತಯಾರಕರು ಅದರ ವಿಶೇಷತೆಗಳೇನೆಂದು ವಿವರಿಸಿದ್ದಾರೆ. ಕಿರೀಟದ ಪ್ರತಿ ವಿವರವನ್ನೂ ಕೂಲಂಕಶತೆಯಿಂದ ರಚಿಸಲಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ಭಗವಾನ್ ರಾಮ ಲಲ್ಲಾನ ವಿಗ್ರಹವನ್ನು ಅಲಂಕರಿಸಿದ ಪ್ರತಿಯೊಂದು ಆಭರಣವೂ ಅದರದೇ ಆದ ಮಹತ್ವವನ್ನು ಹೊಂದಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22ರಂದು ಮಹಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನಂತರ ರಾಮ್ ಲಲ್ಲಾ ಅವರ ದೈವಿಕ ಆಭರಣಗಳ ಸೂಕ್ಷ್ಮ ವಿವರಗಳನ್ನು ಬಹಿರಂಗಪಡಿಸಿತು.

ಆತ 5 ವರ್ಷದ ಬಾಲರಾಮನಾಗಿರುವುದರಿಂದ ರಾಮಲಲ್ಲಾ ಮೂರ್ತಿಯ ಮುಂದೆ ಬೆಳ್ಳಿಯ ಆಟಿಕೆಗಳನ್ನು ಇಡಲಾಗಿದೆ. ಇದರಲ್ಲಿ ಆನೆ, ಕುದುರೆ, ಒಂಟೆ, ಆಟಿಕೆ ಬಂಡಿ, ಗಿಲಗಿಚ್ಚಿ ಮುಂತಾದವಿವೆ. 

Latest Videos

ಕಿರೀಟದ ವಿಶೇಷತೆ
ಬಾಲರಾಮನ ಕಿರೀಟವನ್ನು ತಯಾರಿಸಿದ ಲಕ್ನೋದ ಹರ್ಸಹೈಮಲ್ ಶ್ಯಾಮಲಾಲ್ ಜ್ಯುವೆಲ್ಲರ್ಸ್ ನಿರ್ದೇಶಕರಾದ ಅಂಕುರ್ ಆನಂದ್ ಕಿರೀಟ ತಯಾರಿಸುವಾಗ ತಾವು ಯಾವೆಲ್ಲ ಸೂಕ್ಷ್ಮ ಅಂಶಗಳನ್ನು ಗಮನಿಸಿದ್ದೇವೆ ಎಂಬುದನ್ನು ವಿವರಿಸಿದ್ದಾರೆ. ಅದರಂತೆ, ಮಾಣಿಕ್ಯಗಳು, ಪಚ್ಚೆಗಳು ಮತ್ತು ವಜ್ರಗಳಿಂದ ತುಂಬಿರುವ ಚಿನ್ನದ ಕಿರೀಟವನ್ನು ಉತ್ತರ ಭಾರತೀಯ ಸಂಪ್ರದಾಯದಲ್ಲಿ ರಚಿಸಲಾಗಿದೆ. ಮಧ್ಯದಲ್ಲಿ ಸೂರ್ಯ ದೇವನ ಲಾಂಛನವಿದೆ. ಕಿರೀಟದ ಬಲಭಾಗದಲ್ಲಿ, ಮುತ್ತುಗಳ ಎಳೆಗಳನ್ನು ನೇಯಲಾಗಿದೆ.

ಭಗವಾನ್ ರಾಮನ ಸುತ್ತಲೇ ಸುತ್ತುತ್ತೆ ಈ ಮುಸ್ಲಿಂ ಬಹುಸಂಖ್ಯಾತ ಹಳ್ಳಿ

ಅಂಕುರ್ ಅವರನ್ನು ಶ್ರೀರಾಮ ಜನ್ಮಭೂಮಿ ಟ್ರಸ್ಟ್ ಕರೆಸಿದಾಗ, ತಮಗೆ 5 ವರ್ಷದ ಬಾಲ ರಾಮನಿಗೆ ಹೊಂದುವ ಮುಕುಟ ಬೇಕೆಂದು ಹೇಳಿತು. ಆದಕ್ಕೆ ಸರಿಯಾಗಿ ನಾವು ಕಿರೀಟ ತಯಾರಿಸಿದ್ದೇವೆ, ಕಿರೀಟ ತಯಾರಿಸುವಾಗ ರಾಮಾಯಣದಲ್ಲಿ ಸಿಕ್ಕ ಆಭರಣದ ವಿವರಗಳನ್ನು ಸಂಗ್ರಹಿಸಿದ್ದೇವೆ ಎನ್ನುತ್ತಾರೆ. ಕಿರೀಟದಲ್ಲಿ ವಜ್ರಖಚಿತ ಸೂರ್ಯನನ್ನು ಇಡಲಾಗಿದೆ. ಏಕೆಂದರೆ ರಾಮ ಸೂರ್ಯವಂಶಕ್ಕೆ ಸೇರಿದವನು. ಇನ್ನು ಅದರ ಮೇಲೆ ಹಸಿರು ಪಚ್ಚೆ(ಪನ್ನಾ) ಹರಳನ್ನು ದೊಡ್ಡದಾಗಿ ಕೊಡಲಾಗಿದೆ. ಅದನ್ನು ಅಧಿಕಾರದಲ್ಲಿರುವವರು ಧರಿಸಿಯೇ ಧರಿಸುತ್ತಾರೆ. ಇನ್ನು ನಮ್ಮ ರಾಷ್ಟ್ರಪಕ್ಷಿ ನವಿಲನ್ನು ಕೂಡಾ ಇದರಲ್ಲಿ ಚಿತ್ರಿಸಲಾಗಿದೆ. ಏಕೆಂದರೆ ಈ ಪಕ್ಷಿ ಸದಾ ರಾಜವಂಶಗಳೊಡನೆ ಗುರುತಿಸಿಕೊಂಡಿದೆ. ಇದಲ್ಲದೆ ಮೀನನ್ನು ಕೂಡಾ ಪ್ರಭು ಶ್ರೀರಾಮನ ಕಿರೀಟದಲ್ಲಿ ಕಾಣಬಹುದು. ಇದಕ್ಕೆ ಕಾರಣ ಉತ್ತರ ಪ್ರದೇಶದ ಸಿಂಬಲ್ ಇದಾಗಿದೆ. 

ಕೌಸ್ತುಭ ಮಣಿ
ದೊಡ್ಡ ಮಾಣಿಕ್ಯ ಮತ್ತು ವಜ್ರಗಳಿಂದ ಅಲಂಕರಿಸಲ್ಪಟ್ಟ ಕೌಸ್ತುಭ ಮಣಿಯು ವಿಗ್ರಹದ ಹೃದಯವನ್ನು ಅಲಂಕರಿಸುತ್ತದೆ. ಶಾಸ್ತ್ರಗಳ ಪ್ರಕಾರ, ವಿಷ್ಣುವಿನ ಎಲ್ಲಾ ಅವತಾರಗಳು ಈ ರತ್ನವನ್ನು ತಮ್ಮ ಹೃದಯದಲ್ಲಿ ಧರಿಸುತ್ತವೆ ಎಂದು ಟ್ರಸ್ಟ್ ಹೇಳಿದೆ.

ವಿಜಯಮಾಲಾ, ವಿಜಯದ ಸಂಕೇತ
ರಾಮ್ ಲಲ್ಲಾ ಧರಿಸಿರುವ ಅತಿ ಉದ್ದದ ಹಾರ ಇದಾಗಿದೆ. ಮಾಣಿಕ್ಯಗಳಿಂದ ಕೂಡಿದ ಚಿನ್ನದ ಹಾರವು ವಿಜಯವನ್ನು ಸೂಚಿಸುತ್ತದೆ. ಇದು ವೈಷ್ಣವ ಸಂಪ್ರದಾಯದ ಸಂಕೇತಗಳಾದ ಸುದರ್ಶನ ಚಕ್ರ, ಕಮಲ, ಶಂಖ ಮತ್ತು ಮಂಗಳ ಕಲಶವನ್ನು ಹೊಂದಿದೆ.

ರಾಮಮಂದಿರ ನಿರ್ಮಾಣವಾಯ್ತು, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕಾರ್ಯ ಎಲ್ಲಿಗೆ ಬಂತು?

ರಾಮ್ ಲಲ್ಲಾನ ಇತರ ಆಭರಣಗಳ ವಿವರಗಳು
ಒಂದು ನೆಕ್ಲೇಸ್ ಅರ್ಧಚಂದ್ರಾಕಾರವಾಗಿದೆ. ಇದನ್ನು ಕಂಠ ಎಂದು ಕರೆಯಲಾಗುತ್ತದೆ. ಇದು ಅದೃಷ್ಟವನ್ನು ಸಂಕೇತಿಸುವ ಹೂವಿನ ವಿನ್ಯಾಸಗಳನ್ನು ಹೊಂದಿದೆ, ಮಧ್ಯದಲ್ಲಿ ಸೂರ್ಯ ದೇವನ ಚಿತ್ರವಿದೆ.

ಪದಿಕಾ ಎಂಬುದು ಹೊಕ್ಕುಳದ ಮೇಲೆ ಧರಿಸಿರುವ ಮತ್ತೊಂದು ಹಾರ, ಇದು ವಜ್ರಗಳು ಮತ್ತು ಪಚ್ಚೆಗಳಿಂದ ಮಾಡಿದ ಐದು ಎಳೆಗಳ ತುಂಡು.

ಕಂಚಿಯು ವಜ್ರ ಮಾಣಿಕ್ಯಗಳು, ಮುತ್ತುಗಳು ಮತ್ತು ಪಚ್ಚೆಗಳಿಂದ ಕೂಡಿದ ವಿವರವಾದ ಚಿನ್ನದ ಸೊಂಟದ ಪಟ್ಟಿಯಾಗಿದೆ. ಇದು ಸಣ್ಣ ಗಂಟೆಗಳನ್ನು ಹೊಂದಿದೆ, ಇದು ದೇವಾಲಯದ ಅಧಿಕಾರಿಗಳ ಪ್ರಕಾರ, ಶುದ್ಧತೆಯನ್ನು ಸಂಕೇತಿಸುತ್ತದೆ.

ವಿಗ್ರಹವು ಭುಜಬಂಧ, ಬಳೆಗಳು ಮತ್ತು ಉಂಗುರಗಳನ್ನು ಹೊಂದಿದೆ.

ರಾಮ್ ಲಲ್ಲಾ ಅವರ ಪಾದಗಳು ವಜ್ರ, ಮಾಣಿಕ್ಯದ ಕಾಲುಂಗುರಗಳಿಂದ ಅಲಂಕರಿಸಲ್ಪಟ್ಟಿವೆ. ಅವನ ಎಡಗೈಯಲ್ಲಿ ಮುತ್ತುಗಳು, ಪಚ್ಚೆಗಳಿರುವ ಚಿನ್ನದ ಬಿಲ್ಲು ಮತ್ತು ಬಲಭಾಗದಲ್ಲಿ ಬಾಣವಿದೆ.

ಬೆಳ್ಳಿ-ಕೆಂಪು ತಿಲಕ
ರಾಮಲಲ್ಲಾನ ಹಣೆಯ ಮೇಲಿನ ಬೆಳ್ಳಿ-ಕೆಂಪು ತಿಲಕವನ್ನು ವಜ್ರಗಳು ಮತ್ತು ಮಾಣಿಕ್ಯಗಳಿಂದ ರಚಿಸಲಾಗಿದೆ ಎಂದು ದೇವಾಲಯದ ಅಧಿಕಾರಿಗಳು ವಿವರಿಸಿದ್ದಾರೆ.

click me!