ದೇವರಗುಡ್ಡ ಕಾರ್ಣಿಕ 2025: 'ನಾಡು ಬಂಗಾರದ ಗಿಂಡಿಲೇ, ನಾಡು ಸಿರಿಯಾಗೀತಲೇ ಪರಾಕ್' ವಿಶ್ಲೇಷಣೆ ಇಲ್ಲಿದೆ!

Published : Oct 01, 2025, 06:38 PM IST
Haveri Devaragudda Karnika 2025

ಸಾರಾಂಶ

ಹಾವೇರಿಯ ದೇವರಗುಡ್ಡದಲ್ಲಿ ನಡೆದ ಪ್ರಸಿದ್ಧ ಮಾಲತೇಶ ದೇವರ ಕಾರ್ಣಿಕೋತ್ಸವದಲ್ಲಿ, ಗೊರವಯ್ಯನವರು 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!' ಎಂದು ಈ ವರ್ಷದ ಭವಿಷ್ಯ ನುಡಿದಿದ್ದಾರೆ. ಈ ದೈವವಾಣಿಯು ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

ಹಾವೇರಿ (ಅ.01): ಕರ್ನಾಟಕದ ಸುಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡದಲ್ಲಿ ನೆಲೆಸಿರುವ ಮಾಲತೇಶ ದೇವರ ಕಾರ್ಣೀಕೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಈ ಐತಿಹಾಸಿಕ ಮತ್ತು ಜನಮಾನಸದಲ್ಲಿ ಆಳವಾಗಿ ಬೇರೂರಿರುವ ಜಾತ್ರೆಯಲ್ಲಿ ಗೊರವಯ್ಯಗಳು ನುಡಿದ ಕಾರ್ಣಿಕ ನುಡಿಯು ಪ್ರಸಕ್ತ ವರ್ಷದ ನಾಡಿನ ಭವಿಷ್ಯವನ್ನು ಸಾರಿದ್ದು, ನಾಡಿನ ಜನರಲ್ಲಿ ಸಂತಸ ಮೂಡಿಸಿದೆ.

ದೇವಸ್ಥಾನದ ಸಂಪ್ರದಾಯದಂತೆ, ಪ್ರಧಾನ ಗೊರವಯ್ಯಗಳಾದ ನಾಗಪ್ಪ ಉರ್ಮಿ ಅವರು ಈ ವರ್ಷದ ದೈವವಾಣಿಯನ್ನು ನುಡಿದರು. 18 ಅಡಿ ಎತ್ತರದ ಬಿಲ್ಲನ್ನೇರಿ ನಿಂತು, ಗೊರವಯ್ಯನವರು ಇಡೀ ನಾಡಿನ ಹಿತವನ್ನು ಬಯಸಿ ನುಡಿದ ಭವಿಷ್ಯವಾಣಿ ಹೀಗಿದೆ: 'ನಾಡು ಬಂಗಾರದ ಗಿಂಡಿಲೇ.. ನಾಡು ಸಿರಿಯಾಗೀತಲೇ ಪರಾಕ್!'

ಕೃಷಿ ಮತ್ತು ಸಮೃದ್ಧಿಯ ಮುನ್ಸೂಚನೆ:

ಗೊರವಯ್ಯನವರ ಈ ದೈವವಾಣಿಯನ್ನು ಕ್ಷೇತ್ರದ ವಿದ್ವಾಂಸರು ಮತ್ತು ಭಕ್ತರು ವಿಶ್ಲೇಷಿಸಿದ್ದು, ಇದು ನಾಡಿನಾದ್ಯಂತ ಸಮೃದ್ಧಿಯ ಸೂಚನೆಯಾಗಿದೆ ಎಂದು ತಿಳಿಸಿದ್ದಾರೆ.

ಕಾರ್ಣಿಕದ ಪ್ರಮುಖ ಅಂಶಗಳ ವಿಶ್ಲೇಷಣೆಯ ಪ್ರಕಾರ:

ಮಳೆ ಮತ್ತು ಬೆಳೆ ಸಮೃದ್ಧಿ: ಪ್ರಸಕ್ತ ವರ್ಷದಲ್ಲಿ ರಾಜ್ಯಾದ್ಯಂತ ಮಳೆ ಬೆಳೆ ಸಮೃದ್ಧವಾಗಿ ಬರಲಿದೆ. ರೈತರಿಗೆ ಇದು ಅತ್ಯುತ್ತಮ ವರ್ಷವಾಗಲಿದ್ದು, ಪ್ರಮುಖವಾಗಿ ಹಿಂಗಾರು ಬೆಳೆಗಳು ಸಮೃದ್ಧವಾಗಿ ಕೈಗೆ ಬರಲಿವೆ. ಇದರಿಂದ ನಾಡಿನ ರೈತ ಸಮುದಾಯದ ಬವಣೆ ದೂರವಾಗಿ ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ.

ಸಿರಿಯಾಗಲಿದೆ ನಾಡು: 'ನಾಡು ಸಿರಿಯಾಗೀತಲೇ' ಎಂಬ ನುಡಿಯು ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಸುಧಾರಿಸುವುದನ್ನು ಮತ್ತು ನಾಡಿನ ಸಂಪತ್ತು ಹೆಚ್ಚಳವಾಗುವುದನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

ರಾಜಕೀಯದಲ್ಲಿ ಸ್ಥಿರತೆ, ನಾಯಕರ ಉದಯ: ಕಾರ್ಣಿಕದ ಪ್ರಕಾರ, ಪ್ರಸ್ತುತ ರಾಜಕೀಯವಾಗಿ ಯಾವುದೇ ದೊಡ್ಡ ಬದಲಾವಣೆಯ ಮುನ್ಸೂಚನೆ ಇಲ್ಲ. ಆದರೆ, 'ಮುಂದಿನ ದಿನಗಳಲ್ಲಿ ಉತ್ತಮ ನಾಯಕರು ಹೊರಹೊಮ್ಮುತ್ತಾರೆ' ಎಂಬ ಅರ್ಥದಲ್ಲಿ ಭವಿಷ್ಯವಾಣಿ ಬಂದಿದೆ. ಇದು ಉತ್ತಮ ಆಡಳಿತ ಮತ್ತು ಹೊಸ, ಸಮರ್ಥ ನಾಯಕತ್ವದ ಉದಯವನ್ನು ಸೂಚಿಸುತ್ತದೆ ಎಂದು ವಿಶ್ಲೇಷಿಸಲಾಗಿದೆ.

9 ದಿನಗಳ ವ್ರತದ ನಂತರ ಕಾರ್ಣಿಕ:

ಕಾರ್ಣಿಕ ನುಡಿಯುವ ಮುನ್ನ ಗೊರವಯ್ಯ ನಾಗಪ್ಪ ಉರ್ಮಿ ಅವರು ಸತತ 9 ದಿನಗಳ ಕಾಲ ಉಪವಾಸ ವ್ರತ ಮತ್ತು ಕಠಿಣ ನಿಯಮಗಳನ್ನು ಪಾಲಿಸಿರುತ್ತಾರೆ. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ, ಮೈಮೇಲೆ ಮಾಲತೇಶ ದೇವರನ್ನು ಆವಾಹಿಸಿಕೊಂಡು ಅವರು ನುಡಿದ ಈ ಕಾರ್ಣಿಕ ನುಡಿಯನ್ನು ಪ್ರತಿ ವರ್ಷವೂ ಭಕ್ತಾದಿಗಳು ರಾಜ್ಯದ ಒಳಿತಿಗಾಗಿ ಕೇಳುತ್ತಾರೆ. ದೇವರಗುಡ್ಡದ ಕಾರ್ಣಿಕವು ಸತ್ಯವಾಗಿಯೇ ನಾಡಿನ ಭವಿಷ್ಯವನ್ನು ಸೂಚಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಈ ವರ್ಷದ ಸುಖ-ಸಮೃದ್ಧಿಯ ಮುನ್ಸೂಚನೆಯು ನಾಡಿನ ಜನರಲ್ಲಿ ಹೊಸ ಭರವಸೆ ಮೂಡಿಸಿದೆ.

PREV
Read more Articles on
click me!

Recommended Stories

ಈ 4 ರಾಶಿಯವರಲ್ಲಿ ಒಳ್ಳೆಯದಕ್ಕಿಂತ ಕೆಟ್ಟ ಗುಣಗಳೇ ಹೆಚ್ಚು, ದ್ವೇಷ ಸಾಧಿಸೋದ್ರಲ್ಲಿ ನಿಸ್ಸೀಮರು
ಹೊಸ ವರ್ಷದಲ್ಲಿ 3 ರಾಜಯೋಗ, 3 ರಾಶಿಗೆ ಬಹಳಷ್ಟು ಹಣ