ಲಕ್ಷ್ಮಿ ಇದ್ದಲ್ಲಿ ವಿಷ್ಣು ಇರ್ಲೇಬೇಕು. ಹಾಗೆ ವಿಷ್ಣು ಇದ್ದಲ್ಲಿ ಲಕ್ಷ್ಮಿ ಪೂಜೆ ನಡೀಲೇಬೇಕು. ಆದ್ರೆ ದೀಪಾವಳಿ ಸಂದರ್ಭದಲ್ಲಿ ಮಾತ್ರ ವಿಷ್ಣುವನ್ನು ದೂರವಿಟ್ಟು ಲಕ್ಷ್ಮಿ ಆರಾಧನೆ ಮಾತ್ರ ಮಾಡಲಾಗುತ್ತದೆ. ಇದು ಏಕೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.
ದೀಪಗಳ ಹಬ್ಬ ದೀಪಾವಳಿಯಲ್ಲಿ ಎಲ್ಲೆಲ್ಲೂ ಬೆಳಕನ್ನು ನಾವು ನೋಡಬಹುದು. ಮನೆಯ ಸುತ್ತ ದೀಪ ಬೆಳಗಿ ಜನರು ಹಬ್ಬವನ್ನು ಸಂಭ್ರಮಿಸುತ್ತಾರೆ. ಈ ಬಾರಿ ದೀಪಾವಳಿ ಲಕ್ಷ್ಮಿ ಪೂಜೆಯನ್ನು ಅಕ್ಟೋಬರ್ 24 ರಂದು ಸೋಮವಾರ ಆಚರಿಸಲಾಗುತ್ತಿದೆ. ಐದು ದಿನಗಳ ಕಾಲ ನಡೆಯುವ ದೀಪಾವಳಿಯಲ್ಲಿ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ. ಆ ದಿನ ಲಕ್ಷ್ಮಿ ಹಾಗೂ ಗಣೇಶನ ಪೂಜೆ ಮಾಡಲಾಗುತ್ತದೆ. ರಾತ್ರಿ ತಾಯಿ ಲಕ್ಷ್ಮಿ ಮತ್ತು ಗಣಪತಿಗೆ ಭಕ್ತಿಯಿಂದ ಜನರು ಪೂಜೆ ಮಾಡಿ ಅಷ್ಟೈಶ್ವರ್ಯ ನೀಡುವಂತೆ ಬೇಡಿಕೊಳ್ತಾರೆ. ಲಕ್ಷ್ಮಿ ಪೂಜೆ ಮಾಡಿದ್ರೆ ಯಾವುದೇ ಆರ್ಥಿಕ ಕೊರತೆ ಎದುರಾಗುವುದಿಲ್ಲವೆಂದು ನಂಬಲಾಗಿದೆ. ಜೀವನದಲ್ಲಿ ವೈಭವದ ಕೊರತೆ ನೀಗಿಸಲು ಜನರು ತಾಯಿ ಲಕ್ಷ್ಮಿ ಆರಾಧನೆ ಮಾಡ್ತಾರೆ. ಲಕ್ಷ್ಮಿ ಮತ್ತು ಗಣೇಶ ಮಾತ್ರವಲ್ಲ ಕೆಲವು ಕಡೆ ಕುಬೇರ, ತಾಯಿ ಸರಸ್ವತಿ ಹಾಗೂ ಕಾಳಿ ದೇವಿಯ ಪೂಜೆ ಕೂಡ ನಡೆಯುತ್ತದೆ.
ತಾಯಿ ಲಕ್ಷ್ಮಿ (Lakshmi) ಎಂದಾಗ ನೆನಪಾಗೋದು ಭಗವಂತ ವಿಷ್ಣು (Vishnu). ಸಾಮಾನ್ಯವಾಗಿ ಲಕ್ಷ್ಮಿ ಪೂಜೆ ವೇಳೆ ವಿಷ್ಣು, ವಿಷ್ಣುವಿನ ಪೂಜೆ ವೇಳೆ ಲಕ್ಷ್ಮಿ ಇರಲೇಬೇಕು. ಇಬ್ಬರನ್ನು ಒಟ್ಟಿಗೆ ಪೂಜೆ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಸಾಮಾನ್ಯ ದಿನಗಳಲ್ಲಿ ಲಕ್ಷ್ಮಿ ಹಾಗೂ ವಿಷ್ಣುವನ್ನು ಪ್ರತ್ಯೇಕಗೊಳಿಸಿ ಪೂಜೆ ಮಾಡಲಾಗುವುದಿಲ್ಲ. ಆದ್ರೆ ದೀಪಾವಳಿ (Diwali) ಯಲ್ಲಿ ಮಾತ್ರ ತಾಯಿ ಲಕ್ಷ್ಮಿ ಪಕ್ಕದಲ್ಲಿ ವಿಷ್ಣು ಬದಲು ಗಣೇಶ ಕುಳಿತಿರುತ್ತಾನೆ. ಇದಕ್ಕೆ ಮಹತ್ವದ ಕಾರಣವಿದೆ. ಅದೇನು ಎಂಬುದು ಇಲ್ಲಿದೆ.
ಚಾತುರ್ಮಾಸ (Chaturmas) ದಲ್ಲಿ ನಡೆಯುತ್ತೆ ದೀಪಾವಳಿ ಪೂಜೆ : ದೀಪಾವಳಿಯನ್ನು ಚಾತುರ್ಮಾಸದಲ್ಲಿ ಆಚರಣೆ ಮಾಡಲಾಗುತ್ತದೆ. ನಿಮಗೆಲ್ಲ ತಿಳಿದಿರುವಂತೆ ಚಾತುರ್ಮಾಸದಲ್ಲಿ ವಿಷ್ಣು ಯೋಗ ನಿದ್ರೆಯಲ್ಲಿರುತ್ತಾನೆ. ಇದಕ್ಕಾಗಿ ಆತ ಪಾತಾಳಕ್ಕೆ ಹೋಗಿರುತ್ತಾನೆ ಎಂಬ ನಂಬಿಕೆಯಿದೆ. ಈ ಕಾರಣಕ್ಕಾಗಿ ಚಾತುರ್ಮಾಸದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ಮಾಡಲಾಗುವುದಿಲ್ಲ. ಇದೇ ಕಾರಣಕ್ಕೆ ದೀಪಾವಳಿಯಲ್ಲಿ ನಡೆಯುವ ಲಕ್ಷ್ಮಿ ಪೂಜೆ ವೇಳೆ ಭಗವಂತ ವಿಷ್ಣುವಿನ ಪೂಜೆ ನಡೆಯುವುದಿಲ್ಲ. ವಿಷ್ಣುವಿನ ಅನುಪಸ್ಥಿತಿಯಲ್ಲಿ ಲಕ್ಷ್ಮಿ ಜೊತೆ ಆದಿಯಲ್ಲಿ ಮೊದಲು ಪೂಜೆ ಪಡೆಯುವ ಗಣೇಶನನ್ನು ಆರಾಧಿಸಲಾಗುತ್ತದೆ.
ಈ ನಾಲ್ಕು ರಾಶಿಯ ಮಹಿಳೆಯರು ಪತಿಗೆ ಆರ್ಥಿಕವಾಗಿ ನೆರವಾಗಲು ಟ್ರೈ ಮಾಡ್ತಾರೆ!
ದೀಪಾವಳಿಯ ರಾತ್ರಿ ಭೂಮಿಗೆ ಬರ್ತಾಳೆ ಲಕ್ಷ್ಮಿ : ಹಿಂದೂ ಧರ್ಮದ ಪ್ರಕಾರ, ದೀಪಾವಳಿಯ ರಾತ್ರಿ ತಾಯಿ ಲಕ್ಷ್ಮಿ ಭೂಮಿಗೆ ಬರ್ತಾಳೆ. ಇದೇ ಕಾರಣಕ್ಕೆ ಲಕ್ಷ್ಮಿ ಪೂಜೆಯನ್ನು ರಾತ್ರಿ ಮಾಡಲಾಗುತ್ತದೆ. ಲಕ್ಷ್ಮಿ ಮನೆಗೆ ಪ್ರವೇಶ ಮಾಡಲಿ ಎನ್ನುವ ಕಾರಣಕ್ಕೆ ಮನೆ ಮುಂದೆ ತೋರಣ ಕಟ್ಟಿ, ರಂಗೋಲಿ ಹಾಕಿ ದೀಪ ಬೆಳಗುತ್ತಾರೆ. ಭೂಮಿಗೆ ಬರುವ ತಾಯಿ ಲಕ್ಷ್ಮಿ ಭಕ್ತರಿಗೆ ಆಶೀರ್ವಾದ ಮಾಡುತ್ತಾಳಂತೆ.
ವಿಶ್ರಾಂತಿಯಲ್ಲಿ ವಿಷ್ಣು : ನಾಲ್ಕು ತಿಂಗಳ ಕಾಲ ವಿಷ್ಣು ನಿದ್ರೆಯಲ್ಲಿರುತ್ತಾನೆ. ಎಲ್ಲ ಜಗತ್ತಿನ ಜವಾಬ್ದಾರಿ ತೊರೆದು ವಿಶ್ರಾಂತಿ (Rest) ಪಡೆಯುತ್ತಿರುತ್ತಾನೆ. ಈ ಸಮಯದಲ್ಲಿ ಆತನ ವಿಶ್ರಾಂತಿ, ನಿದ್ರೆಗೆ ಅಡ್ಡಿಪಡಿಸಬಾರದು ಎನ್ನುವ ಕಾರಣಕ್ಕೆ ಆತನನ್ನು ಯಾವುದೇ ಕೆಲಸಕ್ಕೆ ಆಹ್ವಾನಿಸುವುದಿಲ್ಲ ಎನ್ನಲಾಗುತ್ತದೆ. ಆದರೆ ದೀಪಾವಳಿಯ ನಂತರ ಬರುವ ಕಾರ್ತಿಕ ಪೂರ್ಣಿಮೆಯ ದಿನ ಭಗವಂತ ವಿಷ್ಣು ಯೋಗ ನಿದ್ರೆಯಿಂದ ಎದ್ದೇಳುತ್ತಾನೆ ಎಂದು ನಂಬಲಾಗಿದೆ. ನಿದ್ರೆ ಮುಗಿಸಿ ಪಾತಾಳದಿಂದ ವಿಷ್ಣು ವೈಕುಂಠಕ್ಕೆ ಹೋಗಿ ತಾಯಿ ಲಕ್ಷ್ಮಿಯೊಂದಿಗೆ ಕುಳಿತುಕೊಳ್ಳುತ್ತಾನೆ ಎಂದು ನಂಬಲಾಗಿದೆ.
ಸಂತೋಷ, ಸಮೃದ್ಧಿ ಹೆಚ್ಚಿಸುವ Diwali Remedies
ವಿಷ್ಣು, ವೈಕುಂಠಕ್ಕೆ ಮರಳಿದ ನಂತ್ರ ಮತ್ತೆ ಧಾರ್ಮಿಕ ಕಾರ್ಯಗಳನ್ನು ಶುರು ಮಾಡಲಾಗುತ್ತದೆ. ಕಾರ್ತಿಕ ಪೂರ್ಣಿಮೆಯಂದು ವೈಕುಂಠದ ಬಾಗಿಲು ತೆರೆಯುತ್ತದೆ. ಪುಣ್ಯ ಮಾಡಿದವರು ವೈಕುಂಠ ಸೇರುತ್ತಾರೆ ಎಂಬ ನಂಬಿಕೆಯಿದ್ದು, ಆ ದಿನ ಭಕ್ತರು ವಿಷ್ಣುವಿನ ನಾಮಸ್ಮರಣೆಯಲ್ಲಿ ತಲ್ಲೀನರಾಗ್ತಾರೆ. ಭಗವಾನ್ ವಿಷ್ಣುವು ಎದ್ದೇಳುವ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇವಾಲಯಗಳಲ್ಲಿ ಸಕಲ ಸಿದ್ಧತೆ ನಡೆದಿರುತ್ತದೆ.