ಕಲ್ಪತರು ನಾಡು ತುಮಕೂರಿನಲ್ಲಿ ದೀಪಾವಳಿ ಸಂಭ್ರಮ

By Kannadaprabha NewsFirst Published Oct 25, 2022, 12:31 AM IST
Highlights

ಕಲ್ಪತರು ನಾಡಿನಲ್ಲಿ ದೀಪಾವಳಿ ಸಂಭ್ರಮ ಭರ್ಜರಿಯಾಗಿದ್ದು ಎಲ್ಲೆಲ್ಲೂ ಹಬ್ಬದ ಕಳೆ ಮನೆ ಮಾಡಿದೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಕಳೆಗುಂದಿದ್ದ ಹಬ್ಬವು ಈ ಬಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. 

ತುಮಕೂರು (ಅ.25): ಕಲ್ಪತರು ನಾಡಿನಲ್ಲಿ ದೀಪಾವಳಿ ಸಂಭ್ರಮ ಭರ್ಜರಿಯಾಗಿದ್ದು ಎಲ್ಲೆಲ್ಲೂ ಹಬ್ಬದ ಕಳೆ ಮನೆ ಮಾಡಿದೆ. ಎರಡು ವರ್ಷಗಳಿಂದ ಕೋವಿಡ್‌ ಕಾರಣದಿಂದ ಕಳೆಗುಂದಿದ್ದ ಹಬ್ಬವು ಈ ಬಾರಿ ಭರ್ಜರಿಯಾಗಿಯೇ ನಡೆಯುತ್ತಿದೆ. ಮಂಗಳವಾರ ಗ್ರಹಣ ಇರುವುದರಿಂದ ಸೋಮವಾರವೇ ನರಕ ಚತುದರ್ಶಿಯಂದು ಲಕ್ಷ್ಮೀ ಪೂಜೆ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ನೀಡಲಾಗಿದೆ. ತುಮಕೂರಿನ ಸೋಮೇಶ್ವರಪುರಂ, ಎಂ.ಜಿ. ರಸ್ತೆ, ಎಸ್‌ಐಟಿ, ಮಂಡಿಪೇಟೆ, ಜಯನಗರ ಸೇರಿದಂತೆ ಬಹುತೇಕ ಎಲ್ಲಾ ಬಡಾವಣೆಗಳಲ್ಲಿನ ಅಂಗಡಿಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸಲಾಗುತ್ತಿದೆ.

ಪಟಾಕಿ ಜೋರು: ಈಗಾಗಲೇ ಹಬ್ಬದ ತಯಾರಿಯಲ್ಲಿ ಸಂಭ್ರಮದಿಂದ ತೊಡಗಿರುವ ಮಕ್ಕಳು ಪಟಾಕಿ ಸಿಡಿಸುವುದನ್ನೇ ಆಗಲೇ ಆರಂಭಿಸಿದ್ದಾರೆ. ಲಕ್ಷ್ಮೀ ಪಟಾಕಿಯಿಂದ ಆನೆ ಪಟಾಕಿ, ಹೂವಿನ ಕುಂಡ, ರಾಕೇಟ್‌, ಭೂಚಕ್ರ ಹೀಗೆ ಥರೇವಾರಿ ಪಟಾಕಿಯನ್ನು ನರಕ ಚತುರ್ದಶಿಯಂದೇ ಶುರು ಮಾಡಿಕೊಂಡಿದ್ದಾರೆ.

Latest Videos

Tumakur : ತೆಂಗಿನ ಚಿಪ್ಪಿನ ಸೌಟ್‌ನಲ್ಲಿ ಆಹಾರ ವಿತರಣೆ; ಪ್ರತಿಭಟನೆ

ಎಲ್ಲೆಲ್ಲೂ ಹಬ್ಬದ ಕಳೆ: ಹಬ್ಬದ ಹಿನ್ನೆಲೆಯಲ್ಲಿ ಪ್ರತಿ ಬಡಾವಣೆಗಳಲ್ಲೂ ಮಿನಿ ಮಾರುಕಟ್ಟೆನಿರ್ಮಾಣವಾಗಿದೆ. ತುಮಕೂರು ಹೊರವಲಯದ ಮಾರುಕಟ್ಟೆಯಲ್ಲಿ ಜನವೋ ಜನ. ಬೆಳಗ್ಗೆಯಿಂದ ಸಂಜೆಯವರೆಗೂ ಹೂವು, ಹಣ್ಣು, ತರಕಾರಿ, ದಿನಸಿ ಪದಾರ್ಥಗಳನ್ನು ಕೊಳ್ಳುವುದರಲ್ಲಿ ಜನ ಮಗ್ನರಾಗಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸೇರಿದಂತೆ ಇಡೀ ಕಲ್ಪತರು ನಾಡು ಹಬ್ಬದ ಕಳೆಯಲ್ಲಿ ಮುಳುಗೇಳಿದೆ.

ಹೂವು ದುಬಾರಿ, ಆದರೂ ಕುಂದಿಲ್ಲ ಸಡಗರ: ಮಾರುದ್ದ ಹೂವಿಗೆ ಊರುದ್ದ ರೇಟು ಇದ್ದರೂ ಕೂಡ ಹಬ್ಬಕ್ಕೆ ಯಾವುದೇ ಕುಂದು ಉಂಟಾಗಿಲ್ಲ. 200 ರುಪಾಯಿವರೆಗೆ ಮಾರು ಹೂವು ಇದ್ದರೂ ಕೂಡ ಜನ ಹೂವನ್ನು ಖರೀದಿಸಲು ಮುಗಿ ಬೀಳುತ್ತಿದ್ದಾರೆ.

ಬಟ್ಟೆ ಅಂಗಡಿಗಳಲ್ಲಿ ಜನ ಸಾಗರ: ಸಡಗರದ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಹೊಸ ಬಟ್ಟೆಗಳನ್ನು ಖರೀದಿಸಲು ಜನ ಅಂಗಡಿಗಳಿಗೆ ಎಡತಾಕುತ್ತಿದ್ದಾರೆ. ಕೆಲ ಅಂಗಡಿಗಳಲ್ಲಿ ಹಬ್ಬಕ್ಕೆ ರಿಯಾಯಿತಿಯನ್ನು ಘೋಷಿಸಿದ್ದಾರೆ. ಬಲಿಪಾಡ್ಯಮಿ ಹಬ್ಬವನ್ನು ಮತ್ತಷ್ಟು ಸಂಭ್ರಮದಿಂದ ಆಚರಿಸುವ ಸಲುವಾಗಿ ಈಗಾಗಲೇ ಅಂಗಡಿ ಮುಂದೆ ಜನ ಎಡತಾಕುತ್ತಿದ್ದಾರೆ.

ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಹಬ್ಬದ ಗಮ್ಮತ್ತು ಈಗಾಗಲೇ ಆರಂಭವಾಗಿದ್ದು ಜನ ಈಗಾಗಲೇ ದೇವಸ್ಥಾನಗಳಿಗೆ ಹೋಗಿ ವಿಶೇಷ ಪೂಜೆಯನ್ನು ಮಾಡಿಸುತ್ತಿದ್ದಾರೆ. ಮಂಗಳವಾರ ಗ್ರಹಣ ಇರುವುದರಿಂದ ಗ್ರಹಣ ಬಿಟ್ಟ ಮೇಲೆ ಮತ್ತೊಂದು ಸುತ್ತಿನ ಪೂಜೆ ಮಾಡಿಸಲು ತೀರ್ಮಾನಿಸಿದ್ದಾರೆ.

Tumakuru: ‘ಕೈ’ಮಲತಾಯಿ ಧೋರಣೆ ಸಲ್ಲ: ಗಂಭೀರ ಪರಿಣಾಮದ ಎಚ್ಚರಿಕೆ

ಎಲ್ಲೆಲ್ಲೂ ಜನಜಂಗುಳಿ: ಹಬ್ಬಕ್ಕೆ ಖರೀದಿಗೆ ಜನ ಸಾಗರವೇ ಹರಿದು ಬರುತ್ತಿರುವುದರಿಂದ ಎಲ್ಲೆಲ್ಲೂ ಜನಜಂಗುಳಿ ಏರ್ಪಾಟಾಗಿದೆ. ಹಬ್ಬದ ಖರೀದಿ ಮುಗಿದ ಮೇಲೆ ಬಾಯಾಡಿಸಲು ಹೋಟೆಲ್‌ಗಳಿಗೂ ನುಗ್ಗುತ್ತಿರುವುದರಿಂದ ಇಡೀ ಕಲ್ಪತರು ನಾಡಿನಲ್ಲಿ ಎಲ್ಲೆಲ್ಲೂ ಜನವೋ ಜನ. ಒಟ್ಟಾರೆಯಾಗಿ 2 ವರ್ಷಗಳ ಕೋವಿಡ್‌ ಬಳಿಕ ಸಂಭ್ರಮದ ದೀಪಾವಳಿ ಆಚರಣೆಗೆ ಕಲ್ಪತರು ನಾಡು ತುಮಕೂರು ಸಜ್ಜಾಗಿದೆ.

click me!