Chandra Grahan 2023: ಗ್ರಹಣ ಕಾಲದಲ್ಲೂ ಈ ದೇವಾಲಯದ ಬಾಗಿಲು ಮುಚ್ಚೋದಿಲ್ಲ! ಕಾರಣವೇನು?

By Suvarna NewsFirst Published Apr 30, 2023, 2:17 PM IST
Highlights

ಗ್ರಹಣ ಕಾಲದಲ್ಲಿ ಎಲ್ಲ ದೇವಾಲಯ ಮುಚ್ಚಿದ್ದರೂ ಕಾಳಹಸ್ತಿ ಕ್ಷೇತ್ರ ಮಾತ್ರ ಭಕ್ತರಿಂದ ತುಂಬಿ ತುಳುಕುತ್ತದೆ. ಈ ದೇವಾಲಯದ ಬಾಗಿಲು ಗ್ರಹಣ ಕಾಲದಲ್ಲೂ ಮುಚ್ಚುವುದಿಲ್ಲ. ಅಂಥ ವಿಶೇಷತೆ ಏನು?

ಪಂಚಾಂಗದ ಪ್ರಕಾರ ಮೇ 5 ವೈಶಾಖ ಪೂರ್ಣಿಮೆ.ಈ ದಿನ ಚಂದ್ರಗ್ರಹಣವೂ ಸಂಭವಿಸಲಿದೆ. ಈ ಬಾರಿ ಚಂದ್ರಗ್ರಹಣವು ಸಂಜೆ 8:44 ಕ್ಕೆ ಪ್ರಾರಂಭವಾಗಿ ತಡರಾತ್ರಿ 1:20 ಕ್ಕೆ ಕೊನೆಗೊಳ್ಳುತ್ತದೆ. ಈ ಗ್ರಹಣವು 4 ಗಂಟೆ 15 ನಿಮಿಷಗಳ ಕಾಲ ಇರುತ್ತದೆ. ಆ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಜ್ಯೋತಿಷಿಗಳ ಪ್ರಕಾರ ಗ್ರಹಣವು ಗೋಚರಿಸದಿದ್ದರೆ ಸೂತಕವು ನಡೆಯುವುದಿಲ್ಲ ಎಂಬುದು ಧಾರ್ಮಿಕ ನಂಬಿಕೆಯಾಗಿದೆ. ಆದಾಗ್ಯೂ, ಗ್ರಹಣದ ಸಮಯದಲ್ಲಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ನಿರ್ದಿಷ್ಟವಾಗಿ, ಗರ್ಭಿಣಿಯರು ವಿಶೇಷ ಗಮನ ನೀಡಬೇಕು. ಸೂರ್ಯ ಮತ್ತು ಚಂದ್ರ ಗ್ರಹಣದ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲ ದೇವಾಲಯಗಳ ಬಾಗಿಲು ಮುಚ್ಚಲಾಗುತ್ತದೆ. ಆದರೆ ನಿಮಗೆ ಗೊತ್ತಾ, ಗ್ರಹಣದ ಸಮಯದಲ್ಲಿ ಕೂಡ ಕಾಳಹಸ್ತಿಯಲ್ಲಿರುವ ಕಾಳಹಸ್ತೀಶ್ವರ ದೇವಸ್ಥಾನದ ಬಾಗಿಲು ತೆರೆದೇ ಇರುತ್ತದೆ. ಅರೆ, ಈ ದೇವಸ್ಥಾನದ ವಿಶೇಷತೆಯೇನು? ಗ್ರಹಣದ ಸಮಯದಲ್ಲಿ ಇತರ ದೇವಾಲಯಗಳನ್ನು ಮುಚ್ಚುವುದೇಕೆ, ಮಹಾಕಾಲ ದೇವಾಲಯವನ್ನು ತೆರೆದಿರುವುದೇಕೆ ಎಲ್ಲವನ್ನೂ ತಿಳಿಯೋಣ ಬನ್ನಿ.

ದೇವಾಲಯಗಳು ಬಾಗಿಲು ಮುಚ್ಚುವುದೇಕೆ?
ದೇವಾಲಯವು ಆಧ್ಯಾತ್ಮಿಕ ಚಿಕಿತ್ಸಾ ಕೇಂದ್ರಗಳು. ನೊಂದ ಮನಸ್ಸಿಗೆ ಸಾಂತ್ವಾನ ಕೇಂದ್ರಗಳು. ದೈವಿಕ ಅಂಶದೊಂದಿಗೆ ಮಾನವನ ಮನಸ್ಸನ್ನು ಬೆರೆಸಬಲ್ಲ ಕ್ಷೇತ್ರಗಳು. ದೇವಾಲಯವನ್ನು ನಿರ್ಮಿಸುವಾಗ, ವಿಶೇಷವಾಗಿ ಗರ್ಭಗುಡಿ ನಿರ್ಮಾಣವಾಗುವಾಗ ಅದೊಂದು ವಿಶೇಷ ಜ್ಯಾಮಿತಿ ಬಳಸಲಾಗುತ್ತದೆ. ಇದರಿಂದ ಆ ಸ್ಥಳದಲ್ಲಿ ಶಕ್ತಿಯ ಹರಿವು ಹೆಚ್ಚಿರುತ್ತದೆ. ಈ ಶಕ್ತಿಯ ಹರಿವಿನ ಕಾರಣದಿಂದಲೇ ಭಕ್ತರು ದೇವಾಲಯದ ಒಳಗಿರುವಾಗ ತಮ್ಮಲ್ಲಿರುವ ದೈವತ್ವವನ್ನು ಅನುಭವಿಸಲು ಸಾಧ್ಯವಾಗುತ್ತದೆ. ಆದರೆ, ಗ್ರಹಣ ಕಾಲದಲ್ಲಿ, ಗರ್ಭಗುಡಿಯಲ್ಲಿರುವ ದೇವರ ವಿಗ್ರಹದ ಸುತ್ತಲಿನ ಸೆಳವು ಸ್ವಲ್ಪಮಟ್ಟಿಗೆ ತೊಂದರೆಗೊಳಗಾಗುತ್ತದೆ. ಏಕೆಂದರೆ ಗ್ರಹಣ ಸಮಯದಲ್ಲಿ ಸೂರ್ಯ ಮತ್ತು ಚಂದ್ರ ಅಸಹಜ ನಕಾರಾತ್ಮಕ ಶಕ್ತಿಯನ್ನು ಬಿಡುಗಡೆ ಮಾಡುತ್ತವೆ. ಈ ಶಕ್ತಿಯು ದೇವಾಲಯದೊಳಗೆ ತುಂಬಿರುವ ಸಕಾರಾತ್ಮಕ ಶಕ್ತಿಯ ಹರಿವಿಗೆ ಅಡ್ಡಿ ಪಡಿಸದಿರಲಿ ಎಂಬ ಕಾರಣಕ್ಕಾಗಿ ಗ್ರಹಣ ಕಾಲದಲ್ಲಿ ದೇವಾಲಯದ ಬಾಗಿಲನ್ನು ಮುಚ್ಚಲಾಗುತ್ತದೆ. ಮತ್ತು ಗ್ರಹಣ ಮುಗಿದ ಬಳಿಕ ದೇವಾಲಯದೊಳಗೆ ವಿಗ್ರಹ ಸೇರಿದಂತೆ ಇಡೀ ಪ್ರಾಂಗಣವನ್ನು ಸ್ವಚ್ಛಗೊಳಿಸಲಾಗುತ್ತದೆ. 

Latest Videos

Mahabharat Katha: ಭೀಮನು ಈ ಕೌರವನನ್ನು ಕೊಂದು ದುಃಖಿಸಿದನು!

ಕಾಳಹಸ್ತಿ ದೇವಾಲಯದ ಬಾಗಿಲೇಕೆ ಮುಚ್ಚುವುದಿಲ್ಲ?
ಗ್ರಹಣ ಸಮಯದಲ್ಲಿ ಎಲ್ಲ ದೇವಾಲಯಗಳ ಬಾಗಿಲು ಮುಚ್ಚುವುದಾದರೂ, ಕಾಳಹಸ್ತಿಯ ಕಾಳಹಸ್ತೇಶ್ವರ ದೇವಾಲಯ ಮಾತ್ರ ತೆರೆದೇ ಇರುತ್ತದೆ. ಇದಕ್ಕೇನು ಕಾರಣ?
ಹಿಂದೂ ನಂಬಿಕೆ ಪ್ರಕಾರ, ಸೂರ್ಯ, ಚಂದ್ರರನ್ನು ರಾಹು ಕೇತುಗಳು ನುಂಗಲು ತೊಡಗಿದಾಗ ಭೂಮಿಯಲ್ಲಿ ಗ್ರಹಣವಾಗುತ್ತದೆ. ಆದರೆ, ಕಾಳಹಸ್ತಿ ದೇವಾಲಯವು ಮುಖ್ಯವಾಗಿ ರಾಹು ಮತ್ತು ಕೇತುವಿಗೆ ಸಂಬಂಧಿಸಿದೆ. ಹೀಗಾಗಿ, ಇಲ್ಲಿ ಗ್ರಹಣದ ಸಮಯದಲ್ಲಿ, ಶ್ರೀ ಕಾಳಹಸ್ತೇಶ್ವರ ಸ್ವಾಮಿಗೆ ಅಭಿಷೇಕವನ್ನು ಮಾಡಲಾಗುತ್ತದೆ ಮತ್ತು ಭಕ್ತರಿಗೆ ರಾಹು ಕೇತು ಪೂಜೆಗಳನ್ನು ಮುಂದುವರೆಸುತ್ತಾರೆ. 

ಜನರು ಗ್ರಹಣದ ಸಮಯದಲ್ಲಿ ಯಾವುದೇ ಪೂಜೆಯನ್ನು ಮಾಡದೆ ಹಲವಾರು ಸಂಪ್ರದಾಯಗಳನ್ನು ಅಭ್ಯಾಸ ಮಾಡುತ್ತಾರೆ. ಆದರೆ ಗ್ರಹಣ ಕಾಲದಲ್ಲಿ ಅದರ ಕಾರಕರಾದ ರಾಹುಕೇತುಗಳನ್ನು ಪೂಜಿಸುವುದರಿಂದ ಗ್ರಹಣದ ನಕಾರಾತ್ಮಕ ಪರಿಣಾಮ ತಮ್ಮ ಮೇಲೆ ಬೀಳುವುದಿಲ್ಲ ಎಂದು ನಂಬುತ್ತಾರೆ. ಅಲ್ಲದೆ, ಜಾತಕದಲ್ಲಿ ರಾಹು,ಕೇತು ಸಂಬಂಧಿ ದೋಷವಿರುವವರು ಸಹ ವಿಶೇಷವಾಗಿ ಗ್ರಹಣದ ಸಮಯದಲ್ಲಿ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಮತ್ತು ರಾಹು ಕೇತು ಪೂಜೆ ಕೈಗೊಳ್ಳುತ್ತಾರೆ. 

Shukra Gochar 2023: 5 ರಾಶಿಗೆ ಶುಕ್ರನಿಂದ ಶುಭ ಕಾಲ

ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.

click me!