ನಾನಿರೋವರೆಗೂ ಮೀಸಲು ರದ್ದಾಗಲ್ಲ| ಮೀಸಲು ಬದಲಾಗದಂತೆ ನೋಡಿಕೊಳ್ಳುವೆ: ಮೋದಿ ಘೋಷಣೆ
ನಂದೂರ್ಬಾರ್[ಏ.23]: ಬಿಜೆಪಿ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಗೊಳಿಸುತ್ತದೆ ಎಂದು ಪ್ರತಿಪಕ್ಷಗಳು ಗಾಳಿ ಸುದ್ದಿ ಹಬ್ಬಿಸುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಿಡಿಕಾರಿದ್ದಾರೆ. ನಾನು ಇರುವವರೆಗೂ ಡಾ
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮಗೆ ನೀಡಿರುವ ಮೀಸಲಾತಿಯನ್ನು ಯಾರೂ ಮುಟ್ಟಲು ಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ.
ಉತ್ತರ ಮಹಾರಾಷ್ಟ್ರದಲ್ಲಿ ಸೋಮವಾರ ಚುನಾವಣಾ ರಾರಯಲಿ ಉದ್ದೇಶಿಸಿ ಮಾತನಾಡಿದ ಅವರು, ಮೀಸಲಾತಿ ಪ್ರಮಾಣದಲ್ಲಿ ಯಾವುದೇ ವ್ಯತ್ಯಾಸ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಹೇಳಿದರು.
ಉತ್ತರ ಮಹಾರಾಷ್ಟ್ರದಲ್ಲಿ ಬುಡಕಟ್ಟು ಜನರ ಸಂಖ್ಯೆಯೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ಮಹತ್ವದ ಭರವಸೆಯೊಂದನ್ನು ನೀಡಿದ ಮೋದಿ, ಬುಡಕಟ್ಟು ಜನರನ್ನು ಅವರ ನೆಲದಿಂದ ತೆರವುಗೊಳಿಸುವುದಿಲ್ಲ ಎಂದು ಹೇಳಿದರು.
ಉತ್ತರ ಮಹಾರಾಷ್ಟ್ರ ಕಬ್ಬು ಬೆಳೆಯುತ್ತದೆ. ಅದನ್ನು ಎಥನಾಲ್ ಉತ್ಪಾದನೆಗೆ ಬಳಸಿಕೊಳ್ಳಬಹುದು. ಇದರಿಂದ ಸ್ಥಳೀಯರಿಗೆ ಉದ್ಯೋಗ ಸಿಗುತ್ತದೆ. ಆದರೆ ಹಾಗಾಗಲು ಕಾಂಗ್ರೆಸ್- ಎನ್ಸಿಪಿ ನಾಯಕರು ಬಿಡುವುದಿಲ್ಲ. ತೈಲ ಆಮದಿನಿಂದ ಈ ನಾಯಕರು ಲಂಚ ಪಡೆಯುತ್ತಿದ್ದರು. ಎಥನಾಲ್ ಮಿಶ್ರಣದಿಂದ ತೈಲ ಆಮದು ಕಡಿಮೆಯಾದರೆ, ತಮ್ಮ ಆದಾಯ ಕಡಿಮೆಯಾಗುತ್ತದೆ ಎಂಬ ಭೀತಿ ಈ ನಾಯಕರಿಗೆ ಇದೆ ಎಂದು ಮೋದಿ ಚಾಟಿ ಬೀಸಿದರು.