ಚುನಾವಣಾ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮಾಯಾವತಿ ಕೊಟ್ರು ಕಹಿ ಸುದ್ದಿ| ಕಾಂಗ್ರೆಸ್ ಜೊತೆ ದೇಶದ ಯಾವುದೇ ಮೂಲೆಯಲ್ಲೂ ಮೈತ್ರಿ ಮಾಡಿಕೊಳ್ಳುವುದಿಲ್ಲ
ಲಕ್ನೋ[ಮಾ.12]: ದೇಶದ ಯಾವುದೇ ಕ್ಷೇತ್ರದಲ್ಲೂ BSPಯು ಕಾಂಗ್ರೆಸ್ ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಪಕ್ಷದ ನಾಯಕಿ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರದಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಯಾವತಿ BSP ಹಾಗೂ ಸಮಾಜವಾದಿ ಪಕ್ಷಗಳ ಮೈತ್ರಿ ಬಿಜೆಪಿಯನ್ನು ಸೋಲಿಸುವ ಸಾಮರ್ಥ್ಯ ಹೊಂದಿವೆ. ಉಭಯ ಪಕ್ಷಗಳು ಪರಸ್ಪರ ಗೌರವ ಹೊಂದಿವೆ ಹಾಗೂ ನಿಯತ್ತಿನಿಂದ ಒಟ್ಟಾಗಿ ಕಾರ್ಯ ನಿರ್ವಹಿಸುತ್ತಿವೆ. ಲ್ಲದೇ ಉತ್ತರ ಪ್ರದೇಶ, ಉತ್ತರಾಖಂಡ್ ಹಾಗೂ ಮಧ್ಯಪ್ರದೇಶದಲ್ಲಿ ಇದು 'ಪರ್ಫೆಕ್ಟ್ ಮೈತ್ರಿ' ಎಂದೇ ಕರೆಯಲಾಗುತ್ತಿದೆ. ಈ ಮೈತ್ರಿ ಸಾಮಾಜಿಕ ಪರಿವರ್ತನೆ ತರುವುದರೊಂದಿಗೆ ಬಿಜೆಪಿಯನ್ನು ಸೋಲಿಸುವ ಕ್ಷಮತೆ ಹೊಂದಿದೆ ಎಂದಿದ್ದಾರೆ.
'BSP ಜೊತೆ ಹಲವಾರು ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಆತುರದಿಂದ ಕಾಯುತ್ತಿವೆ. ಆದರೆ ಚುನಾವಣೆಯ ಲಾಭ ಪಡೆಯಲು ಪಕ್ಷದ ಹಿತವನ್ನು ಕದಡುವ ನಿರ್ಧಾರ ತೆಗೆದುಕೊಳ್ಳಲು ನಾನು ತಯಾರಿಲ್ಲ' ಎಂದೂ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಪಕ್ಷವನ್ನು ಪ್ರಾಥಮಿಕ ಹಂತದಲ್ಲಿ ಬಲಪಡಿಸಲು ಮಾಯಾವತಿ ತನ್ನ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು, ಈ ನಿಟ್ಟಿನಲ್ಲಿ ಕೆಲಸ ಮಾಡಿ ಪಕ್ಷವನ್ನು ಬಲಪಡಿಸುವಂತೆ ಸೂಚಿಸಿದ್ದಾರೆ.