ತಮ್ಮ ಮತ ತಮಗೆ ಚಲಾಯಿಸಿಕೊಳ್ಳದ ಎಚ್.ಡಿ ದೇವೇಗೌಡರು ತಾವು ಯಾರಿಗೆ ಮತ ಹಾಕಿದ್ದೇವೆ ಎನ್ನುವುದನ್ನು ರಿವೀಲ್ ಮಾಡಿದ್ದಾರೆ.
ಹಾಸನ: ರಾಜ್ಯದಲ್ಲಿ ಲೋಕಸಭಾ ಮಹಾ ಸಮರ ಆರಂಭವಾಗಿದೆ. 14 ಕ್ಷೇತ್ರಗಳಲ್ಲಿ ಬಿರುಸಿನ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು, ಹಾಸನದಲ್ಲಿ ಎಚ್.ಡಿ.ದೇವೇಗೌಡ - ಚೆನ್ನಮ್ಮ ದಂಪತಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಮತ ಹಾಕಿ ತಮ್ಮ ಮತದಾನವನ್ನು ರಿವೀಲ್ ಮಾಡಿದ್ದು, ಮೊಮ್ಮಗ ಪ್ರಜ್ವಲ್ ಗೆ ಓಟ್ ಹಾಕಿದ್ದಾಗಿ ಹೇಳಿದ್ದಾರೆ. 1994ರಿಂದ ರೇವಣ್ಣಗೆ ಮತ ಹಾಕುತ್ತಿದ್ದು, ಇದೀಗ ಮೊಮ್ಮಗ ಪ್ರಜ್ವಲ್ ಗೆ ಮತ ಚಲಾಯಿಸಿದ್ದೇವೆ ಎಂದಿದ್ದಾರೆ.
ಅನೇಕರು ನಮ್ಮ ವಂಶದ ರಾಜಕೀಯದ ಬಗ್ಗೆ ಮಾತನಾಡಿದ್ದಾರೆ. ಆದರೆ ನಾವು ರೈತರ ಮಕ್ಕಳು, ದೈವದಲ್ಲಿ ನಂಬಿಕೆ ಇಟ್ಟು ಕೊಂಡಿದ್ದೇವೆ. ದೈವಕೃಪೆ, ಮತದಾರರ ಆಶೀರ್ವಾದ ದಿಂದ ಹಂತ ಹಂತವಾಗಿ ಬೆಳೆದು ಬಂದಿದ್ದೇವೆ. ಕೈಲಾದ ಮಟ್ಟಿಗೆ ಮತದಾರರ ಸೇವೆ ಮಾಡಿದ್ದೇವೆ ಎಂದರು.
ಇನ್ನು ಪ್ರಜ್ವಲ್ ಇಂಜಿನಿಯರಿಂಗ್ ಪದವೀಧರ, ಎಲ್ಲರ ಅಭಿಪ್ರಾಯ ಪಡೆದು ಅಭ್ಯರ್ಥಿ ಮಾಡಿದ್ದೇವೆ. ಪ್ರಜ್ವಲ್ ಜಯಗಳಿಸುವುದರಲ್ಲಿ ನಮಗೆ ಯಾವ ಸಂಶಯವೂ ಇಲ್ಲ. ಮಂಡ್ಯದಲ್ಲೂ ನಿಖಿಲ್ ಸಮಸ್ಯೆ ಇಲ್ಲದೆ ಗೆಲ್ಲುತ್ತಾರೆ. ತುಮಕೂರಿನಲ್ಲಿ ನಾನು ನಿಂತಿದ್ದೇನೆ, ಇದೆಲ್ಲಾ ದೈವದ ಆಟ ಕಾಂಗ್ರೆಸ್ ನಾವು ಒಗ್ಗಟ್ಟಿನಿಂದ ಚುನಾವಣೆ ಎದುರಿಸಿದ್ದೇವೆ. ಮೊದಲ ಹಂತದ 14 ಕ್ಷೇತ್ರಗಳಲ್ಲಿ ನಾವು 10 ಸ್ಥಾನದಲ್ಲಿ ಗೆಲ್ಲುವ ವಿಶ್ವಾಸವಿದೆ.
2 ನೇ ಹಂತದ ಕ್ಷೇತ್ರಗಳಲ್ಲೂ ರಾಹುಲ್ ಗಾಂಧಿ ಹಾಗೂ ಕೈ ನಾಯಕರ ಜೊತೆ ಜಂಟಿ ಪ್ರಚಾರ ಮಾಡುತ್ತೇನೆ. ಈ ಬಾರಿ ಬಹುಶಃ ಅತಂತ್ರದ ಲೋಕಸಭೆ ನಿರ್ಮಾಣವಾಗಬಹುದು. ಅಂತಿಮವಾಗಿ ಜಾತ್ಯಾತೀತ ಪಕ್ಷಗಳು ಅಧಿಕಾರ ಹಿಡಿಯಬಹುದು. ಎಲ್ಲದಕ್ಕೂ ಮೇ 23 ರ ನಂತರ ಒಂದು ರೂಪ ಬರಲಿದೆ. ರಾಹುಲ್ ಗಾಂಧಿ ಪ್ರಧಾನಿಯಾಗಲು ನನ್ನ ಬೆಂಬಲವಿದೆ ಎಂದು ಎಚ್.ಡಿ ದೇವೇಗೌಡ ಹೇಳಿದರು.