ಲೋಕಸಭಾ ಫಲಿತಾಂಶ ಬಂದ 24 ಗಂಟೆಯಲ್ಲಿ ಸರ್ಕಾರ ಪತನ : ಹೊಸ ಬಾಂಬ್

By Web DeskFirst Published Apr 19, 2019, 7:29 AM IST
Highlights

ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಲೀಡರ್ ಬಿಎಸ್ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. 

ಮಸ್ಕಿ :  ಲೋಕಸಭೆ ಚುನಾವಣೆ ಫಲಿತಾಂಶ ಬಂದ 24 ಗಂಟೆಯೊಳಗಾಗಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರ್ಕಾರ ಪತನವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭವಿಷ್ಯ ನುಡಿದರು.

ಕೊಪ್ಪಳ ಲೋಕಸಭೆ ಚುನಾವಣೆ ಹಿನ್ನಲೆಯಲ್ಲಿ ಮಸ್ಕಿ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ವಿಜಯ ಸಂಕಲ್ಪಯಾತ್ರೆಗೆ ಚಾಲನೆ ನೀಡಿದ ಅವರು, ಸಿಎಂ ಕುಮಾರಸ್ವಾಮಿ ಮಂಡ್ಯದಲ್ಲಿ ತಮ್ಮ ಮಗ ನಿಖಿಲ್‌ ಅವರನ್ನು ಗೆಲ್ಲಿಸಲು 150 ಕೋಟಿ ಖರ್ಚು ಮಾಡುತ್ತಿದ್ದಾರೆ ಎಂದು ಐಟಿ ಇಲಾಖೆ ಅಧಿಕಾರಿಗಳ ಮುಂದೆ ಖುದ್ದು ಅವರ ಕಾರ್ಯಕರ್ತರೇ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿ ಜನರ ತೆರಿಗೆ ಹಣವನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದು ಪುಷ್ಟಿನೀಡುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ಬಿಜೆಪಿ ಗೆಲುವು ಖಚಿತ:

ಹಣಬಲ ಹಾಗೂ ಜಾತಿಗಳ ಮಧ್ಯ ವೀಷಬೀಜ ಬಿತ್ತಿ ಚುನಾವಣೆ ಗೆಲ್ಲುವುದು ಅಸಾಧ್ಯವಾದುದು. ಜನರು ತುಂಬಾ ಬುದ್ಧಿವಂತರಿದ್ದಾರೆ. ಈ ಬಾರಿ ಚುನಾವಣೆಯಲ್ಲಿ ಇದಕ್ಕೆಲ್ಲಾ ತಕ್ಕ ಉತ್ತರ ನೀಡಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಬರುವುದು ಖಚಿತ ಅದನ್ನು ಯಾರಿಂದ ತಡೆಯಲು ಸಾದ್ಯವಿಲ್ಲ. ಬರೀ ಭಾಷಣ ಹೇಳುವುದು ಹಾಗೂ ಕೇಳುವುದರಿಂದ ಏನೂ ಆಗಲ್ಲ. ಅದಕ್ಕಾಗಿ ಏ.23ರಂದು ನಡೆಯುವ ಲೋಕಸಭೆ ಚುನಾವಣೆಯಲ್ಲಿ ಯುವಕರು ಕಾಂಗ್ರೆಸ್‌ ಹಾಗೂ ಜೆಡಿಎಸ್‌ನವರ ಮನೆಗೆ ಹೊಗಿ ಬಿಜೆಪಿ ಪಕ್ಷಕ್ಕೆ ಮತಗಳನ್ನು ಹಾಕಿಸುವ ಮೂಲಕ ಸಂಗಣ್ಣ ಕರಡಿಯವರನ್ನು ಮತ್ತೊಮ್ಮೆ ಗೆಲ್ಲಿಸಿ ಸಂಸದರಾಗಿ ಆಯ್ಕೆ ಮಾಡುವಂತೆ ಮನವಿ ಮಾಡಬೇಕು ಹಾಗ ಮಾತ್ರ ಈ ಭಾಗ ಇನ್ನಷ್ಟುಅಭಿವೃದ್ಧಿ ಆಗುತ್ತದೆ. ದೇಶದ ರೈತರಿಗೆ ಆದಾಯ ದ್ವಿಗುಣ ಗೋಳಿಸಲಾಗುವುದು. ನದಿಗಳ ಜೋಡಣೆ ಮಾಡಿ ಕಾರ್ಯದ ಜೊತೆಗೆ ಈ ಭಾಗದ ನೀರಾವರಿ ಯೋಜನೆಗಳನ್ನು ಸಂಪೂರ್ಣ ಮಾಡಲಾಗುವುದು ಎಂದು ಭರವಸೆ ನೀಡಿದರು.

click me!