ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಓವೈಸಿ ವಾಗ್ದಾಳಿ| ಕಾಶ್ಮೀರ ಕುರಿತಾಗಿ ಇಮ್ರಾನ್ ಖಾನ್ ಕಾಣುತ್ತಿರುವ ಕನಸು ನನಸಾಗುವುದಿಲ್ಲ| ಭಾರತದಲ್ಲಿ ಈಗ ಮೋದಿ ಅಲೆ ಇಲ್ಲ
ತೆಲಂಗಾಣ[ಏ.11]: ಲೋಕಸಭಾ ಚುನಾವಣೆಯ ಮೊದಲ ಹಂತ ಈಗಾಗಲೇ ಆರಂಭವಾಗಿದೆ. ತೆಲಂಗಾಣದ ಎಲ್ಲಾ ಕ್ಷೇತ್ರಗಳಿಗೂ ಗುರುವಾರದಂದು ಮತದಾನ ನಡೆಯಲಿದೆ. ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಅಭ್ಯರ್ಥಿ ಅಸಾವುದ್ದೀನ್ ಓವೈಸಿ ಹಾಗೂ AIMIM ನೇತಾರ ತಮ್ಮ ಮತ ಚಲಾಯಿಸಿದ್ದಾರೆ. ಇನ್ನು ಮತದಾನ ಮಾಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಓವೈಸಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ನೆಪವಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
2014ರಲ್ಲಿ ದೇಶದಲ್ಲಿ ಮೋದಿ ಅಲೆ ಇತ್ತು ಆದರೆ ಈಗ ಅದು ಇಲ್ಲ. ಹೀಗಿರುವಾಗ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕನಸು ಯಾವತ್ತಿಗೂ ನನಸಾಗುವುದಿಲ್ಲ. ಪಾಕ್ ಪ್ರಧಾನಿ ಮೋದಿ ಭಾರತದ ಪ್ರಧಾನಿಯಾಗಬೇಕೆಂದು ಇಚ್ಛಿಸುತ್ತಾರೆ. ಈ ಮೂಲಕ ಕಾಶ್ಮೀರ ಸಮಸ್ಯೆ ಬಗೆಹರಿಯುತ್ತದೆ ಎಂಬುವುದು ಅವರ ವಿಶ್ವಾಸ ಎಂದಿದ್ದಾರೆ.
ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಓವೈಸಿ, ಜಮ್ಮು ಕಾಶ್ಮೀರ ಯಾರ ತಂದೆಯ ಆಸ್ತಿಯೂ ಅಲ್ಲ. ಕಾಶ್ಮೀರ ಭಾರತದ ಭಾಗ, ಅದು ನಮ್ಮ ಅಂತರಾಳ. ನಾವು ಕಾಶ್ಮೀರಕ್ಕೆ ಬಹಳಷ್ಟು ಕೊಡುಗೆ ನೀಡಬಯಸುತ್ತೇವೆ ಆದರೆ ಮೋದಿ ಇದರಲ್ಲಿ ವಿಫಲರಾಗಿದ್ದಾರೆ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ತೆಲಂಗಾಣದ ಜನರು ಇಲ್ಲಿ ಅಭಿವೃದ್ಧಿ ತಂದಿರುವವರಿಗಷ್ಟೇ ಮತ ಹಾಕಲಿದ್ದಾರೆ. ಆಂಧ್ರದಲ್ಲೂ ನನ್ನ ಗೆಳೆಯ ಜಗನ್ ಗೆಲ್ಲುತ್ತಾರೆ ಎಂಬ ಭರವಸೆ ವ್ಯಕ್ತಪಡಿಸಿದ್ದಾರೆ.