Akkamahadevi Women's University ಮುಚ್ಚುವ ಪ್ರಶ್ನೇಯೇ ಇಲ್ಲವೆಂದ ಕಾರಜೋಳ

By Suvarna NewsFirst Published Jan 24, 2022, 2:55 PM IST
Highlights

ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು  ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಅಕ್ಕಮಹಾದೇವಿ ಮಹಿಳಾ ವಿ.ವಿ. ಮುಚ್ಚುವ ಪ್ರಶ್ನೇಯೇ ಇಲ್ಲ ಎಂದು  ಸಚಿವ ಗೋವಿಂದ ಎಂ.ಕಾರಜೋಳ ಹೇಳಿದ್ದಾರೆ.

ವಿಜಯಪುರ(ಜ.23): ವಿಜಯಪುರದಲ್ಲಿ ಕಳೆದ 2 ದಶಕಗಳಿಂದ ನಾಡು ಹೆಮ್ಮೆ ಪಡುವಂತಹ ಕೆಲಸ ಮಾಡುತ್ತಿರುವ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯವನ್ನು (Karnataka State Akkamahadevi Women's University - KSAWU) ಈಗ ಏಕಾಏಕಿಯಾಗಿ ಕೊನೆಗಾಣಿಸುವ ಸಂಚು ನಡೆದಿದೆ ಎಂಬ ಆರೋಪದ ಬೆನ್ನಲ್ಲೇ ಅಕ್ಕಮಹಾದೇವಿ ಮಹಿಳಾ ವಿ.ವಿ. ಮುಚ್ಚುವ ಪ್ರಶ್ನೇಯೇ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಎಂ.ಕಾರಜೋಳ (Govinda Karajola) ಹೇಳಿಕೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಪೂರಕವಾಗುವಂತೆ ಆ ಭಾಗದ ಹೆಣ್ಣುಮಕ್ಕಳು ಹೆಚ್ಚು, ಹೆಚ್ಚು ವಿದ್ಯಾವಂತರಾಗುವಂತೆ ಶೈಕ್ಷಣಿಕ ವ್ಯವಸ್ಥೆಯನ್ನು ಉನ್ನತೀಕರಿಸಲು ತನ್ಮೂಲಕ ಸುಸಂಸ್ಕೃತ, ಸುಶಿಕ್ಷಿತ ಸಮಾಜವನ್ನು ನಿರ್ಮಿಸಿ ಸ್ವಾವಲಂಬಿ ಮಹಿಳೆಯರನ್ನು ಉತ್ತೇಜಿಸುವ ಉದಾತ್ತ ಉದ್ದೇಶದಿಂದ ಪ್ರಾರಂಭವಾದ ವಿಜಯಪುರದ ಮಹಿಳಾ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಶ್ನೆಯೇ ಇಲ್ಲ. ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಆ ಭಾಗದ ಜನಪ್ರತಿನಿಧಿಯಾಗಿ ಮತ್ತು ಜನಸಮುದಾಯದ ಆಶೋತ್ತರಗಳನ್ನು ಈಡೇರಿಸುವ ಮತ್ತು ಜನರ ಅಪೇಕ್ಷೆ, ನಿರೀಕ್ಷೆಗಳಿಗೆ ತಕ್ಕಂತೆ ಕಾರ್ಯ ನಿರ್ವಹಿಸುವ ಅಳಿಲುಸೇವೆಯ ಮೂಲಕ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಕೊಡುಗೆ ನೀಡುವ ಸೌಭಾಗ್ಯವು ನನ್ನದಾಗಿದೆ ಎಂದಿದ್ದಾರೆ.

ಈ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಕೇವಲ ಒಂದೇ ಜಿಲ್ಲೆ ಅಲ್ಲ. ಹದಿಮೂರು ಜಿಲ್ಲೆಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿವೆ. ಈ ಮಹಿಳಾ ವಿಶ್ವ ವಿದ್ಯಾಲಯವನ್ನು ಅಕ್ಕಮಹಾದೇವಿ ಮಹಿಳಾ ವಿಶ್ವ ವಿದ್ಯಾಲಯ ಎಂದು ಪುನರ್ ನಾಮಕರಣ ಮಾಡಿ ವಚನ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದ ಅಕ್ಕಮಹಾದೇವಿಯವರಿಗೆ ಗೌರವ ಸಲ್ಲಿಸಿದ ಕೀರ್ತಿ ಭಾರತೀಯ ಜನತಾ ಪಕ್ಷದ ಸರ್ಕಾರಕ್ಕೆ ಸಲ್ಲುತ್ತದೆ.

Akkamahadevi Womens University conspiracy: ಸರ್ಕಾರದಿಂದ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮುಚ್ಚುವ ಸಂಚು!

 ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವ ಸದುದ್ದೇಶದಿಂದ ಪ್ರಾರಂಭವಾಗಿರುವ ಮಹಿಳಾ ವಿಶ್ವ ವಿದ್ಯಾಲಯವನ್ನು ಮುಚ್ಚಲಾಗುವುದು ಎಂಬ ಸುಳ್ಳು ವದಂತಿಗಳನ್ನು ಯಾರೂ ಹರಡಬಾರದು ಮತ್ತು ಇಂತಹ ಸುಳ್ಳುವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು  ವಿನಂತಿಸುತ್ತೇನೆ ಎಂದು ಹೇಳಿದ್ದಾರೆ.

ಆರೋಪವೇನು?: ರಾಜ್ಯದಾದ್ಯಂತ ಎಲ್ಲಾ ಸರ್ಕಾರಿ ಮಹಿಳಾ ಪದವಿ ಕಾಲೇಜುಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿರುವ ನಾಡಿನ ಏಕೈಕ ಮಹಿಳಾ ವಿಶ್ವವಿದ್ಯಾಲಯವನ್ನು ಈಗ ವಿಜಯಪುರ (Vijayapura) ಮತ್ತು ಬಾಗಲಕೋಟೆ (Bagalkote) ಜಿಲ್ಲೆಗಳ ಕೆಳಗೆ ಬರುವ ಎಲ್ಲ ಪದವಿ ಕಾಲೇಜುಗಳನ್ನು  ಒಳಗೊಳ್ಳುವಂತಹ ವಿಶ್ವವಿದ್ಯಾಲಯದ ಮಟ್ಟಕ್ಕೆ ಇಳಿಸಿ, ಅದನ್ನು ಸಹಶಿಕ್ಷಣ (Co-Education) ವಿಶ್ವವಿದ್ಯಾಲಯವನ್ನಾಗಿಸುವ ಹುನ್ನಾರ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಬಿಡುವಂತೆ ಒತ್ತಾಯಿಸಿ ಎಲ್ಲಾ ಮಹಿಳಾಪರ ಸಂಘಟನೆ, ಪ್ರಗತಿಪರ ಚಿಂತಕರು, ಹೋರಾಟಗಾರರು ಜನವರಿ 21ರಂದು ವಿರೋಧ ಪಕ್ಷದ ನಾಯಕರಾದ ಶ್ರೀ ಸಿದ್ದರಾಮಯ್ಯ ಅವರನ್ನು ಹಾಗೂ ಕೆಪಿಸಿಸಿಯ ರಾಜ್ಯಾಧ್ಯಕ್ಷರಾದ ಶ್ರೀ ಡಿ. ಕೆ. ಶಿವಕುಮಾರ್ ರವರನ್ನು ಒಂದು ನಿಯೋಗದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದರು.

IGNOU BSW Programme: ವರ್ಚುವಲ್ ಮೋಡ್‌ನಲ್ಲಿ BSW ಕೋರ್ಸ್ ಆರಂಭಿಸಿದ ಇಗ್ನೋ

ಮಹಿಳಾ ವಿವಿಯ ಪ್ರಸಕ್ತ ಪರಿಸ್ಥಿತಿ ಹೇಗಿದೆಯೆಂದರೆ ಅಲ್ಲಿ ಅಧ್ಯಯನ ಮಾಡುತ್ತಿರುವ ಶೇಕಡಾ 75 ರಷ್ಟು ವಿದ್ಯಾರ್ಥಿನಿಯರ ಹಿನ್ನೆಲೆಯನ್ನು ಗಮನಿಸಿದರೆ ಮಹಿಳಾ ವಿಶ್ವವಿದ್ಯಾಲಯದ ಅವಶ್ಯಕತೆ ಮನದಟ್ಟಾಗುತ್ತದೆ. ಅವರಲ್ಲಿ ಒಂಟಿ ಮಹಿಳೆಯರು -  ವಿಚ್ಛೇದಿತರು, ವಿಧವೆಯರು, ಅಲ್ಪಸಂಖ್ಯಾತ ಹೆಣ್ಣುಮಕ್ಕಳೇ ಹೆಚ್ಚಿನವರು. ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಸಹ  ಮಹಿಳಾ ವಿದ್ಯಾಲಯಗಳಿದ್ದರೆ ಮಾತ್ರ ಇಂತಹ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಪಡೆದುಕೊಳ್ಳುವುದು ಸಾಧ್ಯವೆನ್ನುವಂತಹ ಪರಿಸ್ಥಿತಿ ಇದೆ. 

ವಾಸ್ತವ ಪರಿಸ್ಥಿತಿ ಹೀಗಿರುವಾಗ, ಬಹಳ ಕಷ್ಟದಿಂದ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾಲಯವನ್ನು ಮತ್ತಷ್ಟು ಚೆನ್ನಾಗಿ ಕೆಲಸ ಮಾಡುವಂತೆ ಎಲ್ಲ ರೀತಿಯ ಪ್ರೋತ್ಸಾಹ, ಧನಸಹಾಯ ಕೊಡುವುದು ಬಿಟ್ಟು ಅದನ್ನು ಕೊನೆಗೊಳಿಸ ಹೊರಟಿರುವುದು ಸರ್ಕಾರದ ಮಹಿಳಾ ವಿರೋಧ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ನಿಯೋಗ ಆರೋಪಿಸಿತ್ತು.

ಈ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿರುವ ಎಲ್ಲ ಮಹಿಳಾಪರ, ಪ್ರಗತಿಪರ ಚಿಂತಕರು, ಹೋರಾಟಗಾರರು ಜನವರಿ 21ರಂದು ವಿರೋಧ ಪಕ್ಷದ ನಾಯಕರನ್ನು ಭೇಟಿ ನೀಡಿ ಮಾತುಕತೆ ನಡೆಸಿದರು. ಸರ್ಕಾರದ  ಈ ನಡೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ  ಸಿದ್ದರಾಮಯ್ಯ ಮತ್ತು ಡಿಕೆಶಿ ಇದನ್ನು ತಡೆಯುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದರು.

ನಿಯೋಗದಲ್ಲಿ ಮಾಜಿ ಸಚಿವರಾದ ಶ್ರೀಮತಿ ಲೀಲಾದೇವಿ ಆರ್ ಪ್ರಸಾದ್, ಮಹಿಳಾ ವಿವಿಯ ವಿಶ್ರಾಂತ ಉಪಕುಲಪತಿಗಳಾದ ಶ್ರೀಮತಿ ಸಬಿಹಾ ಭೂಮಿಗೌಡ, ಲೈಂಗಿಕ ಅಲ್ಪಸಂಖ್ಯಾತರ ಹೋರಾಟಗಾರರಾದ ಅಕ್ಕಯ್ ಪದ್ಮಶಾಲಿ,  ಹಾಗೂ ಮಹಿಳಾ ಹಕ್ಕು ಹೋರಾಟಗಾರರಾದ ಡಾ ಕೆ. ಶರೀಫಾ, ಡಾ. ವಸುಂಧರ ಭೂಪತಿ, ದು. ಸರಸ್ವತಿ, ಡಾ. ಎಚ್. ಜಿ. ಜಯಲಕ್ಷ್ಮಿ, ಅಖಿಲಾ ವಿದ್ಯಾಸಂದ್ರ, ಪ್ರತಿಭಾ, ಮಧು ಭೂಷಣ್, ಮಮತಾ, ಚಂದ್ರಾವತಿ ಮತ್ತಿತರರು ಇದ್ದರು.

click me!