ರಾಜ್ಯದಲ್ಲಿ 7 ಐಐಟಿ ಸ್ಥಾಪನೆ ಗುರಿ: ಸಿಎಂ

By Kannadaprabha NewsFirst Published Sep 16, 2022, 5:55 AM IST
Highlights

ರಾಜ್ಯದಲ್ಲಿ ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳನ್ನು ಸ್ಥಾಪಿಸುವ ದೂರದೃಷ್ಟಿಹೊಂದಲಾಗಿದೆ. ಮೂರು ವರ್ಷದಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲ (ಯುವಿಸಿಇ)ಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ಬೆಂಗಳೂರು (ಸೆ.16) : ರಾಜ್ಯದಲ್ಲಿ ಏಳು ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ)ಗಳನ್ನು ಸ್ಥಾಪಿಸುವ ದೂರದೃಷ್ಟಿಹೊಂದಲಾಗಿದೆ. ಮೂರು ವರ್ಷದಲ್ಲಿ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜು ವಿಶ್ವವಿದ್ಯಾಲ (ಯುವಿಸಿಇ)ಯವನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಲಿದ್ದು, ಬಂಡೆಯಂತೆ ನಿಮ್ಮ ಜೊತೆಗಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

JoSAA Counselling 2022; ಜೆಇಇ ಕಟ್-ಆಫ್ ಅಂಕಗಳ ಕುಸಿತವು ಪ್ರವೇಶಾತಿ ಮೇಲೆ ಪರಿಣಾಮವಾಗಲ್ಲ

ಕೆ.ಆರ್‌.ವೃತ್ತ(K.R.Circle)ದಲ್ಲಿರುವ ವಿಶ್ವೇಶ್ವರಯ್ಯ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌(Visvesvaraya College of Engineering)ಗೆ ಸ್ವಾಯತ್ತ ಸಂಸ್ಥೆ ಸ್ಥಾನಮಾನ ನೀಡುವ ಸಮಾರಂಭ ಹಾಗೂ ಭಾರತರತ್ನ ಸರ್‌ ಎಂ.ವಿಶ್ವೇಶ್ವರಯ್ಯ(Bharat Ratna Sir M. Vishveshwaraiah)ನವರ 162ನೇ ಜನ್ಮ ದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಅಭಿಯಂತರರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಿಸಿಇಗೆ ಸ್ವಾಯತ್ತ ವಿಶ್ವವಿದ್ಯಾಲಯದ ಸ್ಥಾನಮಾನ ನೀಡಿದ್ದು ಶೇ.100ರಷ್ಟುಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಿದೆ. ರಾಜ್ಯವು ಆರೇಳು ಐಐಟಿಗಳನ್ನು ಹೊಂದಬೇಕು ಎಂಬುದು ಸರ್ಕಾರದ ದೂರದೃಷ್ಟಿಯಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖವಾಗಿದ್ದೇವೆ. ಯುವಿಸಿಇಯು ಐಐಟಿ ಮಾನ್ಯತೆ ಪಡೆಯಲು ಅಗತ್ಯವಾದ ಸಿಬ್ಬಂದಿ, ಪ್ರಯೋಗಾಲಯ, ಮೂಲಸೌಕರ್ಯ ಸೇರಿದಂತೆ ಎಲ್ಲ ಸೌಕರ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇಚ್ಛಾಶಕ್ತಿ ಕೊರತೆ:

ಐಐಟಿ(IIT) ಕಲ್ಪನೆ ಬಂದಿರುವುದು ಕೇವಲ 40-50 ವರ್ಷಗಳಿಂದ ಈಚೆಗೆ. ಆದರೆ ಯುವಿಸಿಇಗೆ 105 ವರ್ಷಗಳ ಇತಿಹಾಸವಿದೆ. ಯುವಿಸಿಇಗೆ ಇರುವ ಇತಿಹಾಸ, ಸಾಧನೆಯನ್ನು ಗಮನಿಸಿದರೆ ಎಂದೋ ಐಐಟಿ ಆಗಬೇಕಿತ್ತು. ವಿಧಾನಸೌಧದಲ್ಲಿರುವವರು ಈ ಕಡೆ ತಿರುಗಿದ್ದರೆ ಯಾವಾಗಲೋ ಐಐಟಿ ಆಗಿರುತ್ತಿತ್ತು. ಆದರೆ ಆಳುವವರ ಇಚ್ಛಾಶಕ್ತಿ ಕೊರತೆಯಿಂದ ಈ ಕಾರ್ಯ ಆಗಿಲ್ಲ ಎಂದು ವಿಷಾದಿಸಿದರು.

ದೂರದ ಐಐಟಿಗಳಿಗೆ ತೆರಳುವ ಮಕ್ಕಳು ಅನುಭವಿಸುವ ಸಂಕಷ್ಟವನ್ನು ಅರಿತಿದ್ದೇನೆ. ಸರದಿ ಸಾಲಿನಲ್ಲಿ ನಿಂತುಕೊಳ್ಳುವುದು, ಚಿಕ್ಕ ರೂಂಗಳಲ್ಲಿ ವಾಸ ಮಾಡುವುದು, ಪೋಷಕರಿಂದ ದೂರ ಇರುವುದನ್ನು ನೋಡಿದ್ದೇನೆ. ಆದ್ದರಿಂದಲೇ ರಾಜ್ಯದಲ್ಲೂ ಆರು-ಏಳು ಐಐಟಿ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು. ಇವೆಲ್ಲವಕ್ಕೂ ಕಳಶಪ್ರಾಯವಾಗಿ ಯುವಿಇಸಿ ಇರಬೇಕು ಎಂದು ಆಶಿಸಿದರು.

ಒಳ ರಾಜಕೀಯದಿಂದ ಕುತ್ತು:

ಯುವಿಸಿಇ(UVCE) ಜೊತೆಗೆ ಸರ್ಕಾರ ಹೆಜ್ಜೆ ಹಾಕದೆ ಹೆಗಲಿಗೆ ಹೆಗಲು ಕೊಡಲಿದೆ. ಇಲ್ಲಿ ನಡೆಯುತ್ತಿರುವ ಒಳ ರಾಜಕೀಯವನ್ನು ನೋಡಿದ್ದೇನೆ. ಪ್ರತಿಷ್ಠೆಗೆ ಕುಂದು ತರಲಾಗಿದೆ. ಶಿಕ್ಷಣದಲ್ಲಿ ರಾಜಕೀಯ ಮಾಡಬೇಡಿ. ಬದಲಾವಣೆಗೆ ತೆರೆದುಕೊಳ್ಳಿ. ಹೊಸ ಆಲೋಚನೆಯೊಂದಿಗೆ ಕಾರ್ಯ ನಿರ್ವಹಿಸಿ ಎಂದು ಸಲಹೆ ನೀಡಿದರು.

ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ(Dr.C.N.Ashwath Narayan) ಮಾತನಾಡಿ, ಯುವಿಸಿಇಯನ್ನು ಸ್ವಾಯತ್ತ ವಿವಿ ಮಾಡುವ ಬಗ್ಗೆ ಕಳೆದ 20 ವರ್ಷಗಳಿಂದಲೂ ಮಾತು ಕೇಳಿಬರುತ್ತಿತ್ತು. ಆದರೆ ಈಗಿನ ಸರ್ಕಾರ ಮಾತ್ರ ಬದ್ಧತೆ ಪ್ರದರ್ಶಿಸಿದೆ. ವಿವಿಯ ಸಮಗ್ರ ಅಭಿವೃದ್ಧಿಗೆ ಸಧ್ಯದಲ್ಲೇ ಸಮಗ್ರ ಕ್ರಿಯಾ ಯೋಜನೆ ರೂಪಿಸಲಾಗುವುದು. ಐಐಟಿಯನ್ನೂ ಮೀರಿಸುವಂತೆ ಬೆಳೆಸಲಾಗುವುದು ಎಂದು ಭರವಸೆ ನೀಡಿದರು.

ಧಾರವಾಡ: ಶೀಘ್ರದಲ್ಲೇ  IIT Campus ಉದ್ಘಾಟನೆ - ಪ್ರಲ್ಹಾದ್ ಜೋಶಿ

ಯುವಿಸಿಇ ಆಡಳಿತ ಮಂಡಳಿ ಅಧ್ಯಕ್ಷ ಮುತ್ತುರಾಮನ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್‌, ಐಐಐಟಿ ಮಾಜಿ ನಿರ್ದೇಶಕ ಪ್ರೊ.ಸಡಗೋಪನ್‌, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್‌, ಪ್ರಾಂಶುಪಾಲ ರಮೇಶ್‌ ಮತ್ತಿತರರು ಹಾಜರಿದ್ದರು.

click me!