ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳ ಅಭ್ಯಾಸ ಕುಂಠಿತ

By Kannadaprabha NewsFirst Published Feb 9, 2021, 3:32 PM IST
Highlights

ಕಲಾ, ವಿಜ್ಞಾನ, ವಾಣಿಜ್ಯ ಕೋರ್ಸ್‌ನ 509 ವಿದ್ಯಾರ್ಥಿಗಳಿಗೆ ಕೇವಲ ನಾಲ್ವರು ಬೋಧಕರು| ಯಾದಗಿರಿ ಜಿಲ್ಲೆಯ ಹುಣಸಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿನ್ನಡೆ| 

ಬಸವರಾಜ ಎಂ. ಕಟ್ಟಿಮನಿ

ಹುಣಸಗಿ(ಫೆ.09):  ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಬೇಕೆಂದು ಸರ್ಕಾರವು ಪ್ರತಿವರ್ಷ ಕಟ್ಟಡ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸುತ್ತಿದೆ. ಆದರೆ ಹುಣಸಗಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಅಗತ್ಯ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹಿನ್ನಡೆಯಾಗಿದೆ.

1991ರಲ್ಲಿ ಹುಣಸಗಿ ಪಟ್ಟಣದ ಸರ್ಕಾರಿ ಬಾಲಕರ ಪ್ರೌಢ ಶಾಲಾ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭವಾಗಿತ್ತು. ಕಾಲೇಜು ಪ್ರಾರಂಭದಿಂದ 2013-14ನೇ ಸಾಲಿನವರೆಗೂ 14 ಕಾಯಂ ಉಪನ್ಯಾಸಕರಿದ್ದರು. 3 ವರ್ಷ ಒಂದೇ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ್ದರಿಂದ ಉಪನ್ಯಾಸಕರು ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆಯಾಗಿದ್ದಾರೆ. ಪ್ರಸ್ತುತ 509 ಮಕ್ಕಳಿಗೆ ಕಾಲೇಜಿನಲ್ಲಿ ಓರ್ವ ಪ್ರಾಚಾರ್ಯ ಸೇರಿ ನಾಲ್ವರು ಕಾಯಂ ಸಿಬ್ಬಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಭಾರಿ ಹೊಡೆತ ಬಿದ್ದಿದೆ.

509 ಮಕ್ಕಳಿಗೆ ನಾಲ್ಕು ಬೋಧಕರು:

ಪಿಯು ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ 13, ವಾಣಿಜ್ಯ ವಿಭಾಗದಲ್ಲಿ 35, ಕಲಾ ವಿಭಾಗದಲ್ಲಿ 208 ಹಾಗೂ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ 16, ವಾಣಿಜ್ಯ ವಿಭಾಗದಲ್ಲಿ 49, ಕಲಾ ವಿಭಾಗದಲ್ಲಿ 188 ಸೇರಿ ಒಟ್ಟು 509 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇನ್ನೂ 10 ಕಾಯಂ ಉಪನ್ಯಾಸಕರ ಕೊರತೆ ಇದೆ. 2013-14ನೇ ಸಾಲಿನಿಂದಲೂ ಉಪನ್ಯಾಸಕರ ಕೊರತೆ ನೀಗಿಸುವಲ್ಲಿ ಸಂಬಂಧಿಸಿದ ಅಧಿಕಾರಿಗಳು ನಿಷ್ಕಾಳಜಿ ತೋರುತ್ತಿದ್ದಾರೆ ಎಂದು ಪಟ್ಟಣದ ಯುವ ಮುಖಂಡ ಬಸವರಾಜ ವೈಲಿ, ಆನಂದ ಬಾರೀಗಿಡ ಆರೋಪಿಸಿದ್ದಾರೆ.

ಮುಂದಿನ ಬೇಸಿಗೆ ಕಡಿತದ ಬಗ್ಗೆ ಸಚಿವ ಸುರೇಶ್‌ ಕುಮಾರ್‌ ಕೊಟ್ರು ಮಹತ್ವದ ಸಂದೇಶ

ಉಪನ್ಯಾಸಕರ ಕೊರತೆ:

ಪ್ರಸ್ತುತ ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಗಣಿತಶಾಸ್ತ್ರ ವಿಷಯಕ್ಕೆ ಮಾತ್ರ ಕಾಯಂ ಉಪನ್ಯಾಸಕರಿದ್ದು, ವಾಣಿಜ್ಯ, ಇಂಗ್ಲಿಷ್‌, ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಾಸಾಯನಶಾಸ್ತ್ರ, ಜೀವಶಾಸ್ತ್ರ ಸೇರಿದಂತೆ 10 ಉಪನ್ಯಾಸಕರ ಕೊರತೆ ಇದ್ದರೂ, ಭರ್ತಿ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸಿದೆ.

ಅಭ್ಯಾಸ ವಂಚಿತ ಮಕ್ಕಳು:

2016-17 ಹಾಗೂ 2018-19ನೇ ಸಾಲಿನಲ್ಲಿ ಇಲಾಖೆ ವತಿಯಿಂದ ಪಿಯು ಕಾಲೇಜಿಗೆ ಸ್ವಂತ 6 ಕೋಣೆಗಳ ನೂತನ ಕಟ್ಟಡ ಮಂಜೂರು ಮಾಡಿ ಸುಸಜ್ಜಿತ ಕಾಲೇಜು ಪ್ರಾರಂಭವಾಗಿದ್ದು, 2020ರಲ್ಲಿ ಕೊರೋನಾದಿಂದಾಗಿ ಕಾಲೇಜುಗಳು ಬಂದ್‌ ಆಗಿದ್ದವು. ಆದರೆ, ಪ್ರಸ್ತುತ ಕಾಲೇಜುಗಳು ಪ್ರಾರಂಭವಾದ ಪ್ರಯುಕ್ತ ಉಪನ್ಯಾಸಕರ ಕೊರೆಯಿಂದ ಪಾಠ ಬೋಧನೆಯಿಂದ ವಂಚಿತರಾಗಿದ್ದೇವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಶಾಲೆಗಿಂತಲೂ ಮೊದಲೇ ಅಂಗನವಾಡಿಗಳು ಆರಂಭ? ಮಾರ್ಗಸೂಚಿ ಬಿಡುಗಡೆ

ವಿಜ್ಞಾನ ವಿಭಾಗಕ್ಕಿಲ್ಲ ದಿಕ್ಕು:

ಕಾಲೇಜಿನಲ್ಲಿ ವಿಜ್ಞಾನ ವಿಭಾಗದ ಲ್ಯಾಬ್‌ಗೆ ಸೂಕ್ತ ಸಲಕರಣೆ ಇಲ್ಲದ ಕಾರಣ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಬೇರೆ ಜಿಲ್ಲೆಗೆ ತೆರಳುತ್ತಿದ್ದಾರೆ. ಇತ್ತೀಚೆಗೆ ಕಲ್ಯಾಣ ಕರ್ನಾಟಕದ ಅನುದಾನದಲ್ಲಿ ಶೇ.20 ಲ್ಯಾಬ್‌ ಸಲಕರಣೆ ಬಂದಿದ್ದು, ಇನ್ನು ಹೆಚ್ಚಿನ ಸಲಕರಣೆಗಳ ಅವಶ್ಯಕತೆ ಹಾಗೂ ಬಾಕಿ ಉಳಿದಿರುವ ಕಾಯಂ ಉಪನ್ಯಾಸಕರನ್ನು ನೇಮಿಸಿದರೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ ಎಂದು ಪ್ರಾಚಾರ್ಯರು ತಿಳಿಸಿದ್ದಾರೆ.

ನಿತ್ಯ ಕಲಿಕೆಗಾಗಿ ದೂರದ ಹಳ್ಳಿಯಿಂದ ಕಷ್ಟಪಟ್ಟು ಕಾಲೇಜಿಗೆ ಬರುತ್ತೇವೆ. ಆದರೆ, ಬೋಧಕರ ಸಮಸ್ಯೆಯಿಂದ ವಂಚಿತವಾಗುತ್ತಿರುವುದು ನೋವಾಗುತ್ತಿದೆ. ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತು ಉಪನ್ಯಾಸಕರ ಭರ್ತಿಗೆ ಮುಂದಾಗಬೇಕು ಎಂದು ಹೆಸರು ಹೇಳಲಿಚ್ಚಿಸದ ಕಾಲೇಜು ವಿದ್ಯಾರ್ಥಿ ತಿಳಸಿದ್ದಾರೆ. 

ಹುಣಸಗಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ ಇರುವುದರಿಂದ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅನುಮೋದನೆ ಬಂದ ತಕ್ಷಣ ನೇಮಿಸಲಾಗುವುದು. ಈಗಾಗಲೇ ಕೊಡೇಕಲ್‌ನಿಂದ ಇಬ್ಬರನ್ನು ನಿಯೋಜನೆ ಮಾಡಲಾಗಿದೆನ ಎಂದು ಯಾದಗಿರಿ ಪಿಯು ಕಾಲೇಜು ಉಪನಿರ್ದೇಶಕ ಚಂದ್ರಕಾಂತ ಹಿಳ್ಳಿ ಹೇಳಿದ್ದಾರೆ. 
 

click me!