Latest Videos

ಸರ್ಕಾರಿ ಶಾಲೆಗಳ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ದಾಖಲಾತಿಗೆ ಮುಗಿಬಿದ್ದ ಪೋಷಕರು!

By Kannadaprabha NewsFirst Published Jun 28, 2024, 10:52 AM IST
Highlights

ಅಂಗನವಾಡಿ ಕಾರ್ಯಕರ್ತೆಯರ ವಿರೋಧದ ಮಧ್ಯೆಯೂ ಸರ್ಕಾರದ ಆದೇಶದಂತೆ ರಾಜ್ಯದ ಹಲವಾರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿದ್ದು ಕೆಲವೆಡೆ ಮಕ್ಕಳ ದಾಖಲಾತಿ ಬಿರುಸಿನಿಂದ ನಡೆಯುತ್ತಿದೆ.

ಬೆಂಗಳೂರು (ಜೂ28): ಅಂಗನವಾಡಿ ಕಾರ್ಯಕರ್ತೆಯರ ವಿರೋಧದ ಮಧ್ಯೆಯೂ ಸರ್ಕಾರದ ಆದೇಶದಂತೆ ರಾಜ್ಯದ ಹಲವಾರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿದ್ದು ಕೆಲವೆಡೆ ಮಕ್ಕಳ ದಾಖಲಾತಿ ಬಿರುಸಿನಿಂದ ನಡೆಯುತ್ತಿದೆ. ಹಲವು ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗೆ ಮಕ್ಕಳನ್ನು ಸೇರಿಸಲು ಪೋಷಕರು ಭಾರಿ ಆಸಕ್ತಿ ತೋರುತ್ತಿದ್ದಾರೆ.

ಬ್ಯಾಂಕ್‌ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆ

ಉದಾಹರಣೆಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಲ್ಲಿ ಮಕ್ಕಳ ಕಲರವ ಕೇಳಿಬರುತ್ತಿದೆ. ಎಲ್‌ಕೆಜಿ, ಯುಕೆಜಿ ತರಗತಿಗೆ ಮಕ್ಕಳ ದಾಖಲಾತಿಗೆ ಪೋಷಕರು ಮುಗಿಬಿದ್ದಿದ್ದಾರೆ. ಹರಪನಹಳ್ಳಿ ಪಟ್ಟಣದ ಹರಿಹರ ರಸ್ತೆಯ ಆಶ್ರಯ ಕ್ಯಾಂಪ್‌ ಶಾಲೆ, ಬಾಪೂಜಿ ನಗರ ಶಾಲೆ, ಮೇಗಳಪೇಟೆ ಶಾಲೆ, 8ನೇ ವಾರ್ಡ್‌ ಶಾಲೆ, ಉನ್ನತೀಕರಿಸಿದ ಉರ್ದು ಶಾಲೆ ಹೀಗೆ 5 ಶಾಲೆಗಳಲ್ಲಿ ಹಾಗೂ ಚೆನ್ನಹಳ್ಳಿ ತಾಂಡಾ, ಚಿಗಟೇರಿ, ದುಗ್ಗಾವತ್ತಿ, ರಾಗಿಮಸಲವಾಡ, ಹಲುವಾಗಲು, ಹೊಂಬಳಗಟ್ಟಿ, ಹುಲ್ಲಿಕಟ್ಟಿ, ಕಮ್ಮತ್ತಹಳ್ಳಿ, ಕಣವಿಹಳ್ಳಿ, ಚಿರಸ್ಥಹಳ್ಳಿ, ಕ್ಯಾರಕಟ್ಟಿ, ಎನ್‌. ಶೀರನಹಳ್ಳಿ, ನೀಲಗುಂದ, ಅರಸಿಕೇರಿ, ಕುಂಚೂರು, ಅರಸಿಕೇರಿಯ ಶಾಂತಪ್ರಕಾಶ ನಗರ, ಶಿಂಗ್ರಿಹಳ್ಳಿ, ಮೈದೂರು ಹೀಗೆ 23 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭಗೊಂಡಿವೆ.

ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ವಿವಿ ಮೊದಲ ನಿರ್ದೇಶಕರಾಗಿ ಪಶ್ಚಿಮ ಬಂಗಾಳದ ಡಾ। ತ್ರಿಪಾಠಿ

ಈಗಾಗಲೇ ಎಲ್‌ಕೆಜಿಗೆ 463 ಮಕ್ಕಳು, ಯುಕೆಜಿಗೆ 417 ಮಕ್ಕಳ ದಾಖಲಾತಿಯಾಗಿದೆ. ಇವೇ 23 ಶಾಲೆಗಳಲ್ಲಿ ಒಂದನೇ ತರಗತಿ ಆಂಗ್ಲ ಮಾಧ್ಯಮ ಆರಂಭಗೊಂಡಿದ್ದು, ಆಂಗ್ಲ ಮಾಧ್ಯಮಕ್ಕೆ 426 ಮಕ್ಕಳು ದಾಖಲಾಗಿದ್ದಾರೆ. ಹೀಗೆ ದಾಖಲಾತಿ ಭರದಿಂದ ಸಾಗಿದೆ. ಎಲ್‌ಕೆಜಿ, ಯುಕೆಜಿಗೆ ಎನ್‌ಟಿಸಿ ತರಬೇತಿ ಪಡೆದ ಮಹಿಳಾ ಅತಿಥಿ ಶಿಕ್ಷಕರನ್ನು ಈಗಾಗಲೇ ನೇಮಕಾತಿ ಮಾಡಿಕೊಂಡು ಅವರಿಗೆ ತರಬೇತಿ ನೀಡುವ ಪ್ರಕ್ರಿಯೆ ನಡೆದಿದೆ. ಅಲ್ಲದೆ ಎಲ್ಲ ಶಾಲೆಗಳಲ್ಲಿ ಆಯಾಗಳನ್ನು ನೇಮಕ ಮಾಡಿಕೊಳ್ಳಲಾಗಿದೆ.

ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ತಲಾ 30 ಸೀಟುಗಳಿಗೆ ಮಾತ್ರ ಅವಕಾಶವಿದೆ. ಈಗಾಗಲೇ ಹುಲ್ಲಿಕಟ್ಟಿ, ದುಗ್ಗಾವತ್ತಿ, ನೀಲಗುಂದ, ಹರಪನಹಳ್ಳಿಯ 8ನೇ ವಾರ್ಡ್ ಶಾಲೆ, ಮೇಗಳಪೇಟೆ ಶಾಲೆ, ಸಿಂಗ್ರಿಹಳ್ಳಿ ಹೀಗೆ ಆರು ಶಾಲೆಗಳಲ್ಲಿ ಸೀಟುಗಳು ಭರ್ತಿಯಾಗಿವೆ. ಉಳಿದ 17 ಶಾಲೆಗಳಲ್ಲಿ ಭರ್ತಿಯಾಗುವ ಸನಿಹದಲ್ಲಿದೆ. ಅಗತ್ಯ, ಅರ್ಹ ಶಿಕ್ಷಕರು ನೇಮಕಗೊಂಡರೆ ಸರ್ಕಾರಿ ಶಾಲೆಗಳಿಗೂ ಶುಕ್ರದೆಸೆ ಆರಂಭವಾಗುವ ಕಾಲ ದೂರವಿಲ್ಲ. .

ಎಲ್‌ಕೆಜಿ, ಯುಕೆಜಿ ತರಗತಿಗಳನ್ನು ಆಯ್ದ ಸರ್ಕಾರಿ ಶಾಲೆಗಳಲ್ಲಿ ಆರಂಭಿಸಿದ್ದೇವೆ. ಸಕಲ ಸಿದ್ಧತೆ ಕೈಗೊಂಡಿದ್ದೇವೆ. ಪೋಷಕರು ಉತ್ಸಾಹದಿಂದ ದಾಖಲಾತಿಗೆ ಮುಂದಾಗಿರುವುದು ಸಂತಸದ ಸಂಗತಿ.

- ಯು. ಬಸವರಾಜಪ್ಪ, ಬಿಇಒ, ಹರಪನಹಳ್ಳಿ

click me!