KPSC Re-Exam: ಕೆಪಿಎಸ್‌ಸಿ ಮರು ಪರೀಕ್ಷೆ ದೃಢ, 200 ಅಭ್ಯರ್ಥಿಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆಯೇ ಇಲಾಖೆ?

By Suvarna NewsFirst Published Dec 19, 2021, 4:14 PM IST
Highlights
  • ರೈಲು ವಿಳಂಬದಿಂದಾಗಿ ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ
  • ಸುಮಾರು 200 ಇತರ ಅಭ್ಯರ್ಥಿಗಳ ಮರು ಪರೀಕ್ಷೆ ಬಗ್ಗೆ ದೃಢೀಕರಣ ನೀಡದ ಇಲಾಖೆ KPSC
  • ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಮಿಸಿದವರಿಗೆ ಪ್ರಕಟವಾಗದ ಪರೀಕ್ಷಾ ದಿನಾಂಕ

ಬೆಂಗಳೂರು (ಡಿ.19): ರೈಲು ವಿಳಂಬದಿಂದಾಗಿ ಡಿಸೆಂಬರ್ 14 ರಂದು ಕರ್ನಾಟಕ ಲೋಕಸೇವಾ ಆಯೋಗ( Karnataka Public Service Commission -KPSC ) ನಡೆಸಿದ ಪಿಡಬ್ಲ್ಯುಡಿ ಸಹಾಯಕ ಎಂಜಿನಿಯರ್‌ಗಳ (PWD Assistant Engineer) ಭಾಗ-1 ಪರೀಕ್ಷೆ ತಪ್ಪಿಸಿಕೊಂಡಿದ್ದ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಆಕಾಂಕ್ಷಿಗಳಿಗೆ ಪರೀಕ್ಷೆ ಬರೆಯಲು ಎರಡನೇ ಅವಕಾಶ ಸಿಕ್ಕಿದೆ. ಆದರೆ ಇತರ ಎರಡು ರೈಲುಗಳಲ್ಲಿ ದೂರದ ಸ್ಥಳಗಳಿಂದ ಬೆಂಗಳೂರಿಗೆ ಬಂದು ಇದೇ ರೀತಿಯ ವಿಳಂಬದಿಂದಾಗಿ ಪರೀಕ್ಷೆ ತಪ್ಪಿಸಿಕೊಂಡ ಸುಮಾರು 200 ಇತರ ಅಭ್ಯರ್ಥಿಗಳಿಗೂ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆಯೇ ಎಂಬುದರ ಬಗ್ಗೆ KPSC ಇನ್ನೂ ತಿಳಿಸಿಲ್ಲ.

ಈ ಅಭ್ಯರ್ಥಿಗಳು ಕಲಬುರಗಿ, ಬೀದರ್, ರಾಯಚೂರು ಮತ್ತು ಸೇಡಂ ಕಡೆಯಿಂದ ಎರಡು ರೈಲುಗಳಲ್ಲಿ ನಗರಕ್ಕೆ ಬಂದಿದ್ದರು. ಆದರೆ ಯಶವಂತಪುರ ಮತ್ತು ಕೆಎಸ್‌ಆರ್ ರೈಲು ನಿಲ್ದಾಣಗಳಲ್ಲಿ ತಡವಾಗಿ ಬಂದಿಳಿದ ಕಾರಣ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ. 

ಅಂದು ಯಶವಂತಪುರಕ್ಕೆ ಬೆಳಗ್ಗೆ 7.50ಕ್ಕೆ ಆಗಮಿಸಬೇಕಿದ್ದ  ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲು ಬೆಳಗ್ಗೆ 11.05 ಕ್ಕೆ ಆಗಮಿಸಿತ್ತು. ಇದರಲ್ಲಿ ಬೀದರ್‌ನಿಂದ ಸಿವಿಲ್ ಇಂಜಿನಿಯರಿಂಗ್ ಪದವೀಧರರಾದ ಸಚಿನ್ ಸೇರಿದಂತೆ ಸುಮಾರು 120 ಕೆಪಿಎಸ್‌ಸಿ ಅಭ್ಯರ್ಥಿಗಳು ಇದ್ದರು.

KPSC Exam : ರೈಲು ವಿಳಂಬದಿಂದ ವಂಚಿತರಿಗೆ ಮತ್ತೆ ಪರೀಕ್ಷೆ

ಯಶವಂತಪುರ ತಲುಪಿದ ನಂತರ ಅಭ್ಯರ್ಥಿಗಳು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಧಾವಿಸಿದರು. “ನನ್ನ ಪರೀಕ್ಷಾ ಕೇಂದ್ರವು ಶೇಷಾದ್ರಿಪುರಂನ ಪಿಯು ಕಾಲೇಜಿನಲ್ಲಿತ್ತು. ಮೊದಲ ಪರೀಕ್ಷೆ ಮುಗಿದ ನಂತರ ನಾನು ಪರೀಕ್ಷಾ ಕೇಂದ್ರ ತಲುಪಿದೆ ಮತ್ತು ನಾನು ಎರಡನೇ ಪತ್ರಿಕೆಯನ್ನು ಮಾತ್ರ ಬರೆದೆ. ಮೊದಲ ಪತ್ರಿಕೆ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ” ಎಂದು ಸಚಿನ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

UGC NET 2021: ಯುಜಿಸಿ-ನೆಟ್ 2ನೇ ಹಂತದ ಪರೀಕ್ಷಾ ವೇಳಾಪಟ್ಟಿ ಪ್ರಕಟ

ಬೆಂಗಳೂರು ಅಭ್ಯರ್ಥಿಗಳಿಗೆ ಎರಡನೇ ಅವಕಾಶ ನೀಡಲಾಗಿದೆ. ನಮಗೇಕೆ ಇಲ್ಲ?  2018 ರಿಂದ ಈ ಪರೀಕ್ಷೆ ಎರಡು ಬಾರಿ ರದ್ದುಗೊಂಡಿದ್ದರಿಂದ ಈ ಕೆಲಸ ನಮಗೆ ತುಂಬಾ ಮುಖ್ಯವಾಗಿದೆ. ಕೆಎಸ್‌ಆರ್ ಬೆಂಗಳೂರಿನಿಂದ ಕಲಬುರಗಿ ಕಡೆಗೆ ಹೋಗುವ ಉದ್ಯಾನ್ ಎಕ್ಸ್‌ಪ್ರೆಸ್(11302) ರೈಲಿನ ಅಭ್ಯರ್ಥಿಗಳಿಗೆ ಕೆಪಿಎಸ್ ಸಿ ಈಗಾಗಲೇ ಹೊಸ ಪರೀಕ್ಷಾ ದಿನಾಂಕವನ್ನು ಪ್ರಕಟಿಸಿದೆ. ಆದರೆ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ (Bidar Yesvantpur Express) ರೈಲಿನಲ್ಲಿ ಆಗಮಿಸಿದ ಅಭ್ಯರ್ಥಿಗಳಿಗೆ ಇನ್ನೂ ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ ಎಂದಿದ್ದಾರೆ.

ಇನ್ನೂ ಈ ಬಗ್ಗೆ ನಮ್ಮ ವರದಿಗಾರರು ಕೆಪಿಎಸ್‌ಸಿ ಕಾರ್ಯದರ್ಶಿ ಜಿ ಸತ್ಯವತಿ ಅವರನ್ನು ಪ್ರಶ್ನಿಸಿದ್ದು, “ನೀವು ಅವರ ವಕ್ತಾರರ ಪಾತ್ರ ಏಕೆ ನಿರ್ವಹಿಸುತ್ತಿದ್ದೀರಿ? ಅಭ್ಯರ್ಥಿಗಳು ನಮ್ಮ ಬಳಿಗೆ ಬರಲಿ. ನಾವು ಅವರ ಪ್ರತಿಯೊಂದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತೇವೆ ಎಂದಿದ್ದಾರೆ.

 ಡಿ.29ರಂದು ಮರು ಪರೀಕ್ಷೆ ನಡೆಸಲು KPSC ತೀರ್ಮಾನ: ರೈಲು (Train) ಪ್ರಯಾಣದ ವಿಳಂಬದಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌(ಎಇ) ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾಗಿದ್ದ ಅಭ್ಯರ್ಥಿಗಳಿಗೆ ಡಿ.29ರಂದು ಮರು ಪರೀಕ್ಷೆ ನಡೆಸಲು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ - KPSC) ತೀರ್ಮಾನಿಸಿದೆ.  ಹಾಸನ-ಸೊಲ್ಲಾಪುರ ಎಕ್ಸ್‌ಪ್ರೆಸ್‌, ಉದ್ಯಾನ್‌ ರೈಲಲ್ಲಿ (Train) ಪ್ರಯಾಣ ನಡೆಸಿರುವುದಕ್ಕೆ ಸಂಬಂಧಿಸಿದ ಟಿಕೆಟ್‌ ಪ್ರತಿ ಮತ್ತು ಆಯೋಗದಿಂದ ಪಡೆದುಕೊಂಡಿರುವ ಪ್ರವೇಶ ಪತ್ರವನ್ನು ಡಿ.22ರ ಅಂತ್ಯದ ವೇಳೆಗೆ ಸ್ಪೀಡ್‌ ಪೋಸ್ಟ್‌ ಮೂಲಕ ಕೆಪಿಎಸ್‌ಸಿ ಕಚೇರಿಗೆ ಕಳುಹಿಸಬೇಕು ಅಥವಾ ಮೇಲ್ ಮೂಲಕ ಕಳಿಸಬೇಕು  ಎಂದು ಕೆಪಿಎಸ್‌ಸಿ (KPSC) ಕಾರ್ಯದರ್ಶಿ ಜಿ.ಸತ್ಯವತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

ತಾಂತ್ರಿಕ ಕಾರಣದಿಂದಾಗಿ ಬೆಂಗಳೂರು-ಮುಂಬೈ (Bengaluru - Mumbai) ಉದ್ಯಾನ ಎಕ್ಸ್‌ಪ್ರೆಸ್‌, ಹಾಸನ-ಸೊಲ್ಲಾಪುರ ಸೂಪರ್‌ ಫಾಸ್ಟ್‌ ರೈಲುಗಳ ಸಂಚಾರದಲ್ಲಿ ಏಳು ಗಂಟೆ ವಿಳಂಬವಾಗಿ  KPSC ಬೆಳಗ್ಗಿನ ಪರೀಕ್ಷೆ ಬರೆಯುವುದರಿಂದ ಸಾವಿರಾರು ವಿದ್ಯಾರ್ಥಿಗಳು ವಂಚಿತರಾಗಿದ್ದರು. ಇದರಿಂದ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು. ಇದೀಗ ಮರು ಪರೀಕ್ಷೆ ನಿಗದಿಯಾಗಿದೆ. ಆದರೆ ಬೀದರ್-ಯಶವಂತಪುರ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಗಮಿಸಿದ ಅಭ್ಯರ್ಥಿಗಳಿಗೆ ಇನ್ನೂ ಪರೀಕ್ಷಾ ದಿನಾಂಕ ಪ್ರಕಟಿಸಿಲ್ಲ ಎಂದು ತಿಳಿದುಬಂದಿದೆ.

click me!