ತರಗತಿ ಆರಂಭಕ್ಕೆ ಕೊರೋನಾ ಪರೀಕ್ಷೆ ವರದಿ ಅಡ್ಡಿ..!

By Kannadaprabha NewsFirst Published Nov 18, 2020, 10:45 AM IST
Highlights

ಕಲ್ಮಠ ಶ್ರೀ ಚೆನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರವೇಶ ದ್ವಾರದಲ್ಲಿ ಬಲೂನ್‌ ಕಟ್ಟಿ ಅಲಂಕಾರ| ಕಾಲೇಜಿನ ಎಲ್ಲ ತರಗತಿಗಳಲ್ಲಿ ಸ್ಯಾನಿಟೈಸ್‌| 30 ವಿದ್ಯಾರ್ಥಿಗಳು ಆಗಮಿಸಿದ್ದು, ಅದರಲ್ಲಿ 15 ವಿದ್ಯಾರ್ಥಿಗಳಿಗೆ ಮಾತ್ರ ಕೋವಿಡ್‌ ಟೆಸ್ಟ್‌| ಟೆಸ್ಟ್‌ ನಂತರ ಕಾಲೇಜಿಗೆ ಬರಲು ಪ್ರಾಚಾರ್ಯರ ಸೂಚನೆ| 

ರಾಮಮೂರ್ತಿ ನವಲಿ

ಗಂಗಾವತಿ(ನ.18): ಪದವಿ ಕಾಲೇಜು ಪ್ರಾರಂಭಕ್ಕೆ ಸರ್ಕಾರ ಆದೇಶ ನೀಡಿದ ಹಿನ್ನೆಲೆ ಕಾಲೇಜು ಪ್ರಾರಂಭಕ್ಕೆ ನಗರದ ವಿವಿಧ ಕಾಲೇಜುಗಳಲ್ಲಿ ಸಿದ್ಧತೆ ನಡೆದಿದೆ. ಆದರೆ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಕೋವಿಡ್‌ ಟೆಸ್ಟ್‌ ಇರದ ಕಾರಣ ತರಗತಿಗಳ ಪ್ರಾರಂಭಕ್ಕೆ ಅಡ್ಡಿ ಉಂಟಾಗಿದೆ. ನಗರದಲ್ಲಿ ಒಂದು ಸರ್ಕಾರಿ ಕಾಲೇಜು ಹಾಗೂ 7 ಖಾಸಗಿ ಕಾಲೇಜುಗಳಿದ್ದು, ಈ ಕಾಲೇಜುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಬಂದು ವಾಪಸ್ಸಾಗಿದ್ದಾರೆ.

ನಗರದ ಆನೆಗೊಂದಿ ರಸ್ತೆಯ ಎಚ್‌.ಆರ್‌. ಶ್ರೀರಾಮುಲು ಸ್ಮಾರಕ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬಿಎ ಮತ್ತು ಬಿಕಾಂ ಅಂತಿಮ ತರಗತಿಗಳಿಗೆ 19 ವಿದ್ಯಾರ್ಥಿಗಳು ಆಗಮಿಸಿದ್ದು, ಈ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾ‌ನಿಂಗ್‌ ಟೆಸ್ಟ್‌ ಮಾಡಿ ತರಗತಿಗಳಿಗೆ ಕಳಿಸಿಕೊಡಲಾಗಿದೆ. ವಿದ್ಯಾರ್ಥಿಗಳಿಗೆ ಪ್ರಾಚಾರ್ಯರು ವಿಶ್ವವಿದ್ಯಾಲಯದಿಂದ ಬಂದ ಕೋವಿಡ್‌ ಸೂಚನೆ ನೀಡಿ ವಾಪಸ್‌ ಕಳಿಸಿದ್ದಾರೆ. ಉಪನ್ಯಾಸಕರು ಮಾತ್ರ ಕೋವಿಡ್‌ ಟೆಸ್ಟ್‌ಗಳಿಗೆ ಒಳಗಾಗಿ ತರಗತಿಗಳಿಗೆ ಆಗಮಿಸಿದ್ದಾರೆ.

ನಗರದ ಕೊಲ್ಲಿ ನಾಗೇಶ್ವರರಾವ ಪ್ರಥಮದರ್ಜೆ ಕಾಲೇಜು ಪ್ರಾರಂಭವಾಗುವುದಕ್ಕೆ ಎಲ್ಲ ಏರ್ಪಾಡು ಮಾಡಲಾಗಿತ್ತು. 50 ವಿದ್ಯಾರ್ಥಿಗಳು ಆಗಮಿಸಿದ್ದು, ಅವರಿಗೆ ಕೋವಿಡ್‌ ಟೆಸ್ವ್‌ ಆಗದ ಕಾರಣ ವಾಪಸ್‌ ಕಳಿಸಿಕೊಡಲಾಗಿದೆ. ಬಹುತೇಕವಾಗಿ ಉಪನ್ಯಾಸಕರು ಆಗಮಿಸಿದ್ದರು.

8 ತಿಂಗ್ಳು ಬಳಿಕ ಶುರುವಾದ ಮೊದಲ ದಿನವೇ ಉಪ ಮುಖ್ಯಮಂತ್ರಿ ಕಾಲೇಜಿಗೆ ಹಾಜರ್..!

ಬಲೂನ್‌ ಕಟ್ಟಿ ಅಲಂಕಾರ

ನಗರದ ಕಲ್ಮಠ ಶ್ರೀ ಚೆನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರವೇಶ ದ್ವಾರದಲ್ಲಿ ಬಲೂನ್‌ ಕಟ್ಟಿ ಅಲಂಕಾರ ಮಾಡಲಾಗಿತ್ತು. ಕಾಲೇಜಿನ ಎಲ್ಲ ತರಗತಿಗಳಲ್ಲಿ ಸ್ಯಾನಿಟೈಸ್‌ ಮಾಡಲಾಗಿತ್ತು. 30 ವಿದ್ಯಾರ್ಥಿಗಳು ಆಗಮಿಸಿದ್ದು, ಅದರಲ್ಲಿ 15 ವಿದ್ಯಾರ್ಥಿಗಳು ಮಾತ್ರ ಕೋವಿಡ್‌ ಟೆಸ್ವ್‌ ಮಾಡಿಸಿದ್ದಾರೆ. ಇನ್ನು 15 ವಿದ್ಯಾರ್ಥಿಗಳನ್ನು ವಾಪಸ್‌ ಕಳಿಸಿದ್ದಾರೆ. ಟೆಸ್ವ್‌ ನಂತರ ಕಾಲೇಜಿಗೆ ಬರಲು ಪ್ರಾಚಾರ್ಯರು ಸೂಚನೆ ನೀಡಿದ್ದಾರೆ.

ನಗರದ ಎಚ್‌.ಆರ್‌. ಶ್ರೀರಾಮುಲು ಸ್ಮಾರಕ ಕಲಾ ಮಹಾವಿದ್ಯಾಲಯದಲ್ಲಿ ಅಂತಿಮ ಪದವಿ ವಿದ್ಯಾರ್ಥಿಗಳಿಗೆ ಥರ್ಮಲ್‌ ಸ್ಕ್ಯಾ‌ನಿಂಗ್‌ ಮಾಡಿಸಿಕೊಂಡು ಬಂದಿದ್ದರಿಂದ ಅವರಿಗೆ ಕೋವಿಡ್‌ ನಿಯಮಗಳನ್ನು ತಿಳಿಸಲಾಯಿತು. ಕಡ್ಡಾಯವಾಗಿ ಕೋವಿಡ್‌ ಟೆಸ್ವ್‌ ನಂತರ ಕಾಲೇಜಿಗೆ ಬರುವಂತೆ ಸೂಚನೆ ನೀಡಲಾಗಿದೆ ಎಂದು ಗಂಗಾವತಿ ನಗರದ ಎಚ್‌.ಆರ್‌. ಶ್ರೀರಾಮುಲು ಕಾಲೇಜಿನ ಪ್ರಾಚಾರ್ಯ ಲಲಿತಮ್ಮ ಭಾವಿಕಟ್ಟಿ ತಿಳಿಸಿದ್ದಾರೆ. 

ಕೋವಿಡ್‌ ಸೋಂಕಿನಿಂದ ಕಳೆದ 8 ತಿಂಗಳಿನಿಂದ ಕಾಲೇಜು ಪ್ರಾರಂಭವಾಗಿದ್ದಿಲ್ಲ. ಈಗ ಸರ್ಕಾರ ಅನುಮತಿ ನೀಡಿದ್ದರಿಂದ ಕಾಲೇಜನ್ನು ಸ್ವಚ್ಛಗೊಳಿಸಿ ಸ್ಯಾನಿಟೈಸ್‌ ಮಾಡಲಾಗಿದೆ. ಬರುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಲು ಕಾಲೇಜನ್ನು ಬಲೂನು, ಹೂವುಗಳಿಂದ ಅಲಂಕಾರ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸೂಚನೆ ನೀಡಿ ವಾಪಸ್‌ ಕಳಿಸಿಕೊಡಲಾಗಿದೆ ಎಂದು ಗಂಗಾವತಿ ನಗರದ ಕಲ್ಮಠ ಶ್ರೀಚೆನ್ನಬಸವಸ್ವಾಮಿ ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಶರಣಬಸಪ್ಪ ಕೊಲ್ಕಾರ ತಿಳಿಸಿದ್ದಾರೆ.
 

click me!