ಖಾಸಗಿ ಶಾಲೆ ತೊರೆದು ಸರ್ಕಾರಿ ಶಾಲೆ ಸೇರಿದ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು

By Suvarna NewsFirst Published Nov 19, 2020, 5:33 PM IST
Highlights

ಆಂಧ್ರ ಪ್ರದೇಶ ಸರ್ಕಾರ ಕಳೆದ ವರ್ಷ ಜಾರಿಗೆ ತಂದ ಹಲವು ಶೈಕ್ಷಣಿಕ ಯೋಜನೆಗಳು ಫಲ ಕೊಡಲಾರಂಭಿಸಿದ್ದು, ಪ್ರಸಕ್ತ ಸಾಲಿನಲ್ಲಿ 2 ಲಕ್ಷ ಅಧಿಕ ಮಕ್ಕಳು ಸರ್ಕಾರಿ  ಶಾಲೆ ಸೇರುವುದಕ್ಕಾಗಿಯೇ ಖಾಸಗಿ ಶಾಲೆಗಳನ್ನು ತೊರೆದಿದ್ದಾರೆಂದು ಮುಖ್ಯಮಂತ್ರಿ ಕಾರ್ಯಾಲಯ ತಿಳಿಸಿದೆ. ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡುವುದಾಗಿ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಹೇಳಿಕೊಂಡಿದ್ದರು.
 

ಆಂಧ್ರ ಪ್ರದೇಶದಲ್ಲಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರಕಾರ ಶಿಕ್ಷಣ ವ್ಯವಸ್ಥೆಯಲ್ಲಿನ ಸುಧಾರಣೆಗಳ ಪರಿಣಾಮ ಬೃಹತ್ ಯಶಸ್ಸು ದೊರಕುತ್ತಿದೆ. ಮುಖ್ಯಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ, 2020ರಲ್ಲಿ 2 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಸೇರುವುದಕ್ಕಾಗಿ ಖಾಸಗಿ ಶಾಲೆಗಳನ್ನು ತೊರೆದಿದ್ದಾರೆ!

ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಖಾಸಗಿ ಶಾಲೆಗಳಿಂದ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ವರ್ಗಾವಣೆಗೊಂಡಿದ್ದು ನೋಡಿದರೆ ಇದೊಂದು ದೊಡ್ಡ ಕ್ರಾಂತಿಕಾರಿ ಸುಧಾರಣೆ ಎಂದು ಹೇಳಬಹುದು. ಪ್ರಾಥಮಿಕ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಅಲ್ಲಿನ ಸರಕಾರ ಜಾರಿಗೆ ತಂದಿರುವ ಮೂರ್ನಾಲ್ಕು ಯೋಜನೆಗಳ ಫಲವಾಗಿ ಈ ರೀತಿಯ ಫಲಿತಾಂಶವನ್ನು ಪಡೆಯಲು ಸಾಧ್ಯವಾಗಿದೆ.

ಕೊರೋನಾ ಭಯ: ವಿದೇಶದಲ್ಲಿ ಶಾಲೆ ತೆರೆದರೂ ಮಕ್ಕಳು ಬರ್ತಿಲ್ಲ, ಎಡ್ಮಿಶನ್‌ನಲ್ಲಿ ಭಾರೀ ಕುಸಿತ

ಈ ವರ್ಷ ಒಟ್ಟು 42.46 ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಪ್ರವೇಶಾತಿಯನ್ನು ಪಡೆದುಕೊಂಡಿದ್ದರು. ಈ ಪ್ರಮಾಣವು 2019ರ ಪ್ರವೇಶ ದಾಖಲಾತಿಗೆ ಹೋಲಿಸಿದರೆ ಅರ್ಧದಷ್ಟು ಹೆಚ್ಚಾಗಿದೆ. ಅದಂರೆ, 2019 ಸಾಲಿನಲ್ಲಿ ದಾಖಲಾದಕ್ಕಿಂತ 2.86 ಲಕ್ಷ ವಿದ್ಯಾರ್ಥಿಗಳ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರವೇಶಾತಿಯನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಒಟ್ಟಾರೆ ವಿದ್ಯಾರ್ಥಿಗಳ ಸಂಖ್ಯೆ 39.78 ಲಕ್ಷ ಇತ್ತು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಹೆಚ್ಚಳಗೊಂಡ ಒಟ್ಟು ಅಡ್ಮೀಷನ್‌ಗಳಲ್ಲಿ 2,01,833 ವಿದ್ಯಾರ್ಥಿಗಳು ಖಾಸಗಿ ಶಾಲೆಗಳನ್ನು ತೊರೆದು ಸರ್ಕಾರಿ ಶಾಲೆಗಳನ್ನು ಆಯ್ದುಕೊಂಡಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. 

ಸರ್ಕಾರಿ  ಶಾಲೆಗಳಿಂದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುವ ಪ್ರಕ್ರಿಯೆ ಸಾಮಾನ್ಯ. ಆದರೆ ಆಂಧ್ರಪ್ರದೇಶದಲ್ಲಿ ಇದಕ್ಕೆ ವಿರುದ್ಧ ಟ್ರೆಂಡ್ ಶುರುವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಎಂದರೆ, ಕಳೆದ ವರ್ಷ ಆಂಧ್ರಪ್ರದೇಶ ಸರ್ಕಾರವು, ಮಕ್ಕಳು- ಪೋಷಕರನ್ನು ಉತ್ತೇಜಿಸುವಂಥ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು. ಜಗಣ್ಣಾ ಅಮ್ಮಾವೋಡಿ, ನಾಡು-ನೇಡು ಮತ್ತು ಜಗಣ್ಣಾ ವಿದ್ಯಾ ಕಾನುಕದಂಥ ಕಾರ್ಯಕ್ರಮಗಳನ್ನು ಸಮಪರ್ಕವಾಗಿ ಜಾರಿ ಮಾಡಿದ ಪರಿಣಾಮ ಸರ್ಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಇಂಟಿರೀಯರ್ ಡಿಸೈನ್ ಕೋರ್ಸು ಕಲಿತರೆ ಕೆಲಸ ಗ್ಯಾರಂಟಿ

ತಾಯಿಂದರು ಹಣಕಾಸಿನ ತೊಂದರೆಯಿಂದಾಗಿ ಮಕ್ಕಳನ್ನು ಶಾಲೆ ಬಿಡಿಸದರಲಿ ಎಂದ ಆಂಧ್ರ ಪ್ರದೇಶ ಸರ್ಕಾರ ಜಗಣ್ಣ ಅಮ್ಮಾವೋಡಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಅನ್ವಯ 1ರಿಂದ 12ನೇ ತರಗತಿಯ ಮಕ್ಕಳ ತಾಯಂದಿರಿಗೆ ಸರ್ಕಾರ 15 ಸಾವಿರ ರೂಪಾಯಿ ನೀಡುತ್ತದೆ. ಹಣ ಸಂಪಾದನೆಗೆ ಮಕ್ಕಳನ್ನು ಸ್ಕೂಲ್ ಬಿಡಿಸಿ ಬೇರೆ ಕೆಲಸಕ್ಕೆ ಕಳುಹಿಸದಿರಲಿ ಎಂಬುದು ಯೋಜನೆಯ ಸದುದ್ದೇಶವಾಗಿದೆ. 

ನಾಡು ನೇಡು ಯೋಜನೆ ಅನ್ವಯ 45,000 ಶಾಲೆಗಳನ್ನು ಮರುನಿರ್ಮಾಣ ಮಾಡಲಾಗಿದೆ. ಖಾಸಗಿ ಶಾಲೆಗಳಿಗೆ ಸ್ಪರ್ಧೆಯೊಡ್ಡುವ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಈ ಯೋಜನೆಯಡಿ ವೆಚ್ಚ ಮಾಡಲಾಗುತ್ತದೆ. 

ಪ್ರಮುಖ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವುದು ಮಾತ್ರವಲ್ಲದೇ ಪ್ರತಿ ಶಾಲೆಗಳಲ್ಲಿ ಆಧುನಿಕ ಕಲಿಕೆಗೆ ನೆರವಾಗಲು ಇಂಗ್ಲಿಷ್ ಲ್ಯಾಬ್ ಒದಗಿಸಲಾಗಿದೆ. ಮೊದಲ ಹಂತದಲ್ಲಿ ಈ ಯೋಜನೆಗೆ 15,715 ಶಾಲೆಗಳನ್ನು ಸೇರಿಸಲಾಗಿದ್ದು, ಮುಂದಿನ ಜನವರಿಯೊಳಗೆ ಪೂರ್ಣಗೊಳ್ಳಲಿದೆ. ಇದೇ ವೇಳೆ, ಜಗಣ್ಣಾ ವಿದ್ಯಾ ಕಾನುಕ ಯೋಜನೆಯು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ಸ್ಕೂಲ್ ಬ್ಯಾಗ್, ಯುನಿಫಾರ್ಮ್ಸ್, ಪುಸ್ತಕಗಳು, ಸಾಕ್ಸ್  ಬೆಲ್ಟ್ ಸೇರಿದಂತೆ ಮತ್ತಿತರ ಪರಿಕರಗಳನ್ನು ಒದಗಿಸಲಾಗುತ್ತದೆ. 

ಸರ್ಕಾರ ಜಾರಿಗೆ ತಂದಿರುವ ಶೈಕ್ಷಣಿಕ ಯೋಜನೆಗಳು ಬಡ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಶಾಲೆ ಬಿಟ್ಟವರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಲೂ ಸಹಾಯವಾಗುತ್ತವೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಮಕ್ಕಳು ಈ ರಾಜ್ಯದ ಭವಿಷ್ಯ. ಹಾಗಾಗಿ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚಿನ ಹೂಡಿಕೆಯನ್ನು ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ವೈ. ಎಸ್. ಜಗನ್ ಮೋಹನ್ ರೆಡ್ಡಿ ಈಗಾಗಲೇ ಹೇಳಿದ್ದಾರೆ. ಅದೇ ರೀತಿ ಅಲ್ಲಿನ ಸರ್ಕಾರ ಯೋಜನೆಗಳನ್ನು ಹಮ್ಮಿ ಕೊಳ್ಳುತ್ತಿದೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಇದೆಲ್ಲರದ ಪರಿಣಾಮ ಇದೀಗ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ. 

ಆನ್‌ಲೈನ್ ಕ್ಲಾಸು, ಮನೆಯಿಂದಲೇ ಕೆಲಸ: ಏಳು ವರ್ಷದಲ್ಲೇ ಕಂಪ್ಯೂಟರ್ ಮಾರಾಟ ಅತ್ಯಧಿಕ!
 

 

click me!