ಪಿಯುಗೆ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ ಸರಕಾರದ ಚಿಂತನೆ

By Gowthami KFirst Published Dec 1, 2022, 3:57 PM IST
Highlights

ಪದವಿ ಪೂರ್ವ ಶಿಕ್ಷಣದ ಪರೀಕ್ಷಾ ವ್ಯವಸ್ಥೆಯಲ್ಲಿ ಕೆಲ ಸುಧಾರಣೆಗಳನ್ನು ತರಲು ಮುಂದಾಗಿರುವ ಸರ್ಕಾರ, 2023-24ನೇ ಸಾಲಿನಿಂದ  ಪಿಯುಗೆ ಬಹು ಆಯ್ಕೆ ಪ್ರಶ್ನೆ ಮಾದರಿ ಜಾರಿಗೆ ಚಿಂತನೆ ನಡೆಸಿದೆ.

ಬೆಂಗಳೂರು (ಡಿ.1): ಪದವಿ ಪೂರ್ವ ಶಿಕ್ಷಣದ ಪರೀಕ್ಷಾ ವ್ಯವಸ್ಥೆಯಲ್ಲಿ ಕೆಲ ಸುಧಾರಣೆಗಳನ್ನು ತರಲು ಮುಂದಾಗಿರುವ ಸರ್ಕಾರ, 2023-24ನೇ ಸಾಲಿನಿಂದ ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು (ಎಂಸಿಕ್ಯೂ) ಪರಿಚಯಿಸಲು ಚಿಂತನೆ ನಡೆಸಿದೆ. ಪ್ರಮುಖವಾಗಿ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಗೊಳಿಸುವ ದೃಷ್ಟಿಯಿಂದ ಈ ಚಿಂತನೆ ನಡೆಸಲಾಗಿದೆ. ಆದರೆ, ಬಹು ಆಯ್ಕೆ ಮಾದರಿಯನ್ನು ಕೇವಲ ದ್ವಿತೀಯ ಪಿಯುಗೆ ಮಾತ್ರವಲ್ಲದೆ ಪ್ರಥಮ ಪಿಯು ಪರೀಕ್ಷೆಗಳಿಗೂ ಅಳವಡಿಸಿಕೊಳ್ಳಲು ಆಲೋಚಿಸಲಾಗಿದೆ. ಈ ಸಂಬಂಧ ಮಂಗಳವಾರ ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ.ನಾಗೇಶ್‌ ಅವರ ಅಧ್ಯಕ್ಷತೆಯ ಪಿಯು ಇಲಾಖೆಯ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆಯಾಗಿದ್ದು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಲಾಗಿಲ್ಲ. ಇನ್ನೂ ಒಂದೆರಡು ಸುತ್ತಿನ ಚರ್ಚೆ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಸಭೆಯಲ್ಲಿ ಹಾಜರಿದ್ದ ಕೆಲವು ಹಿರಿಯ ಅಧಿಕಾರಿಗಳು ಪಿಯು ಫಲಿತಾಂಶ ಉತ್ತಮಪಡಿಸಲು ಬಹು ಆಯ್ಕೆ ಮಾದರಿ ಪ್ರಶ್ನೆಗಳನ್ನು ಪರಿಚಯಿಸಲು ಪ್ರಸ್ತಾಪಿಸಿದ್ದಾರೆ. ರಾಜ್ಯದ ದ್ವಿತೀಯ ಪಿಯುಸಿ ಫಲಿತಾಂಶ ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಪಿಯು ಫಲಿತಾಂಶಕ್ಕೆ ಹೋಲಿಸಿದರೆ ಬಹಳ ಕಡಿಮೆ ಇದೆ. ಕೇಂದ್ರೀಯ ಮಂಡಳಿಗಳ ಫಲಿತಾಂಶ ಸಹ ರಾಜ್ಯ ಪಿಯು ಫಲಿತಾಂಶಕ್ಕೆ ಹೋಲಿಸಿದರೆ ಶೇಕಡಾ ವಾರು ಭಾರೀ ಏರಿಕೆ ಇರುತ್ತದೆ. ಅಲ್ಲಿ ಫಲಿತಾಂಶ ಉತ್ತಮಪಡಿಸಲು ಸಾಕಷ್ಟು ಸುಧಾರಣಾ ಕ್ರಮಗಳನ್ನು ತಂದಿದ್ದಾರೆ. ಸರಳ ವಿಧಾನಗಳನ್ನು ಅಳವಡಿಸಲಾಗಿದೆ. ರಾಜ್ಯದಲ್ಲಿ ಜಾರಿಗೆ ತಂದರೆ ಹೆಚ್ಚಿನ ಮಕ್ಕಳು ಪಿಯುಸಿ ನಂತರದ ಶಿಕ್ಷಣದಿಂದ ವಂಚಿತರಾಗದೆ ಉನ್ನತ ಶಿಕ್ಷಣಕ್ಕೆ ಹೋಗಲು ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಕೇಂದ್ರದಿಂದ ವಿದ್ಯಾರ್ಥಿ ವೇತನ ಕಟ್‌: ಎಐಡಿಎಸ್‌ಒ ಖಂಡನೆ
ಒಂದರಿಂದ ಎಂಟನೇ ತರಗತಿವರೆಗಿನ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಈವರೆಗೆ ನೀಡುತ್ತಿದ್ದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದಿರುವುದನ್ನು ತೀವ್ರವಾಗಿ ಖಂಡಿಡಿರುವ ಎಐಡಿಎಸ್‌ಒ ವಿದ್ಯಾರ್ಥಿ ಸಂಘಟನೆ ಕೂಡಲೇ ತನ್ನ ನಿರ್ಧಾರ ಕೈಬಿಟ್ಟು ಸೌಲಭ್ಯ ಮುಂದುವರೆಸಲು ಆಗ್ರಹಿಸಿದೆ.

ಮಾ.9 ರಿಂದ ದ್ವಿತೀಯ ಪಿಯು ಪರೀಕ್ಷೆ : ಅಂತಿಮ ವೇಳಾಪಟ್ಟಿ ಪ್ರಕಟ

ಪ್ರಸಕ್ತ ಸಾಲಿನಿಂದಲೇ ಸರ್ಕಾರ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಇದ್ದ ಮೆಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನವನ್ನು ನಿಲ್ಲಿಸಿ ಕೇವಲ 9 ಮತ್ತು 10ನೇ ತರಗತಿ ಮಕ್ಕಳಿಗೆ ಮಾತ್ರ ಸೀಮಿತಗೊಳಿಸಿದೆ. ಇದರಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನದಿಂದ ವಂಚಿತರಾಗುತ್ತಾರೆ. 1ರಿಂದ 8ನೇ ತರಗತಿ ಮಕ್ಕಳ ಕಡ್ಡಾಯ ಶಿಕ್ಷಣದ ಜವಾಬ್ದಾರಿ ಸರ್ಕಾರದ್ದಾಗಿರುವುದರಿಂದ ಈ ಸೌಲಭ್ಯ ಹಿಂಪಡೆದಿರುವುದಾಗಿ ಕೇಂದ್ರ ಹೇಳಿರುವುದು ಸರಿಯಲ್ಲ. ಈಗಾಗಲೇ ಶಾಲೆಗಳಲ್ಲಿ ಸಮರ್ಪಕ ನಿರ್ವಹಣೆ, ಹಾಸ್ಟೆಲ್‌ ಸೌಲಭ್ಯಗಳಿಲ್ಲದೆ, ಮೂಲ ಸೌಕರ್ಯಗಳ ಕೊರತೆಯಿಂದ ವಿದ್ಯಾರ್ಥಿಗಳು ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ವಿದ್ಯಾರ್ಥಿ ವೇತನದಿಂದ ಒಂದಷ್ಟು ಸೌಲಭ್ಯಗಳನ್ನು ಪಡೆಯಲು ಅವರಿಗೆ ಸಹಕಾರಿಯಾಗುತ್ತಿತ್ತು.

 

 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು, 9 ಸಾವಿರ ವಿದ್ಯಾರ್ಥಿಗಳಿಗೆ ಅನ್ಯಾಯ

ಈಗ ಸರ್ಕಾರದ ನಡೆಯಿಂದ ಸೌಲಭ್ಯಗಳ ವಂಚಿತರಾಗಿ ಶಿಕ್ಷಣದಿಂದ (eduaction) ದೂರ ಉಳಿಯುವ ಮಕ್ಕಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ ಕೂಡಲೇ ಸರ್ಕಾರ ತನ್ನ ನಿರ್ಧಾರ ಕೈಬಿಟ್ಟು ವಿದ್ಯಾರ್ಥಿ ವೇತನ ಯೋಜನೆ ಮುಂದುವರೆಸಬೇಕು. ಇದಲ್ಲಿದ್ದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಅಜಯ್‌ ಕಾಮತ್‌ ಎಚ್ಚರಿಕೆ ನೀಡಿದ್ದಾರೆ.

click me!