ಆಡಳಿತ ಯಂತ್ರ ಕುಸಿಯುವ ಆತಂಕ, ಶಿಕ್ಷಣ ಇಲಾಖೆಯಿಂದ ಸಿ ದರ್ಜೆ ನೌಕರರಿಗೆ 100 ಅಂಕಗಳ ಕಾರ್ಯಕ್ಷಮತೆ ಪರೀಕ್ಷೆ ಕಡ್ಡಾಯ

By Suvarna NewsFirst Published Jan 16, 2022, 1:28 PM IST
Highlights

ನೌಕರರಿಗೆ ಆಡಳಿತದ ಅನುಭವ, ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿ ಕೊರತೆ ಎದ್ದು ಕಾಣುತ್ತಿದ್ದು, ಸಿ ದರ್ಜೆ ನೌಕರರಿಗೆ 100 ಅಂಕಗಳ ಕಾರ್ಯಕ್ಷಮತೆ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಬೆಂಗಳೂರು(ಜ.16): ಶಿಕ್ಷಣ ಇಲಾಖೆಯಿಂದ (karnataka Education Department) ವಿದ್ಯಾರ್ಹತೆಯ ಮೇಲೆ, ಅನುಕಂಪದ ಆಧಾರದ ಮೇಲೆ ಈವರಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿತ್ತು ಆದರೆ ಇನ್ನು ಮುಂದೆ ಹಾಗಿಲ್ಲ. ಶಿಕ್ಷಣ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ನೇಮಕಗೊಳ್ಳುವಂತ ಸಾಕಷ್ಟು ನೌಕರರಿಗೆ ಆಡಳಿತದ ಅನುಭವ, ಗಣಕಯಂತ್ರದ ಜ್ಞಾನ, ಭಾಷಾ ಪರಿಣತಿ ಕೊರತೆ ಎದ್ದು ಕಾಣುತ್ತಿದ್ದು, ಸಮಸ್ಯೆಯಾಗುತ್ತಿದೆ.  . ಈ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ತೆಗದುಕೊಂಡಿರುವ ಶಿಕ್ಷಣ ಇಲಾಖೆ( Education Department ) ಸಿ ದರ್ಜೆ ನೌಕರರಿಗೆ ( C-grade Worker ) ಕಾರ್ಯಕ್ಷಮತೆ ಪರೀಕ್ಷೆ (Performance Test) ನಡೆಸಲು ಮುಂದಾಗಿದೆ.  ನೌಕರರು 100 ಅಂಕಗಳ ಪರೀಕ್ಷೆ ಬರೆಯಬೇಕಿದ್ದು, ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ.  

ಶಿಕ್ಷಣ ಇಲಾಖೆಯಲ್ಲಿ  ಅನುಕಂಪದ ಆಧಾರದ ಮೇಲೆ ನೇಮಕಗೊಂಡಿರುವ ಹಾಗೂ ನಿಕೃಷ್ಟ ಕಾರ್ಯ ನಿರ್ವಹಣೆಯ ಸಿ ದರ್ಜೆ ನೌಕರಿಗೆ 100 ಅಂಕಗಳ ಕಾರ್ಯಕ್ಷಮತೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಕಾಯಂ ಪೂರ್ವ ಸೇವಾವಧಿ ಘೋಷಣೆಗೆ ಮುನ್ನ ಈ ಪರೀಕ್ಷೆಯನ್ನು ಕಡ್ಡಾಯವಾಗಿ ತೇರ್ಗಡೆಯಾಗಬೇಕು ಎಂದು  ಇಲಾಖೆ ಸೂಚನೆ ಹೊರಡಿಸಿದೆ.

ಇಲಾಖೆಯ 'ಸಿ' ದರ್ಜೆ ನೌಕರನ ಕಾಯಂ ಪೂರ್ವ ಸೇವಾವಧಿ ಘೊಷಣೆ ಮಾಡುವ ಮುನ್ನ ಇಲಾಖಾ ಪರೀಕ್ಷೆಗಳಾದ ಅಕೌಂಟ್ಸ್ ಲೋಯರ್ / ಹೈಯರ್, ಜನರಲ್ ಲಾ- ಭಾಗ 6, ಕನ್ನಡ ಭಾಷಾ ಪರೀಕ್ಷೆ ಮತ್ತು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಗಳನ್ನು ಉತ್ತೀರ್ಣರಾಗಿರಬೇಕೆಂಬ ಮಾನದಂಡ ನಿಗದಿಪಡಿಲಾಗಿದ್ದು, ಈ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿ, ಕಾಯಂ ಪೂರ್ವ ಸೇವಾವಧಿ ಘೊಷಣೆಯಾಗಿ ಇಲಾಖೆಯಲ್ಲಿ ಅನೇಕ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಂತಹ ನೌಕರರ ಪೈಕಿ ಬಹುತೇಕರು ಇಲಾಖೆ ನಿಯಮಗಳ ಕುರಿತು ಪರಿಪೂರ್ಣ ಜ್ಞಾನ ಹೊಂದದೇ ಇರುವುದು ಕಂಡು ಬಂದಿದೆ.

ಕಡತಗಳಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ನಮೂದಿಸದೇ ಮಂಡಿಸುತ್ತಿರುವುದು, ಕಡತಗಳಲ್ಲಿ ಟಿಪ್ಪಣಿ ಸರಿಯಾಗಿ ಹಾಕದೇ ಇರುವುದು ಮತ್ತು ಕಾಗುಣಿತ ದೋಷ, ಕಂಪ್ಯೂಟರ್ ಜ್ಞಾನದ ಕೊರತೆ ಇದ್ದು, ಇದು ಇಲಾಖೆ ಕಾರ್ಯಕ್ಷಮತೆ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಇದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಈ ಪರೀಕ್ಷೆಯನ್ನು  ಮಾಡಲಾಗುತ್ತಿದೆ.

ಈ ಪರೀಕ್ಷೆ ನೇರ ನೇಮಕ, ಇಲಾಖಾ ಪರೀಕ್ಷೆ ತೇರ್ಗಡೆ ಹೊಂದಿದವರಿಗೆ ಅನ್ವಯಿಸುವುದಿಲ್ಲ.  ಅನುಕಂಪದ ಆಧಾರದಲ್ಲಿ ಮತ್ತಿತರ ನಿಯಮಗಳ ಮೇಲೆ ನೇಮಕಗೊಂಡಿರುವವರಿಗೆ ಕಡ್ಡಾಯವಾಗಿದೆ. ಭಾಷಾ ಪರಿಣತಿ ತೀರಾ ಕಡಿಮೆ ಇದೆ. ಮತ್ತೆ ಕೆಲವರಿಗೆ ಓದಲು ಮತ್ತು ಬರೆಯಲೂ ಬರುವುದಿಲ್ಲ. ಅಂತಹವರಿಗೆ ಪರೀಕ್ಷೆ ನಡೆಸಿ ಕಾರ್ಯಕ್ಷಮತೆ ಹೆಚ್ಚಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಶಿಕ್ಷಣ ಇಲಾಖೆಯ ಆಯುಕ್ತರಾದಂತ ಆರ್ ವಿಶಾಲ್ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಇಲಾಖೆ ಸಿ ವರ್ಗದ ನೌಕರರ ಕಾರ್ಯಕ್ಷಮತೆ ಹೆಚ್ಚಿಸಲು ಕೈಗೊಂಡಿರುವ ಕ್ರಮ ಒಳ್ಳೆಯದ್ದು. ಬೇರೆ ಇಲಾಖೆಯಲ್ಲೂ ಇಂತಹ ಉಪಕ್ರಮ ಕೈಗೊಳ್ಳಲು ಅವಶ್ಯ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಪ್ರಭಾರ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್  ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಇತ್ತೀಚೆಗೆ ನೇಮ ಕಾತಿ ನಡೆದಿಲ್ಲ. ಅದರಲ್ಲೂ ವಿಶೇಷವಾಗಿ 'ಸಿ' ಗುಂಪಿನ ನೌಕರರ ನೇಮಕವಾಗಿಲ್ಲ. ಆದರೆ, ಅನುಕಂಪದ ಆಧಾರದ ಮೇಲೆ 600ಕ್ಕೂ ಹೆಚ್ಚು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನೌಕರರು ದ್ವಿತೀಯ ಪಿಯು ಇಲ್ಲವೆ ಪದವಿ ಮಾತ್ರ ಪಡೆದಿದ್ದಾರೆ. ಅವರಿಗೆ ಇಲಾಖೆ/ಸರ್ಕಾರ/ ಆಡಳಿತಕ್ಕೆ ಸಂಬಂಧಿಸಿದ ಮಾಹಿತಿ ಕೊರತೆ ಇದೆ. ಶಿಕ್ಷಣ ಇಲಾಖೆ ಪರೀಕ್ಷೆ ನಡೆಸಲು ನಿರ್ಧರಿಸಿದೆ. ಶಿಕ್ಷಣ ಇಲಾಖೆ ಕೈಗೊಂಡಿರುವ ಈ ಕ್ರಮವನ್ನು ಶೀಘ್ರವೇ ಇತರ ಇಲಾಖೆಗಳಿಗೂ ವಿಸ್ತರಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.

click me!