ವಿವಿ ಕಾಯ್ದೆ ತಿದ್ದುಪಡಿಗೆ ಸಂಪುಟ ಅಸ್ತು, 8 ನೂತನ ವಿವಿಗಳ ಸ್ಥಾಪನೆ ಇನ್ನು ಸುಲಭ

By Gowthami KFirst Published Aug 25, 2022, 7:32 PM IST
Highlights

ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ 'ಕರ್ನಾಟಕ ವಿವಿಗಳ ಕಾಯ್ದೆ-2000' ಕ್ಕೆ ತಿದ್ದುಪಡಿ ತರಲು  ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ

ಬೆಂಗಳೂರು (ಆ.25): ಎಂಟು ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಅನುವು ಮಾಡಿಕೊಡುವ ಉದ್ದೇಶದಿಂದ 'ಕರ್ನಾಟಕ ವಿವಿಗಳ ಕಾಯ್ದೆ-2000' ಕ್ಕೆ ತಿದ್ದುಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಇದರಿಂದಾಗಿ ಚಾಮರಾಜನಗರ, ಹಾವೇರಿ, ಹಾಸನ, ಕೊಡಗು, ಕೊಪ್ಪಳ, ಬಾಗಲಕೋಟೆ, ಬೀದರ್ ಮತ್ತು ಮಂಡ್ಯ ವಿಶ್ವ ವಿದ್ಯಾಲಯಗಳ ಸ್ಥಾಪನೆ ಸುಗಮವಾಗಿ ನಡೆಯಲಿದೆ. ಇದಕ್ಕಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದಿದ್ದಾರೆ. ಹೊಸ ವಿಶ್ವ ವಿದ್ಯಾಲಯಗಳ ಪೈಕಿ ಕ್ರಮವಾಗಿ ಚಾಮರಾಜನಗರ ವಿವಿ ಯಲ್ಲಿ 18,  ಹಾಸನ ವಿ.ವಿ ಯಲ್ಲಿ 36, ಹಾವೇರಿ 40, ಬೀದರ್ 140,  ಕೊಡಗು 24,  ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ಇವುಗಳ ಜತೆಗೆ ಮಂಡ್ಯ ವಿ.ವಿ. ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು  ಬರಲಿವೆ ಎಂದು ಸಚಿವ ಅಶ್ವತ್ಥನಾರಾಯಣ ವಿವರಿಸಿದರು.

ಮಂಡ್ಯ ವಿವಿ ಒಂದನ್ನು ಹೊರತುಪಡಿಸಿ ಮಿಕ್ಕ 7 ವಿ.ವಿ.ಗಳ ಆರಂಭವನ್ನು ಈ ವರ್ಷದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂಪಾಯಿ ಒದಗಿಸಲಾಗಿದೆ. ಏಕೀಕೃತ ವಿವಿಯಾಗಿದ್ದ ಮಂಡ್ಯದ ಸರಕಾರಿ ಕಾಲೇಜನ್ನು ಪೂರ್ಣ ಪ್ರಮಾಣದ ವಿ.ವಿ.ಯಾಗಿ ಮಾಡುವ ತೀರ್ಮಾನವನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು ಎಂದು ಅವರು ವಿವರಿಸಿದರು.

ಜಿಲ್ಲೆಗೊಂದು ವಿವಿ ಇರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ. ಈ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆ ಮಾಡಲಾಗುವುದು. ಜೊತೆಗೆ, ಯುವಜನರಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯ ಇದರ ಹಿಂದಿದೆ ಎಂದು ಸಚಿವರು ಹೇಳಿದರು.

ನೂತನ ವಿ.ವಿ.ಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ. ಇವು ಕಡಿಮೆ ಸ್ಥಳ, ಕಡಿಮೆ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದೊಂದಿಗೆ ಕಾರ್ಯ ಚಟುವಟಿಕೆ ನಡೆಸಲಿವೆ ಎಂದು ಅವರು ಹೇಳಿದರು.

ಬೆಳಗಾವಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸ್ಥಾಪನೆಗೆ ಆಗ್ರಹ
ಬೆಳಗಾವಿಯಲ್ಲಿಯೇ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಗುರುವಾರ ಬೆಳಗಾವಿ ವಕೀಲರ ಸಂಘದ ನೇತೃತ್ವದಲ್ಲಿ ಗುರುವಾರ ವಕೀಲರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ರಾಜ್ಯದ ಏಕೈಕ ರಾಷ್ಟ್ರೀಯ ತಾಂತ್ರಿಕ ವಿದ್ಯಾಲಯ NITKಗೆ ಹೊಸ ನಿರ್ದೇಶಕರಾಗಿ ಪ್ರೊ.ಪ್ರಸಾದ್ 

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಪ್ರಭು ಯತ್ನಟ್ಟಿ ಮಾತನಾಡಿ, ಬೆಳಗಾವಿ ಜಿಲ್ಲೆ ಸಾಕಷ್ಟುಉತ್ತುಂಗದಲ್ಲಿದ್ದು, ಸಾಕಷ್ಟುನಾಗರಿಕ ಸೌಲಭ್ಯಗಳನ್ನು ಕೂಡ ಹೊಂದಿದೆ. ನೈಸರ್ಗಿಕ ಸಂಪತ್ಭರಿತವಾಗಿದ್ದು, ಇಲ್ಲಿನ ಹವಾಮಾನ ಕೂಡ ಚೆನ್ನಾಗಿದೆ. ಉತ್ತಮ ವಾಯುನೆಲೆಯನ್ನು ಹೊಂದಿರುವ ಬೆಳಗಾವಿಯೂ ಮಹಾರಾಷ್ಟ್ರ, ಗೋವಾದಂತಹ ರಾಜ್ಯಗಳನ್ನು ಸಂಪರ್ಕಿಸುವ ಕೊಂಡಿಯಾಗಿದೆ. ಎರಡನೇಯ ರಾಜಧಾನಿಯೆಂದು ಪರಿಗಣಿಸಿ ಇಲ್ಲಿ ಸುವರ್ಣಸೌಧವನ್ನು ನಿರ್ಮಿಸಿ, ಪ್ರತಿವರ್ಷ ಅಧಿವೇಶನಗಳನ್ನು ಕೂಡ ನಡೆಸಲಾಗುತ್ತಿದೆ. ನೂರಾರು ವರ್ಷ ಹಳೆಯದಾದ ಕಾನೂನು ಮಹಾವಿದ್ಯಾಲಯಗಳಿರುವ ಬೆಳಗಾವಿಯಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಯಲವನ್ನು ಕೂಡ ಬೆಳಗಾವಿಯಲ್ಲೇ ಸ್ಥಾಪಿಸಬೇಕು. ಇದರಿಂದ ಇಲ್ಲಿನ ಜನರಿಗೆ ಹುಬ್ಬಳ್ಳಿ​ಧಾರವಾಡಕ್ಕೆ ಪ್ರತಿದಿನ ಅಲೆದಾಡುವ ಪ್ರಸಂಗ ತಪ್ಪುತ್ತದೆ ಎಂದರು.

ಶಿಕ್ಷಕರ ದಿನ ಶಿಕ್ಷಕರನ್ನು ಗೌರವಿಸಲು ವಂಡರ್‌ಲಾ ವತಿಯಿಂದ 300 ಶಿಕ್ಷಕರಿಗೆ ಉಚಿತ ಪ್ರವೇಶ

ಈ ವೇಳೆ ಸಚೀನ ಶಿವನ್ನವರ, ಸುಧೀರ ಚವ್ಹಾಣ್‌, ಗಿರಿರಾಜ್‌ ಪಾಟೀಲ, ಮಹಾಂತೇಶ ಪಾಟೀಲ, ಎಂ.ಬಿ. ಜಿರಲಿ, ಅಭಿಷೇಕ ಉದೋಷಿ, ಆದರ್ಶ ಪಾಟೀಲ, ಇರ್ಫಾನ್‌ ಬ್ಯಾಳ, ಪ್ರಭಾಕರ ಪವಾರ ಸೇರಿದಂತೆ ಇನ್ನೀತರರು ಇದ್ದರು.

click me!