
ಬೆಂಗಳೂರು : ರಾಜ್ಯಕ್ಕೆ ಹಬ್ಬಕ್ಕೆ ಮುನ್ನವೇ ದೀಪಾವಳಿ ಸಡಗರ ಬಂದಿದೆ. 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗುವಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 422 ಪಿಜಿ ಸೀಟುಗಳ ಸಂಖ್ಯ ಹೆಚ್ಚಳವಾಗಿದೆ. ಹಲವಾರು ವರ್ಷಗಳ ಬೇಡಿಕೆ ಈಗ ಈಡೇರಿದಂತಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವತಿಯಿಂದ ಈ ವರ್ಷ ಸರ್ಕಾರಿ ಹಾಗೂ ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ದೊಡ್ಡ ಪ್ರಮಾಣದ ಸೀಟುಗಳ ಹೆಚ್ಚಳ ನಡೆದಿದೆ. ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್ ಅವರು ವಿಕಾಸಸೌಧದಲ್ಲಿ ಮಾತನಾಡಿ ವಿವರಿಸಿದರು.
ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಹೇಳುವಂತೆ, ಈ ವರ್ಷ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 450 UG ಸೀಟುಗಳನ್ನು ಹೆಚ್ಚಿಸಲಾಗಿದೆ. ಈ ಮಾಹಿತಿಯನ್ನು ಈಗಾಗಲೇ KEA (Karnataka Examinations Authority) ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ಕಳೆದ ವರ್ಷ 12,395 ಸರ್ಕಾರಿ ಕೋಟಾ ಸೀಟುಗಳು ಲಭ್ಯವಿದ್ದರೆ, ಈ ವರ್ಷ 1,277 ಹೆಚ್ಚುವರಿ ಸೀಟುಗಳೊಂದಿಗೆ ಒಟ್ಟು 13,945 UG ಮೆಡಿಕಲ್ ಸೀಟುಗಳು ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಇದರ ಜೊತೆಗೆ, ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಸಹ 1,100 ಸೀಟುಗಳ ಹೆಚ್ಚಳ ಆಗಿದೆ. ಇದರ ಪರಿಣಾಮ, ಈ ಬಾರಿ ವೈದ್ಯಕೀಯ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶಗಳು ಸಿಕ್ಕಿವೆ.
ವಿಕಾಸಸೌಧದಲ್ಲಿ ಶನಿವಾರ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು ಈ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ಉತ್ತಮ ಗುಣಮಟ್ಟದ ಉನ್ನತ ಶಿಕ್ಷಣ ನೀಡುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಪ್ರೀ ಕ್ಲೀನಿಕಲ್, ಪ್ಯಾರಾ ಕ್ಲೀನಿಕಲ್ ಮತ್ತು ಕ್ಲೀನಿಕಲ್ ವಿಭಾಗಕ್ಕೆ ಒಟ್ಟು 422 ಪಿಜಿ ಸೀಟುಗಳ ಹೆಚ್ಚಳ ಮಾಡಲಾಗಿದೆ ಎಂದು ಡಾ. ಪಾಟೀಲ್ ವಿವರಿಸಿದರು. ಪೀಡಿಯಾಟ್ರಿಕ್ಸ್, ಅನಸ್ತೇಸಿಯಾ, ಫೋರೆನ್ಸಿಕ್ ಮೆಡಿಸಿನ್, ಮೈಕ್ರೊ ಬಯಲಾಜಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ವಿಭಾಗದಲ್ಲಿ ಪಿಜಿ ಸೀಟುಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
572 ಸೀಟು ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗಿತ್ತು ಪ್ರತಿಬಾರಿಯಂತೆ ಈ ಬಾರಿಯೂ ಪಿಜಿ ಕೋರ್ಸ್ ಗೆ ಬೇಡಿಕೆ ಇತ್ತು. ಪಿಜಿಯಲ್ಲಿ 572 ಸೀಟುಗಳನ್ನು ಮಂಜೂರು ಮಾಡಲು ನಾವು ಮನವಿ ಮಾಡಿದ್ದೆವು. ಇದರಲ್ಲಿ ನಮಗೆ 422 ಸೀಟು ಲಭ್ಯವಾಗಿವೆ. ಕಳೆದ ವರ್ಷ 1694 ಪಿಜಿ ಸೀಟು ಇದ್ದರೆ, ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ 422 ಸೀಟು ಹೆಚ್ಚಳ ಆಗಲಿದೆ. ಈ ವರ್ಷ ಒಟ್ಟು 2116 ಸೀಟು ವಿದ್ಯಾರ್ಥಿಗಳಿಗೆ ಸಿಗಲಿದೆ. ಇದು ವಿದ್ಯಾರ್ಥಿಗಳಿಗೆ ದೀಪಾವಳಿ ಕೊಡುಗೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.
ಈಗಾಗಲೇ ರಾಜ್ಯಕ್ಕೆ 450 ವೈದ್ಯಕೀಯ ಸೀಟುಗಳನ್ನು ಹೆಚ್ಚಳ ಮಾಡಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ಎಂಸಿ) ಆದೇಶ ನೀಡಿದೆ. ಇದರ ಜೊತೆಗೆ ಇದೇ ಮೊದಲ ಬಾರಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಅನಿವಾಸಿ ಭಾರತೀಯರಿಗೆ ಶೇ.15ರಷ್ಟು ಕೋಟಾ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಈ ನಿರ್ಧಾರವು ಸಾವಿರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹೊಸ ದಾರಿ ತೆರೆದುಕೊಡಲಿದ್ದು, ದೀಪಾವಳಿ ಹಬ್ಬದ ಸಂಭ್ರಮದ ನಡುವೆ ಒಂದು ಮಹತ್ವದ ಶಿಕ್ಷಣ ಉಡುಗೊರೆಯಾಗಿದೆ. ಸರ್ಕಾರಿ ಸ್ಥಳದಲ್ಲಿ ನಮಾಜ್ ನಿಷೇಧದ ಬಗ್ಗೆ ಯತ್ನಾಳ್ ಪತ್ರ ವಿಚಾರವಾಗಿ ಮಾತನಾಡಿದ ಡಾ.ಶರಣ ಪ್ರಕಾಶ್ ಪಾಟೀಲ್ ಅವರು, ಕ್ಷೇತ್ರಕ್ಕೆ ಅವರು ಸಂದೇಶ ಕಳಿಸಿರೋದು. ಅವರು ಹಿರಿಯರು ಇದಾರೆ. ನಾನು ಹೆಚ್ಚೇನು ಅವರ ಬಗ್ಗೆ ಮಾತನಾಡಲ್ಲ. ಹಿಂದೆ ಯತ್ನಾಳ್ ಅವ್ರು ಎಂಪಿ ಇದ್ದಾಗ ಹೇಗೆ ಮಾತಾಡ್ತಿದ್ರು? ಯತ್ನಾಳ್ MLC ಆಗೋ ಮುಂಚೆ, MP ಆಗೋ ಮುಂಚೆ ಅವರ ನಡವಳಿಕೆ ಹೇಗಿತ್ತು? ಈಗ ಹೇಗಿದೆ ನೋಡಿ ನಿಮಗೆ ಗೊತ್ತಾಗುತ್ತದೆ. ರಾಜಕೀಯಕ್ಕೆ ಅವರು ಮಾತಾಡ್ತಾರೆ ಅಷ್ಟೆ. ನಾವು ನಾಡು ಕಟ್ಟೋ ಮಾತುಗಳನ್ನು ಆಡಬೇಕು ಎಂದು ಶರಣ ಪ್ರಕಾಶ್ ಪಾಟೀಲ ಹೇಳಿಕೆ ನೀಡಿದ್ದಾರೆ.