ಹಿಜಾಬ್ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸ ಮಾಡಬೇಕಿದೆ, ಸಿಎಂಗೆ ಪತ್ರ ಬರೆದ ಸುರೇಶ್ ಕುಮಾರ್‌

By Suvarna NewsFirst Published Feb 18, 2022, 6:32 PM IST
Highlights

ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳಲ್ಲಿ ಸಮಸಮಾಜದ ಹೆಮ್ಮೆ ಮೂಡಿಸುವ ಅಗತ್ಯವಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್  ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು(ಫೆ.18): ಹಿಜಾಬ್-ಸಮವಸ್ತ್ರಗಳ ಸಂಘರ್ಷದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಾಯುವ ಕೆಲಸಕ್ಕೆ ಶಿಕ್ಷಣ ಇಲಾಖೆ ಹೊಸ ಕಾಯಕಲ್ಪದೊಂದಿಗೆ ಕೆಲಸ‌ ಮಾಡಬೇಕಿದೆ ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ (S Sureshkumar) ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹಾಗೂ ಶಿಕ್ಷಣ‌ ಮಂತ್ರಿಗಳಾದ ಶ್ರೀ ಬಿ ಸಿ. ನಾಗೇಶ್ (BC Nagesh) ಅವರುಗಳಿಗೆ  ಸುದೀರ್ಘ ಪತ್ರ ಬರೆದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶಾಲೆ ಕಾಲೇಜುಗಳ ಆವರಣದಲ್ಲಿ ಸೌಹಾರ್ದತೆಯನ್ನು ಕಾಪಾಡುವ ನಿಟ್ಟಿನಲ್ಲಿ‌ ಆರೋಪ ಪ್ರತ್ಯಾರೋಪಗಳನ್ನು ಮೀರುವ, ಶಿಕ್ಷಣದ‌ (Education) ಕಡೆಗೆ ಒಲವು ಹೆಚ್ಚುವ ಸಕಾರಾತ್ಮಕವಾದ ಕಾರ್ಯಕ್ರಮಗಳನ್ನು ರೂಪಿಸುವ ಕುರಿತಂತೆ ನಾವು ಹೆಚ್ಚಾಗಿ ಆಲೋಚಿಸಬೇಕಿದೆ ಎಂದು ಹೇಳಿದ್ದಾರೆ. 

ಶಿಕ್ಷಣ ಇಲಾಖೆ (Education Department) ಹೊಸ ನಾಯಕತ್ವದೊಂದಿಗೆ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಸಮವಸ್ತ್ರದ ಬಗ್ಗೆ ಹೆಮ್ಮೆ ಪಡಬೇಕು.  ಭವಿಷ್ಯದಲ್ಲಿ ನಮ್ಮ ವಿದ್ಯಾರ್ಥಿಗಳು ಬೆಳೆಯಬೇಕಾದರೆ ಶಿಕ್ಷಣ ಇಲಾಖೆಯ ಕಾರ್ಯವು ಮಹತ್ವದ್ದಾಗಿರಬೇಕು ಎಂದು ಶಾಸಕ ಸುರೇಶ್ ಕುಮಾರ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನ್ಯಾಯಾಲಯವು ಸಾಂವಿಧಾನಿಕ ಅವಕಾಶಗಳನ್ನು ನೋಡುತ್ತಿದೆ. ಆದರೆ ಶಾಂತಿ ಕದಡುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.

Hijab Row ಶಿಕ್ಷಕನಾಗಿ, ಜನಪ್ರತಿನಿಧಿಯಾಗಿ ಹಿಜಾಬ್ ವಿವಾದದ ಬಗ್ಗೆ ದತ್ತಾ ನೇರ ಮಾತು

ಮಾಜಿ ಶಿಕ್ಷಣ ಸಚಿವ ಸುರೇಶ್‍ ಕುಮಾರ್‌ ಅವರ  ಅಭಿಪ್ರಾಯಗಳು ಕೆಳಕಂಡಂತಿವೆ.

  • ಪ್ರತಿ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ನಡುವೆ ಸೋದರತ್ವ,  ಸೌಹಾರ್ದತೆಯನ್ನು ಕಾಪಾಡುವ, ಶೈಕ್ಷಣಿಕ‌ ವಾತಾವರಣವನ್ನು ಸಂರಕ್ಷಿಸುವ ನಿಟ್ಟಿನಲ್ಲಿ‌ ಶಾಲಾಭಿವೃದ್ದಿ ಮೇಲುಸ್ತುವಾರಿ ಸಮಿತಿಗಳಿಗೆ/ಶಾಲಾ,ಕಾಲೇಜು ಸಲಹಾ‌ ಸಮಿತಿಗಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ‌ ಖಚಿತ ಜವಾಬ್ದಾರಿಯನ್ನು ನಿಗದಿ‌ಪಡಿಸಬೇಕಿದೆ.
  • ತರಗತಿವಾರು ಮಕ್ಕಳ ಸಭೆಗಳನ್ನು ನಿಗದಿಪಡಿಸಿ ಕೋಮುಸಾಮರಸ್ಯದ ಸಾಂಸ್ಕೃತಿಕ‌ ಕಾರ್ಯಕ್ರಮಗಳು, ಸಮವಸ್ತ್ರದ ಆಶಯ, ಅದನ್ನು ಧರಿಸಿದಾಗ ಮೂಡಬೇಕಾದ ಸಮಸಮಾಜದ ಹೆಮ್ಮೆಯ ಕುರಿತಂತೆ ಮಕ್ಕಳಲ್ಲಿ ಅರಿವು ಮೂಡಿಸುವ ಪ್ರಯತ್ನಗಳು ಆಗಬೇಕು. ಅದಕ್ಕಾಗಿ ದಿನದ‌ ಒಂದು ಅವಧಿ ಮೀಸಲಿಟ್ಟರೂ ತಪ್ಪಿಲ್ಲ. 
  • ಶಾಲಾಭಿವೃದ್ಧಿ ಸಮಿತಿಗಳು, ಶಾಲಾ,ಕಾಲೇಜು ಸಲಹಾ ಸಮಿತಿಗಳು, ಪೋಷಕರ ಸಭೆಗಳನ್ನು ವಾರಕ್ಕೊಮ್ಮೆ ಕರೆದು ಈ ಪರಿಸ್ಥಿತಿ ತಿಳಿಯಾಗುವವರೆಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಸಾಧ್ಯವಾಗಬೇಕು. ಮಕ್ಕಳ ಭವಿಷ್ಯ ಕಟ್ಟುವ ಅನಿವಾರ್ಯತೆಯ ಕುರಿತಂತೆ ಮನನ ಮಾಡಿಸಿ ಸೌಹಾರ್ದ ವಾತಾವರಣ ಸೃಷ್ಟಿಸಬೇಕು.

ಹಿಜಾಬ್ ವಿವಾದ, ಅಲ್ಪಸಂಖ್ಯಾತ ಹಜ್, ವಕ್ಫ್ ಇಲಾಖೆಯಿಂದ ಮಹತ್ವದ ಸುತ್ತೋಲೆ

  • ಶಾಲಾ ಮಟ್ಟದಲ್ಲಿ ಸ್ಥಳೀಯ ಕಲಾವಿದರ, ಸ್ಥಳೀಯ ಸಾಹಿತಿಗಳ, ಸಾಧಕರನ್ನು‌ ಆಹ್ವಾನಿಸಿ ಮಕ್ಕಳ ಆರೋಗ್ಯಕರ ಚರ್ಚೆಗೆ ವೇದಿಕೆ ಸೃಷ್ಟಿಸಬೇಕು. ವಿದ್ಯಾರ್ಥಿಗೆ ಅವರಿಂದ‌ ಒಳಿತಿನ‌ ಪಾಠ ಮಾಡಿಸಬೇಕು, ಪ್ರಭಾವಿತರನ್ನಾಗಿಸುವ ಪ್ರಯತ್ನ ಆಗಬೇಕು. 
  • ಸ್ಥಳೀಯವಾಗಿ ಇಂತಹ ವಿಭಿನ್ನ ಪ್ರಯತ್ನಗಳನ್ನು‌ ಕೈಗೊಂಡ ಶಾಲೆಗಳನ್ನ ಗುರುತಿಸಿ, ಅಭಿನಂದಿಸುವ,‌ ಪ್ರಯತ್ನಗಳನ್ನು ದಾಖಲಿಸುವ ವ್ಯವಸ್ಥೆ ಆಗಬೇಕು.
  • ರಾಜ್ಯಮಟ್ಟದ ಪ್ರಖ್ಯಾತ ಚಲನಚಿತ್ರ‌ಕಲಾವಿದರು, ವಿವಿಧ ಸಾಧಕರುಗಳನ್ನು ಪ್ರೇರೇಪಿಸಿ ಮಕ್ಕಳನ್ನು ಉದ್ದೇಶಿಸಿ ಸಮವಸ್ತ್ರದ ಪ್ರಾಮುಖ್ಯತೆಯನ್ನು ಅರ್ಥೈಸುವ ಕಿರುಚಿತ್ರಗಳನ್ನು ದೃಶೀಕರಿಸಿ ವೈರಲ್ ಮಾಡಬಹುದು. ಅಂತೆಯೇ ಖ್ಯಾತ ಹಿನ್ನೆಲೆ ಗಾಯಕರಿಂದ, ಗೀತಸಾಹಿತಿಗಳ‌ ನೆರವನ್ನೂ ಪಡೆದು ವಿಶಿಷ್ಟ ಹಾಡುಗಳನ್ನು ರಚಿಸಿ ಚಿತ್ರೀಕರಿಸಬಹುದು.
  • ಒಟ್ಟಾರೆಯಾಗಿ ಇಂದು ನನ್ನ ಶಾಲೆ, ನನ್ನ ಕಾಲೇಜು, ನನ್ನ ಹೆಮ್ಮೆ, ನನ್ನ‌ ಶಿಕ್ಷಣ, ನನ್ನ ಸಮವಸ್ತ್ರ‌ ಮತ್ತು‌ ನನ್ನದೇ ಭವಿಷ್ಯವೆನ್ನುವ ಭಾವನೆ‌ ಪ್ರತಿ ವಿದ್ಯಾರ್ಥಿಯಲ್ಲಿಯೂ ಮೂಡುವ ಪ್ರಯತ್ನ‌ ನಡೆಸಿ ಭಾವೈಕ್ಯತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ವಿಶೇಷ ಪ್ರಯತ್ನದ‌ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ತಾವು ಸಂಬಂಧಿತರಿಗೆ ಸೂಕ್ತ ನಿರ್ದೇಶನವನ್ನು ನೀಡುವ ಮೂಲಕ ಸರ್ಕಾರದ ಜನಪರ‌ ನಿಲುವನ್ನು ಸಾರ್ವತ್ರೀಕರಣಗೊಳಿಸಲು ಮುಂದಾಗಬೇಕೆಂದು ಕೋರುತ್ತೇನೆ ಎಂದು ಅವರು ಮುಖ್ಯಮಂತ್ರಿಗಳಲ್ಲಿ ಹಾಗೂ ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.
click me!