Vedantu lays off ಮಕ್ಕಳು ಶಾಲೆಗೆ ಹಾಜರ್, ತಗ್ಗಿದ ಬೇಡಿಕೆಯಿಂದ 400 ನೌಕರರನ್ನು ವಜಾಗೊಳಿಸಿದ ವೇದಾಂತು!

By Suvarna NewsFirst Published May 18, 2022, 8:16 PM IST
Highlights
  • ಕಳೆದ ವಾರ 200 ಉದ್ಯೋಗಿಗಳನ್ನು ವಜಾಗೊಳಿಸಿದ್ದ ವೇದಾಂತು
  • ತಗ್ಗಿದ ಆನ್‌ಲೈನ್ ಕಲಿಕೆ, ಇದೀಗ ಮತ್ತೆ 400 ನೌಕರರನ್ನು ವಜಾ
  • 5,900 ನೌಕರರ ಪೈಕಿ 7ರಷ್ಟು ನೌಕರರ ವಜಾ

ನವದೆಹಲಿ(ಮೇ.18): ಕೊರೋನಾ ದೂರ ದೂರ, ಶಾಲೆಗಳು ಮತ್ತೆ ಆರಂಭ. ಇತ್ತ ಆನ್‌ಲೈನ್ ಕಲಿಕಾ ಸಂಸ್ಥೆಗಳ ಬೇಡಿಕೆ ಕುಸಿತ. ಪರಿಣಾಮ ದೇಶದ ಪ್ರಮುಖ ಆನ್‌ಲೈನ್ ಕಲಿಕಾ ಸಂಸ್ಥೆಯಾಗಿರುವ ವೇದಾಂತು  ಇದೀಗ 424 ನೌಕರರನ್ನು ವಜಾಗೊಳಿಸಿದೆ.  ತಿಂಗಳ ಆರಂಭದಲ್ಲಿ 200 ನೌಕರರನ್ನು ವಜಾಗೊಳಿಸಿದ್ದ ವೇದಾಂತು ಇದೀಗ ಮತ್ತೆ 424 ಮಂದಿಯನ್ನು ಕೆಲಸದಿಂದ ವಜಾಗೊಳಿಸಿದೆ.

ಈ ನಿರ್ಧಾರವನ್ನು ವೇದಾಂತು ಸಿಇಒ ಹಾಗೂ ಸಹ ಸಂಸ್ಥಾಪಕ ವಂಶಿ ಕೃಷ್ಣ ಪ್ರಕಟಿಸಿದ್ದಾರೆ. ನಿಜಕ್ಕೂ ಇದು ಅತ್ಯಂತ ಕಷ್ಟದ ನಿರ್ಧಾರ ಹಾಗೂ ಕೆಲಸ. ನನ್ನನ್ನು ಕ್ಷಮಿಸಿ ಬೇರೆ ದಾರಿಯಿಲ್ಲ ಎಂದು ವಂಶಿ ಕೃಷ್ಣ ಇ ಮೇಲ್ ಮೂಲಕ ನೌಕಕರಿಗೆ ವಜಾ ಸುದ್ದಿಯನ್ನು ತಿಳಿಸಿದ್ದಾರೆ.

ಕೋವಿಡ್ ಕಾಲದಲ್ಲಿ ನೆರವಾದ ಆನ್ಲೈನ್ ಎಜುಕೇಷನ್ ಆಪ್ಸ್

ನೌಕರರ ವಜಾಗೆ ವಂಶಿ ಕೃಷ್ಣ ಕಾರಣಗಳನ್ನು ನೀಡಿದ್ದಾರೆ. ಯೂರೋಪ್‌ನಲ್ಲಿನ ಯುದ್ಧ, ಆರ್ಥಿಕ ಹಿಂಜರಿತ, ಬಡ್ಡಿದರ ಏರಿಕೆ, ಹಣದುಬ್ಬರದ ಒತ್ತಡಗಳಿಂದ ಸಂಸ್ಥೆ ಅನಿವಾರ್ಯವಾಗಿ ಈ ನಿರ್ಧಾರ ತೆಗೆದಕೊಳ್ಳಬೇಕಾಗಿದೆ. ಮುಂಬರುವ ತ್ರೈಮಾಸಿಕಕ್ಕೆ ಬಂಡವಾಳದ ಕೊರತೆ ಎದುರಾಗಿದೆ. ಶಾಲೆಗಳು ಮತ್ತು ಆಫ್ ಲೈನ್ ಕಲಿಕೆ ಆರಂಭಗೊಂಡಿದೆ. ಹೀಗಾಗಿ ಆನ್ ಲೈನ್ ಕಲಿಕಾ ಸಂಸ್ಥೆಗಳ ಬೇಡಿಕೆ ತಗ್ಗಿದೆ. ಕಳೆದ ಎರಡು ವರ್ಷದಿಂದ ವೇದಾಂತು ಹಲವು ಸವಾಲುಗಳನ್ನು ಎದುರಿಸಿದೆ ಎಂದು ವಂಶಿ ಕೃಷ್ಣ ಹೇಳಿದ್ದಾರೆ. 

ಲಾಕ್‌ಡೌನ್ ವೇಳೆ ಭಾರಿ ಬೇಡಿಕೆ
ಲಾಕ್‌ಡೌನ್ ವೇಳೆ ಶಾಲಾ-ಕಾಲೇಜು ಮಕ್ಕಳು ಮನೆಯಲ್ಲೇ ಇರುವ ಕಾರಣ ವೀಡಿಯೋ ಕಾಲ್‌, ಕಾನ್ಫರೆನ್ಸ್‌ ಕಾಲ್‌ ಮೂಲಕ ವಿವಿಧ ಬಗೆಯ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿದ್ದು, ಇದರಿಂದ ಆನ್ ಲೈನ್ ಕಲಿಕಾ ಸೇಲ್ಸ್‌ಗೆ ಭಾರಿ ಬೇಡಿಕೆ ವ್ಯಕ್ತವಾಗಿತ್ತು. 

ಎಸ್ಸೆಸ್ಸೆಲ್ಸಿ ಪೇಲ್‌ ಕಡಿಮೆ ಮಾಡಲು 10% ಕೃಪಾಂಕ

2 ವರ್ಷ ನಂತರ ಶಾಲೆಗಳು ಪೂರ್ಣಾರಂಭ
ಮೂವತ್ತೈದು ದಿನಗಳ ಬೇಸಿಗೆ ರಜೆ ಮುಗಿದ ಬೆನ್ನಲ್ಲೇ ನಿಗದಿಯಂತೆ ಸೋಮವಾರ ರಾಜ್ಯಾದ್ಯಂತ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು, ಜೊತೆಗೆ ರಾಜ್ಯ ಪಠ್ಯಕ್ರಮದ ಬಹುತೇಕ ಅನುದಾನರಹಿತ ಖಾಸಗಿ ಶಾಲೆಗಳು ಆರಂಭಗೊಂಡಿದ್ದು, ಸಡಗರ ಸಂಭ್ರಮದೊಂದಿಗೆ ಮಕ್ಕಳನ್ನು ಬರಮಾಡಿಕೊಂಡವು.

ರಾಜಧಾನಿ ಬೆಂಗಳೂರಿನ ಉತ್ತರ ಮತ್ತು ದಕ್ಷಿಣ ವಲಯದ ಎಲ್ಲ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಹಾಗೂ ಇತರೆ ಎಲ್ಲ ಜಿಲ್ಲೆಗಳಲ್ಲೂ ಶಾಲೆ ಪ್ರಾರಂಭೋತ್ಸವದ ದಿನವೇ ಶೇ.60ರಿಂದ 70ರಷ್ಟುಮಕ್ಕಳು ಹಾಜರಾಗಿರುವುದಾಗಿ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇನ್ನು ರಾಜ್ಯ ಪಠ್ಯಕ್ರಮದ ಅನುದಾನ ರಹಿತ ಖಾಸಗಿ ಶಾಲೆಗಳೂ ಸೋಮವಾರದಿಂದ ಆರಂಭಗೊಂಡಿದ್ದು, ಮಕ್ಕಳ ಹಾಜರಾತಿ ಉತ್ತಮವಾಗಿತ್ತು ಎಂದು ವಿವಿಧ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ.

ಆನ್‌ಲೈನ್‌ಗಿಂತ ಭೌತಿಕ ಶಿಕ್ಷಣ ಉಪ​ಕಾರಿ
ಕೊರೋನಾ ಮಹಾಮಾರಿ ಮಕ್ಕಳ ಕಲಿಕಾ ಸಾಮರ್ಥ್ಯಕ್ಕೆ ತಡೆಯೊಡ್ಡಿದ್ದು, ಇಂದಿನಿಂದ ಶಾಲೆಗಳು ಆರಂಭವಾಗಿರುವುದರಿಂದ ಮಕ್ಕಳ ಕಲಿಕೆಯ ಮಟ್ಟಹೆಚ್ಚಿಸಲು ಸಹಕಾರಿಯಾಗಲಿದೆ. ನಮ್ಮ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಉತ್ತಮ ಹಾಗೂ ಉನ್ನತ ಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ನುರಿತ ಶಿಕ್ಷಕರನ್ನು ನೇಮಿಸಿಕೊಂಡಿದ್ದು, ಪಠ್ಯದ ಜೊತೆಗೆ ನಮ್ಮ ದೇಶದ ಸಂಸ್ಕೃತಿ,ಆಚಾರ,ವಿಚಾರ, ಇತಿಹಾಸದ ಬಗ್ಗೆ ತಿಳಿಸುವುದರ ಜೊತೆಗೆ ಕ್ರೀಡೆಗೂ ಒತ್ತು ನೀಡಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯವನ್ನು ಶಿಕ್ಷಕರು ವ್ಯಕ್ತಪಡಿಸಿದ್ದಾರೆ.

2 ವಾರ ಪಾಠ ಬೋಧನೆ ಇಲ್ಲ
ಮುಂದಿನ ಎರಡು ವಾರ 1ರಿಂದ 9ನೇ ತರಗತಿ ಮಕ್ಕಳಿಗೆ ಪಠ್ಯಬೋಧನೆ ಇರುವುದಿಲ್ಲ. ಮಳೆಬಿಲ್ಲು ವೇಳಾಪಟ್ಟಿಯ ಪ್ರಕಾರ ಆಟ, ಹಾಸ್ಯ ಕಾರ್ಯಕ್ರಮ, ಆಟಿಕೆ ತಯಾರಿಕೆ, ನಾಟಕದ ಹಬ್ಬ, ಚಿತ್ರ ಚಿತ್ತಾರ ಕಲಾ ಹಬ್ಬ, ಚಿತ್ರ ಜಗತ್ತು, ಕಥೆ ಹೇಳುವುದು, ಕವಿತೆ ಕಟ್ಟೋಣ, ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ, ಅಡುಗೆ ಮನೆಯಲ್ಲಿ ವಿಜ್ಞಾನ ಗೊಂಚಲು, ಸಾಂಸ್ಕೃತಿಕ ಸಂಭ್ರಮ, ಶಾಲೆ ಸಿಂಗಾರ ಹೀಗೆ ವಿವಿಧ ಚಟುವಟಿಕೆಗಳು ನಡೆಯಲಿವೆ.

click me!