ಕಲಬುರಗಿ ಕೇಂದ್ರೀಯ ವಿವಿಯಲ್ಲಿ ಗುಂಪು ಘರ್ಷಣೆ: ವಿದ್ಯಾರ್ಥಿಗಳ ಮಧ್ಯೆ ಮಾರಾಮಾರಿ

By Kannadaprabha NewsFirst Published Aug 7, 2022, 1:00 AM IST
Highlights

ಕಲಬುರಗಿ ಕೇಂದ್ರೀಯ ವಿವಿ ಊಟದ ಮನೆಯಲ್ಲಿ ವಿದ್ಯಾರ್ಥಿಗಳ ಗುಂಪು ಘರ್ಷಣೆ;  ಹಲ್ಲೆ ಮಾಡಿರುವಂತಹ ದೃಶ್ಯಗಳು ವಾಟ್ಸಪ್‌  ಗ್ರೂಪ್‌ಗಳಲ್ಲಿ ವೈರಲ್; 

ಕಲಬುರಗಿ (ಆ.07):  ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿ ಬಳಿ ಇರುವ ಕರ್ನಾಟಕ ಕೇಂದ್ರೀಯ ವಿವಿಯ ಆವರಣದ ಮೆಸ್‌ (ಊಟದ ವಿಭಾಗ)ದಲ್ಲಿ ಈಚೆಗೆ ಕೆಲವು ವಿದ್ಯಾರ್ಥಿಗಳು ಹೊಡೆದಾಡಿಕೊಂಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಅದಾಗಲೇ ಕೇಂದ್ರೀಯ ವಿವಿ ಶಿಸ್ತು ಸಮಿತಿಯು ತನಿಖೆ ನಡೆಸುತ್ತಿದೆ ಎಂದು ತಿಳಿದು ಬಂದಿದೆ. ಆ. 2 ರಂದು ಊಟ ಮಾಡುವ ವೇಳೆ ಏಕಾಏಕಿ ವಿದ್ಯಾರ್ಥಿಗಳ ಗುಂಪು ಕೆಲವರನ್ನು ಗುರಿಯಾಗಿಸಿಕೊಂಡು ಹಲ್ಲೆ ಮಾಡಿರುವಂತಹ ದೃಶ್ಯಗಳು ಇದೀಗ ಸಿಯುಕೆ ವಿದ್ಯಾರ್ಥಿಗಳ ವಾಟ್ಸ್‌ಆಪ್‌ ಗುಂಪುಗಳಲ್ಲಿ ವೈರಲ್‌ ಆಗಿವೆ. ಮಹಾರಾಷ್ಟ್ರ, ಪಂಜಾಬ್‌, ತೆಲಂಗಾಣ, ದೆಹಲಿ ರಾಜ್ಯದ ವಿದ್ಯಾರ್ಥಿಗಳೇ ಹೆಚ್ಚಾಗಿ ಈ ಹೊಡೆದಾಟದಲ್ಲಿ ಪಾಲ್ಗೊಂಡಿದ್ದಾರೆಂದು ಗೊತ್ತಾಗಿದೆ.

ವಿದ್ಯಾರ್ಥಿಯೊಬ್ಬನನ್ನು ನೆಲಕ್ಕೆ ಕೆಡವಿ ಕೆಲವರು ಒದೆಯುವ, ಕೂದಲು ಹಿಡಿದು ಹಲ್ಲೆ ಮಾಡುತ್ತಿರುವ ದೃಶ್ಯಗಳು ವಿಡಿಯೋದಲ್ಲಿ ದಾಖಲಾಗಿವೆ. ಇನ್ನೊಂದು ವಿಡಿಯೋದಲ್ಲಿ ಪುಂಡರಂತೆ ವಿದ್ಯಾರ್ಥಿಗಳು ಮೆಸ್‌ ರಸ್ತೆಯಲ್ಲಿ, ವಿವಿ ಕ್ಯಾಂಪಸ್‌ನಲ್ಲಿ ತಿರುಗುತ್ತ ಭೀತಿ ಹುಟ್ಟಿಸಿರುವ ದೃಶ್ಯಗಳು ದಾಖಲಾಗಿವೆ.

ಎಸ್‌ಐ ಹಗರಣದಲ್ಲಿ ಮತ್ತೆ 8 ಮಂದಿ ಸೆರೆ

ದೆಹಲಿ ಮೂಲದ ವಿದ್ಯಾರ್ಥಿನಿಯೊಬ್ಬಳಿಗೆ ಸ್ಥಳೀಯ ವ್ಯಕ್ತಿಯೊಬ್ಬ ಕಿರುಕುಳ ನೀಡಿದ್ದಾನೆ ಎಂದು ವಿದ್ಯಾರ್ಥಿಗಳು ದೂರಿದ್ದಾರೆ. ಈ ಬಗ್ಗೆ ವಿದ್ಯಾರ್ಥಿನಿಯು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಇಶಾ ಪಂತ್‌ ಅವರಿಗೂ ಮೌಖಿಕವಾಗಿ ದೂರು ನೀಡಿದ್ದಾರೆಂದು ಗೊತ್ತಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಸಿಯುಕೆ ಕುಲಸಚಿವ ಪ್ರೊ. ಬಸವರಾಜ ಡೋಣೂರ ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರೋದು ಘಟನೆ ಬಗ್ಗೆ ತನಿಖೆ ಸಾಗಿದೆ. ವೈಯಕ್ತಿಕ ಕಾರಣಕ್ಕಾಗಿ ಜಗಳವಾಗಿರುವ ಸಾಧ್ಯತೆ ಇದೆ. ಭಾಷೆ, ವೇಷ ಭೂಷಣದ ಜಗಳ ಇದಲ್ಲ. ಏನೇ ಆಗಲಿ ತನಿಖೆ ವರದಿ ಕೈ ಸೇರಿದ ನಂತರವಷ್ಟೇ ವಿಷಯ ಗೊತ್ತಾಗಲಿದೆ. ಆ ನಂತರ ಶಿಸ್ತು ಸಮಿತಿ ನಿಯಮಗಳಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗತ್ತದೆ ಎಂದು ಡೋಣೂರ ತಿಳಿಸಿದ್ದಾರೆ.

click me!